Advertisement

ಮುಂಡರಗಿ: ಸರ್ಕಾರಿ ಶಾಲಾ ಕೊಠಡಿಗಳಿಗೆ ಬೇಕು ಕಾಯಕಲ್ಪ!

02:54 PM May 31, 2023 | Team Udayavani |

ಮುಂಡರಗಿ: ಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಶಾಸಕರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮೇಲ್ಛಾವಣಿ
ಹೆಂಚುಗಳು ಕಿತ್ತು ಹೋಗಿವೆ. ಶಾಸಕರ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಶಿಕ್ಷಣ ಇಲಾಖೆಯ ದಾಖಲೆ ಪ್ರಕಾರ 1861ರಲ್ಲಿ ಸ್ಥಾಪನೆಯಾಗಿದೆ. ಒಂದೂವರೇ ಶತಮಾನಕ್ಕಿಂತಲೂ ಹೆಚ್ಚು ಅವ ಧಿಯ ಈ ಶಾಲೆಗೆ ದುರಸ್ತಿ ಭಾಗ್ಯ ದೊರೆಯದಿರುವುದೇ ದುರಂತದ ಸಂಗತಿ. ಕಳೆದ ಒಂದು ವರ್ಷದಿಂದಲೇ ಈ ಕಿತ್ತುಹೋದ ಹೆಂಚುಗಳನ್ನು ಹಾಕಿಸಿ ದುರಸ್ತಿ ಮಾಡಿಸಲು ಶಿಕ್ಷಣ ಇಲಾಖೆಯಿಂದ ಅನುದಾನವೇ ಬಂದಿಲ್ಲ ಎನ್ನಲಾಗುತ್ತಿದೆ.

Advertisement

ಪಟ್ಟಣದ ಶಾಸಕರ ಸರಕಾರಿ ಮಾದರಿ ಶಾಲೆಯ ಮುಂಭಾಗದ ಹೆಂಚುಗಳು ಕಿತ್ತು ಹೋಗಿವೆ. ಕೆಲ ಕೊಠಡಿಗಳ ಹೆಂಚುಗಳು
ಒಡೆದು ಹೋಗಿರುವ ಕಾರಣ ಸೋರುತ್ತಿದೆ. ಮಳೆ ಬಂದರೆ ಕೊಠಡಿಗಳ ತುಂಬೆಲ್ಲಾ ನೀರು ಜಮಾವಣೆಯಾದರೆ ವಿದ್ಯಾರ್ಥಿಗಳು ತಂಪಾದ ನೆಲದ ಮೇಲೆಯೇ ಕುಳಿತುಕೊಳ್ಳುವಂತಹ ಸ್ಥಿತಿ ಇದೆ. ಶಾಸಕರ ಮಾದರಿ ಶಾಲೆಯ ಸ್ಥಿತಿಯೇ ಈ ರೀತಿಯಾದರೆ, ತಾಲೂಕಿನ ಉಳಿದ ಶಾಲೆಗಳ ದುಃಸ್ಥಿತಿ ಊಹಿಸಲಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿದೆ. ಸೋರುವ ಕೊಠಡಿಗಳು,
ಶೌಚಾಲಯದ ಕೊರತೆ, ಕುಡಿಯುವ ನೀರು ಇಲ್ಲದಿರುವುದು. ಮಾತ್ರವಲ್ಲ ಶೌಚಾಲಯಗಳು ದುರ್ವಾಸನೆ ಬೀರುತ್ತಿವೆ. ಶೌಚಾಲಯಕ್ಕೆ ಹೋದರೆ ನೀರು ಇಲ್ಲದಂತಹ ಸ್ಥಿತಿ ಎಲ್ಲೆಡೆ ಸಾಮಾನ್ಯ ಸಂಗತಿಯಾಗಿದೆ.

