Advertisement

ಮಣ್ಣಿನ ಥೆರಪಿಯಿಂದ ಆರೋಗ್ಯ ವೃದ್ಧಿ

09:58 PM Sep 23, 2019 | sudhir |

ದಶಕಗಳ ಹಿಂದೆ ಅಜ್ಜ , ಮುತ್ತಜ್ಜಂದಿರು ಯಾವುದೇ ಕಾಯಿಲೆಗೆ ಆಸ್ಪತ್ರೆ ಮೆಟ್ಟಿಲು ಹತ್ತುತ್ತಿರಲಿಲ್ಲ. ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದುಗಳ ಮೂಲಕವೇ ಪರಿಹಾರ ಕಂಡುಕೊಳ್ಳುತ್ತಿದ್ದರು. ಆದರೆ ಈಗ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಅದಕ್ಕೆ ತಕ್ಕಂತೆ ಚಿಕಿತ್ಸೆಗಳು ದುಬಾರಿಯಾಗುತ್ತಿವೆ.

Advertisement

ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಆಸ್ಪತ್ರೆ ಕಡೆ ಹೋದರೆ ಸಾಕು ಇದ್ದ ಬದ್ದ ಪರೀಕ್ಷೆಗಳನ್ನು ಮಾಡಿ ಮಾರು ಉದ್ದದ ಬಿಲ್‌ಗ‌ಳನ್ನು ನೀಡಲಾಗುತ್ತದೆ. ದುಡ್ಡು ಕೊಟ್ಟು ಆರೋಗ್ಯ ಸಹಜ ಸ್ಥಿತಿಗೆ ಬಂದರೆ ಆಯಿತು. ಇಲ್ಲವಾದರೆ ಇನ್ನಷ್ಟು ಸಮಸ್ಯೆಗಳು ಹೆಗಲೇರಿಕೊಳ್ಳುತ್ತದೆ. ಈ ತಕರಾರುಗಳಿಂದ ಮುಕ್ತಿ ಪಡೆಯಲು ಜನ ಈಗ ಮತ್ತೆ ಆಯುರ್ವೇದ ಚಿಕಿತ್ಸೆಯತ್ತ ವಾಲುತ್ತಿದ್ದಾರೆ.
ಕೆಲವೊಮ್ಮೆ ಔಷಧಗಳು ಮಾಡದ ಚಮತ್ಕಾರವನ್ನು ನಿಸರ್ಗ ಮಾಡಿ ತೋರಿಸುತ್ತದೆ. ಅದರಲ್ಲೇ ಒಂದು ಮಣ್ಣಿನ ಥೆರಪಿ. ಭೂಮಿಯ ಪೋಷಕಾಂಶಗಳಲ್ಲೊಂದಾದ ಮಣ್ಣನ್ನು ಬಳಸಿ ದೇಹದ ಆರೋಗ್ಯ ಕಾಪಾಡುವ ತಂತ್ರ ಬಹಳ ಹಿಂದಿನಿಂದಲೇ ನಡೆದು ಬಂದಿದೆ. ಆಯುರ್ವೇದದಲ್ಲಿ ಆರಂಭವಾದ ಮಣ್ಣಿನ ಚಿಕಿತ್ಸೆ ಈಗ ಜಾಗತಿಕವಾಗಿ ಜನಪ್ರಿಯವಾಗುತ್ತಿದೆ.

ಮಣ್ಣಿನ ಥೆರಪಿಗೆ ಹೆಚ್ಚಿದ ಬೇಡಿಕೆ
ಮಣ್ಣಿನಲ್ಲಿರುವ ಖನಿಜಾಂಶಗಳು ದೇಹ ಸೌಂದರ್ಯವನ್ನು ಹೆಚ್ಚಿಸುವುದರ ಜತೆಗೆ ಆರೋಗ್ಯವನ್ನು ಹೆಚ್ಚಿಸುವುದು. ಮಡ್‌ ಥೆರಪಿ ಮಾಡುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ. ಈ ಥೆರಪಿ ದೇಹದಲ್ಲಿರುವ ಕಶ್ಮಲವನ್ನು ಹೊರಹಾಕಿ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಬಿಸಿಲಿಗೆ ಹೋದರೆ ತಲೆನೋವು ಬರುವ ಸಮಸ್ಯೆ ಇರುವವರು ಈ ಥೆರಪಿ ಮಾಡಿಸಿದರೆ ಉತ್ತಮ. ದೇಹದ ಉಷ್ಣತೆ ಹೆಚ್ಚಾದರೆ ಮೈಯೆಲ್ಲಿ ಗುಳ್ಳೆ ಬರುವುದು, ಸುಸ್ತು ಮತ್ತಿತರ ಸಮಸ್ಯೆ ಕಂಡು ಬರುವುದು. ಈ ಥೆರಪಿ ದೇಹವನ್ನು ತಂಪಾಗಿ ಇಡುತ್ತದೆ. ಹೀಗಾಗಿ ಮಣ್ಣಿನ ಥೆರಪಿ ಹೆಚ್ಚು ಜನಪ್ರಿಯವಾಗುತ್ತಿದೆ.

