Advertisement

ಸಾಮಾನ್ಯರಿಗೆ ಅನ್ವಯವಾಗುವ ಕಾನೂನು ಗಾಂಧಿ ಕುಟುಂಬಕ್ಕೂ ಅನ್ವಯವಾಗುತ್ತದೆ: ತೇಜಸ್ವಿ ಸೂರ್ಯ

05:34 PM Jun 14, 2022 | Team Udayavani |

ದಾವಣಗೆರೆ: ಕಾಂಗ್ರೆಸ್ ರಾಜಕೀಯ ಪ್ರೇರಿತವಾಗಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ದಾಖಲಿಸಿದ್ದ ಎಲ್ಲ ಮೊಕದ್ದಮೆಗಳ ವಿಚಾರಣೆಗೆ ಸಹಕರಿಸಿ ಯಾವುದೇ ಆರೋಪ ಇಲ್ಲದೇ ಹೊರ ಬಂದರು. ಅದೇ ರೀತಿ ಕಾಂಗ್ರೆಸ್ ಮುಖಂಡರು ಸಹ ತನಿಖೆಗೆ ಸಹಕರಿಸಬೇಕು ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದರೂ ಒಬ್ಬರೇ ತನಿಖೆಗೆ ಹೋಗಿ 10 ಗಂಟೆ ವಿಚಾರಣೆ ಎದುರಿಸಿ, ಹೊರ ಬಂದಂತಹ ಉದಾಹರಣೆ ಇದೆ ಎಂದರು.

ಅಮಿತ್ ಶಾ ಅವರೂ ಸಹ ಗುಜರಾತ್ ಗೃಹ ಮಂತ್ರಿ ಆಗಿದ್ದರೂ ಒಮ್ಮೆಯೂ ಸಾವಿರಾರು ಜನರಿಗೆ ರಸ್ತೆಗೆ ಇಳಿಸಿ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿಸಿ, ತನಿಖೆ ಆಗದಂತೆ ಮಾಡಬೇಕು ಎಂದು ಮಾಡಲಿಲ್ಲ. ಬಿಜೆಪಿ ಇತಿಹಾಸದಲ್ಲೇ ಕಾಂಗ್ರೆಸ್ಸಿನವರಂತೆ ಹೀಗೆ ಮಾಡುತ್ತಿರುವ ರೀತಿ ಯಾವುದೇ ಹೋರಾಟ ಮಾಡಲಿಲ್ಲ ಎಂದು ತಿಳಿಸಿದರು.

ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ತಾವಿಬ್ಬರೂ ಸರ್ಕಾರಕ್ಕಿಂತ ತಾವು ಮೇಲೆ ಇದ್ದೇವೆ. ಕಾನೂನಿಗಿಂತ ನಾವೇ ಮೇಲು. ಸರ್ಕಾರದ ಯಾವುದೇ ಸಂಸ್ಥೆಗಳು ತನಿಖೆ ಇರಲಿ ನಮ್ಮನ್ನು ಪ್ರಶ್ನೆ ಮಾಡುವಂತಿಲ್ಲ. ದೇಶದ ಸಂವಿಧಾನ, ಕಾನೂನಿಗಿಂತ ಮೇಲಿದ್ದೇವೆ ಎಂಬ ಭಾವನೆಯಲ್ಲಿದ್ದಾರೆ ಎಂದು ದೂರಿದರು.

ಯುವರಾಜ ರಾಹುಲ್, ಕಾಂಗ್ರೆಸ್ಸಿನ ನಾಯಕರಿಗೆ ದೇಶ ಪ್ರಜಾಪ್ರಭುತ್ವ ಗಾಂಧಿ ಕುಟುಂಬದ ಅಡಿಯಲ್ಲಿ ಇಲ್ಲ. ಕಾನೂನು ಚೌಕಟ್ಟಿನಡಿ, ಸಂವಿಧಾನದಡಿ ನಡೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಾಕೀತು ಮಾಡಿದರು.

Advertisement

ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರ ಕಳೆದುಕೊಂಡ ಸಂದರ್ಭಗಳೆಲೆಲ್ಲಾ ದೇಶಾದ್ಯಂತ ಯಾವುದಾದರೂ ವಿಷಯದಲ್ಲಿ ಗೊಂದಲ ಸೃಷ್ಠಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಸಾಮಾನ್ಯರಿಗೆ ಅನ್ವಯವಾಗುವ ಕಾನೂನು ಗಾಂಧಿ ಕುಟುಂಬಕ್ಕೂ ಅನ್ವಯವಾಗುತ್ತದೆ. ಕಾನೂನು ಗೌರವಿಸುವುದನ್ನು ಗಾಂಧಿ ಕುಟುಂಬದವರು ಮಾಡಲಿ ಎಂದರು.

ಅವರ ಮನಸ್ಸಿನಲ್ಲಿ ಕಟ್ಟಿಕೊಂಡ ಅರಮನೆಯಿಂದ ಹೊರಗಡೆ ಬಂದು, ಸಾಮಾನ್ಯ ಮನುಷ್ಯರ ಹಾಗೆ ತನಿಖೆ, ಕೋರ್ಟ್‌ಗೆ ಸಹಕರಿಸಬೇಕು. ಸತ್ಯ ಇದ್ದರೆ ತೀರ್ಪು ಅವರ ಪರ ಇರುತ್ತದೆ. ಭ್ರಷ್ಟಾಚಾರ ಮಾಡಿದ್ದರೆ  ವಿರುದ್ಧ ತೀರ್ಪು ಬರುತ್ತದೆ. ಇನ್ನಾದರೂ ಇಂದಿರಾಗಾಂಧಿ ಕುಟುಂಬ ಸಾಮಾನ್ಯರಂತೆ ಬಾಳಲಿ ಎಂದು ಆಶಿಸಿದರು.

ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭ್ರಷ್ಟಾಚಾರ ಕಣ್ಣಿಗೆ ಕಾಣುವಂತೆ ಇದೆ. ಸರ್ಕಾರದ ಮೇಲೆ, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟು, ಸಂವಿಧಾನದ ಮೇಲೆ ಗೌರವವಿದ್ದರೆ ಕಾಂಗ್ರೆಸ್ಸಿನ ನಾಯಕರು ತನಿಖೆಗೆ ಸಹಕರಿಸಬೇಕು. ಸರ್ಕಾರ, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ, ಗೌರವ ಇದ್ದರೆ ತನಿಖೆಗೆ ಸರಿಯಾಗಿ ಸಹಕರಿಸಬೇಕಿತ್ತು. ತನಿಖೆ, ಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳುವ ಧೈರ್ಯವನ್ನು ಸೋನಿಯಾ, ರಾಹುಲ್ ತೋರಬೇಕಿತ್ತು. ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡುತ್ತಿದ್ದ ಕಾಂಗ್ರೆಸ್ ಈಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭ್ರಷ್ಟಾಚಾರದ ವಿರುದ್ಧ ತನಿಖೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ, ಇಡಿ ಅಧಿಕಾರಿಗಳ ಮೇಲೆ ಬ್ಲ್ಯಾಕ್ ಮೇಲ್ ಮಾಡಲು ಹೋರಾಟ ನಡೆಸುವ ಮಟ್ಟಕ್ಕೆ ಇಳಿದಿರುವುದು ದುರಂತ ಎಂದು ಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next