Advertisement

“ಮನಿ’ದೇವ್ರು: ಇಂದು ಹಣ ಉಳಿಸಿದ್ರೆ, ನಾಳೆ ನಿಮ್ಮನ್ನು ಉಳಿಸುತ್ತೆ!

01:08 PM Jul 30, 2018 | Harsha Rao |

ದುಡಿಯುವ ದಿನಗಳಲ್ಲಿ ಸಂಪಾದನೆಯನ್ನೆಲ್ಲ ಅಲ್ಲಿಂದಲ್ಲಿಗೆ ಖರ್ಚು ಮಾಡುತ್ತಾ ಹೋದರೆ, ಮುಂದೊಂದು ದಿನ “ಸಂಕಟ ಬಂದಾಗ ವೆಂಕಟರಮಣ’ ಎಂಬಂತಾಗಬಹುದು. ಕಷ್ಟಗಳು ಬಂದಾಗ ಅಥವಾ ಮುಪ್ಪಿನ ಅವಧಿಯಲ್ಲಿ ಕಂಡವರ ಬಳಿ ಹಣಕ್ಕಾಗಿ ಕೈಯೊಡ್ಡ ಬೇಕಾಗುತ್ತದೆ. ಗಳಿಸಿದ ಮೊತ್ತದಲ್ಲಿ ಒಂದು ಪಾಲನ್ನು ಭವಿಷ್ಯಕ್ಕಾಗಿ ಕೂಡಿಟ್ಟರೆ, ಮುಂದೊಮ್ಮೆ ಅಂಥ ಅಪಾಯ ಎದುರಾಗದು. ಉಳಿತಾಯಕ್ಕೆ ಕೆಲವು ಸರಳ ದಾರಿಗಳು ಇಲ್ಲಿವೆ…

Advertisement

1. ವ್ಯರ್ಥ, ದುಂದು ವೆಚ್ಚಗಳಿಗೆ ಕಡಿವಾಣ 
ದಿನ ಬಳಕೆಯ ವಸ್ತುಗಳನ್ನು ಖರೀದಿಸುವಾಗ ಪೂರ್ವ ಸಿದ್ಧತೆಯೊಂದಿಗೆ ಮಾರುಕಟ್ಟೆಗೆ ಹೊರಡುವುದು ಉತ್ತಮ. ಇಲ್ಲವಾದಲ್ಲಿ ನೇರವಾಗಿ ಮಾರುಕಟ್ಟೆಗೆ ಹೋದಾಗ, ಅಲ್ಲಿನ ವಸ್ತುಗಳ ಮೇಲೆ ಆಕರ್ಷಣೆ ಹುಟ್ಟಿ, ಕಂಡಿದ್ದನ್ನೆಲ್ಲ ಖರೀದಿಸಬೇಕೆನಿಸುತ್ತದೆ. ಅಂಥ “ಕೊಳ್ಳುಬಾಕ ಸಂಸ್ಕೃತಿ’ಗೆ ಕಡಿವಾಣ ಹಾಕಿ. 

2. ಅಗತ್ಯವಿದ್ದಾಗ ಮಾತ್ರ ಸ್ವಂತ ವಾಹನ ಬಳಸಿ
ಗಗನಕ್ಕೇರಿರುವ ಪೆಟ್ರೋಲ್‌ ಬೆಲೆ ಹಾಗೂ ಟ್ರಾಫಿಕ್‌ ಜಾಮ್‌ನ ಕಿರಿಕಿರಿಯಲ್ಲಿ ಕಾರ್‌ನಂಥ ಸ್ವಂತ ವಾಹನದ ಬಳಕೆಯೂ ತುಂಬಾ ದುಬಾರಿ ಹಾಗೂ ದುಸ್ತರ. ಅವಶ್ಯಕವಲ್ಲದಿದ್ದರೂ, ಶೋಕಿಗಾಗಿ ವಾಹನಗಳಲ್ಲಿ ಸುತ್ತಾಡುವ ಪರಿಪಾಠ ಬಿಟ್ಟುಬಿಡಿ. ಹಾಗೆ ಸುತ್ತಾಡಿದರೆ, ನಮ್ಮ ಜೇಬಿಗೆ ನಾವೇ ಪರೋಕ್ಷವಾಗಿ ಕತ್ತರಿ ಹಾಕಿಕೊಂಡಂತೆ ಎನ್ನುವುದನ್ನು ಮರೆಯಬಾರದು.

