Advertisement

ಮಗನ ಬದುಕಿಸಲು ಕಿಡ್ನಿ ನೀಡಲು ಮುಂದಾದ ತಾಯಿ

01:44 AM Jan 25, 2019 | |

ಬೆಳಗಾವಿ: ತಾಯಿ ಕರುಣಾಮಯಿ, ತ್ಯಾಗಮಯಿ ಎನ್ನುತ್ತೇವೆ. ಇದನ್ನು ಸಾಕ್ಷೀಕರಿಸುವಂತೆ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ತನ್ನ ಮಗನ ಪ್ರಾಣ ಉಳಿಸಲು ಈ ತಾಯಿ ತನ್ನ ಒಂದು ಕಿಡ್ನಿಯನ್ನೇ ನೀಡಲು ಮುಂದಾಗಿದ್ದಾಳೆ.

Advertisement

ಪದವಿ ಮುಗಿಸಿ ಹೋಟೆಲ್‌ನಲ್ಲಿ ರೂಮ್‌ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಬಬ್ರುವಾಹನ ಒಂದೂವರೆ ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ಕರುಳ ಬಳ್ಳಿಯನ್ನು ಬದುಕಿಸಲು ತಾಯಿಯೇ ಕಿಡ್ನಿ ನೀಡಲು ಸಿದ್ಧಳಾಗಿದ್ದಾಳೆ.

ಬಬ್ರುವಾಹನ ಮತ್ತು ತಾಯಿ ಲಲಿತಾ ಅವರದ್ದು ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮ. ಬಬ್ರುವಾಹನನಿಗೆ 29 ವರ್ಷ. ಹುಟ್ಟಿದ ಮೂರೇ ವರ್ಷಕ್ಕೆ ತಂದೆಯನ್ನು ಕಳೆದುಕೊಂಡಿದ್ದಾನೆ. ಈತ ಸೇರಿ ಲಲಿತಾಗೆ ಮೂವರು ಗಂಡು ಮಕ್ಕಳು. ಎಲ್ಲರನ್ನೂ ಕಷ್ಟಪಟ್ಟು ದುಡಿದು ಓದಿಸಿ ದೊಡ್ಡವರನ್ನಾಗಿ ಮಾಡಿದ್ದಾಳೆ. ಸಣ್ಣಪುಟ್ಟ ಕೆಲಸದಲ್ಲಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಬಬ್ರುವಾಹನ ಬೆಳಗಾವಿಯ ಸರ್ಕಾರಿ ವಸತಿ ನಿಲಯದಲ್ಲಿ ಉಳಿದು ಆರ್‌ಪಿಡಿ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದಾನೆ.

ಪದವಿ ಓದುತ್ತಿರುವಾಗಲೇ ನಗರದ ಹೋಟೆಲ್‌ನಲ್ಲಿ ರೂಂ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ. ಪದವಿ ಮುಗಿಸಿ ಇನ್ನೇನು ದುಡಿದು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಬರಸಿಡಿಲು ಬಡಿದಿದೆ. ಹೋಟೆಲ್‌ನಲ್ಲಿ ಸುಮಾರು ಏಳು ವರ್ಷಗಳಿಂದ ರಾತ್ರಿ ಪಾಳಿಯಲ್ಲಿ ದುಡಿದಿದ್ದರಿಂದ ಸರಿಯಾಗಿ ಊಟ, ನೀರು ನಿದ್ದೆ ಇಲ್ಲದೇ ಈಗ ಒಂದೂವರೆ ವರ್ಷದ ಹಿಂದೆ ಕಿಡ್ನಿ ವೈಫಲ್ಯವಾಗಿರುವುದು ಗೊತ್ತಾಗಿದೆ. ಆಗಿನಿಂದ ಕೆಲಸ ಬಿಟ್ಟು ಆಸ್ಪತ್ರೆ ಭೇಟಿಯೇ ಈತನ ನಿತ್ಯದ ಕಾಯಕ. ಕಳೆದ ನಾಲ್ಕು ತಿಂಗಳಿಂದ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಎರಡು ದಿನಕ್ಕೊಮ್ಮೆ ಡಯಾಲಿಸಿಸ್‌ ಮಾಡಿಸುತ್ತಿದ್ದು, ಪ್ರತಿ ಡಯಾಲಿಸಿಸ್‌ಗೆ 2 ಸಾವಿರ ರೂ. ಖರ್ಚಾಗುತ್ತಿದೆ.

