ಕಲಬುರಗಿ: ಉಪ ಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಪಕ್ಷದ ಸಂಘಟನೆಗೆ ಮತ್ತಷ್ಟು ಒತ್ತು ನೀಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ನಗರದಲ್ಲಿ ಬಸವೇಶ್ವರ ಕಾಲೋನೊಯಲ್ಲಿ ರವಿವಾರ ಬೆಳಿಗ್ಗೆ ರಾಷ್ಟ್ರೀಯ ಲಸಿಕಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಕ್ಷದ ಸಂಘಟನೆ ದೃಷ್ಟಿಯಿಂದ ಕೆಲವು ಬದಲಾವಣೆ ತರಲಾಗುವುದು ಎಂದರು.
ಚುನಾವಣೆ ನಂತರ ಸಚಿವ ಸಂಪುಟದಲ್ಲಿ ಬದಲಾವಣೆಗಳು ಸಹ ಒಂದು ಭಾಗವಾಗಬಹುದಾಗಿದೆ. ಒಟ್ಟಾರೆ ಪಕ್ಷದ ಸಂಘಟನೆ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅರುಣ್ ಸಿಂಗ್ ಹೇಳಿದರು.
ಉಸ್ತುವಾರಿ ಸಚಿವರು ನಾಲ್ಕು ಸಲ ಭೇಟಿ ನೀಡಲೇಬೇಕು: ಕೆಲ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡದೆ ಇರುವುದು ತಮ್ಮ ಗಮನಕ್ಕಿದೆ. ಚುನಾವಣೆ ಮುಗಿದ ನಂತರ ತಿಂಗಳಿಗೆ ನಾಲ್ಕು ಸಲವಾದರೂ ಉಸ್ತುವಾರಿ ಜಿಲ್ಲೆಗೆ ತೆರಳಿ ಅಧಿಕಾರಿಗಳ ಸಭೆ ನಡೆಸುವುದು ಹಾಗೂ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.
ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಸ್ಥಾನ ಹೊಂದಿರುವ ಕಲಬುರಗಿಗೆ ಸಚಿವ ಸ್ಥಾನ ದೊರಕದಿರುವುದು ತಮ್ಮ ಗಮನಕ್ಕಿದೆ. ಸ್ಥಾನ ದೊರಕಿಸುವ ಬಗ್ಗೆ ವಿಚಾರ ನಡೆದಿದೆ. ಸಚಿವ ಸ್ಥಾನ ದೊರಕಿದಲ್ಲಿ ಪಕ್ಷದ ಸಂಘಟನೆಗೆ ಬಲ ಬರುತ್ತದೆ ಎಂದು ಅರುಣ್ ಸಿಂಗ್ ಹೇಳಿದರು.
ಕೊರೊನಾ ಹೊಡೆದೊಡಿಸಲು ಲಸಿಕೆ ಹಾಕಿಸಿಕೊಳ್ಳಲು ಎಲ್ಲರೂ ಮುಂದೆ ಬರಬೇಕೆಂದು ಕೋರಿದರು
ಬಿಜೆಪಿ ಕಲಬುರಗಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ( ಕ್ರೆಡಲ್) ಅಧ್ಯಕ್ಷ ಚಂದು ಬಿ. ಪಾಟೀಲ್ ಮತ್ತಿತರರಿದ್ದರು.