Advertisement

ವರುಣ ಆಗಮನದ ಶುಭ ಸೂಚನೆ; ಮೇ ತಿಂಗಳಲ್ಲಿ ಬಿರು ಬಿಸಿಲಿನ ತಾಪದ ಆತಂಕ ಸ್ವಲ್ಪ ದೂರ

12:47 AM May 03, 2022 | Team Udayavani |

ಬೆಂಗಳೂರು: ಮೇ ತಿಂಗಳಲ್ಲೂ ಬಿಸಿಲಿನ ತಾಪದ ಭೀತಿಯಲ್ಲಿದ್ದ ರಾಜ್ಯದ ಜನತೆಗೆ ಮಳೆ ಬರುವ ಶುಭ ಸೂಚನೆ ಸಿಕ್ಕಿದೆ.

Advertisement

ಮಾರ್ಚ್‌ ಹಾಗೂ ಎಪ್ರಿಲ್‌ನಲ್ಲಿ ಉತ್ತರ ಭಾರತ ರಾಜ್ಯಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ನಷ್ಟು ಜಾಸ್ತಿಯಾಗಿದೆ. ದಿಲ್ಲಿ ಸಹಿತ ಹಲವು ರಾಜ್ಯಗಳಲ್ಲಿ ಬಿಸಿಗಾಳಿಯಿಂದ ಜನ ತತ್ತರಿಸಿದ್ದಾರೆ. ಅದರ ಪ್ರಭಾವ ರಾಜ್ಯದಲ್ಲೂ ಬೀರಲಿದೆ ಎಂಬ ಆತಂಕ ಮನೆಮಾಡಿತ್ತು. ಇದೇ ಸಮಯದಲ್ಲಿ ಕೆಲವೆಡೆ ಮಳೆ ಬಂದಿರುವುದು ಹಾಗೂ ಮೇ ತಿಂಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ತಜ್ಞರೂ ಹೇಳಿದ್ದಾರೆ.

ರಾಜ್ಯದಲ್ಲಿ ಮೇ ತಿಂಗಳಿನಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬಿಸಿಲಿನ ಪ್ರಮಾಣ ಕಡಿಮೆ ಯಾಗಲಿದ್ದು, ಮಳೆಯ ಪ್ರಮಾಣ ಹೆಚ್ಚಳವಾಗಿರುತ್ತದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಸಾಮಾನ್ಯವಾಗಿ ಇಡೀ ತಿಂಗಳಲ್ಲಿ ಸರಾಸರಿ 6.7ರಿಂದ 7 ದಿನಗಳು ಮಳೆಯ ದಿನಗಳಾಗಿವೆ. ಈ ಬಾರಿ ಇದಕ್ಕಿಂದ ಹೆಚ್ಚಿನ ಮಳೆಯ ದಿನಗಳನ್ನು ನಿರೀಕ್ಷೆ ಮಾಡಲಾಗಿದೆ. 9ರಿಂದ 10 ದಿನಗಳು ಗುಡುಗು, ಮಿಂಚು ಸಹಿತ ಮಳೆ ಸುರಿಯಬಹುದು ಎಂದು ಇಲಾಖೆ ವಿಜ್ಞಾನಿ ಎ. ಪ್ರಸಾದ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

2 ಡಿಗ್ರಿ ಕಡಿಮೆಯಾಗುವ ನಿರೀಕ್ಷೆ
ಸಾಮಾನ್ಯವಾಗಿ ಬೇಸಗೆಯಲ್ಲಿ ಉತ್ತರ ಒಳನಾಡು ಜಿಲ್ಲೆಗಳಾದ ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಮೇ ತಿಂಗಳಿನಲ್ಲಿ ಸಾಮಾನ್ಯವಾಗಿ ಸರಾಸರಿ 43ರಿಂದ 45 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುತ್ತದೆ. ಇದಕ್ಕೆ ಹೋಲಿಸಿದರೆ ಮಳೆಯ ದಿನಗಳು ಹೆಚ್ಚಿರುವುದರಿಂದ ಈ ಬಾರಿ ಉಷ್ಣಾಂಶ ಕನಿಷ್ಠ 0.5ರಿಂದ 2 ಡಿಗ್ರಿಯಷ್ಟು ಕಡಿಮೆ ದಾಖಲಾಗಬಹುದು ಎಂಬ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂಗಾರು ಅಬಾಧಿತ
ಪೂರ್ವಮುಂಗಾರು ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾದರೆ ಅಥವಾ ತಾಪಮಾನ ಕಡಿಮೆಯಾಗುವುದರಿಂದ ಮುಂಗಾರು ಮಳೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಪ್ರಿಲ್‌ನಲ್ಲಿ ವರದಿ ನೀಡಿರುವಂತೆ ಸಾಮಾನ್ಯ ಮುಂಗಾರು ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅದರಂತೆ ಎಂದಿನಂತೆ ಮುಂಗಾರು ಮಾರುತಗಳು ಮಳೆ ಸುರಿಸಲಿವೆ ಎಂದು ಅಂದಾಜಿಸಲಾಗಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಎ. ಪ್ರಸಾದ್‌ ಹೇಳುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next