Advertisement

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

01:22 AM Jan 09, 2021 | Team Udayavani |

ಯಶಸ್ಸಿನ ಗುಟ್ಟೇನು ಎಂದು ಅನೇಕರು ನನ್ನನ್ನು ಪ್ರಶ್ನಿಸುತ್ತಾರೆ. ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿರುವುದು ಮೊದಲ ಮುಖ್ಯ ಗುಣ. ಅನಂತರ ವಿನೂತನ ಆಲೋ ಚನೆಯನ್ನು ಉತ್ತಮ ತಂತ್ರಜ್ಞಾನದೊಂದಿಗೆ ಸಂಯೋಜಿಸಿ ನಿರ್ವಹಣೆ ಮಾಡುವುದು, ಸಮಸ್ಯೆಯನ್ನು ಮೊದಲೇ ಹುಡುಕಿ ಪರಿಹರಿಸುವ ಕಲೆ, ದೊಡ್ಡಮಟ್ಟದ ಉದ್ದೇಶಕ್ಕಾಗಿ ಸೇವೆಯನ್ನು ಮೀಸಲಿಡುವಂಥ ಶ್ರದ್ಧೆ ಮುಖ್ಯ. ಒಟ್ಟಲ್ಲಿ ಆತ್ಮವಿಶ್ವಾಸದಿಂದ ಕಷ್ಟಪಟ್ಟು ಕೆಲಸ ಮಾಡಿದರೆ ಯಾರು ಬೇಕಾದರೂ ಉನ್ನತ ಸಾಧನೆ ಮಾಡಬಹದು. ಇದು ನನ್ನ ಯಶಸ್ಸಿನ ಗುಟ್ಟು.

Advertisement

ಭಯಕ್ಕೂ ಭಯವಾಗಬೇಕು :

ನಮ್ಮ ತಂದೆ ಹೇಳುತ್ತಿದ್ದರು, “ಸಾಹಸ್‌ ಔರ್‌ ಹಿಮ್ಮತ್‌ ಜಿಂದಗಿ ಮೆ ಬಹೋತ್‌ ಜರೂರಿ ಹೋತಾ ಹೈ'(ಸಾಹಸ ಮತ್ತು ಧೈರ್ಯ ಜೀವನದಲ್ಲಿ ತುಂಬಾ ಅಗತ್ಯವಾದುದು.) ಜೀವನದಲ್ಲಿ ಧೈರ್ಯವಿಲ್ಲದೆ ಯಾರೂ ಏನನ್ನೂ ಸಾಧಿಸ ಲಾರರು. ದೊಡ್ಡದ್ದನ್ನು ಸಾಧಿಸಲು ಹೊರಟಾಗ ಮನಸ್ಸಿನಲ್ಲಿ ಹಿಂಜರಿಕೆ, ಭಯ ಮೂಡುವುದು ಸಹಜವೇ. ಆದರೆ ಧೈರ್ಯಯಿಂದ ಮುನ್ನುಗ್ಗಿದರೆ ನಿಮ್ಮೊಳಗೆ ಅಡಗಿರುವ ಹೀರೋ ಒಬ್ಬ ಹೊರಗೆ ಬರುತ್ತಾನೆ. ಕೆಚ್ಚೆದೆ ಮತ್ತು ಸ್ವನಂಬಿಕೆಯಿದ್ದರೆ ನೀವು ಎಂಥ ಕಠಿನ ಸಂದರ್ಭದಿಂದಲೂ ಮೇಲೆದ್ದು ಬರುತ್ತೀರ. ಸಾಹಸ್‌ ಏಕ್‌ ಐಸೀ ತಾಕತ್‌ ಹೈ ಇಸ್‌ಸೇ ಡರ್‌ ಕೋ ಭಿ ಡರ್‌ ಲಗ್‌ತಾ ಹೇ (ಸಾಹಸ ಎಂಬುದು ಎಂಥ ಶಕ್ತಿ ಎಂದರೆ, ಇದನ್ನು ನೋಡಿ ಭಯಕ್ಕೂ ಭಯವಾಗುತ್ತೆ!). ಹೀಗಾಗಿ ಹೊಸದಾಗಿ ಯಾವುದೇ ಕೆಲಸ ಪ್ರಾರಂಭಿಸಲು ಯೋಚಿಸುವ ಎಲ್ಲರಲ್ಲೂ ಇರಬೇಕಾದದ್ದು ಧೈರ್ಯ.

