Advertisement

ಬಹುತೇಕ ನಗರಗಳು ಸೋತಿರುವುದೇ ಒಳಚರಂಡಿ ವ್ಯವಸ್ಥೆಯಲ್ಲಿ

08:38 AM Aug 19, 2017 | |

ಇದು ಪ್ರತಿ ನಗರಗಳ ಕಥೆ. ಅಗತ್ಯಗಳಿಗಿಂತ ಹೆಚ್ಚಿನದನ್ನು ಸೃಷ್ಟಿಸಿಕೊಂಡು, ಆ ಭಾರ ಹೊತ್ತುಕೊಂಡು ಹೋಗುತ್ತಿದ್ದವರೆಲ್ಲ ಒಂದು ಹಂತದಲ್ಲಿ ಕುಸಿದಿದ್ದಾರೆ. ಅದೇ ಸ್ಥಿತಿ ಈಗ ನಗರಗಳದ್ದು ಎಂಬುದೇ ಬೇಸರದ ಸಂಗತಿ.

Advertisement

ಅಕ್ಷರಶಃ ನಿಜ. ಇದು ಬಹುತೇಕ ನಗರಗಳ ಕಥೆಯೆಂದು ಹೇಳಲಡ್ಡಿಯಿಲ್ಲ. ಜಗತ್ತಿನ ಬಹುತೇಕ ನಗರಗಳಲ್ಲಿ ಹಳೆಯ ವ್ಯವಸ್ಥೆಯನ್ನು ಹೊಸ ವ್ಯವಸ್ಥೆಗೆ ಬದಲಾಯಿಸಲು ಈಗ ಹರಸಾಹಸ ಪಡುತ್ತಿವೆ. ಒಂದಕ್ಕಿಂತ ಹತ್ತರಷ್ಟು ಹೆಚ್ಚು ಹಣವನ್ನು ವ್ಯಯಿಸುತ್ತಿವೆ. ಅಷ್ಟೊಂದು ಹಣವಿಲ್ಲದಿದ್ದಾಗ ಬಾಂಡ್‌ಗಳ ಮೂಲಕವೋ ದೇಣಿಗೆ ಮೂಲಕವೋ ಹಣ ಸಂಗ್ರಹಿಸಿ ವೆಚ್ಚ ಮಾಡಲು ಮುಂದಾಗುತ್ತಿವೆ. ಆದರೂ ಆರೋಗ್ಯ ಸುಧಾರಣೆಯಾಗುತ್ತಿಲ್ಲ ಎಂಬ ಆತಂಕ ಇನ್ನೂ ಬಿಟ್ಟಿಲ್ಲ.

ಒಟ್ಟೂ ಅಮೆರಿಕ ಖಂಡದಲ್ಲಿ ಸುಮಾರು 800 ನಗರಗಳಲ್ಲಿ ಹಳೆಯ ಚರಂಡಿ ವ್ಯವಸ್ಥೆ ಸುಧಾರಣೆಯಾಗಬೇಕಿದೆಯಂತೆ. ನಗರಗಳ ಆರೋಗ್ಯದ ಬಗ್ಗೆಯೇ ಬರೆಯುವ ಒಂದು ವೆಬ್‌ ಸೈಟ್‌ ಉಲ್ಲೇಖೀಸಿರುವ ಅಂಕಿಅಂಶಗಳ ಪ್ರಕಾರ, ಇಷ್ಟೂ ನಗರಗಳಲ್ಲಿ ನಮ್ಮ ನಗರಗಳಲ್ಲಿ ಆಗುವಂತೆಯೇ ಮಳೆ ನೀರಿನ ಚರಂಡಿಯಲ್ಲಿ ಕೆಲವೊಮ್ಮೆ ಒಳಚರಂಡಿ ನೀರು ಹರಿದು ಹೋಗಿ ರಾದ್ಧಾಂತ ಮಾಡುತ್ತವೆಯಂತೆ. ಮಳೆ ಜೋರಾಗಿ ಸುರಿಯುವಾಗ ಎಲ್ಲ ನೀರೂ ಒಂದೆಡೆ ಹೋಗಿ ಸೇರಿ ಸುತ್ತಲಿನ ಪ್ರದೇಶದಲ್ಲಿ ನೆರೆಯ ಸ್ಥಿತಿಯನ್ನು ನಿರ್ಮಿಸುತ್ತವೆ. ಅವಾಂತರ ಇಲ್ಲಿಗೇ ಮುಗಿಯುವುದಿಲ್ಲ. ಇನ್ನೂ ಘನಘೋರ ಸ್ಥಿತಿಯನ್ನು ನಿರ್ಮಿಸುತ್ತಿವೆಯಂತೆ. ಅದಕ್ಕೀಗ ಬಹುಪಾಲು ನಗರಗಳ ಸಂಯುಕ್ತ ಒಳಚರಂಡಿ ವ್ಯವಸ್ಥೆಯ ಸುಧಾರಣೆಗೆ ಯೋಚಿಸುತ್ತಿವೆ ಆ ನಗರಗಳು.