ಮಣ್ಣಿನಿಂದ ಆರೋಗ್ಯ ವೃದ್ಧಿ ಹೇಗೆ?
ಮಣ್ಣು ದೇಹವನ್ನು ಒಳಗಿನಿಂದ ಸ್ವತ್ಛಗೊಳಿಸಿ ಯಾವುದೇ ಅಸಮತೋಲನವನ್ನು ಸರಿಪಡಿಸಬಲ್ಲ ಗುಣ ಹೊಂದಿದೆ. ಮಣ್ಣಿನಲ್ಲಿ ಹಲವಾರು ಪ್ರಮುಖ ಖನಿಜಾಂಶಗಳಿದ್ದು, ಇವು ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತವೆ. ಇದು ಹಲವಾರು ಆರೋಗ್ಯ ಲಾಭಗಳನ್ನು ತರಬಲ್ಲದಾಗಿದ್ದು, ದೊಡ್ಡ ದೊಡ್ಡ ಕಾಯಿಲೆಗಳನ್ನು ಕೂಡ ಮಣ್ಣಿನ ಥೆರಪಿಯಿಂದ ಗುಣಪಡಿಸಬಹುದು ಎನ್ನಲಾಗುತ್ತದೆ. ಅದಕ್ಕಾಗಿ ಇಂಗ್ಲಿಷ್‌ ಔಷಧಗಳ ಹಿಂದೆ ಹೋಗುತ್ತಿದ್ದ ಜನರೀಗ ಮಣ್ಣಿನ ಥೆರಪಿ ಹಾಗೂ ಆಯುರ್ವೇದ ಚಿಕಿತ್ಸೆಗಳತ್ತ ಮುಖ ಮಾಡಿದ್ದಾರೆ.

ಆಯುರ್ವೇದ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲಿ ಪಂಚಕರ್ಮ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಇದರಲ್ಲಿ ಮಣ್ಣಿನ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆಯುರ್ವೇದ ಚಿಕಿತ್ಸೆ ಪಡೆಯುವವರು ಹೆಚ್ಚಾಗಿ ಮಣ್ಣಿನ ಥೆರಪಿ ಮಾಡಿಸಿಕೊಳ್ಳುತ್ತಾರೆ. ಖಾಸಗಿ ಕಂಪೆನಿ ಉದ್ಯೋಗಿಗಳು ಹೆಚ್ಚಾಗಿ ಒತ್ತಡಯುತ ಕೆಲಸದಿಂದ ರಿಲಾಕ್ಸ್‌ ಪಡೆದುಕೊಳ್ಳಲು ಮಣ್ಣಿನ ಥೆರಪಿ ಮಾಡಿಸಿಕೊಳ್ಳುತ್ತಾರೆ ಎಂದು ಹೇಳುತ್ತಾರೆ ಆಯುರ್ವೇದ ಕ್ಲಿನಿಕ್‌ನ ಸಿಬಂದಿ.

Advertisement

ಮಣ್ಣಿನ ಥೆರಪಿ ಪ್ರಯೋಜನಗಳು
-   ತಲೆನೋವಿಗೆ ರಾಮಬಾಣ: ತಲೆನೋವಿನಿಂದ ಬಳಲುತ್ತಿರುವವರಿಗೆ ಮಡ್‌ ಥೆರಪಿ ತುಂಬಾ ರಿಲಾಕ್ಸ್‌ ಫೀಲ್‌ ನೀಡುತ್ತದೆ. ಹೊಟ್ಟೆಯ ಸುತ್ತಮುತ್ತ ಹಾಗೂ ಹಣೆಯಲ್ಲಿ ಮಣ್ಣನ್ನು ಹಚ್ಚುವುದರಿಂದ ಅದು ದೇಹವನ್ನು ಒಳಗಿನಿಂದ ತಂಪಾಗಿಸುತ್ತದೆ. ಮಾತ್ರವಲ್ಲ ಹೀಟ್‌ ಸ್ಟ್ರೋಕ್‌ ನಿಂದಲೂ ತತ್‌ಕ್ಷಣ ರಿಲೀಫ್‌ ನೀಡುತ್ತದೆ.

