“ಲವ್ 360′ ಚಿತ್ರದ ನಾಯಕ ಪ್ರವೀಣ್ ಕುಮಾರ್ ಹೊಸ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ “ದೇಸಾಯಿ’ ಎಂದು ಹೆಸರಿಡಲಾಗಿದೆ.
ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಾಗಲಕೋಟೆಯ ಮುಚಖಂಡಿಯ ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಶಾಸಕರಾದ ವೀರಣ್ಣ ಚರಂತಿಮಠ ಅವರು ಆರಂಭ ಫಲಕ ತೋರಿದರು. ವನಶ್ರೀಮಠ ವಿಜಯಪುರದ ಡಾ. ಜಯಬಸವಕುಮಾರ ಮಹಾಸ್ವಾಮಿಗಳು ಕ್ಯಾಮೆರಾ ಚಾಲನೆ ಮಾಡಿ ಚಿತ್ರಕ್ಕೆ ಶುಭ ಕೋರಿದರು.
“ಇದು ನನ್ನ ಮೊದಲ ಚಿತ್ರ ಅದ್ಧೂರಿಯಾಗಿ ತೆರೆಯ ಮೇಲೆ ತರುವ ಹಾಗೆ ನಿರ್ದೇಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದೇನೆ’ ಎಂದು ನಿರ್ದೇಶಕ ನಾಗಿರೆಡ್ಡಿ ಬಡ ತಿಳಿಸಿದರು.
ಚಿತ್ರದ ನಿರ್ಮಾಪಕ ಮಹಾಂತೇಶ ವಿ ಚೊಳಚಗುಡ್ಡ ಮಾತನಾಡಿ, “ವಿಶಿಷ್ಟ ಕಥಾಹಂದರ ಹೊಂದಿರುವ ಕಥೆಯನ್ನು ನಾನು ಹುಡುಕುತ್ತಿದ್ದಾಗ ನನ್ನ ಯೋಚನೆಗೆ ಬಂದದ್ದು ಈ ಗತಕಾಲದ, ತನ್ನದೇ ಆದ ವೈಶಿಷ್ಟ್ಯ ಪರಂಪರೆಯನ್ನು ಹೊಂದಿರುವ ದೇಸಾಯಿ ಮನೆತನದ ಕುರಿತು ಸಿನಿಮಾ ಮಾಡಬೇಕು ಎಂದು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ’ ಎಂದರು.
Related Articles
“ಈ ಚಿತ್ರ ನನ್ನ ನಟನಾ ವೃತ್ತಿಯಲ್ಲಿ ಒಂದು ಹೊಸ ಅಧ್ಯಾಯ ಆಗಲಿದೆ ಅಂತಹ ಚಾಲೆಂಜಿಂಗ್ ಪಾತ್ರ ಇದಾಗಿದೆ. ಚಿತ್ರದ ಕಥೆ ತುಂಬಾ ಇಷ್ಟವಾಯಿತು’ ಎಂಬುದು ನಾಯಕ ಪ್ರವೀಣ್ ಕುಮಾರ್ ಮಾತು.
ಮೈಸೂರು ಮೂಲದ ರಾದ್ಯಾ ದೇಸಾಯಿ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ಕಲಾ ಬಿರಾದಾರ್, ಮಧುಸೂದನ್ ರಾವ್, ನಟನ ಪ್ರಶಾಂತ್, ವೀರೇಂದ್ರ, ಹರಿಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಜೈ ಆನಂದ್ ಛಾಯಾಗ್ರಹಣ, ಸಾಯಿಕಾರ್ತಿಕ್ ಸಂಗೀತ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಯಲ್ಲಪ್ಪ ವಿ ಚೊಳಚಗುಡ್ಡ ಸಹ ನಿರ್ಮಾಪಕರಾಗಿರುವ ಈ ಚಿತ್ರದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆಯಲಿದೆ.