Advertisement

ಮನಿ ಆರ್ಡರ್‌ ಮಾಸಾಶನ ಬಂದ್‌!

04:32 PM Oct 02, 2022 | Team Udayavani |

ದಾವಣಗೆರೆ: ಈವರೆಗೂ ಬ್ಯಾಂಕ್‌ ಇಲ್ಲವೇ ಅಂಚೆ ಖಾತೆ ಮಾಡಿಸಿಕೊಳ್ಳದೆ ಮನಿ ಆರ್ಡರ್‌ ಮೂಲಕ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಪಡೆಯುತ್ತಿರುವ ರಾಜ್ಯದ ಫಲಾನುಭವಿಗಳು ಪ್ರಸಕ್ತ ತಿಂಗಳು ಮಾಸಾಶನ ನಿರೀಕ್ಷೆ ಮಾಡಬೇಡಿ. ಏಕೆಂದರೆ ಈ ತಿಂಗಳಿಂದ ಬ್ಯಾಂಕ್‌ ಖಾತೆ ಜೋಡಣೆ ಮಾಡಿಕೊಂಡವರಿಗಷ್ಟೇ ಮಾಸಾಶನ ದೊರಕಲಿದೆ.

Advertisement

ಆಧಾರ್‌ ಸಂಖ್ಯೆ ಜೋಡಣೆ ಹೊಂದಿದ ಬ್ಯಾಂಕ್‌ ಇಲ್ಲವೇ ಅಂಚೆ ಖಾತೆ ಇಲ್ಲದ ಫಲಾನುಭವಿಗಳಿಗೆ ಮಾಸಾಶನ ತಡೆ ಹಿಡಿಯಲು ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಗಳ ನಿರ್ದೇಶನಾಲಯ ನಿರ್ಧರಿಸಿದ್ದು ಇದರ ಪರಿಣಾಮವಾಗಿ ಬ್ಯಾಂಕ್‌ ಖಾತೆ ಇಲ್ಲದವರಿಗೆ ಅಕ್ಟೋಬರ್‌ ತಿಂಗಳಿನಿಂದಲೇ ಮಾಸಾಶನ ನಿಲ್ಲಲಿದೆ (ಅಕ್ಟೋಬರ್‌ ತಿಂಗಳಲ್ಲಿ ಸಿಗಬೇಕಿದ್ದ ಸೆಪ್ಟೆಂಬರ್‌ ತಿಂಗಳಿನ ಮಾಸಾಶನ ಕೈಗೆ ಸೇರದು). ಇದರಿಂದಾಗಿ ಖಾತೆ ಮಾಡಿಸಿಕೊಳ್ಳದೆ ಮನಿ ಆರ್ಡರ್‌ ಮೂಲಕ ಮಾಸಾಶನ ಪಡೆಯುತ್ತಿದ್ದ ರಾಜ್ಯದ ಅಂದಾಜು ಒಂದು ಲಕ್ಷಕ್ಕೂ ಅಧಿಕ ಫಲಾನುಭವಿಗಳು ಮಾಸಾಶನ ವಂಚಿತರಾಗಲಿದ್ದಾರೆ.

ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳು ಬ್ಯಾಂಕ್‌ ಇಲ್ಲವೇ ಅಂಚೆ ಖಾತೆ ತೆರೆದು, ಅದನ್ನು ಸಾಮಾಜಿಕ ಭದ್ರತಾ ಮಾಸಾಶನ ಯೋಜನೆಗೆ ಜೋಡಿಸಬೇಕು ಎಂದು 2018ರಿಂದಲೇ ನಿರಂತರ ಸೂಚನೆ ನೀಡುತ್ತಲೇ ಬರಲಾಗಿತ್ತು. ಇತೀ¤ಚೆಗೆ ಬ್ಯಾಂಕ್‌ ಖಾತೆ ಮಾಡಿಸಿಕೊಳ್ಳಲು ಆ.31ರ ಅಂತಿಮ ಗಡುವು ನೀಡಲಾಗಿತ್ತು. ಆದರೂ ಇನ್ನೂ ಹಲವರು ಬ್ಯಾಂಕ್‌ ಖಾತೆ ಮಾಡಿಸಿಕೊಳ್ಳಲು ಮುಂದಾಗದೇ ಇರುವುದರಿಂದ ಕೊನೆಯ ಅವಕಾಶ ಎಂಬಂತೆ ಖಾತೆ ಮಾಡಿಸಿಕೊಳ್ಳಲು ಸೆ.15ರವರೆಗೂ ಗಡುವು ವಿಸ್ತರಿಸಲಾಗಿತ್ತು. ಈಗ ಆ ಕೊನೆಯ ಗಡುವಿನ ಅವಧಿ ಸಹ ಮುಕ್ತಾಯವಾಗಿದ್ದರಿಂದ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ನಿರ್ದೇಶನಾಲಯ ಮಾಸಾಶನ ತಡೆ ಹಿಡಿಯಲು ತೀರ್ಮಾನಿಸಿದೆ.

