Advertisement

ಕಂಬಳ ಕರೆಯಲ್ಲಿ ಇವನೇ ಕಿಂಗ್.. ಮೊದಲ ಸೂಪರ್ ಸ್ಟಾರ್ “ಕಾರ್ಕಳ ಎಕ್ಸ್ ಪ್ರೆಸ್ ಮುಕೇಶ”

04:29 PM Jan 12, 2023 | ಕೀರ್ತನ್ ಶೆಟ್ಟಿ ಬೋಳ |

ಕಂಬಳದ ಕಾಶಿ ಎಂದೇ ಹೆಸರಾದ ಅಲ್ಲಿ ಸ್ಪರ್ಧೆಗೆ ಬಂದ ಕೋಣಗಳ ಸಂಖ್ಯೆ ಬರೋಬ್ಬರಿ 264 ಜೋಡಿ. ಎರಡು ದಿನ ನಡೆದ ಸ್ಪರ್ಧೆಯಲ್ಲಿ ಕೋಣಗಳು ತಾ ಮುಂದು ನಾ ಮುಂದು ಎಂಬಂತೆ ಓಡಿದವು. ಆದರೆ ಅಷ್ಟೆಲ್ಲದರ ನಡುವೆ ಗಮನ ಸೆಳೆದವನು ಅವನೊಬ್ಬ. ಜಾತ್ರೆಯ ನಡುವಿನ ತೇರಿನಂತೆ, ಕೋಟ್ಯಾಂತರ ನಕ್ಷತ್ರಗಳ ನಡುವಿನ ಚಂದಿರನಂತೆ. ಕಾರ್ಕಳದ ಮಿಯ್ಯಾರಿನಲ್ಲಿ ಕೋಟಿ ಮನಸುಗಳನ್ನು ಒಂದು ಮಾಡಿದ ಅವನೇ ಕಂಬಳದ ಮೊದಲ ಸೂಪರ್ ಸ್ಟಾರ್ ಕೋಣ ಮುಕೇಶ.

Advertisement

ಈ ಮುಕೇಶ, ಕಾರ್ಕಳ ಜೀವನದಾಸ ಅಡ್ಯಂತಾಯರ ಕಂಬಳ ಓಟದ ಕೋಣ. ಅವನಿಗೆ ಇದೀಗ ಸುಮಾರು 16 ರಿಂದ 17 ವರ್ಷ ಇರಬಹುದು. ಜನವರಿ 8-9ರಂದು ತನ್ನ ಹೋಮ್ ಗ್ರೌಂಡ್ ಮಿಯ್ಯಾರಿನಲ್ಲಿ ನಡೆದ ಲವ ಕುಶ ಜೋಡುಕರೆ ಕಂಬಳದಲ್ಲಿ ಅವನದೇ ದರ್ಬಾರು.

ಅದು ಹಗ್ಗ ಹಿರಿಯ ವಿಭಾಗದ ಮೊದಲ ಸೆಮಿ ಫೈನಲ್ ರೇಸ್. ಕಾರ್ಕಳ ಜೀವನದಾಸ್ ಅಡ್ಯಂತಾಯರ ಎ ಕೋಣಗಳು ಮತ್ತು ನಂದಳಿಕೆ ಶ್ರೀಕಾಂತ್ ಭಟ್ರರ ಬಿ ಕೋಣಗಳ ನಡುವಿನ ಸ್ಪರ್ಧೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಸ್ಪರ್ಧೆಯ ಫಲಿತಾಂಶ ಟೈ ಆಗಿತ್ತು. ಕಂಬಳದ ನಿಯಮದಂತೆ ಮತ್ತೆ ಸ್ಪರ್ಧೆ.

