Advertisement

ಮುಂಗಾರು ಕೊರತೆ: ಆಲೂ ಬಿತ್ತನೆ ಇಳಿಮುಖ

03:58 PM Jun 14, 2019 | Suhan S |

ಅರಕಲಗೂಡು: ಪೂರ್ವ ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ಬಿತ್ತನೆಗೆ ರೈತರು ಹಿಂದೇಟು ಹಾಕಿದ್ದು, ಮಸುಕಿನ ಜೋಳ ಹಾಗೂ ತಂಬಾಕು ಬೆಳೆಯಲು ಆದ್ಯತೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಬಾರಿ ಆಲೂಗೆಡ್ಡೆ ಬಿತ್ತನೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

Advertisement

40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತನೆ: ಕಳೆದ ಸಾಲಿನಲ್ಲಿ ಮೇ ತಿಂಗಳಿನಲ್ಲೆ ಮುಂಗಾರು ಪ್ರಾರಂಭವಾಗಿದ್ದರಿಂದ ಬಹುತೇಕ ಬಿತ್ತನೆ ಜೂನಿನಲ್ಲಿ ಮುಗಿದಿತ್ತು. ಸುಮಾರು 35ಸಾವಿರ ಎಕರೆ ಪ್ರದೇಶದಲ್ಲಿ ಜೋಳ ಬೆಳೆಯಲಾಗಿತ್ತು. ಆದರೆ ಈ ಬಾರಿ ಇದರ ಪ್ರಮಾಣ ಅಧಿಕವಾಗಲಿದ್ದು ಸರಿಸುಮಾರು 40ಸಾವಿರ ಎಕರೆ ದಾಟುವ ಸಾಧ್ಯತೆಗಳು ಇವೆ ಎಂದು ಅಂದಾಜಿಸಲಾಗಿದೆ. ಆಲೂಗೆಡ್ಡೆ ಕಳೆದ ಸಾಲಿನಲ್ಲಿ 2,500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಈ ಬಾರಿ 1,500 ಹೆಕ್ಟೇರ್‌ಗು ಕಡಿಮೆ ಬೆಳೆಯಾಗಬಹುದು ಎಂದು ತಿಳಿದುಬಂದಿದೆ.

ಆಲೂರಿನಲ್ಲಿ ಕೃಷಿ ಚಟುವಟಿಕೆ ಆರಂಭ:

ತಾಲೂಕಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಕೃಷಿ ಚಟುವಟಿಕೆ ಆರಂಭವಾಗಿದೆ ಪೂರ್ವ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಆಲೂಗಡ್ಡೆ ಬೆಳೆ ಯವ ರೈತರ ಸಂಖ್ಯೆ ಕಡಿಮೆಯಾಗಿದ್ದು, ಮುಸುಕಿನ ಜೋಳವನ್ನು ಬೆಳೆಯಲು ರೈತರು ಆಸಕ್ತರಾಗಿದ್ದಾರೆ.

ದಟ್ಟವಾದ ಮೋಡ ಮುಸುಕಿದ ವಾತಾವರಣ ವಿರುವುದಲ್ಲದೆ ಆಗಾಗ ಮಳೆ ಸಿಂಚನ ಉಂಟಾಗುತ್ತಿದೆ. ಚಳಿ ಅಧಿಕವಾಗಿರುವುದರಿಂದ ಜನಸಾಮಾನ್ಯರು, ಜಾನುವಾರುಗಳು ಮೈ ಮುದುಡಿಕೊಂಡು ಓಡಾಡುತ್ತಿದ್ದಾರೆ. ಕಳೆದವಾರ ಹದ ಮಳೆಹಾದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ರೈತರು ಕೃಷಿ ಚಟುವಟಿಕೆ ಯಲ್ಲಿ ತೊಡಗಿಕೊಂಡರು. ಬಹುತೇಕ ಮುಸುಕಿನ ಜೋಳವನ್ನು ಬಿತ್ತನೆ ಮಾಡುತ್ತಿದ್ದಾರೆ.