ಯೋಚನೆ ಬದಲಾದರೆ, ಅದೃಷ್ಟ ಬದಲಾಗುತ್ತದೆ :

ಆಲೋಚನೆ ಎಂಬುದೊಂದು ಶಕ್ತಿ. ಎಲ್ಲರೂ ಆಲೋಚಿಸುತ್ತಾರೆ, ಎಲ್ಲರ ಬಳಿಯೂ ಐಡಿಯಾಗಳಿರುತ್ತವೆ. ಆದರೆ ಅದಕ್ಕೆ ಯಾವಾಗ ನೀವು ಸ್ಪಷ್ಟ ರೂಪ ನೀಡಲು ಮುಂದಾಗುತ್ತೀರೋ, ಆಗ ಅದು ನಿಮ್ಮ ಶಿಸ್ತು- ಸಂಯಮವನ್ನು ಪರೀಕ್ಷೆಗೆ ಒಡ್ಡುವಂತೆ ಮಾಡುತ್ತದೆ. ಆ ಪರೀಕ್ಷೆಯನ್ನು ಧೈರ್ಯವಾಗಿ, ಸಂಯಮದಿಂದ ಎದುರಿಸುವುದೇ ಯಶಸ್ಸಿನ ಗುಟ್ಟು. ಉತ್ತಮ ಆಲೋಚನೆಯನ್ನು ಉತ್ತಮ ತಂತ್ರಜ್ಞಾನದೊಂದಿಗೆ ಸಂಯೋಜನೆ ಮಾಡಿ. ಆಗ ನೀವು ಪ್ರಸ್ತುತ ಜಗತ್ತಿನಲ್ಲಿ ಹೊಸ ಹೊಸ ಆವಿಷ್ಕಾರಗಳನ್ನೇ ಸೃಷ್ಟಿ ಮಾಡುವಿರಿ. ನಮ್ಮ ದೇಶದಲ್ಲಿ ಎಲ್ಲದಕ್ಕೂ ಸ್ವಾತಂತ್ರ್ಯವಿದೆ. ಅದನ್ನೇ ಬಳಸಿಕೊಂಡರೆ ನೂತನ ಅವಕಾಶಗಳು ನಮ್ಮದಾಗುತ್ತವೆ. ಜಗತ್ತು ನಿಮ್ಮ ವಿನೂತನ ಆಲೋಚನೆಗಳಿಗೆ ಸ್ಪಂದಿಸುವಂತೆ ಮಾಡಿ ಕೊಳ್ಳುವುದೂ ನಿಮ್ಮ ಕೈಲಿದೆ. ನಾನು ಉದ್ಯಮ ಲೋಕಕ್ಕೆ ಕಾಲಿಟ್ಟಾಗ ತಂದೆ ದಿ| ಧೀರೂಬಾಯ್‌ ಅಂಬಾನಿ ಅವರು ಹೇಳಿದ್ದು ಒಂದೇ ಮಾತು-“”ಸೋಚ್‌ ಬದ್ಲೋ ತೊ ಕಿಸ್ಮತ್‌ ಬದ್ಲೇಗಿ”(ಆಲೋಚನೆಯನ್ನು ಬದಲಾಯಿ ಸಿಕೋ, ಅದೃಷ್ಟವೂ ಬದಲಾಗುತ್ತದೆ).