ಎರಡು ಜೋಡಿ ಕೋಣಗಳು ಕರೆಗೆ ಬಂದು ನಿಂತಿದ್ದವು. ಇಡಿ ಮಿಯ್ಯಾರು ಕೂಟಕ್ಕೆ ಬಂದಿದ್ದ ಎಲ್ಲರೂ, ಅಲ್ಲಿ ಸಂತೆಯ ನಡುವೆ ತಿರುಗುತ್ತಿದ್ದವರೂ ಎಲ್ಲರೂ ಬಂದು ಈ ಒಂದು ಓಟ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದರು. ಅಲ್ಲಿ ಹೆಚ್ಚಿನವರ ಕಣ್ಣು ಲವ ಕರೆಯಲ್ಲಿ ಗಂಭೀರನಾಗಿ ನಿಂತಿದ್ದ ಮುಕೇಶನ ಮೇಲೆಯೇ. ನಂದಳಿಕೆ ಕೋಣ ಓಡಿಸಲು ಕಂಬಳದ ಇತ್ತೀಚಿನ ಸೆನ್ಸೇಶನ್ ವಂದಿತ್ ಶೆಟ್ಟಿಯಾದರೆ, ಕಾರ್ಕಳದ ಕೋಣಗಳ ಹಗ್ಗ ಹಿಡಿದವರು ಕಂಬಳದ ಉಸೇನ್ ಬೋಲ್ಟ್ ಎಂದೇ ಹೆಸರಾದ ಶ್ರೀನಿವಾಸ ಗೌಡ. ಗಂತಿನಲ್ಲಿ (ಓಟ ಆರಂಭವಾಗುವ ಜಾಗ) ಕೋಣಗಳನ್ನು ಸರಿ ಮಾಡಿ ಬಿಡಲು ಒಂದಷ್ಟು ಹೊತ್ತು ಹಿಡಿದಿತ್ತು. ಆದರೆ ಒಬ್ಬನೇ ಒಬ್ಬ ಪ್ರೇಕ್ಷಕ ಎದ್ದು ಹೋಗಲಿಲ್ಲ. ಕೂತವನು ಏಳಲಿಲ್ಲ. ನಿಂತವನು ಮಿಸುಕಾಡಲಿಲ್ಲ. ಮೊದಲೇ ಟೈ ಆಗಿ ಈಗ ಮತ್ತೊಮ್ಮೆ ಸ್ಪರ್ಧೆ, ಇದರ ನಡುವೆ ಕರೆಯಲ್ಲಿ ನಿಂತವನು ಮುಕೇಶ. ಸೂರ್ಯ ಅದಾಗಲೇ ಮರೆಯಾಗಿದ್ದರೂ ವಾತಾವರಣ ಬಿಸಿಯೇರಿತ್ತು.

Advertisement

ರೆಫ್ರಿ ‘ಬುಡ್ಯೆರ್’ ಎಂದದ್ದೇ ತಡ, ನಾಲ್ಕೂ ಕೋಣಗಳು ಚಿಗರೆಯಂತೆ ಓಟ ಆರಂಭಿಸಿದ್ದವು. ನೋಡುತ್ತಿದ್ದವರಿಗೆ ತಳಮಳ. ಕುಳಿತವರು ಎದ್ದು ನಿಂತಿದ್ದರು, ನಿಂತಿದ್ದವರು ಕತ್ತು ಮತ್ತಷ್ಟು ಉದ್ದ ಮಾಡಿ ನೋಡುತ್ತಿದ್ದರು. ನಾಲ್ಕು ಕೋಣಗಳು ತಾ ಮುಂದು ನಾ ಮುಂದು ಎಂಬಂತೆ ಓಡಿದವು. ಕಳೆದ ಬಾರಿ ತಪ್ಪಿದ್ದ ಜಯಮಾಲೆಯನ್ನು ಈ ಬಾರಿ ತಪ್ಪಿಸಿಕೊಳ್ಳಲು ಮುಕೇಶ ಬಿಡಲಿಲ್ಲ. ನಂದಳಿಕೆ ಕೋಣಗಳಿಂದ ಕೆಲವೇ ಕ್ಷಣಗಳ ಅಂತರದಲ್ಲಿ ಕಾರ್ಲದ ಕಾಲನೊಂದಿಗೆ ಮುಂದೆ ಸಾಗಿ ಬಿಟ್ಟಿದ್ದ. ಕೊನೆಗೂ ಮುಕೇಶ ಸೆಮಿ ಫೈನಲ್ ಗೆದ್ದುಕೊಂಡಿದ್ದ. ಮನೆಯಂಗಳದ ಕೂಟದ ಫೈನಲ್ ಪ್ರವೇಶಿಸಿದ್ದ. ಕಹಳೆ ಊದುತ್ತಿದ್ದವರು ಮತ್ತಷ್ಟು ಸಂತಸದಿಂದ ಎದೆಯುಬ್ಬಿಸಿ ಊದಿದ್ದರು. ಆ ವೇಳೆ ಅಲ್ಲಿ ಸೃಷ್ಟಿಯಾಗಿದ್ದು ಕಂಬಳದ ಅಭಿಮಾನಿಯೊಬ್ಬ ಎಂದೂ ಮರೆಯದ, ಮರೆಯಲಾದ ದೃಶ್ಯ.

