Advertisement

ಶಾಲೆ ಮುಚ್ಚುವ ಭೀತಿ: ಹೆತ್ತವರು, ವಿದ್ಯಾರ್ಥಿಗಳ ಆತಂಕ

08:54 PM Nov 22, 2021 | Team Udayavani |

ಹೆಬ್ರಿ: ಸುಮಾರು 68 ವರ್ಷ ಇತಿಹಾಸ ವಿರುವ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಮುಳ್ಳುಗುಡ್ಡೆ ಅನುದಾನಿತ ಹಿ.ಪ್ರಾ. ಶಾಲೆಯ ಮಾನ್ಯತೆ ನವೀಕರಣಗೊಳ್ಳದ ಕಾರಣ ಮುಚ್ಚುವ ಭೀತಿಯಲ್ಲಿದ್ದು ವಿದ್ಯಾರ್ಥಿಗಳು, ಹೆತ್ತ ವರು ಆತಂಕಕ್ಕೊಳಗಾಗಿದ್ದಾರೆ.

Advertisement

ಮಾನ್ಯತೆ ನವೀಕರಿಸಿಲ್ಲ
ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿರುವ ಈ ಶಾಲೆಯ ಮಾನ್ಯತೆ ನವೀಕರಣ ವಾಯಿದೆಯು 2020ಕ್ಕೆ ಮುಗಿದಿದ್ದು ಈ ಬಗ್ಗೆ ಕ್ಷೇತ್ರ ಶಿಕ್ಷಣಾ ಧಿಕಾರಿಗೆ ಜನವರಿಯಲ್ಲಿ ಅರ್ಜಿಯನ್ನು ಸಲ್ಲಿಸ ಲಾಗಿತ್ತು. ಆದರೆ ಸಮಿತಿಯಲ್ಲಿ ಗೊಂದಲವಿರುವ ಕಾರಣ ನವೀಕರಣವಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಆಡಳಿತ ಮಂಡಳಿಯ ಅಧ್ಯಕ್ಷ ಮೋಹನದಾಸ ನಾಯಕ್‌ ಸರಕಾರಕ್ಕೆ ಮನವಿ ಸಲ್ಲಿಸಿ ಮಕ್ಕಳ ಭವಿಷ್ಯಕ್ಕೆ ಯಾವುದೇ ತೊಂದರೆಯಾಗ ದಂತೆ ವಿನಂತಿಸಿದ್ದಾರೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮುಖ್ಯ ಮಂತ್ರಿಗಳು ಈ ಬಗ್ಗೆ ಸಂಬಂಧಪಟ್ಟ ಇಲಾಖೆಯಲ್ಲಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶಾಲೆಯನ್ನು ಉಳಿಸುವ, ಮಾನ್ಯತೆ ನವೀಕರಿಸುವ ಅಥವಾ ಸರಕಾರವೇ ಮುನ್ನಡೆಸುವ ಬಗ್ಗೆ ತೀರ್ಮಾನ ತೆಗೆದು ಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ದಾನಿಗಳ ನೆರವಿನಿಂದ ಶಾಲೆ ಅಭಿವೃದ್ಧಿ
1953ನೇ ಇಸವಿಯಲ್ಲಿ ಊರಿನ ಪಟೇಲರು ಮತ್ತು ಶಾನುಭೋಗರ ಸಹಕಾರದಲ್ಲಿ ಶಾಲೆ ಪ್ರಾರಂಭವಾಗಿತ್ತು.ಶಾಲೆಗೆ ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಸೇರಿದಂತೆ ವಿವಿಧ ಸಂಘ ಸಂಸ್ಥೆ ದಾನಿಗಳಿಂದ ಕಂಪ್ಯೂಟರ್‌, ಪುಸ್ತಕ ಭಂಡಾರ, ಪೀಠೊಪಕರಣಗಳು ಕೊಡುಗೆಯಾಗಿ ಬಂದಿದೆ. ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಶಾಲೆ ಅಭಿವೃದ್ಧಿಯನ್ನು ಕಂಡಿದೆ. ಶಾಲೆಯಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಿದ್ದು, ಆಡಳಿತ ಮಂಡಳಿಯ ಅಧ್ಯಕ್ಷ ಮೋಹನ್‌ದಾಸ್‌ ನಾಯಕ್‌ ಅವರು ದಾನಿಗಳ ನೆರವಿನೊಂದಿಗೆ ವೇತನ ನೀಡುತ್ತಿದ್ದಾರೆ.