Advertisement

ಸೋಲು ಕಲಿಸುವ ಪಾಠ ಅಷ್ಟಿಷ್ಟಲ್ಲ :

ಸಾಹಸಗಳಿಗೆ ಕೈ ಹಾಕಿದವನಿಗೆ ಮೊದಲು ಎದುರಾ ಗುವುದೇ ಸೋಲು. ಸೋಲನ್ನು ಒಪ್ಪಿ ಮುಂದೆ ಸಾಗದೇ ವಿಧಿಯಿಲ್ಲ. ಆದರೆ ಸೋಲಿಗೆ ಸೋಲುಣಿಸಲು ಯತ್ನಿಸಬೇಕು. ನಿಮ್ಮ ಹತ್ತು ಪ್ರಯತ್ನಗಳಲ್ಲಿ ಎರಡು- ಮೂರು ಬಾರಿ ಯಶಸ್ಸು ಸಾಧಿಸಲು ಸಾಧ್ಯವಾದರೂ ಸಾಕು. ಸೋಲಿನಿಂದ ನೀವು ಕಲಿತ ಪಾಠ ನಿಮ್ಮ ಮುಂದಿನ ಯಶಸ್ಸನ್ನು ನಿರ್ಣಯಿಸುತ್ತಾ ಹೋಗುತ್ತದೆ. ಸೋಲುತ್ತೇನೆಂಬ ಹೆದರಿಕೆಯಿಂದ ಮುಂದಡಿಯಿಡದೇ ಹೋದರೆ, ಇದ್ದಲ್ಲೇ ಉಳಿದುಬಿಡುತ್ತೇವೆ!

 ಭಾರತದಲ್ಲಿವೆ ವಿಫುಲ ಅವಕಾಶ :

ನನ್ನನ್ನು ವಿದೇಶದ ಸ್ನೇಹಿತರೊಮ್ಮೆ ಕೇಳಿದರು. ಅಲ್ಲ, ನೀವು ಭಾರತದಲ್ಲಿ ಅದ್ಹೇಗೆ ವ್ಯಾಪಾರ- ವ್ಯವಹಾರವನ್ನು ನಿರ್ವಹಿಸ್ತೀರಿ. ನಿಮ್ಮ ದೇಶದಲ್ಲೇ ಸಮಸ್ಯೆಗಳೇ ಹೆಚ್ಚು ಅಲ್ವೇ? ಅದಕ್ಕೆ ನಾನಂದೆ, “”ಭಾರತದಲ್ಲಿ ನನಗೆ ಸಮಸ್ಯೆಗಳು ಕಾಣುತ್ತಿಲ್ಲ, ಕಾಣುತ್ತಿರುವುದು ಬರೀ ಅವಕಾಶಗಳು!”  ಹೌದು ಭಾರತ ಎಂತಹ ದೇಶವೆಂದರೆ ನಿಮಗೆ ಬೇಕಾದ್ದನ್ನು ಸಾಧಿಸಿಸಲು ಇಲ್ಲಿ ಅಗಾಧವಾದ ಅವಕಾ ಶಗಳಿವೆ. ಇನ್ನು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯ ಅನಂತರವಂತೂ ನಾವು ಎಲ್ಲರನ್ನೂ ತಲುಪುವ ಅವಕಾಶ ಸಿಕ್ಕಿದೆ. ಇದರಿಂದ ಇಲ್ಲಿ ಅಸಾಧ್ಯ ವೆಂದುಕೊಂಡದ್ದೂ ಸುಲಭ ಸಾಧ್ಯವಾಗುತ್ತದೆ.  ಒಂದು ವಿಷಯವನ್ನು ನಾನು ಹೇಳುತ್ತಿರುತ್ತೇನೆ. ಸಾಧನೆ ಕುರಿತು ಮಾತನಾಡುವುದಕ್ಕೂ ಮತ್ತು ಸಾಧನೆ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಮಾತನಾಡಲು ಬರೀ ಬಾಯಿ ಸಾಕು. ಆದರೆ ಸಾಧನೆ ಮಾಡಲು ಶ್ರದ್ಧೆ, ಪರಿಶ್ರಮ, ಸಂಯಮ ಮುಖ್ಯ. ದೊಡ್ಡ ಉದ್ಯಮವಾದರೆ ಕೆಲಸ ಮಾಡಲು ಸಾವಿರಾರು ಕೈಗಳು ಬೇಕಾಗುತ್ತದೆ. ಭಾರತದಲ್ಲಿ ಇವಕ್ಕೆಲ್ಲವೂ ಅವಕಾಶಗಳಿವೆ. ನಮ್ಮ ಯಶಸ್ಸಿನ ಹಿಂದೆಯಂತೂ ನಮಗೆ ಕಾಣದ ಎಷ್ಟೋ ಕೈಗಳು ಶ್ರಮಿಸುತ್ತಿವೆ. ನಂಬಿಕೆ ವಿಶ್ವಾಸದಿಂದ ಕೆಲಸ ಮಾಡುವ ಕೈಗಳು ಹೆಚ್ಚಾದರೆ 20 ವರ್ಷದಲ್ಲಿ ಸಾಧಿಸ ಬೇಕಾಗಿರುವುದನ್ನು 26 ತಿಂಗಳಲ್ಲಿಯೇ ಸಾಧಿಸಿ ತೋರಿಸಬಹುದು!