ತೀರ್ಪುಗಾರರು ಕಾರ್ಕಳದ ಕೋಣಗಳು ಗೆದ್ದವು ಎಂದು ಘೋಷಣೆ ಮಾಡುತ್ತಿದ್ದಂತೆ ಮಿಯ್ಯಾರಿನಲ್ಲಿ ಸೇರಿದ ಸಾವಿರಾರು ಜನರು ಹರ್ಷೋಲ್ಲಾಸದಲ್ಲಿ ತೇಲಾಡಿದ್ದರು. ಎದುರಾಳಿ ಕೋಣಗಳಿಗೂ ಅಭಿಮಾನಿಗಳಿದ್ದಾರೆ, ಆದರೆ ಅಲ್ಲಿ ಮುಕೇಶ ಎಲ್ಲರ ಹೃದಯ ಗೆದ್ದಿದ್ದ. ಮುಕೇಶ ರೇಸ್ ಮುಗಿಸಿ ಮಂಜೊಟ್ಟಿ (ಓಟ ಮುಗಿಯುವ ಜಾಗ) ಹತ್ತಿ ನಿಲ್ಲುತ್ತಿದ್ದಂತೆ, ಕಡಲು ಒಂದೇ ಸಮನೆ ದಡಕ್ಕೆ ಅಲೆಯಾಗಿ ಅಪ್ಪಳಿಸಿದಂತೆ ಜನರು ಮುಕೇಶನೆಡೆಗೆ ನುಗ್ಗಿದ್ದರು. ಎಲ್ಲರಿಗೂ ತಮ್ಮ ಮನೆಯ ಕೋಣ ಗೆದ್ದಂತಹ ಸಂತಸವದು. ಎಲ್ಲರಿಗೂ ಮುಕೇಶನ ಬಳಿ ಬಂದು ನಿಲ್ಲುವ ಆಸೆ. ಒಮ್ಮೆಯಾದರೂ ಮುಕೇಶನನ್ನು ಹತ್ತಿರದಿಂದ ನೋಡುವಾಸೆ. ಗೆದ್ದ ಮುಕೇಶನ ಬೆನ್ನಿನ ಮೇಲಿಂದ ಜಾರುವ ಕೆಸರು ನೀರಿನ ಹನಿ ತಾಗಿದರೆ ಪುನೀತರಾಗುವ ಭಾವವದು. ಅಲ್ಲಿ ಒಂದಗಲ ಜಾಗವೂ ಖಾಲಿ ಇರಲಿಲ್ಲ. ನೂರಾರು ಮಂದಿ ಮುಕೇಶನನ್ನು ಸುತ್ತುವರಿದ್ದು ನಿಂತಿದ್ದರು. ಅಲ್ಲಿದ್ದ ಅಷ್ಟೂ ಕಣ್ಣ ಬಿಂಬಗಳಲ್ಲಿ ಮೂಡಿದ್ದು ಒಂದೇ ಚಿತ್ರ, ಎಲ್ಲರ ಬಾಯಲ್ಲೂ ಒಂದೇ ಮಾತು, ಮುಕೇಶ.. ಮುಕೇಶ .. ಮುಕೇಶ.

ಅವನು ನಿಜಕ್ಕೂ ಸೂಪರ್ ಸ್ಟಾರ್. ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೋಣಗಳು ಹಲವಿದೆ. ಹೆಚ್ಚು ಪ್ರಶಸ್ತಿ ಗೆದ್ದ ಕೋಣಗಳಿವೆ.  ಆದರೆ ಅಭಿಮಾನಿಗಳ ಹೃದಯದಲ್ಲಿ ಸೂಪರ್ ಸ್ಟಾರ್ ಸ್ಥಾನಕ್ಕೇರಿದ ಮೊದಲ ಕೋಣ ಕಾರ್ಕಳದ ಮುಕೇಶ. ನಿಖರ ಓಟ, ಅತ್ಯಂತ ಸುಂದರ ಅಂಗಸೌಷ್ಟವ, ತನ್ನ ನಡವಳಿಕೆಯಿಂದಲೇ ಜನಮನ ಗೆದ್ದವ. ತನ್ನ ಜೊತೆಗಾರ ಯಾರೇ ಇರಲಿ, ಒಮ್ಮೆಯೂ ಯಾವುದೇ ಉಪದ್ರ ನೀಡದಂತೆ ಓಡಿದವ, ನೂಲು ಕಟ್ಟಿ ಬಿಟ್ಟಂತೆ ನೇರ ಓಟ ಮುಕೇಶನದು. ಜೊತೆಗಾರ ಎಷ್ಟೇ ವೇಗವಾಗಿ ಓಡಲಿ, ಆದರೆ ಮುಕೇಶ ಎಂದೂ ಒಂದು ಹೆಜ್ಜೆ ಎದುರೇ ಓಡುತ್ತಾನೆ. ಎಂದೂ ಹಿಂದೆ ಬಿದ್ದವನಲ್ಲ ಕಾರ್ಕಳದ ಈ ವೇಗಧೂತ.