3. ಪಾರ್ಟಿ ಹೆಸರಿನಲ್ಲಿ ಹೋಟೆಲ್‌ ಊಟ ಬೇಡ
ನಿರಂತರ ಹೋಟೆಲ್‌ ಊಟ ಆರೋಗ್ಯವನ್ನು ಹದಗೆಡಿಸುತ್ತದೆ. ಗೆಳೆಯರು, ಕುಟುಂಬದ ಸದಸ್ಯರ ಜತೆಯಲ್ಲಿ ಮೋಜಿನ ಪಾರ್ಟಿ ಮಾಡಬೇಕೆಂದೆನಿಸಿದರೆ ಮನೆಯಲ್ಲೇ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಿ. ಇದರಿಂದ ಸಾಕಷ್ಟು ಹಣವೂ ಉಳಿಯುತ್ತೆ.  ಕುಟುಂಬದ ಸದಸ್ಯರೊಂದಿಗೆ ಬಾಂಧವ್ಯವೂ ಗಟ್ಟಿಗೊಳ್ಳುವುದು.

4. ಹೋಲ್‌ಸೇಲ್‌ ಖರೀದಿಗೆ ಆದ್ಯತೆ ನೀಡಿರಿ
ದಿನನಿತ್ಯದ ಬಳಕೆಗೆ ಅವಶ್ಯವಿರುವ ವಸ್ತುಗಳನ್ನು ಖರೀದಿಸುವಾಗ ಆದಷ್ಟೂ ಹೋಲ್‌ಸೇಲ್‌ ಖರೀದಿಗೆ ಪ್ರಾಶಸ್ತÂ ನೀಡುವುದು ಉತ್ತಮ. ದಿನವೂ ಅಂಗಡಿಗೆ ಹೋಗಿ ವ್ಯಾಪಾರ ಮಾಡುವ ಬದಲು, ಒಂದೇ ಸಲಕ್ಕೆ ದಿನಬಳಕೆಯ ವಸ್ತುಗಳನ್ನು ಖರೀದಿಸಿ. ಇದರಿಂದ ಹಣ, ಸಮಯ ಎರಡೂ ಉಳಿತಾಯವಾಗುತ್ತದೆ.

Advertisement

5. ಟೂರ್‌ ವೇಳೆ ತಿಂಡಿಯ ವ್ಯವಸ್ಥೆ ಮಾಡಿಕೊಳ್ಳಿ
ಕುಟುಂಬದ ಸದಸ್ಯರ ಜತೆಗೆ ದೇವಸ್ಥಾನಕ್ಕೋ, ಮತ್ತೆಲ್ಲಿಗೋ ಟೂರ್‌ ಹೋಗುತ್ತೀರಿ. ಹಾಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಉಪಾಹಾರ, ಊಟ ಸವಿಯುವ ಬದಲು, ಮನೆಯಿಂದಲೇ ಸಿದ್ಧಮಾಡಿಕೊಂಡು ಹೋದರೆ, ಜೇಬಿಗೂ ಹಿತ, ಹೊಟ್ಟೆಗೂ ಹಿತ. ಇದರಿಂದ ಹೋಟೆಲ್‌ಗೆ ಹಣ ಸುರಿಯುವುದು ತಪ್ಪುತ್ತದೆ.

6. ಆನ್‌ಲೈನ್‌ ಪಾವತಿಗೆ ಆದ್ಯತೆ 
ರೈಲು ಮತ್ತು ಬಸ್‌ ಪ್ರಯಾಣದ ಸಂದರ್ಭದಲ್ಲಿ ಟಿಕೆಟ್‌ ಖರೀದಿಗೆ, ಸಿನಿಮಾ ಟಿಕೆಟ್‌ ಬುಕ್‌ ಮಾಡಲು, ವಿದ್ಯುತ್‌ ಮತ್ತು ದೂರವಾಣಿ, ನೀರಿನ ಬಿಲ್‌ ಪಾವತಿಸಲು ಹಾಗೂ ಇತರ ಇಂಟರ್‌ನೆಟ್‌ ಬ್ಯಾಂಕಿಂಗ್‌, ಪೇಟಿಎಂ, ಭೀಮ್‌ ವ್ಯವಸ್ಥೆಯ ಮೂಲಕ ಆನ್‌ಲೈನ್‌ ಪಾವತಿಗೆ ಅವಕಾಶವಿರುವ ಎಲ್ಲಾ ಪಾವತಿಗಳನ್ನು ಆನ್‌ಲೈನ್‌ ಮೂಲಕ ಮಾಡುವುದು ಉತ್ತಮ. ಇದರಿಂದಾಗಿ ಪಾರದರ್ಶಕ, ನಿಖರ ಹಾಗೂ ವಸ್ತುನಿಷ್ಟವಾದ ಪಾವತಿ ಸಾಧ್ಯವಾಗುತ್ತದೆ. ಜೊತೆಗೆ ಪಾವತಿಗಾಗಿ ಕಚೇರಿಗೆ ತೆರಳುವ, ಸರತಿ ಸಾಲಿನಲ್ಲಿ ನಿಲ್ಲುವ ಪ್ರಮೇಯ ತಪ್ಪುತ್ತದೆ.

