Advertisement

ಖಾಸಗಿ ಶಾಲೆಗಳಿಗೆ ಆರ್‌ಟಿಇ ಹಣ ಬಿಡುಗಡೆಗೆ ಮನವಿ

04:28 PM May 03, 2020 | Naveen |

ಮುದ್ದೇಬಿಹಾಳ: 2019-20ನೇ ಸಾಲಿನ ಖಾಸಗಿ ಶಾಲೆಗಳ ಆರ್‌ಟಿಇ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಎನ್‌ಕೆಯುಎಸ್‌ಎಂಎ ಸಂಘಟನೆ ಅಡಿಯ ಜಿಲ್ಲಾ ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ಕೊಪ್ಪ ಅವರು ಶನಿವಾರ ತಹಶೀಲ್ದಾರ್‌ ಕಚೇರಿ ಶಿರಸ್ತೇದಾರ ಎ.ಬಿ. ಹಿರೇಮಠ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Advertisement

2012-13ನೇ ಸಾಲಿನಿಂದ ಬಡ, ಅನಾಥ, ಅಂಗವಿಕಲ, ನಿರ್ಗತಿಕ, ಬೀದಿ ಮಕ್ಕಳ ಕಲ್ಯಾಣಕ್ಕಾಗಿ ಆರ್‌ಟಿಇ ಯೋಜನೆ ಜಾರಿಗೊಳಿಸಲಾಗಿದೆ. ಎಲ್ಲ ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ಇಂಥ ಮಕ್ಕಳನ್ನು ಉಚಿತವಾಗಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇವರ ಶಾಲಾ ಶುಲ್ಕವನ್ನು ಸರ್ಕಾರವೇ ಭರಿಸುತ್ತ ಬಂದಿದೆ. ಆದರೆ ಕಳೆದ ವರ್ಷದಿಂದ ಶಾಲೆಗಳಿಗೆ ಆರ್‌ಟಿಇ ಹಣ ಬರುತ್ತಿಲ್ಲ.

2019-20ನೇ ಸಾಲಿನ ಹಣ ಮಾರ್ಚ್‌ 30ರೊಳಗೆ ಬರಬೇಕಿದ್ದು ಈವರೆಗೆ ಬಿಡುಗಡೆ ಆಗಿಲ್ಲ. ಇದರಿಂದ ಬಹಳಷ್ಟು ಶಾಲೆಗಳಿಗೆ ತೊಂದರೆ ಆಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಜವಾಬ್ದಾರಿ ನಿಭಾಯಿಸುತ್ತವೆ. ಪಾಲಕರು ಸರಿಯಾಗಿ ಫೀ ಕೊಡುತ್ತಿಲ್ಲ. ಕೋವಿಡ್‌-19 ವೈರಸ್‌ನಿಂದಾಗಿ ಫೀ ಬರದೆ ಶಾಲೆ ನಡೆಸುವುದೇ ಕಷ್ಟಕರವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಶೇ.80ರಷ್ಟು ಶಾಲೆಗಳು ಮಾಸಿಕ 1000-1500 ರೂ. ಶುಲ್ಕ ಪಡೆದು ಶಾಲೆ ನಡೆಸುತ್ತಿದ್ದು ಇವುಗಳ ಸ್ಥಿತಿ ಈಗ ಗಂಭಿರವಾಗಿದೆ. ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ ಬಾಕಿ ಇರುವ ಆರ್‌ಟಿಇ ಹಣವನ್ನಾದರೂ ಬಿಡುಗಡೆ ಮಾಡಿದರೆ ಖಾಸಗಿ ಶಾಲೆಗಳಿಗೆ ಅನುಕೂಲವಾಗುತ್ತದೆ. ಕೂಡಲೇ ಹಣ ಬಿಡುಗಡೆಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next