Advertisement

ಎಂಎಸ್‌ಎಂಇ ಸಹಾಯವಾಣಿ ಕಾರ್ಯಾರಂಭ

04:04 PM Aug 15, 2020 | Suhan S |

ಕಲಬುರಗಿ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸಿಗರು ಮತ್ತು ಸಣ್ಣ ಕೈಗಾರಿಕೆಗಳ ಮಧ್ಯೆ ಸಮನ್ವಯತೆ ಸಾಧಿಸಿ ಆರ್ಥಿಕತೆ  ಉತ್ತೇಜಿಸುವ ನಿಟ್ಟಿನಲ್ಲಿ ಸೇತುವೆಯಾಗಿ ಕಾರ್ಯ ನಿರ್ವಹಿಸಲು ನಗರದ ಹೈದ್ರಾಬಾದ್‌-ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಸಹಾಯವಾಣಿ ಕಾರ್ಯಾರಂಭಿಸಿದೆ.

Advertisement

ನಗರದ ಸೂಪರ್‌ ಮಾರ್ಕೆಟ್‌ನಲ್ಲಿರುವ ಎಚ್‌ಕೆಸಿಸಿಐಯಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಾಣಿಕ್‌ ರಘೋಜಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ಗಳನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಹಲವಾರು ಸೌಲಭ್ಯಗಳನ್ನು ಘೋಷಿಸಿದೆ. ಹೊಸದಾಗಿ ಉದ್ಯಮ ಆರಂಭಿಸಲು ಸಹ ಪ್ರೋತ್ಸಾಹ ನೀಡುತ್ತಿದ್ದು, ಅವುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೋವಿಡ್ ದಿಂದ ಲಾಕ್‌ಡೌನ್‌ ಸಂದರ್ಭದಲ್ಲಿ ಎಲ್ಲ ಕೈಗಾರಿಕೆಗಳು ಸ್ತಬ್ಧವಾಗಿದ್ದವು. ತೊಗರಿ ಬೇಳೆಯನ್ನು ಪೂರೈಕೆ ಮಾಡಲು ಕಲಬುರಗಿಯ ದಾಲ್‌ ಮಿಲ್‌ಗ‌ಳು ಕಾರ್ಯನಿರ್ವಹಣೆ ಮಾಡಿ ಬೇಳೆ ಉತ್ಪಾದನೆ ಮಾಡಿದವು. ಬೆಂಗಳೂರು ಮತ್ತಿತರ ಬೇಡಿಕೆ ಸ್ಥಳಗಳಿಗೆ ಎದುರಾದ ಸರಕು ಸಾಗಣೆ ಸಮಸ್ಯೆ ನಿವಾರಿಸಿದ ಜಿಲ್ಲಾಧಿಕಾರಿಗಳು ಅನುಮತಿ ನೀಡಿ ಅನುವು ಮಾಡಿಕೊಟ್ಟರು. ಇದರಿಂದ ಉದ್ಯಮಿಗಳ ಒಂದಿಷ್ಟು ಸಮಸ್ಯೆ ಪರಿಹಾರ ಕಾಣಲು ಸಾಧ್ಯವಾಯಿತು. ಅಲ್ಲದೇ, ಉದ್ಯಮಿಗಳಿಗೆ ಶೇ.20 ಸಾಲವನ್ನು ಲೀಡ್‌ ಬ್ಯಾಂಕ್‌ ನೀಡಿದೆ ಎಂದರು.

