Advertisement

ಭರಣಿಯ ಅಮ್ಮನ ಸೆಂಟಿಮೆಂಟ್‌

06:00 AM Sep 21, 2018 | Team Udayavani |

“ಡಿಸೆಂಬರ್‌ 6ಕ್ಕೆ ಹಾಡು ಕೇಳ್ತೀರಾ …’
ಹಾಗಂತ ಘೋಷಿಸಿಯೇಬಿಟ್ಟರು ನಿರ್ದೇಶಕ ಚನಾನಿರಾಜ. ಅವರ ಹೆಸರೇನೋ ವಿಚಿತ್ರವಾಗಿದೆಯಲ್ಲಾ ಅಂತನಿಸಬಹುದು. ಅವರ ನಿಜವಾದ ಹೆಸರು ಚನ್ನಬಸವ. ಅವರು ಐವರು ಸ್ನೇಹಿತರಂತೆ. ಹಾಗಾಗಿ ಐವರ ಹೆಸರಿನ ಮೊದಲಕ್ಷರವನ್ನು ಜೋಡಿಸಿ ಚನಾನಿರಾಜ ಆಗಿದ್ದಾರೆ. ಈಗ ವಿಷಯಕ್ಕೆ ಬರೋದಾದರೆ, ಅವರು ಚಿತ್ರದ ಹಾಡುಗಳ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು ಚಿತ್ರದ ಮುಹೂರ್ತದ ದಿನದಂದು. ಕಳೆದ ವಾರ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅವರ ಮೊದಲ ಚಿತ್ರ “ಭರಣಿ – ಪಾರ್ವತಮ್ಮನ ಮಗ’ ಚಿತ್ರದ ಮುಹೂರ್ತವಿತ್ತು. “ದುನಿಯಾ’ ಯೋಗಿ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ ಹೋದ ಕೆಲ ಹೊತ್ತಲ್ಲೇ ಪತ್ರಿಕಾಗೋಷ್ಠಿ ನಡೆಯಿತು. 

Advertisement

ಅಂದಹಾಗೆ, ಈ ಚಿತ್ರದಲ್ಲಿ ಯೋಗಿ ಅವರ ಸಂಬಂಧಿ ಮಾಧವ್‌ ಮತ್ತು ಸ್ವಾತಿ ಕೊಂಡೆ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಅಪ್ಪಟ ಗ್ರಾಮೀಣ ಚಿತ್ರ ಎನ್ನುತ್ತಾರೆ ಚನಾನಿರಾಜ. “ಗ್ರಾಮೀಣ ಕಥೆಯಾದರೂ ಇದು ಬೇರೆ ತರಹ ಇರುತ್ತದೆ. ಇದು ತಾಯಿ-ಮಗನ ಸೆಂಟಿಮೆಂಟ್‌ ಚಿತ್ರ. ಇದುವರೆಗೂ ತಾಯಿ-ಮಗನ ಸೆಂಟಿಮೆಂಟ್‌ ಕುರಿತಾದ ಹಲವು ಚಿತ್ರಗಳು ಬಂದಿರಬಹುದು. ಇದು ವಿಭಿನ್ನವಾಗಿರುತ್ತದೆ. ಇಲ್ಲಿ ತಾರಾ ಅವರು ತಾಯಿಯ ಪಾತ್ರ ಮಾಡುತ್ತಿದ್ದಾರೆ. ಒಂದು ಆನೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ. “ಬಾಹುಬಲಿ’ ಚಿತ್ರದಲ್ಲಿ ಆ ಆನೆ ಕಾಣಿಸಿಕೊಂಡಿತ್ತು’ ಅಂತೆಲ್ಲಾ ಹೇಳುತ್ತಾ ಹೋದರು ಚನಾನಿರಾಜ.

ನಿರ್ಮಾಪಕ ಸಿದ್ಧರಾಜು ಅವರ ತಂಗಿ ಮಗನಾಗಿರುವ ನಾಯಕ ಮಾಧವ ಮಾತನಾಡಿ, “12 ವರ್ಷಗಳಿಂದ ನಟನಾಗಬೇಕು ಎಂಬ ಆಸೆ ಇತ್ತು. ಈ ಚಿತ್ರದಿಂದ ಸಾಧ್ಯವಾಗುತ್ತದೆ. ನಿರ್ದೇಶಕರು ಹೇಳಿಕೊಟ್ಟು ಅಭಿನಯ ತೆಗೆಸುತ್ತಿದ್ದಾರೆ. 15 ದಿನಗಳ ಕಾಲ ಕೊಳ್ಳೇಗಾಲದಲ್ಲಿದ್ದು ಅಲ್ಲಿಯ ಪರಿಸರ ಅರ್ಥ ಮಾಡಿಕೊಂಡು ಬಂದೆ’ ಎಂದರು. ನಾಯಕಿ ಸ್ವಾತಿ ಕೊಂಡೆ ಆಡಿಷನ್‌ನಲ್ಲಿ ಭಾಗವಹಿಸಿದ ನಂತರ, ಚಿತ್ರತಂಡದಿಂದ ಯಾವುದೇ ಕರೆ ಬರಲಿಲ್ಲವಂತೆ. ಇನ್ನು ಬರಲ್ಲ ಎಂದುಕೊಳ್ಳುವಷ್ಟರಲ್ಲೇ ಕರೆ ಬಂದು ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕಳೆದ ತಿಂಗಳು ಕೇರಳದಲ್ಲಿ ಟೆಸ್ಟ್‌ ಶೂಟ್‌ ನಡೆಯಿತು. ಆರಂಭದಲ್ಲಿ ಆನೆ ನೋಡಿ ಭಯವಾಯ್ತು. ಬಿಟ್ಟು ಬರುವಾಗ ಅಳು ಬಂತು’ ಎಂದು ಹೇಳಿಕೊಂಡರು.

ಚಿತ್ರಕ್ಕೆ ಮಂಜು ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಶಿವಕುಮಾರ್‌ ಅವರ ಛಾಯಾಗ್ರಹಣ ಮತ್ತು ವಿವೇಕ್‌ ಚಕ್ರವರ್ತಿ ಅವರ ಸಂಗೀತ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next