Advertisement

ಮೂಲ್ಕಿ-ಕಟೀಲು-ತೊಕ್ಕೊಟ್ಟು ಬೈಪಾಸ್‌ ಹೆದ್ದಾರಿ: ಪಥ ನಿರ್ಧಾರದಲ್ಲೇ ಯೋಜನೆ ಬಾಕಿ

02:09 AM Feb 23, 2022 | Team Udayavani |

ಮಂಗಳೂರು: ಬಹುನಿರೀಕ್ಷಿತ ಮೂಲ್ಕಿ ಯಿಂದ ಕಿನ್ನಿಗೋಳಿ, ಕಟೀಲು, ಕೈಕಂಬ, ಪೊಳಲಿ, ಬಿ.ಸಿ. ರೋಡ್‌, ಮುಡಿಪು, ತೊಕ್ಕೊಟ್ಟು ಬೈಪಾಸ್‌ ರಸ್ತೆಯ “ಪಥ ನಿರ್ಧಾರ’ (ಅಲೈನ್‌ಮೆಂಟ್‌) ಅಂತಿಮಗೊಳ್ಳದೆ ಯೋಜನೆ ಬಾಕಿಯಾಗಿದೆ. ಅಲೈನ್‌ಮೆಂಟ್‌ ಆಯ್ಕೆ ಹೊಸದಿಲ್ಲಿಯ ರಾಷ್ಟ್ರೀಯ ಹೆದ್ದಾರಿ ಇಲಾಖೆಯಲ್ಲಿದ್ದು, ನಿರ್ಧಾರಕ್ಕೆ ಕಾಯಲಾಗುತ್ತಿದೆ.

Advertisement

ಮಂಗಳೂರು ಬೈಪಾಸ್‌ ರಸ್ತೆ ಎಂದು ಕರೆಯ ಲ್ಪಡುವ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದು 3 ವರ್ಷ ಸಮೀಪಿಸುತ್ತಿದೆ. ಸರ್ವೇ ಕೂಡ ಆಗಿದೆ. ಆದರೆ ಅಲೈನ್‌ಮೆಂಟ್‌ ಸಮಸ್ಯೆ ಮುಂದಿನ ಪ್ರಕ್ರಿಯೆಗಳಿಗೆ ತಡೆಯೊಡ್ಡಿದೆ.
91.20 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣಕ್ಕೆ ಭಾರತೀಯ ರಾ.ಹೆ. ಪ್ರಾಧಿಕಾರವು ಡಿಪಿಆರ್‌ ತಯಾರಿಸಿತ್ತು, ಪ್ರಾಧಿಕಾರದ ಕೇಂದ್ರ ಕಚೇರಿಯು 2017ರಲ್ಲಿ ಅನುಮೋದನೆ ನೀಡಿತ್ತು, ಸ್ಟುಫ್‌ ಕನ್ಸಲ್ಟೆನ್ಸಿ ಪ್ರೈ.ಲಿ. ಅಧಿಕಾರಿಗಳು ಸರ್ವೇ ವರದಿ ಸಲ್ಲಿಸಿದ್ದರು. ಕೇಂದ್ರ ಸಚಿವ ನಿತಿನ್‌ ಗಡ್ಕರಿ 2019ರ ಮಾ. 5ರಂದು ಶಿಲಾನ್ಯಾಸ ಮಾಡಿದ್ದರು. ಆದರೆ ಪರಿಹಾರ ಮತ್ತು ಯೋಜನೆ ವೆಚ್ಚ ದುಪ್ಪಟ್ಟಾಗುತ್ತಿರುವುದರಿಂದ ಅನುಮೋದನೆ ವಿಳಂಬವಾಗಿತ್ತು. ಇದೇ ಸಂದರ್ಭ ದೇಶದ ಎಲ್ಲೆಡೆ ಹೊಸ ವರ್ತುಲ ರಸ್ತೆಗಳನ್ನು ಹಾಲಿ ರಸ್ತೆಯ ಪಕ್ಕ ನಿರ್ಮಿಸುವ ಬದಲು ಹೊಸದಾಗಿ “ಗ್ರೀನ್‌ ಫೀಲ್ಡ್‌ ಅಲೈನ್‌ಮೆಂಟ್‌’ ಮಾದರಿಯಲ್ಲಿ ನಿರ್ಮಿಸುತ್ತಿರುವುದರಿಂದ ಈ ರಸ್ತೆಗೂ ಅದೇ ಮಾದರಿ ಅನುಸರಿಸಲು ಹೆದ್ದಾರಿ ಇಲಾಖೆ ನಿರ್ಧರಿಸಿ ಅನುಮೋದನೆಗೆ ಕಳುಹಿಸಿತ್ತು.