-   ಜೀರ್ಣಕ್ರಿಯೆಗೆ ಸಹಕಾರಿ: ಮಣ್ಣನ್ನು ಹೊಟ್ಟೆಯ ಸುತ್ತ ದಪ್ಪವಾಗಿ ಹಚ್ಚಿಕೊಳ್ಳುವುದರಿಂದ ಅದು ಡಿಟಾಕ್ಸ್‌ ಮಾಡಿ, ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಜತೆಗೆ, ಚಯಾಪಚಯ ಕ್ರಿಯೆಯನ್ನೂ ವೇಗಗೊಳಿಸುತ್ತದೆ. ಇದರಿಂದ ಆರೋಗ್ಯದ ಸಮಸ್ಯೆ ಕಡಿಮೆಯಾಗುತ್ತದೆ.

-   ಕಾಂತಿಯುತ ತ್ವಜೆಗಾಗಿ ಮಡ್‌ ಥೆರಪಿ: ಮಡ್‌ ಥೆರಪಿಯನ್ನು ಮಾಡುವುದರಿಂದ ದೇಹದ ಎಲ್ಲಾ ಭಾಗಗಳ ಜತೆಗೆ ಅತಿ ಹೆಚ್ಚು ಫಲ ಸಿಗುವುದು ಚರ್ಮಕ್ಕೆ. ಆಯುರ್ವೇದದ ಪ್ರಕಾರ ಮಣ್ಣು ದೇಹದಿಂದ ಟಾಕ್ಸಿನ್ಸ್‌ ಹೊರ ಹಾಕಿ ಪಿತ್ತದ ದೋಷಗಳನ್ನು ತೊಡೆದು ಹಾಕುತ್ತದೆ. ಅದೇ ಸಮಯದಲ್ಲಿ ನಿಮ್ಮ ಚರ್ಮದ ಅಶುದ್ಧತೆಯನ್ನು ತೊಡೆದು ಹಾಕಿ ಕಾಂತಿಯುತ ತ್ವಚೆಯನ್ನು ನೀಡುತ್ತದೆ.

-   ಒತ್ತಡದಿಂದ ರಿಲೀಫ್‌: ಮಣ್ಣಿಗೆ ತಂಪಾಗಿಸುವ ಗುಣವಿರುವುದರಿಂದ ನರಸಂಬಂಧಿತ ತೊಂದರೆಗಳಾದ ಒತ್ತಡ, ನಿದ್ರಾ ಸಮಸ್ಯೆ, ಆತಂಕ, ಪೋಸ್ಟ್‌ ಟ್ರೊಮ್ಯಾಟಿಕ್‌ ಡಿಸಾರ್ಡಸ್‌ ಇರುವವರಿಗೆ ಮಡ್‌ ಥೆರಪಿ ಸಲಹೆ ಮಾಡುತ್ತಾರೆ. ಇದು ಮೆದುಳಿನ ಸುತ್ತಮುತ್ತ ಬ್ಲಾಕ್‌ ಆಗಿರುವ ಹಾದಿಗಳನ್ನು ಸುಗಮಗೊಳಿಸಿ, ಮೇಲೆ ಕುಳಿತ ಟಾಕ್ಸಿನ್ಸ್‌ ಗುಡಿಸಿ ಹಾಕುತ್ತದೆ.

-   ಕಣ್ಣಿಗೆ ತಂಪು: ಪ್ರಸ್ತುತ ಬಹುತೇಕ ಮಂದಿ ಕಂಪ್ಯೂಟರ್‌ ಮುಂದೆ ಕೆಲಸ ಮಾಡುವವರೇ ಜಾಸ್ತಿ. ಹಾಗಾಗಿ ಕಣ್ಣಿಗೆ ವಿಶ್ರಾಂತಿ ಸಿಗುವುದೇ ಕಡಿಮೆ. ಹಾಗಾಗಿ ಕಣ್ಣಿನ ಸುತ್ತ ಮಣ್ಣನ್ನು ಪೇಸ್ಟ್‌ನಂತೆ ಹಚ್ಚಿಕೊಳ್ಳುವುದರಿಂದ ಕಣ್ಣುಗಳು ತಂಪಾಗಿ ಆರೋಗ್ಯ ಕಂಡುಕೊಳ್ಳುತ್ತವೆ .

- ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next