ಇದೇನು ಸುಮ್ಮನಾಗುವುದೇ?
ಹಾಗೆಂದು ಸುಧಾರಣೆ ಸುಮ್ಮನೆ ಆಗುವುದೇ? ಖಂಡಿತ ಇಲ್ಲ. ಕೋಟ್ಯಂತರ ರೂ.ಗಳನ್ನು ನೀರಿನಂತೆಯೇ ಖರ್ಚು ಮಾಡಬೇಕು. ಇಲ್ಲದಿದ್ದರೆ ವ್ಯವಸ್ಥೆಯ ಒಂದಂಶವೂ ಸುಧಾರಣೆಯಾಗದು. ಒಂದು ಅಂದಾಜಿನ ಪ್ರಕಾರ ಮುಂದಿನ ಎರಡು ದಶಕಗಳಲ್ಲಿ ಅಮೆರಿಕದ ಹಲವು ನಗರಗಳಲ್ಲಿನ ಮೂಲ ಸೌಕರ್ಯ ವ್ಯವಸ್ಥೆಗೆ ಕನಿಷ್ಠ 655 ಬಿಲಿಯನ್‌ ಡಾಲರ್‌ಗಳಷ್ಟು ಹಣ ಕೊರತೆಯಾಗಬಹುದು. ಈ ಮಾತನ್ನು ತತ್‌ಕ್ಷಣ ನಂಬಲಿಕ್ಕಾಗದು. ಆದರೂ ಸತ್ಯವೆಂದು ಸಂಸ್ಥೆಯೊಂದು ಅಧ್ಯಯನದಲ್ಲಿ ತಿಳಿಸಿದೆ. ಇಷ್ಟೊಂದು ಹಣದಲ್ಲಿ ಬಹುಪಾಲು ಖರ್ಚಾಗುವುದು ಹಳೆಯದಾದ ಒಳಚರಂಡಿ ಪೈಪುಗಳನ್ನು ತೆಗೆದು ಹೊಸದನ್ನು ಹಾಕಲಿಕ್ಕೆ, ತ್ಯಾಜ್ಯ ನೀರಿನ ಘಟಕಗಳ ಸ್ಥಾಪನೆ-ನಿರ್ವಹಣೆಗೆ ವ್ಯಯಿಸಬೇಕಾಗಿದೆ. 

ಎಲ್ಲಿಂದ ಹಣ ತರುವುದು?
ಇದೇ ಸಮಸ್ಯೆ ಅಮೆರಿಕದ ನಗರಗಳ ಸ್ಥಳೀಯ ಆಡಳಿತಗಳನ್ನು ಕಾಡುತ್ತಿವೆ. ಒಂದಲ್ಲ, ಎರಡಲ್ಲ, ಕೋಟ್ಯಂತರ ರೂ.ಗಳನ್ನು ತಂದು ವ್ಯವಸ್ಥೆ ಸುಧಾರಣೆಗೆ ಸುರಿಯಬೇಕಿದೆ. ಫೆಡರಲ್‌ ಸರಕಾರ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಕ್ಕೆ ಕಿಂಚಿತ್ತು ಹಣ ನೀಡುತ್ತದೆಯೇ ಹೊರತು ನಮ್ಮ ಸರಕಾರಗಳ ಹಾಗೆ ಕೋಟ್ಯಂತರ ರೂ. ಅನುದಾನ ನೀಡುವುದಿಲ್ಲ. ಅವೆಲ್ಲವನ್ನೂ ಸಂಗ್ರಹಿಸಿ ನಿರ್ವಹಿಸಬೇಕಾದ ಹೊಣೆ ಸ್ಥಳೀಯ ಸರಕಾರಗಳಿಗಿದೆ. ಇಲ್ಲಿ ಸ್ಥಳೀಯ ಸರಕಾರಗಳೆಂದರೆ ಸ್ಥಳೀಯ ಸರಕಾರ, ನಮ್ಮಲ್ಲಿರುವಂತೆಯೇ ಪಾಲಿಕೆ, ನಗರಸಭೆಯಂಥ ವ್ಯವಸ್ಥೆಗಳೇ. ಅವುಗಳೇ ಹಣವನ್ನು ತರಬೇಕು, ಹೂಡಬೇಕು ಮತ್ತು ನಿರ್ವಹಿಸಬೇಕು. 