7. ನಿಮ್ಮ ಮೊಬೈಲ್‌, ಹಣ ನುಂಗದಿರಲಿ…
ಇಂದು ಎಲ್ಲರಿಗೂ ಸ್ಮಾರ್ಟ್‌ಫೋನೇ ಜೀವಾಳ. ಫೋನ್‌ಗಳೇನೋ ಬೇಕು, ಆದರೆ ನಮ್ಮ ಆದಾಯ ಹಾಗೂ ಅವಶ್ಯಕತೆಗನುಗುಣವಾಗಿ ಮೊಬೈಲ್‌ ಅನ್ನು ಖರೀದಿಸುವುದು ಒಳ್ಳೆಯದು.   ಮೊಬೈಲ್‌ ಕರೆನ್ಸಿ, ಇಂಟರ್ನೆಟ್‌, ಮೆಸೇಜ್‌ ನೆಪದಲ್ಲಿ ಜೇಬಿಗೆ ಕತ್ತರಿ ಬೀಳದಂತೆ, ನೆಟ್‌ವರ್ಕ್‌ ಯೋಜನೆಗಳನ್ನು ಆರಿಸಿಕೊಳ್ಳಿ.

8. ಜಾಹೀರಾತಿಗೆ ಮಾರು ಹೋಗದಿರಿ…
ದಿನನಿತ್ಯ ದೂರದರ್ಶನ, ವೃತ್ತಪತ್ರಿಕೆ, ಎಫ್.ಎಂ, ರೇಡಿಯೋ, ಜಾಹೀರಾತು ಫ‌ಲಕಗಳಲ್ಲಿ ಬರುವಂಥ ಬಣ್ಣ ಬಣ್ಣದ ಹಾಗೂ ಮನಸೆಳೆಯುವ ಜಾಹೀರಾತುಗಳನ್ನು ನೋಡಿ, ಅದರ ಮೋಡಿಗೆ ಒಳಗಾಗಿ ಅವುಗಳನ್ನು ಖರೀದಿಸುವ ಗೀಳಿಗೆ ಬೀಳಬೇಡಿ. ತೀರಾ ಅಗತ್ಯವಿದ್ದಲ್ಲಿ ಮಾತ್ರ ಖರೀದಿಸಿ.

9. ಸರಳ ಶುಭ ಸಮಾರಂಭ
“ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು’ ಎಂಬ ನಾಣ್ಣುಡಿಯೇ ಇದೆ. ಅಂದರೆ, ಒಂದು ಮನೆಯನ್ನು ಕಟ್ಟುವಾಗ ಅದರ ಖರ್ಚು ಅದೆಷ್ಟು ಹೋಗುತ್ತೋ ಹೇಳಲು ಅಸಾಧ್ಯ. ಅದೇ ರೀತಿ ಮದುವೆಗಾಗಿ ಅದೆಷ್ಟೇ ಖರ್ಚು ಮಾಡಿದರೂ ಅದು ಮರಳಿ ಬರುವ ಹಣವಲ್ಲ. ಎಷ್ಟು ಅದ್ದೂರಿಯಾಗಿ ಮದುವೆ ಮಾಡಿದರೂ ಮದುವೆಗೆ ಬಂದ ಅತಿಥಿಗಳು ಹೊಟ್ಟೆ ತುಂಬಾ ಉಂಡು ಏನಾದರೊಂದು ಕೊಂಕು ಮಾತಾಡಿಯೇ ಆಡುತ್ತಾರೆ. ಹಾಗಾಗಿ, ಇಂಥ ಸಮಾರಂಭಗಳ ಖರ್ಚನ್ನು ಆದಷ್ಟು ತಗ್ಗಿಸಿ. ಸಾಮೂಹಿಕ ವಿವಾಹ, ಸರಳ ವಿವಾಹಗಳಿಗೆ ಆದ್ಯತೆ ಕೊಟ್ಟರೆ, ಭವಿಷ್ಯದಲ್ಲಿ ಸಾಲದ ಹೊರೆ ಇರುವುದಿಲ್ಲ.

– ಸಂತೋಷ್‌ ರಾವ್‌ ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next