Advertisement

ರೈತಸ್ನೇಹಿಯಾದ ಎಂಆರ್‌ಎನ್‌ ಸಮೂಹ ಸಂಸ್ಥೆ

02:55 PM Mar 04, 2023 | Team Udayavani |

ಮಂಡ್ಯ: ಸಕ್ಕರೆ ಉದ್ಯಮದ ಅನಭಿಷಿಕ್ತ ದೊರೆಯಾದ ನಿರಾಣಿ ಉದ್ಯಮ ಸಮೂಹ, ಪಿಎಸ್‌ಎಸ್‌ಕೆ ಪಾಂಡವಪುರ ಕಾರ್ಖಾನೆಯನ್ನು ತನ್ನ ಸುಪರ್ದಿಗೆ ಪಡೆದ ಬಳಿಕ ಯಶಸ್ವಿಯಾಗಿ ತನ್ನ ಮೂರ ನೇ ಹಂಗಾಮು ಪೂರ್ಣಗೊಳಿಸಿದೆ. ಪ್ರಸಕ್ತ ಹಂಗಾಮಿನಲ್ಲಿ ಕಡಿಮೆ ಅವಧಿಯಲ್ಲಿ ದಾಖಲೆಯ 5,79,127 ಟನ್‌ ಕಬ್ಬು ನುರಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯ ಜೀವನಾಡಿ ಪಾಂಡವ ಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಒಡೆತನದ ಎಂ.ಆರ್‌.ಎನ್‌. ಸಮೂಹದ ನಿರಾಣಿ ಶುಗರ್ಸ್‌ ಗುತ್ತಿಗೆ ಪಡೆದ ಬಳಿಕ ಕಾರ್ಖಾನೆಯು ವರ್ಷದಿಂದ ವರ್ಷಕ್ಕೆ ಸುಸ್ಥಿರವಾಗಿ ಮುನ್ನಡೆಯುತ್ತಿದೆ. ಜಿಲ್ಲೆಯ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

Advertisement

ಕಾರ್ಖಾನೆ ಆವರಣದಲ್ಲಿ ನಡೆದ ಪ್ರಸಕ್ತ ಹಂಗಾಮು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ರೈತ ಮುಖಂಡರು ಹಾಗೂ ಮಾಧ್ಯಮದವರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಎಂ.ಆರ್‌.ಎನ್‌. ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ, ರಾಜ್ಯದ ಐತಿಹಾಸಿಕ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ತನ್ನ ಹಳೆಯ ವೈಭವಕ್ಕೆ ಮರಳಬೇಕು ಎಂಬುದು ಸಹೋದರ ಮುರುಗೇಶ ನಿರಾಣಿ ಅವರ ಕನಸಾಗಿತ್ತು. ಅದು ಈಗ ಈಡೇರಿದೆ ಎಂದರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಸುಸ್ಥಿರವಾಗಿ ಕಾರ್ಖಾನೆ ಮುನ್ನಡೆಸಿಕೊಂಡು ಹೋಗುವುದು ನಮ್ಮ ಸಂಕಲ್ಪವಾಗಿದೆ. ಇದಕ್ಕೆ ರೈತ ಮುಖಂಡರು ಹಾಗೂ ಜಿಲ್ಲೆಯ ಜನತೆಯ ಸಹಕಾರ ಅಗತ್ಯವಾಗಿದೆ. ಮುಂಬರುವ ಹಂಗಾಮಿನಿಂದಲೇ ಕಾರ್ಖಾನೆ ತನ್ನ ಕಬ್ಬು ನುರಿಸುವ ಸಾಮರ್ಥ್ಯವನ್ನು ಐದು ಸಾವಿರ ಟಿಸಿಡಿಗೆ ವಿಸ್ತರಿಸಿಕೊಳ್ಳುವ ಜೊತೆಗೆ 11 ಮೆಗಾವ್ಯಾಟ್‌ ವಿದ್ಯುತ್‌ ಘಟಕ ಸಹ ಕಾರ್ಯಾರಂಭ ಮಾಡಲಿದೆ. ಮುಂದಿನ ವರ್ಷ 10 ಲಕ್ಷ ಟನ್‌ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ರೈತ ಮುಖಂಡರು ಹಾಗೂ ಪತ್ರಿಕಾ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಅವರು,ರೈತ ಮುಖಂಡರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಂದರ್ಭ ರೈತರು ಹಾಗೂ ಕಬ್ಬು ಸಾಗಣೆದಾರರ ಅನೇಕ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು ಹಂತ-ಹಂತವಾಗಿ ಕಾರ್ಯಗತಗೊಳಿಸುವ ಭರವಸೆ ನೀಡಿದರು.