Advertisement

ಪ್ರತಿ ನಗರಗಳ ಸ್ಥಳೀಯ ಆಡಳಿತ ಬಹಳಷ್ಟು ತಲೆ ಕೆಡಿಸಿಕೊಂಡಿವೆ. ಒಂದೊಂದು ಡಾಲರ್‌ನೂ° ಕೂಡಿಸಲು ಮನಸ್ಸು ಮಾಡಿವೆ. ಹೇಗಾದರೂ ಮಾಡಿ ಈ ಹಳೆಯ ವ್ಯವಸ್ಥೆಯಿಂದ ಹೊಸದಕ್ಕೆ ಬರುವುದು ಅವುಗಳ ಲೆಕ್ಕಾಚಾರ. ಅದಕ್ಕಾಗಿ ಹೂಡುತ್ತಿರುವ ತಂತ್ರಗಳು ಹತ್ತು ಹಲವು. ಕಳೆದ ಸೆಪ್ಟೆಂಬರ್‌ನಲ್ಲಿ ವಾಷಿಂಗ್ಟನ್‌ ಡಿಸಿಯ ನೀರು ಮತ್ತು ಒಳಚರಂಡಿ ಪ್ರಾಧಿಕಾರವು ಹಸಿರು ಮೂಲ ಸೌಕರ್ಯ ಅಭಿವೃದ್ಧಿಗಾಗಿ ವಿಶೇಷವೆನಿಸುವ ಎನ್‌ವಾಯಿರ್‌ ಮೆಂಟಲ್‌ ಇಂಪ್ಯಾಕ್ಟ್ ಬಾಂಡ್‌ಗಳನ್ನು ಬಿಡುಗಡೆ ಮಾಡಿತು. ಈ ಮೂಲಕ ಸಾರ್ವಜನಿಕ ಹೂಡಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿತ್ತು. ಸ್ಥಳೀಯ ಸರಕಾರಗಳು ಹುಡುಕುತ್ತಿರುವ ಪರಿಹಾರಗಳಲ್ಲಿ ಇದೂ ಒಂದು. 

ಹಸಿರು ಮೂಲ ಸೌಕರ್ಯ
ಕುಡಿಯುವ ನೀರಿನ ಗುಣಮಟ್ಟ ಮತ್ತು ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ, ಒಳಚರಂಡಿ ವ್ಯವಸ್ಥೆಯ ಸುಧಾರಣೆ ಹಾಗೂ ಮಳೆ ನೀರು ನಿರ್ವಹಣೆಯ ಸಮಗ್ರ ವ್ಯವಸ್ಥೆಯನ್ನು ಕಲ್ಪಿಸುವುದೇ ಹಸಿರು ಮೂಲ ಸೌಕರ್ಯದ ಪರಿಕಲ್ಪನೆಯಡಿ ಸೇರಿದೆ. ಇದಲ್ಲದೇ ನಗರ ಅರಣ್ಯದ ಉತ್ತೇಜನ, ನಗರಗಳಲ್ಲಿ ಕೆರೆ ಇತ್ಯಾದಿಗಳ ಪ್ರೋತ್ಸಾಹ ಇತ್ಯಾದಿಯೂ ಪ್ರಮುಖ ಭಾಗವಾಗಿದೆ. ಜಗತ್ತಿನ ಬ್ರಿಟನ್‌, ಅಮೆರಿಕ, ಸಿಂಗಾಪೂರ್‌ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಕ್ರಮಗಳು ಜಾರಿಗೊಳಿಸುತ್ತಿವೆ. ಮಳೆ ನೀರು ಹರಿದು ತ್ಯಾಜ್ಯವಾಗಿ ಒಂದೆಡೆ ಸೇರಿಸಿ ಸೃಷ್ಟಿಸುವ ಅನಾಹುತವನ್ನು ತಡೆಯುವುದೂ ಇದರ ಮೂಲ ಉದ್ದೇಶ. ಇದರಿಂದ ಒಳಚರಂಡಿ ವ್ಯವಸ್ಥೆಯ ಮೇಲೆ ಬೀಳಬಹುದಾದ ಒತ್ತಡ ಕಡಿಮೆ ಮಾಡಲು ಸಾಧ್ಯ ಎನ್ನುತ್ತಾರೆ ಈ ಪರಿಕಲ್ಪನೆಯ ವಕ್ತಾರರು.