ಅದು 2006-07ರ ಸಮಯ. ಕಾರ್ಕಳದ ಉದ್ಯಮಿ ಜೀವನದಾಸ ಅಡ್ಯಂತಾಯರು ತನ್ನ ಕೆರ್ವಾಶೆಯ ತೋಟಕ್ಕೆ ಒಂದು ಮರಿ ಕೋಣವನ್ನು ತಂದಿದ್ದರು. ಕಂಬಳದ ಕೋಣಕ್ಕೆ ಇರಬೇಕಾದ ಎಲ್ಲಾ ಲಕ್ಷಣ ಹೊಂದಿತ್ತದು. ಉದ್ದದ ಕುತ್ತಿಗೆ, ಅಗಲ ಎದೆ, ಬಾವಲಿ ಚರ್ಮ, ಸಪೂರ ಕೈಕಾಲು, ಅಗಲ ಕಣ್ಣು.. ಹೀಗೆ ಅತ್ಯಂತ ಸುಂದರ ಅಂಗಸೌಷ್ಟವ ಹೊಂದಿದ್ದ ಕೋಣವದು. ಆದರೆ ಕೋಣಕ್ಕೆ ಮೂಗಿನ ಹಗ್ಗ ಹಾಕುವ ಸಮಯದಲ್ಲಿ ಮಾಡಿದ್ದ ಎಡವಟ್ಟಿನಿಂದಾಗಿ ಮೂಗಿನ ಹೊಳ್ಳೆ ತುಸು ದೊಡ್ಡದಾಗಿತ್ತು. ಕೆರ್ವಾಶೆಯ ತೋಟದಲ್ಲಿ ಈ ಕೋಣವನ್ನು ಕಂಡ ಜೀವನದಾಸರ ಆತ್ಮೀಯರೊಬ್ಬರು ‘ಈ ಮೂಂಕೇಶ (ತುಳು ಭಾಷೆಯಲ್ಲಿ ಮೂಂಕು ಎಂದರೆ ಮೂಗು) ನಿಮ್ಮನ್ನು ಕಂಬಳ ಕೂಟದಲ್ಲಿ ಎದೆಯುಬ್ಬಿಸಿ ನಿಲ್ಲಿಸುತ್ತಾನೆ” ಎಂದು ಅಂದೇ ಭವಿಷ್ಯ ನುಡಿದಿದ್ದರು.

ಹೀಗೆ ತನ್ನ ಮೂಗಿನ ಕಾರಣದಿಂದ ‘ಮೂಂಕೇಶ’ ಎಂದು ಅಡ್ಡ ಹೆಸರು ಪಡೆದ ಆತ ಮುಂದೆ ಅಭಿಮಾನಿಗಳ ಪ್ರೀತಿಯ ಮುಕೇಶನಾದ. ನೇಗಿಲು ಜೂನಿಯರ್ ವಿಭಾಗದಲ್ಲಿ ಕೆರ್ವಾಶೆ ಅರುಣ್ ಕುಮಾರ್ ಜೈನ್ ಅವರು ಆರಂಭದಲ್ಲಿ ಮುಕೇಶನನ್ನು ಓಡಿಸಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ಹಿರಿಯ ವಿಭಾಗಕ್ಕೆ ಎಂಟ್ರಿ ನೀಡಿದ್ದ ಮುಕೇಶ ಇನ್ನಷ್ಟು ಎತ್ತರಕ್ಕೆ ಏರಿದ್ದ. ಅದರಲ್ಲೂ ಮೂಲ್ಕಿ ಸೀಮೆಯ ಅರಸು ಕಂಬಳದಲ್ಲಿ ಇದು ತನ್ನದೇ ಸಾಮ್ರಾಜ್ಯ ಎಂಬಂತೆ ಅಧಿಪತ್ಯ ಸಾಧಿಸಿದ್ದ. ಮೂಲ್ಕಿಯಲ್ಲಿ ಮುಕೇಶ ಸತತ ಏಳು ಕಂಬಳದಲ್ಲಿ ಆರು ಪ್ರಥಮ ಮತ್ತು ಒಂದು ದ್ವಿತೀಯ ಗೆದ್ದುಕೊಂಡಿದ್ದ. ಒಂದೇ ಕೂಟದಲ್ಲಿ ಡಬಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಕೋಣ ಯಾವುದಾದರೂ ಇದ್ದರೆ ಕಾರ್ಕಳ ಎಕ್ಸ್ ಪ್ರೆಸ್ ಮುಕೇಶ ಮಾತ್ರ.

