Advertisement

ಅಧಿಕಾರವಿಲ್ಲದೇ ಪುರಸಭೆ ಸದಸ್ಯರ ಪರದಾಟ!

04:09 PM Sep 29, 2022 | Team Udayavani |

ಬಂಕಾಪುರ: ಪಟ್ಟಣದ ಪುರಸಭೆ ಚುನಾವಣೆ ನಡೆದು ಒಂಬತ್ತು ತಿಂಗಳು ಗತಿಸಿದರೂ 23 ವಾರ್ಡ್‌ಗಳಿಗೆ ವಿವಿಧ ಪಕ್ಷಗಳ ಚಿಹ್ನೆಯಡಿ ಆಯ್ಕೆಯಾದ ಸದಸ್ಯರು ಅಧಿಕಾರ ಸಿಗದೇ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ, ಸಾರ್ವಜನಿಕರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂಬ ಕೂಗು ಕೇಳಿಬರುತ್ತಿದೆ.

Advertisement

ಈ ಹಿಂದೆ ಪುರಸಭೆ ಅಧಿಕಾರದ ಅವಧಿ ಮುಗಿದ ಮೂರು ವರ್ಷಗಳ ನಂತರ ಸರ್ಕಾರ ಕಳೆದ ವರ್ಷ ನ.28 ರಂದು ಚುನಾವಣೆಗೆ ನೋಟಿಫಿಕೇಶನ್‌ ಹೊರಡಿಸಿತ್ತು. ಡಿ. 8 ರಂದು ನೀತಿ ಸಂಹಿತೆ ಜಾರಿ ಮಾಡಿ ಡಿ.16 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಪ್ರಕಟಿಸಿತ್ತು. ಡಿ.7 ರಂದು ಚುನಾವಣೆ ನಡೆದು, ಡಿ.30 ರಂದು ಫಲಿತಾಂಶ ಪ್ರಕಟವಾಗಿ, ಕಾಂಗ್ರೆಸ್‌ 14, ಬಿಜೆಪಿ 7 ಹಾಗೂ 2 ಪಕ್ಷೇತರರು ಆಯ್ಕೆಯಾಗಿದ್ದರು.

ಸಿಎಂ ಬಸವರಾಜ ಬೊಮ್ಮಾಯಿ ಅವರ ಸ್ವ ಕ್ಷೇತ್ರದ ಭಾಗವಾಗಿರುವ ಬಂಕಾಪುರ ಪುರಸಭೆ ಚುನಾವಣೆಯಲ್ಲಿ ಪೈಪೋಟಿ ಚುನಾವಣೆ ನಡೆಸಿದ ಬಿಜೆಪಿ ಮುಖಂಡರು, ಸೂಕ್ತ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್‌ ನೀಡುವಲ್ಲಿ ವಿಫಲರಾದ ಕಾರಣ ಕಳೆದ ಬಾರಿಗಿಂತಲೂ ಎರಡು ಸ್ಥಾನ ಕಡಿಮೆ ಪಡೆದು ಕೇವಲ 7 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಪಟ್ಟಣದ 23 ವಾರ್ಡ್‌ಗಳಲ್ಲಿ ಹತ್ತು ಹಲವಾರು ವಿವಿಧ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವ ದೃಷ್ಟಿಯಿಂದ ಸಾರ್ವಜನಿಕರು ಅಭ್ಯರ್ಥಿಗಳನ್ನು ಚುನಾಯಿಸಿ ಕಳುಹಿಸಿದ್ದಾರೆ. ಆದರೆ, ಇದುವರೆಗೂ ಆಯ್ಕೆಯಾದ ಸದಸ್ಯರಿಗೆ ಅಧಿಕಾರ ನೀಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರ ಈಗಾಗಲೇ ಚುನಾವಣೆ ನಡೆದ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿ ಸುತ್ತೋಲೆ ಹೊರಡಿಸಿದೆ. ಆದರೆ, ಚುನಾವಣೆಯಲ್ಲಿ ಜನರಿಂದ ಆಯ್ಕೆಯಾದ ಸದಸ್ಯರಿಗೆ ಸದಸ್ಯತ್ವ ನೀಡದೇ ದಿನ ಕಳೆಯುತ್ತಿರುವುದು ಯಾವ ಉದ್ದೇಶಕ್ಕಾಗಿ ಎಂಬುದು ಸಾರ್ವಜನಿಕರಿಗೆ ಯಕ್ಷ ಪ್ರಶ್ನೆಯಾಗಿದೆ. ಆಯ್ಕೆಯಾದ ಸದಸ್ಯರು ತಮ್ಮ, ತಮ್ಮ ವಾರ್ಡ್‌ಗಳ ಸಮಸ್ಯೆಗಳನ್ನು ಬಗೆಹರಿಸಲಾಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಅಧಿಕಾರ ಇಂದು ಸಿಗಬಹುದು, ನಾಳೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಆಯ್ಕೆಯಾದ ಸದಸ್ಯರು ಕಾಲ ಕಳೆಯುತ್ತಿದ್ದಾರೆ. ಸರ್ಕಾರ ನೀಡಿದ ಕೋಟ್ಯಂತರ ರೂ. ಅನುದಾನವನ್ನು ನಮ್ಮ ವಾರ್ಡ್‌ನ ಸಮಸ್ಯೆಗಳಿಗೆ ಸದ್ಬ ಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ಅಸ ಹಾಯಕತೆಯನ್ನು ಪತ್ರಿಕೆ ಎದುರು ತೋಡಿಕೊಂಡಿದ್ದಾರೆ.