ಫಿಲಡೆಲ್ಪಿಯ ಕಥೆ ಕೇಳಿ
ಫಿಲಡೆಲ್ಪಿಯದಲ್ಲಿ ಇದರ ಪ್ರಯೋಗ ನಡೆದಿದೆ. ಈಗಾಗಲೇ ಸಾರ್ವಜನಿಕರ ಸಹಕಾರದಿಂದ ಹಸಿರು ಮೂಲ ಸೌಕರ್ಯ ಅನುಷ್ಠಾನಕ್ಕೆ ಮುಂದಾಗಿದೆ. ಅದರ ಪ್ರಕಾರ ಮಳೆ ನೀರು ಸಂಗ್ರಹಕ್ಕೆ ಕೆರೆಯಂಥ ವ್ಯವಸ್ಥೆ, ಅಲ್ಲಲ್ಲಿ ಉದ್ಯಾನಗಳು, ಪ್ರತಿ ಪಾರ್ಕ್‌ಗಳಲ್ಲಿ ನೀರು ಇಂಗುವುದಕ್ಕೆ ಅವಕಾಶ- ಹೀಗೆ ಒಟ್ಟೂ ಮಳೆ ನೀರು ರಸ್ತೆ ಮೇಲೆ ಹರಿಯುವುದನ್ನು ಕಡಿಮೆ ಮಾಡಲೆಂದೇ ಯೋಜನೆ ರೂಪಿಸುತ್ತಿದೆ. ಹೀಗೆ ಹಸಿರು ಮೂಲ ಸೌಕರ್ಯದತ್ತ ಆಸ್ಟಿನ್‌, ಟೆಕ್ಸಾಸ್‌, ಚೆಲ್ಸಾ, ಕ್ಯಾಲಿಫೋರ್ನಿಯಾ ಸೇರಿ ಹಲವು ಪ್ರದೇಶಗಳು ಆಸಕ್ತಿ ತಳೆದಿವೆ. ಎಲ್ಲರಿಗೂ ಬದುಕುಳಿಯುವುದು ಬೇಕಾಗಿವೆ. 