ಮೂರು ಆಯ್ಕೆ ಯೋಜನೆಗೆ 3 ಆಯ್ಕೆಗಳನ್ನು ಇರಿಸಲಾಗಿತ್ತು.
1. ಮೂಲ್ಕಿ ರೈಲ್ವೇ ಸ್ಟೇಷನ್‌, ಪದ್ಮನೂರು, ಕಿನ್ನಿಗೋಳಿ, ಕಟೀಲು, ಪೊಳಲಿ, ಬಂಟ್ವಾಳ, ಸಜೀಪ ಮೂಲಕ ತೊಕ್ಕೊಟ್ಟು (62.4 ಕಿ.ಮೀ).
2. ಮೂಲ್ಕಿ, ಕಿಲ್ಪಾಡಿ, ಅರಾಳ, ಅಗ್ರಾರ್‌, ಮೆಲ್ಕಾರ್‌, ಸಜಿಪ ನಡು, ಬೊಳಿಯಾರ್‌, ಮುಡಿಪು,
ಅಸೈಗೋಳಿ, ಸೋಮೇಶ್ವರ (71.9 ಕಿ.ಮೀ).
3. ಹೆಜಮಾಡಿ, ಏಳಿಂಜೆ, ತೋಡಾರ್‌, ಹೊಸಬೆಟ್ಟು, ನರಿಕೊಂಬು, ಮೆಲ್ಕಾರ್‌, ಇರಾ, ಬಾಳೆಪುಣಿ, ಸೋಮೇಶ್ವರ (69.4 ಕಿ.ಮೀ).
ಗ್ರೀನ್‌ಫೀಲ್ಡ್‌ ಮಾದರಿಯಿಂದ ಸ್ಥಳೀಯರಿಗೆ ಹೆಚ್ಚು ಉಪಯೋಗವಾಗದು. ಜತೆಗೆ ವೆಚ್ಚ ಅಧಿಕವಾಗುವ ಸಾಧ್ಯತೆಯಿದೆ. ಹೀಗಾಗಿ ಗ್ರೀನ್‌ಫೀಲ್ಡ್‌ ಮಾದರಿ ಸೂಕ್ತವಲ್ಲ ಎಂದು ವಿರೋಧ ವ್ಯಕ್ತವಾಗಿತ್ತು.

ಏನಿದು ಗ್ರೀನ್‌ಫೀಲ್ಡ್‌,
ಬ್ರೌನ್‌ಫೀಲ್ಡ್‌?
ಈಗ “ಗ್ರೀನ್‌ಫೀಲ್ಡ್‌’ ಅಥವಾ “ಬ್ರೌನ್‌ಫೀಲ್ಡ್‌’ ಎಂಬ ಎರಡು ಅಂತಿಮ ಆಯ್ಕೆಗಳು ಹೆದ್ದಾರಿ ಇಲಾಖೆಯ ಮುಂದಿವೆ. ಬ್ರೌನ್‌ಫೀಲ್ಡ್‌ ಎಂದರೆ ಈಗಿರುವ ರಸ್ತೆಯಲ್ಲೇ ಬೈಪಾಸ್‌/ರಿಂಗ್‌ ರಸ್ತೆ ನಿರ್ಮಿಸುವುದು. ಇಕ್ಕೆಲಗಳ ಮನೆ, ಅಂಗಡಿ, ಶಾಲೆ ಇತ್ಯಾದಿ ಕಟ್ಟಡ, ಭೂಸ್ವಾಧೀನಕ್ಕೆ ಬಹುವೆಚ್ಚ ತಗಲುತ್ತದೆ. ಕಟ್ಟಡ, ಶಾಲೆ, ಮನೆ, ಮುಖ್ಯ ಭೂಮಿ, ನೀರಾವರಿ ಪ್ರದೇಶ, ಕೈಗಾರಿಕೆ ಬಿಟ್ಟು ಪರಿಸರ ಪೂರಕ ರಸ್ತೆ ನಿರ್ಮಿಸುವ ಪರಿಕಲ್ಪನೆ ಗ್ರೀನ್‌ಫೀಲ್ಡ್‌. ಹೆದ್ದಾರಿ ಇಲಾಖೆ ಈ ಪರಿಕಲ್ಪನೆಯತ್ತ ಹೆಚ್ಚು ಒಲವು ತೋರ್ಪಡಿಸಿದೆ.

ಮೂಲ್ಕಿ-ಕಟೀಲು -ತೊಕ್ಕೊಟ್ಟು ರಾ.ಹೆ. ಯೋಜನೆಯ ಪ್ರಕ್ರಿಯೆ ಪ್ರಗತಿಯಲ್ಲಿದೆ. ರಾ. ಹೆದ್ದಾರಿ ಇಲಾಖೆಯಲ್ಲಿ ರಸ್ತೆಯ ಅಲೈನ್‌ಮೆಂಟ್‌ಗೆ ಸಂಬಂಧಿಸಿ ಪೂರಕ ಕ್ರಮಗಳು ಪೂರ್ಣಗೊಂಡ ಬಳಿಕ ಯೋಜನೆ ಕಾರ್ಯಾನುಷ್ಠಾನಕ್ಕೆ ಬರಲಿದೆ.
 - ನಳಿನ್‌ ಕುಮಾರ್‌ ಕಟೀಲು, ಸಂಸದ

Advertisement
Advertisement

Udayavani is now on Telegram. Click here to join our channel and stay updated with the latest news.

Next