ಇದನ್ನೂ ಓದಿ:ವಿಜಯಪುರ: ಪಕ್ಷೇತರ ಸ್ಪರ್ಧೆಯ ಭೀತಿ; ಸುನಿಲ ಗೌಡಗೆ ಕಾಂಗ್ರೆಸ್ ಟಿಕೇಟ್

ಗೊಂದಲದಲ್ಲಿ ಹೆತ್ತವರು
ಗ್ರಾಮೀಣ ಪ್ರದೇಶವಾದ ಮುಳ್ಳುಗುಡ್ಡೆ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತದೆ. ಸುತ್ತಮುತ್ತಲಿನ ಶಾಲೆಗಳಿಗೆ ಹೋಲಿಸಿದರೆ ಇಲ್ಲಿ ಮಕ್ಕಳ ಸಂಖ್ಯೆ ಜಾಸ್ತಿ ಇದೆ. ಆದರೆ ಮಾನ್ಯತೆ ನವೀಕರಣವಾಗದೆ ಇರುವುದರಿಂದ ಶಾಲೆಯನ್ನು ಮುಚ್ಚಿದರೆ ಮಕ್ಕಳ ಭವಿಷ್ಯ ಏನು ಎಂಬ ಗೊಂದಲದಲ್ಲಿ ಹೆತ್ತ ವರಿದ್ದು ಕೆಲವರು ಹತ್ತಿರ ಶಾಲೆಗಳಿಗೆ ಮಕ್ಕಳನ್ನು ಸೇರ್ಪಡೆ ಮಾಡಿದ್ದಾರೆ. ಶಾಲೆಯಲ್ಲಿ ಕೇವಲ ಓರ್ವ ಶಿಕ್ಷಕಿ ಪೂರ್ಣಕಾಲಿಕವಾಗಿದ್ದು ಅವರು ಕೂಡ ನಿವೃತ್ತಿಯ ಹಂತದಲ್ಲಿದ್ದು ಹೆತ್ತವರ ಆತಂಕಕ್ಕೆ ಕಾರಣವಾಗಿದೆ.

Advertisement

ಸರಕಾರವೇ ಶಾಲೆ ನಡೆಸಲಿ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಶಾಲೆಯ ಕಟ್ಟಡ ಸರಕಾರ ಹಾಗೂ ಖಾಸಗಿ ಸ್ಥಳದಲ್ಲಿದೆ. ಒಂದು ವೇಳೆ ಸರಕಾರವೇ ಸುಪರ್ದಿಗೆ ತೆಗೆದುಕೊಂಡು ಶಾಲೆ ನಡೆಸುವುದಾದರೆ ಸಮಿತಿಯು ಎಲ್ಲ ಸಹಕಾರವನ್ನು ನೀಡುವುದಾಗಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಮೋಹನ್‌ದಾಸ್‌ ನಾಯಕ್‌ ತಿಳಿಸಿದ್ದಾರೆ.

ಶೀಘ್ರ ಕ್ರಮ
ಮುಳ್ಳುಗುಡ್ಡೆ ಅನುದಾನಿತ ಶಾಲೆಯ ಮಾನ್ಯತೆ ನವೀಕರಣವಾಗದಿರಲು ಏನು ಕಾರಣ ಎಂಬ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವಂತೆ ಈಗಾಗಲೇ ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಲಾಗಿದೆ. ಹೆತ್ತವ‌ರು ಹಾಗೂ ವಿದ್ಯಾರ್ಥಿಗಳು ಭಯಪಡುವ ಅಗತ್ಯವಿಲ್ಲ. ವರದಿ ಗಮನಿಸಿ ಸಮಸ್ಯೆ ಬಗೆಹರಿಸಲಾಗುವುದು.
-ಎನ್‌.ಎಚ್‌.ನಾಗೂರ, ಡಿಡಿಐಪಿ, ಉಡುಪಿ

ಉಳಿವಿಗಾಗಿ ಹೋರಾಟ
ಹಲವಾರು ವರ್ಷಗಳ ಇತಿಹಾಸವಿರುವ ಗ್ರಾಮೀಣ ಪ್ರದೇಶದ ಶಾಲೆ ಉಳಿಯಬೇಕು.ಬಡಮಕ್ಕಳಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಶಾಲೆ‌ಯ ಉಳಿವಿಗಾಗಿ ಹೋರಾಟ ನಡೆದಿದೆ. ಈ ಬಗ್ಗೆ ಸರಕಾರ, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಸಿ ಮಕ್ಕಳ ಭವಿಷ್ಯದ ರಕ್ಷಣೆ ಮಾಡಬೇಕು.
ಮೋಹನದಾಸ ನಾಯಕ್‌
ಅಧ್ಯಕ್ಷರು,ಮುಳ್ಳುಗುಡ್ಡೆ ಶಾಲಾ ಆಡಳಿತ ಪರಿಷತ್‌

– ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next