ರೈತರ ತ್ವರಿತ ಹಣ ಪಾವತಿ: ಪ್ರತಿ ಹಂಗಾಮಿನ ಪ್ರಾರಂಭದ ದಿನದಿಂದಲೂ 15 ದಿನಗಳಿಗೊಮ್ಮೆ ಬಿಲ್‌ ಪಾವತಿಯಾಗುವ ಪರಿಪಾಠ ಈ ವರ್ಷವೂ ಮುಂದುವರಿದಿದೆ. ರೈತರ ಅಕೌಂಟ್‌ಗೆ ನೇರವಾಗಿ ಬಿಲ್‌ ಜಮಾ ಆಗುತ್ತಿದೆ. ಪ್ರಸಕ್ತ ಹಂಗಾಮಿಗೆ ಕಬ್ಬು ಪೂರೈಸಿದ ಎಲ್ಲ ರೈತರು, ಕಬ್ಬು ಕಟಾವುದಾರರು ಹಾಗೂ ಸಾಗಾಣಿಕೆದಾರರಿಗೆ ಸರ್ಕಾರ ನಿಗದಿಪಡಿಸಿದ ಎಫ್‌.ಆರ್‌.ಪಿ.ಯಂತೆ ಸಂಪೂರ್ಣ ಬಿಲ್‌ ಒಟ್ಟು ಮೊತ್ತ 163,37,16,849 ರೂ. (163 ಕೋಟಿ, 37 ಲಕ್ಷ, 16 ಸಾವಿರದ ಎಂಟುನೂರಾ ನಲವತ್ತೂಂಬತ್ತು) ಅವರವರ ಅಕೌಂಟ್‌ಗೆ ನೇರವಾಗಿ ಸಂದಾಯ ಮಾಡಲಾಗಿದೆ. ರೈತ ಸಮುದಾಯದ ಈ ಸಹಕಾರ ನಿರಂತರವಾಗಿರಲಿ ಎಂದು ಕಾರ್ಖಾನೆ ಕಬ್ಬು ವಿಭಾಗದ ಹಿರಿಯ ಅಧಿಕಾರಿ ರವಿ ಹೇಳಿದರು.

Advertisement

ರೈತ ಸ್ನೇಹಿಯಾದ ಎಂಆರ್‌ಎನ್‌ ಸಮೂಹ: ಹಲವಾರು ವರ್ಷಗಳಿಂದ ನಷ್ಟ, ಹತಾಶೆಯ ಸುಳಿಯಲ್ಲಿ ಸಿಲುಕಿದ್ದ ಪಿ.ಎಸ್‌.ಎಸ್‌.ಕೆ. ರೈತರು ಹಾಗೂ ಕಾರ್ಮಿಕರ ಪರಿಶ್ರಮಕ್ಕೆ ಪ್ರತಿಫಲ ದೊರಕಿದ್ದು, ಕಳೆದ ಮೂರು ಹಂಗಾಮಿನಿಂದಲೂ ಎಂ.ಆರ್‌. ಎನ್‌. ಸಮೂಹ ರೈತರು, ಕಬ್ಬು ಕಟಾವುದಾರರು ಹಾಗೂ ಸಾಗಾಣಿಕೆದಾರರ ಹಣವನ್ನು ಸಮಯಕ್ಕೆ ಸರಿಯಾಗಿ ನೀಡುತ್ತಿದೆ. ಕಾರ್ಮಿಕರ ವೇತನವನ್ನು ನಿಗದಿತ ವೇಳೆಗೆ ಪಾವತಿಸುತ್ತಿದೆ. ಆ ಮೂಲಕ ಎಂ.ಆರ್‌.ಎನ್‌. ಸಮೂಹವು ಮಂಡ್ಯ ಜಿಲ್ಲೆಯ ರೈತ ಹಾಗೂ ಕಾರ್ಮಿಕ ಸ್ನೇಹಿಯಾಗಿ ಹೊರ ಹೊಮ್ಮುವಲ್ಲಿ ಸಫಲವಾಗಿದೆ. ಇದರಿಂದ ಕಳೆದ ಮೂರು ವರ್ಷಗಳಿಂದ ಕಬ್ಬು ಬೆಳೆಗಾರರ ಮುಖದಲ್ಲಿ ಸಂತಸದ ಭಾವ ಮೂಡಿದೆ ಎಂದರು. ಕಾರ್ಮಿಕರು, ಕಟಾವುದಾರರು ಹಾಗೂ ಕಬ್ಬು ಸಾಗಾಣಿಕೆದಾರರಿಗೆ ನಿಶ್ಚಿತ ಉದ್ಯೋಗ ಲಭಿಸಿದ ಖುಷಿ ಇದೆ.

