Advertisement

ಮುದ್ದೇಬಿಹಾಳ: ಯೋಧನ ಅಂತ್ಯಕ್ರಿಯೆ; ಪಾಲನೆಯಾಗದ ಸರ್ಕಾರಿ ಪ್ರೋಟೊಕಾಲ್

03:00 PM Dec 07, 2021 | Team Udayavani |

ಮುದ್ದೇಬಿಹಾಳ: ದೇಶದ ರಾಜಧಾನಿ ದೆಹಲಿಯ ಮಿರಟ್ ಬಳಿ ಇರುವ ಎಂಇಜಿ ಯೂನಿಟ್-9ರ ಭಾರತೀಯ ಸೇನಾ ಕ್ಯಾಂಪ್‍ನಲ್ಲಿ ಕರ್ತವ್ಯದಲ್ಲಿದ್ದ ವೇಳೆಯಲ್ಲೇ ರವಿವಾರ ಆತ್ಮಹತ್ಯೆ ಮಾಡಿಕೊಂಡಿದ್ದ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಜಟ್ಟಗಿ ಗ್ರಾಮದ ಯುವ ಯೋಧ ಮಂಜುನಾಥ ಯಲ್ಲಪ್ಪ ಹೂಗಾರ ಇವರ ಅಂತ್ಯಕ್ರಿಯೆ ಕುಟುಂಬದವರು, ಅಪಾರ ಜನಸಾಗರದ ಮಧ್ಯೆ ಮಂಗಳವಾರ ಸ್ವಗ್ರಾಮ ಜಟ್ಟಗಿಯಲ್ಲಿ ನೆರವೇರಿತು.

Advertisement

ಸಾಮಾನ್ಯವಾಗಿ ಕರ್ತವ್ಯದಲ್ಲಿದ್ದ ಸೈನಿಕರು ಸಾವನ್ನಪ್ಪಿದರೆ ಪಾಲಿಸುವ ಸರ್ಕಾರಿ ಪ್ರೋಟೊಕಾಲ್ ಇಲ್ಲಿ ಪಾಲನೆ ಆಗಲಿಲ್ಲ. ಆಕಾಶಕ್ಕೆ ಸೈನಿಕರು ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸುವ ಪ್ರಕ್ರಿಯೆ ನಡೆಯದಿರುವುದು ದೇಶಭಕ್ತರ ಅಸಮಾಧಾನಕ್ಕೆ ಕಾರಣವಾಯಿತು.

ಗಣ್ಯರಿಂದ ನಮನ

ಯೋಧನ ಪಾರ್ಥೀವ ಶರೀರವನ್ನು ಬೆಳಗಾವಿ ಮುಖಾಂತರ ಅಂಬ್ಯುಲೆನ್ಸ್ ನಲ್ಲಿ ಗ್ರಾಮಕ್ಕೆ ತರಲಾಗಿತ್ತು. ಬಸವೇಶ್ವರ ವೃತ್ತದಲ್ಲಿ ಶೋಕತಪ್ತ ಅಭಿಮಾನಿಗಳು ವಾಹನ ಬರಮಾಡಿಕೊಂಡರು. ನಂತರ ಹಳೇ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಸೈನಿಕ ಮೈದಾನಕ್ಕೆ ಪಾರ್ಥೀವ ಶರೀರದ ಬಾಕ್ಸ್ ಸಾರ್ವಜನಿಕ ದರ್ಶನಕ್ಕಿಡಲಾಯಿತು. ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿಯವರು ಸರ್ಕಾರದ ಪ್ರತಿನಿಧಿಯಾಗಿ ಪಾಲ್ಗೊಂಡು ಗೌರವ ನಮನ ಸಲ್ಲಿಸಿದರು.

ತಾಲೂಕು ಆಡಳಿತ ವತಿಯಿಂದ ತಹಸೀಲ್ದಾರ್ ಬಿ.ಎಸ್.ಕಡಕಭಾವಿ, ತಾಪಂ ಇಓ ಶಿವಾನಂದ ಹೊಕ್ರಾಣಿ, ಪೊಲೀಸ್ ಇಲಾಖೆ ಪರವಾಗಿ ಪಿಎಸೈ ರೇಣುಕಾ ಜಕನೂರ, ಸಮಾಜದ ಪರವಾಗಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಬಿ.ಕೆ.ಬಿರಾದಾರ, ಪುರಸಭೆ ಆಡಳಿತದ ಪರವಾಗಿ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸದಸ್ಯರು ಹೂಮಾಲೆ ಅರ್ಪಿಸಿ, ಶ್ರದ್ಧಾಂಜಲಿಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

Advertisement

ವಾಗ್ವಾದ

ಮಂಜುನಾಥ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಶವವನ್ನು ಸೈನಿಕ ಮೈದಾನಕ್ಕೆ ತರಬಾರದು ಎಂದು ಯಾರೋ ಒಬ್ಬರು ಹೇಳಿದ್ದಾರೆಂದು ಮಾಜಿ ಸೈನಿಕರ ಸಂಘದ ಕಿಡಿಗೇಡಿಯೊಬ್ಬ ಹಬ್ಬಿಸಿದ ಸುದ್ದಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಇದು ವಿಕೋಪಕ್ಕೆ ತಿರುಗಿ ಕೆಲವರ ನಡುವೆ ಕೈಕೈ ಮಿಕಾಯಿಸುವ ಹಂತಕ್ಕೂ ಹೋಗಿತ್ತು. ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡು ಯೋಧನ ಪಾರ್ಥೀವ ಶರೀರ ಇದ್ದ ಅಂಬ್ಯುಲೆನ್ಸ್ ವಾಹನ ಜಟ್ಟಗಿ ಗ್ರಾಮದತ್ತ ತೆರಳಿತು. ಆದರೆ ಈ ಘಟನೆ ಬಗ್ಗೆ ಪಟ್ಟಣದಲ್ಲಿ ಬಹಳ ಹೊತ್ತು ಚರ್ಚೆ ಮಾತ್ರ ತೀವ್ರ ಕಾವು ಪಡೆದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next