Advertisement

50 ಸಂಭ್ರಮದಲ್ಲಿ ಮಿಂದೆದ್ದ ಮಫ್ತಿ ತಂಡ

09:00 PM Jan 20, 2018 | Team Udayavani |

ಶಿವರಾಜಕುಮಾರ್‌ ಹಾಗೂ ಶ್ರೀಮುರಳಿ ಅಭಿನಯದ “ಮಫ್ತಿ’ ಚಿತ್ರ ಯಶಸ್ವಿ 50 ದಿನಗಳ ಪ್ರದರ್ಶನ ಕಂಡಿದೆ. ಆ ಖುಷಿಗೆ ಶಿವರಾಜಕುಮಾರ್‌ ಅಭಿಮಾನಿಗಳೆಲ್ಲರೂ ಸೇರಿ “ಮಫ್ತಿ’ಯ ಮಸ್ತಿ ಸಂಭ್ರಮ ಆಚರಿಸಿದ್ದಾರೆ. ಶುಕ್ರವಾರ ಸಂಜೆ ಶಿವರಾಜಕುಮಾರ್‌ ಅವರ ಮನೆಯಲ್ಲಿ ಸೇರಿದ್ದ ನೂರಾರು ಅಭಿಮಾನಿಗಳು, ಚಿತ್ರತಂಡವನ್ನು ಆಹ್ವಾನಿಸಿ, ಎಲ್ಲರಿಗೂ ನೆನಪಿನ ಕಾಣಿಕೆ ನೀಡುವ ಮೂಲಕ ವಿಶೇಷವಾಗಿ 50 ದಿನಗಳ ಸಂಭ್ರಮ ಆಚರಿಸಿ ಖುಷಿಪಟ್ಟರು.

Advertisement

ಅಖೀಲ ಕರ್ನಾಟಕ ಡಾ.ಶಿವರಾಜಕುಮಾರ್‌ ಸೇನಾ ಸಮಿತಿ ಮತ್ತು ಗಂಡುಗಲಿ ಡಾ.ಶಿವರಾಜಕುಮಾರ್‌ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಜೊತೆಯಾಗಿ “ಮಫ್ತಿ’ ಚಿತ್ರದ ಸಂಭ್ರಮದಲ್ಲಿ ಮಿಂದೆದ್ದರು. ಶಿವರಾಜಕುಮಾರ್‌, ಶ್ರೀಮುರಳಿ, ನಿರ್ಮಾಪಕರಾದ ಜಯಣ್ಣ, ಭೋಗೇಂದ್ರ, ನಿರ್ದೇಶಕ ನರ್ತನ್‌, ಸಂಭಾಷಣೆಕಾರ ರಾಮ್‌ಲಕ್ಷ್ಮಣ್‌, ಸಾಹಸ ನಿರ್ದೇಶಕ ರವಿವರ್ಮ ಹಾಗು ಬಾಲನಟಿ ನೈನಾ ಸೇರಿದಂತೆ ಚಿತ್ರತಂಡ ಅಭಿಮಾನಿಗಳ ಅಭಿಮಾನದ ಪ್ರೀತಿಯ ಗೌರವ ಸ್ವೀಕರಿಸಿದರು.

ಈ ವೇಳೆ ಅಭಿಮಾನಿಗಳು ಬೃಹತ್‌ ಕೇಕ್‌ ತಂದಿದ್ದರು. ಆದರೆ, ಶಿವರಾಜಕುಮಾರ್‌ ಅವರು, ಕೇಕ್‌ ಕಟ್‌ ಮಾಡಲು ಒಪ್ಪಲಿಲ್ಲ. ಕಾರಣ, ಕಾಶಿನಾಥ್‌ ಅವರ ಅಗಲಿಕೆ. ಮೊನ್ನೆಯಷ್ಟೇ ಕಾಶಿನಾಥ್‌ ಅವರು ನಿಧನರಾಗಿದ್ದಾರೆ. ನಾವು ಸಿಹಿ ಹಂಚಿ ತಿನ್ನೋದು ಸರಿಯಲ್ಲ. 50 ದಿನದ ಸಂಭ್ರಮ ಪಡೋಣ ಆದರೆ, ಕೇಕ್‌ ಕಟ್‌ ಮಾಡುವುದು ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.

ಈ ಚಿತ್ರದ ಯಶಸ್ಸಿನ ಹಿಂದೆ ಜನರಿದ್ದಾರೆ. ಎಲ್ಲಕ್ಕೂ ಹೆಚ್ಚಾಗಿ, ಇಡೀ ತಂಡ ಶ್ರಮ ಪಟ್ಟು ಕೆಲಸ ಮಾಡಿದೆ. ಒಳ್ಳೆಯ ಚಿತ್ರಕ್ಕೆ ಜನರು ಬೆಂಬಲಿಸುತ್ತಾರೆ ಎಂಬುದಕ್ಕೆ “ಮಫ್ತಿ’ ಸಾಕ್ಷಿ. ನಿರ್ದೇಶಕರಿಗೆ ಇನ್ನೂ ಒಳ್ಳೆಯ ಯಶಸ್ಸು ಸಿಗಲಿ’ ಎಂದು ಶುಭಹಾರೈಸಿದರು ಶಿವರಾಜಕುಮಾರ್‌. ಶ್ರೀಮುರಳಿ ಕೂಡ ಗೆಲುವಿನ ಬಗ್ಗೆ ಖುಷಿಗೊಂಡು, ಈ ಗೆಲುವು ತಂಡದ ಶ್ರಮಕ್ಕೆ ಸಿಕ್ಕಿದ್ದು ಎಂದರು. ಉಳಿದಂತೆ ವೇದಿಕೆಯಲ್ಲಿದ್ದವರೆಲ್ಲರೂ ಅನುಭವ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next