ಸಮಸ್ಯೆಯನ್ನು ಮೊದಲೇ ಹುಡುಕಿ ಪರಿಹರಿಸಿ :

ಎಲ್ಲ ಕ್ಷೇತ್ರಗಳಲ್ಲಿಯೂ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ, ಸಮಸ್ಯೆ ಮೈಮೇಲೆ ಬರುವವರೆಗೂ ಸುಮ್ಮನಿದ್ದು, ಅನಂತರ ಅದರ ಪರಿಹಾರಕ್ಕಾಗಿ ಪರದಾಡುತ್ತಾ ನಿಲ್ಲುವುದು ದಡ್ಡತನ. ಸ್ನೇಹಿತರಾದ ಡಾ| ಶರ್ಮ ಎಂಬ ಅವರು ಹೇಳಿದ ಮಾತು ಈಗಲೂ ನನಗೆ ನೆನಪಿದೆ. ನೀವು ಯಾವುದೇ ಕ್ಷೇತ್ರದಲ್ಲಿ ಇರಿ, ಮೊದಲು ಅಲ್ಲಿನ ದೊಡ್ಡ ಸಮಸ್ಯೆಗಳನ್ನು, ಸವಾಲುಗಳನ್ನು ಹುಡುಕಿ. ಆ ಸಮಸ್ಯೆಗಳು ತಮ್ಮ ಪ್ರಭಾವ ಬೀರುವ ಮುನ್ನವೇ ಅದಕ್ಕೊಂದು ಶ್ರೇಷ್ಠ ಪರಿಹಾರವನ್ನು ಕಂಡುಕೊಂಡರೆ ಆ ಕ್ಷೇತ್ರದಲ್ಲಿ ನೀವು ಅರ್ಧ ಯಶಸ್ಸು ಸಾಧಿಸಿದಂತೆ ಎಂದು. ಜತೆಗೆ ಕೆಲವೊಮ್ಮೆ ಸಮಸ್ಯೆಗಳನ್ನೂ ಪರಿಹಾರಗಳನ್ನಾಗಿ ಪರಿವರ್ತಿಸುವಂಥ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಮುಂದಾಲೋಚನೆ ಬಹಳ ಮುಖ್ಯ. ಮುಂದಾ ಲೋಚನೆಯು  ಎದುರಾಗಬಹುದಾದ ದೊಡ್ಡ ಗಂಡಾಂತರವನ್ನು ಆರಂಭಿಕ ಹಂತದಲ್ಲೇ ಪರಿಹರಿಸಿ ಬಿಡುತ್ತದೆ. ಇದರಿಂದ ಯಶಸ್ಸಿಗೆ ಎದುರಾಗುವ ದೊಡ್ಡ ತಡೆ ಬಹುಬೇಗ ನಿಮ್ಮ ಎದುರಿಂದ ಕರಗಿಹೋಗುತ್ತದೆ.

ಸೇವೆ ದೊಡ್ಡ ಉದ್ದೇಶಕ್ಕಾಗಿರಲಿ :

ನೀವು ನೀಡುವ ಸೇವೆ ದೊಡ್ಡ ಮತ್ತು ಮಹತ್ವದ ಉದ್ದೇಶವನ್ನು ಹೊಂದಿರಬೇಕು. ಏಕೆಂದರೆ ನಾವು ನಮ್ಮ ನೆರೆಹೊರೆಯವರು, ರಾಜ್ಯ, ದೇಶ ಮತ್ತು ಪ್ರಪಂಚದೊಂದಿಗೆ ಪ್ರತ್ಯಕ್ಷ- ಪರೋಕ್ಷವಾಗಿ ನಂಟುಹೊಂದಿರುತ್ತೇವೆ. ಸೇವೆಯೆನ್ನುವುದು ಅನೇಕರ ಪರಿಶ್ರಮ ಮತ್ತು ಪರಿಕಲ್ಪನೆಯ ಒಟ್ಟು ರೂಪವಾಗಿದೆ. ನಿಮ್ಮ ಸೇವೆಯನ್ನು ಪಡೆಯುವ ವ್ಯಕ್ತಿ ಅಥವಾ ಸಮಾಜ ನಿಮ್ಮನ್ನು ಹಾರೈಸುವಂತಾದರೆ ನಿಮ್ಮ ಸಾಧನೆ, ಸಾಹಸ, ಉದ್ಯಮ ಸಾರ್ಥಕತೆಯೆಡೆಗೆ ಸಾಗುತ್ತದೆ. ಇದರಿಂದ ಮತ್ತಷ್ಟು ಸೇವೆ ಅಥವಾ ಕಾರ್ಯಸಾಧನೆಗೆ ಪ್ರೋತ್ಸಾಹವೂ ಸಿಗುತ್ತದೆ. ನಿಮ್ಮ ಉದ್ದೇಶ ಶ್ರೇಷ್ಠವಾಗಿದ್ದರೆ ನೀವು ಉತ್ತಮ ಮಾರ್ಗದರ್ಶಕರಾಗುತ್ತೀರಿ. ಶ್ರೇಷ್ಠವಲ್ಲ ಎಂದಾದರೆ, ನೀವು ಅನೇಕರಿಗೆ ಉತ್ತಮ ಪಾಠವಾಗುತ್ತೀರಿ.

ಶಿಸ್ತು-ಸಂಯಮದ ಹಾರ್ಡ್‌ವರ್ಕ್‌

ಉತ್ತಮ ಆಲೋಚನೆ, ತಂತ್ರಜ್ಞಾನದ ಸದ್ಬಳಕೆ, ಸಮಯಪ್ರಜ್ಞೆಯನ್ನು ಬಳಸಿ ಶಿಸ್ತಿನಿಂದ ಕೆಲಸವನ್ನು ಮಾಡಲು ಪ್ರಾರಂಭಿಸಿ. ಹೀಗೆ ಮಾಡಿದಾಗ ನೀವು ಗುರಿಯ ಬಗ್ಗೆ ಚಿಂತಿಸುವುದನ್ನು ಬಿಟ್ಟರೂ, ನಿಮ್ಮ ಪರಿಶ್ರಮ ನಿಮ್ಮನ್ನು ಗುರಿಯೆಡೆಗೆ ತಲುಪಿಸಿರುತ್ತದೆ. ಪರಿಶ್ರಮದಿಂದ ನೀವು ಒಂದು-ಎರಡು ಮೆಟ್ಟಿಲನ್ನು ಹತ್ತುತ್ತೀರಿ ಎಂದುಕೊಳ್ಳಿ, ಅದೇ ತಂತ್ರಜ್ಞಾನಯುಕ್ತ ಪರಿಶ್ರಮದಿಂದ ಕೆಲಸವನ್ನು ಶುರು ಮಾಡಿದರೆ  1-2, 2-4, 4-8 ಹೀಗೆ ಯಶಸ್ಸಿನ ಮೆಟ್ಟಿಲುಗಳನ್ನು ಗುಣಾತ್ಮಕ ರೀತಿಯಲ್ಲಿ ಏರುತ್ತಾ ಹೋಗುತ್ತೀರಿ.

 

ಮುಕೇಶ್‌ ಅಂಬಾನಿ

ರಿಲಯನ್ಸ್‌ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next