Advertisement

ವಿದೇಶಿ ಪ್ರಜೆಗೆ ಮಂಗನ ಕಾಯಿಲೆ

12:30 AM Feb 03, 2019 | Team Udayavani |

ಉಡುಪಿ: ಫ್ರಾನ್ಸ್‌ನ ಮಹಿಳೆಯೋರ್ವರು ಮಂಗನ ಕಾಯಿಲೆ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಶನಿವಾರ ದಾಖಲಾಗಿದ್ದಾರೆ.

Advertisement

33 ವರ್ಷದ ಈಕೆ ಕೆಲವು ದಿನಗಳ ಹಿಂದೆ ಉ.ಕ. ಜಿಲ್ಲೆಯ ಯಾಣ, ಗೋಕರ್ಣ ಮೊದಲಾದೆಡೆಗೆ ಪ್ರವಾಸಕ್ಕೆ ಬಂದಿದ್ದರು. ಅನಂತರ ಜ್ವರ ಕಾಣಿಸಿಕೊಂಡು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಬಳಿಕ ಕೆಎಂಸಿಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಯಾರಿಗೂ ಮಂಗನ ಕಾಯಿಲೆ ಇರುವುದು ಪತ್ತೆಯಾಗಿಲ್ಲ. ಆದರೆ ಶನಿವಾರವೂ ಜಿಲ್ಲೆಯ ಮಣಿಪುರ ಮತ್ತು ಹಳ್ಳಿಹೊಳೆಯಲ್ಲಿ ತಲಾ ಒಂದು ಮಂಗಗಳ ಶವ ಪತ್ತೆಯಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 100ಕ್ಕೂ ಅಧಿಕ ಮಂಗಗಳ ಶವಗಳು ಪತ್ತೆಯಾಗಿವೆ. ತೀರ್ಥಹಳ್ಳಿ ಲಚ್ಚು ಪೂಜಾರಿ (77) ಶುಕ್ರವಾರ ಮೃತಪಟ್ಟಿದ್ದು ಮಂಗನ ಕಾಯಿಲೆಯಿಂದ ಒಟ್ಟು ಶಿವಮೊಗ್ಗ ಜಿಲ್ಲೆಯ ಇಬ್ಬರು ಮೃತಪಟ್ಟಂತಾಗಿದೆ.
 
152 ಮಂದಿಗೆ ಚಿಕಿತ್ಸೆ
ಇದುವರೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಆಸುಪಾಸಿನ ಸುಮಾರು 152 ಮಂದಿ ಶಂಕಿತ ಮಂಗನ ಕಾಯಿಲೆ ರೋಗಕ್ಕೆ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 120 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. 30 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಮಂದಿಯ ತಪಾಸಣಾ ವರದಿ ಬರಲು ಬಾಕಿ ಇದೆ ಎಂದು ಆಸ್ಪತ್ರೆ ಪ್ರಕಟನೆ ತಿಳಿಸಿದೆ.

ತೀರ್ಥಹಳ್ಳಿ: ವ್ಯಕ್ತಿ ಸಾವು
ತೀರ್ಥಹಳ್ಳಿ:
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜನರ ಜೀವ ಹಿಂಡಿದ್ದ ಮಂಗನಕಾಯಿಲೆ ಈಗ ತೀರ್ಥಹಳ್ಳಿ ಭಾಗಕ್ಕೆ ವ್ಯಾಪಿಸಿದೆ. ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದು ಮಂಗನಕಾಯಿಲೆ ಶಂಕೆ ವ್ಯಕ್ತವಾಗಿದೆ. ಇದರಿಂದಾಗಿ ಈ ಕಾಯಿಲೆಗೆ ಜಿಲ್ಲೆಯಲ್ಲಿ ಒಟ್ಟು 9 ಮಂದಿ ಮೃತಪಟ್ಟಂತಾಗಿದೆ.

ಮಂಡಗದ್ದೆ ಸಮೀಪದ ಸಿಂಗನಬಿದರೆ ಗ್ರಾ.ಪಂ. ವ್ಯಾಪ್ತಿಯ ತೋಟದಕೊಪ್ಪದ ಲಚ್ಚ ಪೂಜಾರಿ (75) ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಇವರನ್ನು 5 ದಿನಗಳ ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ರಕ್ತ ಪರೀಕ್ಷೆ ನಡೆಸಿದಾಗ ಮಂಗನ ಕಾಯಿಲೆಗೆ ತುತ್ತಾಗಿರುವ ಶಂಕೆ ವ್ಯಕ್ತವಾಗಿತ್ತು. ಆರೋಗ್ಯ ಇಲಾಖೆ ಇವರ ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅಲ್ಲಿಂದ ವರದಿ ಬಂದ ಅನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next