Advertisement

ಜಿಲ್ಲೆಯ ವಾಣಿಜ್ಯ ಬೆಳೆಯಾಗಿರುವ ಆಲೂಗಡ್ಡೆ ಬೆಳೆಯನ್ನು ಕಳೆದ ಎರಡು ದಶಕದ ಹಿಂದೆ ರೈತರು ಬೆಳೆದು ಅಧಿಕ ಲಾಭ ಗಳಿಸುತ್ತಿದ್ದರು. ಆದರೆ ಹವಾಮಾನ ಏರುಪೇರಾಗುತ್ತಿರುವ ಕಾರಣ ಇತ್ತೀಚೆಗೆ ಆಲೂಗಡ್ಡೆ ಬೆಳೆಯಲು ರೈತರು ಆಸಕ್ತಿ ತೋರುತ್ತಿಲ್ಲ. ಈ ವರ್ಷ ಕೇವಲ 50-60 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಆಲೂ ಬಿತ್ತನೆ ಮಾಡಿದ್ದಾರೆ. ಈಗಾಗಲೆ ಸುಮಾರು 3,600 ಹೆಕ್ಟೇರ್‌ ಪ್ರದೇಶದಲ್ಲಿ 650 ಕ್ವಿಂಟಾಲ್ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ.

ಮಳೆ ಕೊರತೆ: ಪೂರ್ವ ಮುಂಗಾರು ಬಿತ್ತನೆ ಕುಂಠಿತ:

 ಪ್ರಸ್ತುತ 2019-20 ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನಲ್ಲಿ ಮೇ ತಿಂಗಳ ಅಂತ್ಯಕ್ಕೆ ತಾಲೂಕಿನಲ್ಲಿ ಸರಾಸರಿ 93 ಮಿ.ಮೀ. ಮಳೆಯಾಗಿದೆ. ಇದು ವಾಡಿಕೆ (1,540 ಮಿ.ಮೀ.) ಮಳೆಗಿಂತ ಶೇ.40 ಕಡಿಮೆಯಾಗಿದೆ. ಇದರಿಂದಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿತ್ತನೆಯಾಗಬೇಕಿದ್ದ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಎಳ್ಳು, ಅಲಸಂದೆ, ಜೋಳ ಬೆಳೆಗಳು ವಾಡಿಕೆಯಂತೆ ಬಿತ್ತನೆಯಾಗಿರುವುದಿಲ್ಲ. ಹೆಸರು ಬೆಳೆ ವಾಡಿಕೆಯಂತೆ 9,500 ಹೆಕ್ಟರ್‌ ಪ್ರದೇಶದಲ್ಲಿ ಬಿತ್ತನೆಯಾಗಬೇಕಿದ್ದು, 270 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು, ಇದೇ ರೀತಿ ಉದ್ದು ವಾಡಿಕೆ50 ಹೆಕ್ಟೆರ್‌ ಪ್ರದೇಶದಲ್ಲಿ ಬಿತ್ತನೆಯಾಗಬೇಕಿದ್ದು 85 ಹೆಕ್ಟೇರ್‌ ನಲ್ಲಿ ಬಿತ್ತನೆಯಾಗಿದೆ ಎಳ್ಳು 1ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಬೇಕಿದ್ದು 150 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು, ಒಟ್ಟಾರೆ ಪೂರ್ವ ಮುಂಗಾರಿನಲ್ಲಿ ಸುಮಾರು 15ಸಾವಿರ ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆಗೆ ಗುರಿಯಿದ್ದು ಈವರೆಗೆ 905 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು, ಜೂನ್‌ ತಿಂಗಳ ಮೊದಲ ವಾರದಲ್ಲಿ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಮುಂಗಾರು ಬೆಳೆಗಳ ಬಿತ್ತನೆಗೆ ಭೂಮಿ ಸಿದ್ಧತೆ ಕಾರ್ಯ ನಡೆಯುತ್ತಿದೆ.ಮಳೆ ಕೊರತೆಯಿಂದ ಬೆಳೆಹಾನಿಯಾಗಿ ರೈತರು ನಷ್ಟ ಹೊಂದುವುದನ್ನು ತಪ್ಪಿಸಲು ಕಡ್ಡಾಯವಾಗಿ ಬೆಳೆವಿಮೆಗೆ ನೋಂದಾಯಿಸಲು ಎಲ್ಲಾ ರೈತ ಬಾಂಧವರನ್ನು ಸಹಾಯಕ ಕೃಷಿ ನಿರ್ದೇಶಕರು ಕೋರಿದ್ದಾರೆ. ಬೆಳೆ ವಿಮೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೆಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next