ಕಾರ್ಖಾನೆಯನ್ನು ನಿರಾಣಿ ಸಮೂಹದ ಸುಪರ್ದಿಗೆ ನೀಡಿದಾಗ ಜಿಲ್ಲೆಯ ರೈತ ಸಂಘಟನೆಗಳು ಹಾಗೂ ಮುಖಂಡರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಸ್ವಾಗತಿಸಿದ್ದರು. ಈ ಮೂರು ಹಂಗಾಮುಗಳಲ್ಲಿ ಕಾರ್ಖಾನೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ನಡೆಸುವ ಮೂಲಕ ನಿರಾಣಿ ಸಮೂಹ ಜಿಲ್ಲೆಯ ಜನರ ವಿಶ್ವಾಸ ಗಳಿಸುವಲ್ಲಿ ಸಫಲವಾಗಿದೆ ಎಂದು ರವಿ ತಿಳಿಸಿದರು. ಹೀಗಾಗಿ ಹಲವಾರು ವರ್ಷಗಳ ನಂತರ ಪಾಂಡವಪುರ ರೈತರ ವನವಾಸ ಅಂತ್ಯವಾಗಿದೆ. ಸಕ್ಕರೆ ಜಿಲ್ಲೆಯ ರೈತರ ಬದುಕಿನ ಕಹಿ ದಿನಗಳು ಕಳೆದು ಸಿಹಿ ದಿನಗಳು ಮರಳಿವೆ. ಕಾರ್ಖಾನೆ-ಕಾರ್ಮಿಕ-ರೈತರ ನಡುವೆ ಈ ಸಂಬಂಧ ಹೀಗೆ ಗಟ್ಟಿಯಾಗಿರಲಿ ಎಂಬುದು ಮಂಡ್ಯ ಜನರ ಆಶಯ.

ನಿರಾಣಿ ಸಮೂಹ ಪಾಂಡವಪುರ ಸಕ್ಕರೆ ಕಾರ್ಖಾನೆ ಪುನರಾಂಭಿಸಿರುವುದು ಈ ಭಾಗದ ರೈತರಿಗೆ ಮರುಜೀವ ನೀಡಿದಂತಾಗಿದೆ. ಈ ಮೊದಲು ಕಾರ್ಖಾನೆ ಇಲ್ಲದೇ ಬೆಳೆದ ಕಬ್ಬನ್ನು ತಮಿಳುನಾಡಿಗೆ ಕಳುಹಿಸಲು ಪ್ರಯಾಸ ಪಡುತ್ತಿದ್ದೆವು. ಎಷ್ಟೋ ಬಾರಿ ಬೆಳೆದ ಕಬ್ಬು ಹಾನಿಯಾಗಿದೆ. ಆದರೆ ಈ ಮೂರು ವರ್ಷದಲ್ಲಿ ಬೆಳೆದ ಬೆಳೆಗೆ ಪ್ರತಿಫಲ ಸಿಕ್ಕಿದೆ. ರೈತ – ಕಾರ್ಖಾನೆ ಸಂಬಂಧ ಹೀಗೆ ಗಟ್ಟಿಯಾಗಿರಲೆಂದು ಆಶಿಸುತ್ತೇನೆ.
ಮಹೇಶ, ಪ್ರಗತಿಪರ ರೈತ, ಟಿ.ಎಂ.ಹೊಸೂರ

ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್‌ ಗುತ್ತಿಗೆ ಪಡೆದ ಮೇಲೆ ನಮ್ಮ ರೈತರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಈ ಮೊದಲು ಬೆಳೆದ ಕಬ್ಬನ್ನು ಸಾಗಿಸಲು ಬಹಳ ತೊಂದರೆ ಪಟ್ಟಿದ್ದೇವೆ. ಲಾಭದಾಯಕವಾಗಿರಲಿಲ್ಲ. ಈಗ ಕಡಿಮೆ ವೆಚ್ಚ ಲಾಭ ಜಾಸ್ತಿ ಬರ್ತಿದೆ. ನಿರಾಣಿ ಸಂಸ್ಥೆಗೆ ರೈತರ ಬಗ್ಗೆ ಕಾಳಜಿ ಇದೆ. ಸಮಯಕ್ಕೆ ಸರಿಯಾಗಿ ಬಿಲ್‌ ಪಾವತಿ ಮಾಡುವುದರಿಂದ ನೆಮ್ಮದಿಯಿಂದ ಇದ್ದೇವೆ.
ಧನ್ಯಕುಮಾರ್‌, ಪ್ರಗತಿಪರ ರೈತ, ಹಾರೋಹಳ್ಳಿ

ನಿರಾಣಿ ಶುಗರ್ಸ್‌ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಿದ್ದು, ಮೂ ರು ಜಿಲ್ಲೆಯ ರೈತರಿಗೆ ಉಸಿರು ಬಂದಿದೆ. ಇದರಿಂದ ನಮ್ಮ ರೈತರಿಗೆ ಒಳ್ಳೆಯದಾಗಿದೆ. ರೈತರು, ಕಾರ್ಮಿಕರು, ಕಬ್ಬು ಕಟಾವುದಾರರು ಸೇರಿದಂತೆ ಸಾವಿರಾರು ಕುಟುಂಬಗಳಿಗೆ ನೆಮ್ಮದಿ ಜೀವನ ಸಿಕ್ಕಿದೆ.
ಸೋಮಶೇಖರ ಬಿ.ಎಸ್‌., ಗ್ರಾ.ಪಂ. ಸದಸ್ಯರು, ಬಲೇನಹಳ್ಳಿ.

ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾರ್ಖಾನೆಯನ್ನು ಕೋವಿಡ್‌ ಸಂಕಷ್ಟದ ಸಮಯದಲ್ಲಿ ನಿರಾಣಿ ಶುಗರ್ಸ್‌ ಗುತ್ತಿಗೆ ಪಡೆದು  ಪುನರಾರಂಭಿಸಿತು. ಇದರಿಂದ ಅತಂತ್ರವಾಗಿದ್ದ ಕಾರ್ಮಿಕನ ಬದುಕು ಈಗ ಸುಸ್ಥಿರವಾಗಿದೆ. ಪ್ರತಿ ತಿಂಗಳು ಸಕಾಲಕ್ಕೆ ವೇತನ ದೊರೆಯುತ್ತಿದೆ. ಕಳೆದ ವರ್ಷ ಬೋನಸ್‌ ಸಹ ನೀಡಿದ್ದಾರೆ. ಈಗ ರೈತ-ನೌಕರ ಇಬ್ಬರೂ ಖುಷಿಯಲ್ಲಿದ್ದಾರೆ.
ಆರ್‌. ರಮೇಶ, ಮಿಲ್‌ ಫಿಟ್ಟರ್‌ ಹಾಗೂ ಕಾರ್ಮಿಕ ಸಂಘದ ಮಾಜಿ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next