Advertisement

Monsoon; ಜೂ.4ರಂದು ಕೇರಳಕ್ಕೆ ಮುಂಗಾರು ಪ್ರವೇಶ; ಈ ಬಾರಿ ಸ್ವಲ್ಪ ವಿಳಂಬ ಸಾಧ್ಯತೆ

10:07 PM May 16, 2023 | Team Udayavani |

ಹೊಸದಿಲ್ಲಿ: ಪ್ರಸಕ್ತ ವರ್ಷ ಕೇರಳಕ್ಕೆ ಮುಂಗಾರು ಆಗಮನ ಸ್ವಲ್ಪ ವಿಳಂಬವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಹೇಳಿದೆ. ಹೀಗಾಗಿ ಈ ಬಾರಿಯ ಬೇಸಗೆ ಸಾಮಾನ್ಯಕ್ಕಿಂತ ದೀರ್ಘ‌ವಾಗುವ ಆತಂಕ ವ್ಯಕ್ತವಾಗಿದೆ.

Advertisement

ನೈಋತ್ಯ ಮುಂಗಾರು ಈ ಬಾರಿ ಜೂ. 4ರ ವೇಳೆಗೆ ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ನೈಋತ್ಯ ಮುಂಗಾರು ಜೂ. 1ರಂದು ಕೇರಳಕ್ಕೆ ಪ್ರವೇಶವಾಗುತ್ತದೆ. ಇದು ಸುಮಾರು 7 ದಿನ ಏರುಪೇರಾಗುವ ಸಾಧ್ಯತೆಯಿರುತ್ತದೆ. ಆದರೆ ಈ ಬಾರಿ 4 ದಿನಗಳ ಏರುಪೇರಿನೊಂದಿಗೆ ಜೂ. 4ರಂದು ಕೇರಳದಲ್ಲಿ ಮುಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕಳೆದ ವರ್ಷ ಮೇ 29ರಂದು ದೇವರ ನಾಡಿಗೆ ಮುಂಗಾರು ಪ್ರವೇಶ ಪಡೆದಿತ್ತು. 2021ರಲ್ಲಿ ಜೂ. 3ರಂದು ಮತ್ತು 2020ರಲ್ಲಿ ಜೂ. 1ರಂದು ಪ್ರವೇಶವಾಗಿತ್ತು.

ಎಲ್‌ನಿನೋ ಪ್ರಭಾವದ ಹೊರತಾಗಿಯೂ ಈ ಬಾರಿ ದೇಶದಲ್ಲಿ ವಾಡಿಕೆ ಮಳೆಯಾಗಲಿದೆ ಎಂದು ಕಳೆದ ತಿಂಗಳು ಹವಾಮಾನ ಇಲಾಖೆ ಸ್ಪಷ್ಟಪಡಿಸಿತ್ತು.

ವಿಳಂಬದಿಂದ ಏನು ಸಮಸ್ಯೆ?
ಭಾರತವು ಕೃಷಿಯನ್ನೇ ಆಧರಿಸಿರುವ ದೇಶವಾಗಿದ್ದು, ಭಾರತದ ಆರ್ಥಿಕತೆಯು ಮಳೆಯನ್ನು ಅವಲಂಬಿಸಿದೆ. ದೇಶದ ಒಟ್ಟಾರೆ ವಾರ್ಷಿಕ ಮಳೆ ಪ್ರಮಾಣದಲ್ಲಿ ಶೇ. 75ರಷ್ಟನ್ನು ಮುಂಗಾರು ಮಳೆಯೇ ಒಳಗೊಂಡಿದೆ. ಈ ಬಾರಿ ಮುಂಗಾರು ವಿಳಂಬವಾದರೆ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆದರೆ ವಿಳಂಬವು ದೊಡ್ಡ ಮಟ್ಟದಲ್ಲಿ ಕೃಷಿ ಚಟುವಟಿಕೆಗಳ ಮೇಲಾಗಲೀ, ದೇಶದ ಒಟ್ಟಾರೆ ಮಳೆಯ ಪ್ರಮಾಣದ ಮೇಲಾಗಲೀ ಪರಿಣಾಮ ಬೀರುವುದಿಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next