ತಾಲೂಕಿನಲ್ಲಿ 23 ಸರಕಾರಿ ಪ್ರಾಥಮಿಕ ಶಾಲೆಗಳು, 76 ಹಿರಿಯ ಪ್ರಾಥಮಿಕ ಶಾಲೆಗಳು, 17 ಪ್ರೌಢಶಾಲೆಗಳು ಇವೆ. ಅದರಲ್ಲಿ ತಾಲೂಕಿನಲ್ಲಿ 1857ರಲ್ಲಿ ಮೊದಲು ಪ್ರಾರಂಭವಾದ ಕಲಕೇರಿಯ ಎಂಸಿಎಸ್‌ ಶಾಲೆಯಿಂದ ಹಿಡಿದು 21 ಶಾಲೆಗಳು ಶತಮಾನದ ಶಾಲೆಗಳು ಇವೆ.

ಇದರಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ 609 ಹುದ್ದೆಗಳು ಮಂಜೂರಾರಾಗಿದ್ದು, ಆ ಪೈಕಿ 192 ಶಿಕ್ಷಕರ ಹುದ್ದೆಗಳ ಕೊರತೆಯಿದೆ. 231 ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ಹುದ್ದೆಗಳನ್ನು ತುಂಬಿದರೆ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸದಂತಾಗಲಿದೆ.

ತಾಲೂಕಿನಲ್ಲಿ 2023-24 ನೇ ಸಾಲಿನಲ್ಲಿ ಮಳೆಯಿಂದ 83 ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದು, ಈ 83 ಕೊಠಡಿಗಳಲ್ಲಿ
ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಪರ್ಯಾಯ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿದೆ. ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ಬೇರೆ ಬೇರೆ ಕಡೆಗೆ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಆದರೆ, ಮಕ್ಕಳ ಶಿಕ್ಷಣಕ್ಕಾಗಿ ಶಾಶ್ವತ ಕೊಠಡಿಗಳ ವ್ಯವಸ್ಥೆಗೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಬೇಕಿದೆ. ಅಲ್ಲದೇ, ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಾದ
ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ, ವಿದ್ಯುತ್‌ ವ್ಯವಸ್ಥೆಯ ಕೊರತೆ ಎದ್ದು ಕಾಣುತ್ತದೆ.

Advertisement

ತಾಲೂಕಿನ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಇದ್ದರೂ ಕೂಡಾ ನೀರಿನ ಕೊರತೆಯಿಂದ
ಮಕ್ಕಳು, ಶಿಕ್ಷಕ-ಶಿಕ್ಷಕಿಯರಿಗೆ ಶೌಚಾಲಯದ ಅನಾನುಕೂಲವಾಗುತ್ತಿದೆ. ಶಾಲಾ ಆವರಣದಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಬೇಕಿದೆ.

ಏಕೆಂದರೆ, ಬಹುತೇಕ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಹದಗೆಟ್ಟಿದ್ದು, ಮಹಿಳಾ ಶಿಕ್ಷಕಿಯರು ಇರುವ ಶಾಲೆಗಳಲ್ಲಿ ಶೌಚಾಲಯ
ವ್ಯವಸ್ಥೆಯ ತೊಂದರೆಯಿಂದ ನರಕಯಾತನೆ ಅನುಭವಿಸುವಂತಾಗುತ್ತಿರುವುದು ತುಂಬಾ ಖೇದಕರ ಸಂಗತಿಯಾಗಿದೆ. ಶೌಚಾಲಯಕ್ಕೆ ಅಗತ್ಯ ನೀರು ಮತ್ತು ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಬೇಕಿದೆ.

ತಾಲೂಕಿನ ಸರಕಾರಿ ಶಾಲೆಗಳ ಕೊಠಡಿಗಳ ದುರಸ್ತಿ ಕಾರ್ಯಕ್ಕಾಗಿ ನಾಲ್ಕೈದು ಯೋಜನೆಗಳಲ್ಲಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊಠಡಿಗಳ ದುರಸ್ತಿ ಕಾರ್ಯಕ್ಕಾಗಿ ಅನುದಾನ ಬಂದ ತಕ್ಷಣವೇ ದುರಸ್ತಿ ಕಾರ್ಯ ನಡೆಯಲಿದೆ. ಪಟ್ಟಣದ ಶಾಸಕರ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ದುರಸ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
∙ ಎಂ.ಎಫ್‌.ಬಾರ್ಕಿ, ಬಿಇಒ

ಹು.ಬಾ.ವಡ್ಡಟ್ಟಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next