ವಿಶ್ವೇಶ್ವರಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ| ಶಿವರಾಮೇಗೌಡ ಮಾತನಾಡಿ, ಎಂಎಸ್‌ಎಂಇಗಳು ಸದೃಢವಾಗಿದ್ದರೆ ಮಾತ್ರ ದೇಶ ಪ್ರಗತಿ ಸಾಧ್ಯ. ಹೀಗಾಗಿ ಎಲ್ಲರೂ ಬಲಿಷ್ಠರಾಗಬೇಕು. ನಮ್ಮ ಭಾಗದ ಕಾರ್ಮಿಕರೇ ಬೇರೆ-ಬೇರೆ ಮಹಾನಗರಗಳಿಗೆ ತೆರಳಿ ಅವುಗಳನ್ನು ಕಟ್ಟುತ್ತಿದ್ದಾರೆ. ಮರಳಿ ಬಂದಿರುವ ಕಾರ್ಮಿಕರನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಹೊಸದರತ್ತ ಹೆಜ್ಜೆ ಇಡಬೇಕು. ಇದಕ್ಕೆ ಸಹಾಯವಾಣಿ ಉತ್ತಮ ವೇದಿಕೆಯಾಗಿದೆ ಎಂದರು. ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಮಾತನಾಡಿದರು.

ಎಂಎಸ್‌ಎಂಇ ಸಹಾಯಕ ನಿರ್ದೇಶಕ ಬಿ.ಎಸ್‌.ಜವಳಗಿ, ಎಚ್‌ಕೆಸಿಸಿಐ ಉಪಾಧ್ಯಕ್ಷ ಶರಣಬಸಪ್ಪ ಪಪ್ಪಾ, ಕಾರ್ಯದರ್ಶಿ ಶಶಿಕಾಂತ ಪಾಟೀಲ, ಸದಸ್ಯರಾದ ಪ್ರಶಾಂತ ಮಾನಕರ್‌, ಆರ್‌.ಕೆ. ಜಗದೀಶ, ಮನೀಷ್‌ ಜಾಜು, ಶಿವರಾಜ ಇಂಗಿನಶೆಟ್ಟಿ, ಚನ್ನಬಸಯ್ಯ ನಂದಿಕೋಲಮಠ, ಸಂತೋಷ ಲಂಗರ, ಬಸವರಾಜ ಹಡಗಿಲ್‌, ಗೋಪಾಲ ಬುಚನಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Advertisement

ಸೇತುವೆಯಾಗಿ ಕೆಲಸ ಮಾಡುತ್ತೇವೆ :  ಕೋವಿಡ್ ಸೃಷ್ಟಿಸಿರುವ ಸಂಕಷ್ಟದಿಂದ ಹೊರಬರಲು ನೆರವಾಗಬೇಕೆಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸಂಯುಕ್ತ ರಾಷ್ಟ್ರ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಬೆಂಗಳೂರಿನ ವಿಷನ್‌ ಫೌಂಡೇಷನ್‌ ಸಹಯೋಗದಡಿ ಸಹಾಯವಾಣಿ ಆರಂಭಿಸಲಾಗಿದೆ. ಸರ್ಕಾರ ಮತ್ತು ಜನರ ನಡುವೆ ಸೇತುವೆಯಂತೆ ಎಚ್‌ಕೆಸಿಸಿಐ ಕಾರ್ಯನಿರ್ವಹಿಸಲಿದೆ ಎಂದು ಅಧ್ಯಕ್ಷ ಅಮರನಾಥ ಪಾಟೀಲ ಹೇಳಿದರು. ಬೆಂಗಳೂರು, ಪುಣೆ ಹಾಗೂ ಹೈದ್ರಾಬಾದ್‌ ಹಾಗೂ ಮತ್ತಿತರ ಕಡೆಗೆ ಉದ್ಯೋಗಕ್ಕೆ ಹೋದವರು ಮರಳಿ ಬಂದಿದ್ದಾರೆ. ಅವರು ಏನು ಮಾಡಬೇಕೆಂದು ಗೊತ್ತಾಗದೆ ಗೊಂದಲದಲ್ಲಿದ್ದಾರೆ. ಅವರಿಗೂ ಸಹ ಅಗತ್ಯವಿರುವ ಮಾಹಿತಿ ಮತ್ತು ಸಲಹೆಗಳನ್ನು ನೀಡಲಾಗುತ್ತದೆ. ಸಹಾಯವಾಣಿ ಸಂಖ್ಯೆ + 91 7483188392 ಅಥವಾ ದೂರವಾಣಿ 08472-233265 ಸಂಖ್ಯೆಗೆ ಕರೆ ಮಾಡಬಹುದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next