ತನ್ನ ಆರಂಭದ ದಿನಗಳಲ್ಲೇ ಮುಕೇಶ ಹೇಗೆ ಪ್ರಭಾವ ಬೀರಿದ್ದ ಎನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ. ಅದು 2008ರ ಕೂಟ. ಮುಕೇಶ ಇನ್ನೂ ಜೂನಿಯರ್ ವಿಭಾಗದ ಕೋಣ. ಉಪ್ಪಿನಂಗಡಿಯಲ್ಲಿಂದು ಸೀಸನ್ ನ ಕೊನೆಯ ಕಂಬಳ ಆಯೋಜನೆಯಾಗಿತ್ತು. ಅದು ಹಗ್ಗ ಕಿರಿಯ ವಿಭಾಗದಲ್ಲಿ ಅತ್ತೂರು ಮನ್ಮಥ ಜೆ ಶೆಟ್ಟಿ ಮತ್ತು ಬಾರ್ಕೂರು ಶಾಂತರಾಮ ಶೆಟ್ಟರ ಕೋಣಗಳ ನಡುವೆ ತೀವ್ರ ಸ್ಪರ್ಧೆಯಿದ್ದ ವರ್ಷ. ಆ ಸೀಸನ್ ನಲ್ಲಿ ಎರಡೂ ಕಡೆಯ ಕೋಣಗಳು ಸಮಾನ ಬಹುಮಾನ ಗೆದ್ದುಕೊಂಡಿದ್ದವು. ಹೀಗಾಗಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾರೀ ಪೈಪೋಟಿಯಿತ್ತು. ಉಪ್ಪಿನಂಗಡಿ ಕೂಟದಲ್ಲಿ ಗೆದ್ದವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಎಂಬಂತಹ ಪರಿಸ್ಥಿತಿ.

ಈ ವೇಳೆ ಅತ್ತೂರು ಮನ್ಮಥ ಶೆಟ್ರು ಮುಕೇಶನ ಮೇಲೆ ನಂಬಿಕೆ ಇರಿಸಿದರು. ಉಪ್ಪಿನಂಗಡಿ ಕಂಬಳಕ್ಕೆ ತನ್ನ ಪಾಂಡು ಎಂಬ ಕೋಣಕ್ಕೆ ಮುಕೇಶನನ್ನು ಜೊತೆ ಮಾಡಿದರು. ಬಾರ್ಕೂರಿನ ಕಾಟಿ ಮತ್ತು ಕಾಲನ ಎದುರು ಜಿದ್ದಾಜಿದ್ದಿನ ಫೈನಲ್ ರೇಸ್ ನಲ್ಲಿ ಪಾಂಡುವಿನ ಜೊತೆಯಾಗಿ ಮುಕೇಶ ಗೆಲುವಿನ ಗೆರೆ ದಾಟಿದ್ದ. ಮ್ಯಾನ್ ಆಫ್ ದಿ ಸಿರೀಸ್ ಕೂಡಾ ಅತ್ತೂರಿನ ಪಾಲಾಯಿತು. ಇದು ಮುಕೇಶ ತನ್ನ ಮೇಲಿಟ್ಟ ನಂಬಿಕೆ ಉಳಿಸುವ ಪರಿ. ಇಂತಹ ವಿಚಾರಗಳಿಂದಲೇ ಮುಕೇಶ ಜನರ ಪ್ರೀತಿ ಪಡೆದಿದ್ದು, ಕಂಬಳ ಸಾಮ್ರಾಜ್ಯದಲ್ಲಿ ಅಭಿಮಾನಿಗಳ ಪಾಲಿನ ದೊರೆಯಾಗಿ ಮೆರೆಯುತ್ತಿರುವುದು.

ಚಿತ್ರಗಳು: ರತನ್ ಬಾರಾಡಿ, ಸುನಿಲ್ ಪ್ರಸಾದ್.

ಬರಹ: ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next