ಸರ್ಕಾರ ಈಗಾಗಲೇ ಬಂಕಾಪುರ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಮಿಸಲಾತಿ ಪ್ರಕಟಿಸಿದೆ. ಆದರೆ, ಇದುವರೆಗೂ ಆಯ್ಕೆಯಾದ ಸದಸ್ಯರಿಗೆ ಅಧಿಕಾರ ನಿಡದೇ ಇರುವುದನ್ನು ಖಂಡಿಸಿ ಸೆ.29ರ ಬೆಳಿಗ್ಗೆ 10ಕ್ಕೆ ಬಸ್‌ ನಿಲ್ದಾಣದಿಂದ ಪುರಸಭೆ ವರೆಗೆ ಮೌನ ಕಾಲ್ನಡಿಗೆ ಪ್ರತಿಭಟನೆ ನಡೆಸಲಾಗುವುದು. -ಎ.ಕೆ.ಆದವಾನಿ ಮಠ, ಕಸಾಪ ತಾಲೂಕು ಅಧ್ಯಕ್ಷರು

ನಮ್ಮ ಪುರಸಭೆಯೊಂದಿಗೆ ಚುನಾವಣೆ ನಡೆದ ಕೆಲವು ಊರುಗಳಲ್ಲಿ ಅಧಿಕಾರ ವಿಕೇಂದ್ರೀಕರಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದರೆ, ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದೆ ಎಂದು ಉತ್ತರಿಸುತ್ತಾರೆ. ಹಾಗಾದರೆ, ಚುನಾವಣೆ ನಡೆಸಿದ್ಯಾಕೆ?, ಪ್ರಜಾಪ್ರಭುತ್ವದಲ್ಲಿ ಜನತಂತ್ರ ವ್ಯವಸ್ಥೆ ಇದೇನಾ? –ಆಂಜನೇಯ ಗುಡಗೇರಿ, ಪುರಸಭೆ ಸದಸ್ಯ, ಬಂಕಾಪುರ

ಮತದಾರ ಪ್ರಭುಗಳಿಗೆ ಪ್ರಾಮಾಣಿಕ ಸೇವೆ ಮಾಡುವ ಭರವಸೆ ನೀಡಿ ಆಯ್ಕೆಯಾಗಿ ಬಂದಿ ದ್ದೇವೆ. ಸರ್ಕಾರ ಸಾಕಷ್ಟು ಅನುದಾನ ನೀಡಿದೆ ನಿಜ. ಆದರೆ, ಅದನ್ನು ನಮ್ಮ ವಾರ್ಡ್‌ನ ಕೆಲಸಕ್ಕೆ ಸದ್ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಆದ್ದರಿಂದ, ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧ್ಯಕ್ಷ, ಉಪಾ ಧ್ಯಕ್ಷ ಸ್ಥಾನ ಆಯ್ಕೆ ಮಾಡಲು ಸದಸ್ಯರಿಗೆ ಅವಕಾಶ ಕಲ್ಪಿಸಿಕೊಡಬೇಕು. –ಮಹಮ್ಮದ ತಹಮಿದ ಖಾಜಿ ಪುರಸಭೆ ಸದಸ್ಯ, ಬಂಕಾಪುರ

-ಸದಾಶಿವ ಹಿರೇಮಠ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next