ಊಟಕ್ಕೂ ಪರದಾಡುತ್ತಿರುವ ಈ ಕುಟುಂಬ ಆಸ್ಪತ್ರೆಗೆ ದುಡ್ಡು ವೆಚ್ಚ ಮಾಡಿ ಸೋತಿದೆ. ವೈದ್ಯರ ಸಲಹೆಯಂತೆ ಮಗನ ಪ್ರಾಣ ಉಳಿಸಲು ತಾಯಿ ಕಿಡ್ನಿ ನೀಡಲು ಮುಂದಾಗಿದ್ದಾಳೆ. ತಾಯಿಯೇ ಕಿಡ್ನಿ ಕೊಡುತ್ತೇನೆಂದರೂ ಅದಕ್ಕೆ 5ರಿಂದ 6 ಲಕ್ಷ ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಷ್ಟೊಂದು ಹಣ ಹೇಗೆ ಕೂಡಿಸುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

Advertisement

ಗಂಡನನ್ನು ಕಳೆದುಕೊಂಡ ನನಗೆ ಈ ವಯಸ್ಸಿನಲ್ಲೂ ಮನೆಯ ಜವಾಬ್ದಾರಿ ಇದೆ. ಇಂಥದರಲ್ಲಿ ದುಡಿದು ಮನೆ ನಡೆಸ ಬೇಕಾದ ಮಗನೇ ಈಗ ಸಾವು-ಬದುಕಿನ ಮಧ್ಯೆ ಜೀವನ ಸವೆಸುತ್ತಿದ್ದಾನೆ. ಮಗನಿಗೆ ನಾನು ಕೊಡುತ್ತಿರುವುದು ದಾನವಲ್ಲ. ಮಗನಿಗಾಗಿ ನಾನು ಏನೂ ಮಾಡಲು ಸಿದ್ಧ. ● ಲಲಿತಾ, ಕಿಡ್ನಿ ನೀಡಲು ಮುಂದಾದ ತಾಯಿ

ಬೇಕಿದೆ ಧನ ಸಹಾಯ

ಕಿಡ್ನಿ ಕಸಿಗೆ ಏನಿಲ್ಲವೆಂದರೂ 5ರಿಂದ 6 ಲಕ್ಷ ರೂ. ಖರ್ಚಿದೆ. ಜತೆಗೆ ತಿಂಗಳಿಗೆ 15ರಿಂದ 20 ಸಾವಿರ ರೂ. ಔಷಧಿ ಖರ್ಚು ಬೇರೆ. ಆದರೆ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡರೆ ಉಚಿತ ಚಿಕಿತ್ಸೆ ಸಿಗುವ ಸಾಧ್ಯತೆ ಇದೆ. ಆದರೆ ಇನ್ನುಳಿದಂತೆ ಬೇರೆ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಹೀಗಾಗಿ ಹಣವಿಲ್ಲದ ಈ ಕುಟುಂಬ ದಾನಿಗಳ ಬಳಿ ಕೈ ಚಾಚಿದೆ. ಧನಸಹಾಯ ಮಾಡುವ ಮೂಲಕ ಈ ಬಡ ಕುಟುಂಬಕ್ಕೆ ಆಸರೆಯಾಗಬೇಕಿದೆ. ಧನಸಹಾಯ ಮಾಡುವವರು ಈ ಬ್ಯಾಂಕ್‌ ಖಾತೆಗೆ ಹಣ ಕಳಿಸಬಹುದು. Babruvahana Kamble. state bank of India, Branch-Sankeswar, TQ-Hukkeri. Ac No-343070919194. IFSC -SBIN0001727. Phone: 9739149326

ಭೈರೋಬಾ ಕಾಂಬಳೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next