ನಾವು ಹೇಗೆ ಇದ್ದೇವೆ?
ನಮ್ಮ ನಗರಗಳನ್ನು ಒಮ್ಮೆ ನೋಡಿಕೊಳ್ಳೋಣ. ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು ಹೋದರೆ ಅಚ್ಚರಿ ಆಗಬಹುದು. ಯಾಕೆಂದರೆ ನಮ್ಮಲ್ಲೂ ಬಹುತೇಕ ಅದೇ ಸಮಸ್ಯೆ ಇದೆ. ಒಂದೆಡೆ ಸ್ಥಳೀಯ ಸರಕಾರಗಳಲ್ಲಿ ಬಂಡವಾಳದ ಕೊರತೆ, ಸರಕಾರ ನೀಡುವ ಅನುದಾನದಲ್ಲಿ ಸಾಕಷ್ಟು ಹಣ ನಿತ್ಯ ನಿರ್ವಹಣೆಯ ಬವಣೆಗೇ ಖರ್ಚಾಗುತ್ತದೆ. ಇನ್ನು, ಹಲವು ಬ್ಯಾಂಕ್‌ಗಳಿಂದ, ಏಜೆನ್ಸಿಗಳಿಂದ ಹಣವನ್ನು ಸಾಲವಾಗಿ ತಂದರೂ, ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುವಂತ ಕಾಳಜಿಯೂ ಕಡಿಮೆ. ಯಾವುದಾದರೂ ಒಂದು ಕಂಪೆನಿಗೆ, ಸರಕಾರಿ ನಿಗಮಕ್ಕೆ ಯೋಜನೆಯನ್ನು ವಹಿಸಿ ತಣ್ಣಗೆ ಕುಳಿತುಬಿಡುತ್ತವೆ ನಮ್ಮ ಸ್ಥಳೀಯ ಸರಕಾರಗಳು. ಗುತ್ತಿಗೆ ಪಡೆದವರು ತಮಗೆ ಬೇಕಾದಂತೆ ಯೋಜನೆಯನ್ನು ಜಾರಿಗೊಳಿಸಿ ಕಣ್ಮರೆಯಾಗುತ್ತವೆ.  ಅವುಗಳು ಹೊರಡುವಾಗ ನಮ್ಮ ಸ್ಥಳೀಯ ಸರಕಾರಗಳು, ಸದಸ್ಯರು ನಿದ್ದೆಯಿಂದ ಎಚ್ಚೆತ್ತು ಬೊಬ್ಬೆ ಹಾಕುತ್ತಾರೆ. ಅಷ್ಟರಲ್ಲಿ ಕಂಪೆನಿಗಳು, ನಿಗಮಗಳು ಪ್ಯಾಕಪ್‌ ಮಾಡಿಕೊಂಡು ವಿಮಾನ ಹತ್ತಿರುತ್ತವೆ. ಬಳಿಕ ವಿರೋಧಪಕ್ಷ, ಆಡಳಿತ ಪಕ್ಷ ಎನ್ನುತ್ತಾ ಒಂದಿಷ್ಟು ವರ್ಷ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಆಹಾರವಾಗುತ್ತದೆಯೇ ಹೊರತು ಯಾವ ಸುಧಾರಣೆಯೂ ಆಗುವುದಿಲ್ಲ.ಇದಕ್ಕೆ ಒಂದಲ್ಲ, ಎರಡಲ್ಲ, ಹತ್ತಾರು ಉದಾಹರಣೆಗಳಿವೆ. ಮಂಗಳೂರಿನಲ್ಲಿ ಎಡಿಬಿ ಸಾಲ ತಂದು ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಹೋದ ಕಥೆಯೂ ಇದೇ ರೀತಿಯದ್ದಲ್ಲವೇ? ಪುತ್ತೂರಿನಲ್ಲೂ ಇಂಥದ್ದೇ ಮತ್ತೂಂದು ಕತೆ ನಡೆದಿರುವುದು ಸುಳ್ಳೇನೂ ಅಲ್ಲ. 

ನಮ್ಮಲ್ಲಿ ಬಾಂಡ್‌ಗಳು ಬಂದರೆ ಹೇಗೆ?
ಈ ನಿಟ್ಟಿನಲ್ಲಿ ನಮ್ಮ ಸ್ಥಳೀಯ ಸರಕಾರಗಳು ತಲೆ ಕೆಡಿಸಿಕೊಂಡಿದ್ದು ಕಡಿಮೆ. ಆದರೆ, ಜನರು ಅಥವಾ ಖಾಸಗಿ ಹೂಡಿಕೆದಾರರು ಇದರತ್ತ ಒಲವು ತೋರುತ್ತಾರೆಯೇ ಎನ್ನುವುದೇ ಮುಖ್ಯ. ನಮ್ಮ ಬಹುಪಾಲು ಸ್ಥಳೀಯ ಸಂಸ್ಥೆಗಳು ಸ್ವಾವಲಂಬಿಗಳಲ್ಲ. ತಮ್ಮೊಳಗೆ ಒಂದು ಸುಸಜ್ಜಿತ ಮತ್ತು ವೃತ್ತಿಪರ ವ್ಯವಸ್ಥೆಯನ್ನು ಅಳವಡಿಸಿ, ಸೇವೆ ಒದಗಿಸಿ, ಅದರಿಂದ ಶುಲ್ಕ ಪಡೆದು ಆದಾಯ ಮಾಡಿಕೊಳ್ಳುತ್ತಾ ಸ್ವಂತ ಶಕ್ತಿಯಿಂದ ನಡೆಯುತ್ತಿರುವ ಸಂಸ್ಥೆಗಳು ಎಲ್ಲಿವೆ ಎಂದು ಹುಡುಕಿಕೊಂಡು ಹೋಗುವ ಸ್ಥಿತಿ ಇದೆ. ಇಂಥ ಹೊತ್ತಿನಲ್ಲಿ ಹೂಡಿಕೆದಾರರು ಎಲ್ಲಿಂದ ಬಂದಾರು ಎಂಬುದೇ ಸಮಸ್ಯೆಯ ಮತ್ತೂಂದು ಕೊನೆ. ಹಾಗಾದರೆ ಅಭಿವೃದ್ಧಿ ಎಂದರೆ ಯಾವುದು? ಎಂಬುದೇ ಯಕ್ಷಪ್ರಶ್ನೆ.

ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next