ಇನ್ನೂ ಕಾಲ ಮಿಂಚಿಲ್ಲ:

ಪ್ರಸ್ತಕ್ತ ತಿಂಗಳಿಂದ ಮಾಸಾಶನ ಖಾತೆಯನ್ನು ತಾತ್ಕಾಲಿಕವಾಗಿ ರದ್ದು ಗೊಳಿಸಲು ನಿರ್ಧರಿಸಲಾಗಿದ್ದು, ಡಿಸೆಂಬರ್‌ ಒಳಗೆ ಬ್ಯಾಂಕ್‌ ಇಲ್ಲವೇ ಅಂಚೆ ಖಾತೆ ಮಾಡಿಸಿ, ತಹಶೀಲ್ದಾರ್‌ ಕಚೇರಿ ಮೂಲಕ ಮಾಸಾಶನ ಖಾತೆಗೆ ಬ್ಯಾಂಕ್‌ ಖಾತೆ ಜೋಡಣೆ ಮಾಡಿದರೆ ಬಾಕಿ ಇರುವ ತಿಂಗಳುಗಳ ಮಾಸಾಶನ ಸೇರಿಸಿ ಹಣ ಖಾತೆಗೆ ಜಮೆ ಮಾಡಲಾಗುತ್ತದೆ. ಒಂದು ವೇಳೆ ಡಿಸೆಂಬರ್‌ ವೇಳೆಗೂ ಬ್ಯಾಂಕ್‌ ಖಾತೆ ಮಾಡಿಸಿಕೊಳ್ಳದೆ ಇದ್ದರೆ ಜನವರಿ 2023ರಿಂದ ಮಾಸಾಶನ ಖಾತೆಯೇ ರದ್ದಾಗಲಿದೆ. ಮುಂದೆ ಮಾಸಾಶನ ಪಡೆಯಲು ಫಲಾನುಭವಿಗಳು ಬ್ಯಾಂಕ್‌ ಖಾತೆಯೊಂದಿಗೆ ಹೊಸದಾಗಿಯೇ ಅರ್ಜಿ ಸಲ್ಲಿಸಬೇಕಾಗುತ್ತದೆ ಎನ್ನುತ್ತಾರೆ ಸಾಮಾಜಿಕ ಭದ್ರತಾ ಯೋಜನೆಯ ಅಧಿಕಾರಿಗಳು.

Advertisement

ಅಶಕ್ತರಿಗೆ ಅಧಿಕಾರಿಗಳೇ ಖಾತೆ ಮಾಡಿಸಲಿ

ಪ್ರಸಕ್ತ ಸರ್ಕಾರ, ಜನರಿಗೆ ಸುಲಭವಾಗಿ ಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ, ಅಧಿಕಾರಿಗಳ ಗ್ರಾಮ ವಾಸ್ತವ್ಯ, ಹಲೋ ಕಂದಾಯ ಸಚಿವರೇ ಹೀಗೆ ಅನೇಕ ಕಾರ್ಯಕ್ರಮ ಹಾಕಿಕೊಂಡಿದ್ದು, ಈ ಎಲ್ಲ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಸಾಮಾಜಿಕ ಭದ್ರತಾ ಪಿಂಚಣಿಗಾಗಿ ಬ್ಯಾಂಕ್‌ ಖಾತೆ ಮಾಡಿಸಿಕೊಳ್ಳಲಾಗದ ಅಶಕ್ತ, ಅನಾಥ, ಅಂಗವಿಕಲರಿಗೆ ಬ್ಯಾಂಕ್‌ ಖಾತೆ ಮಾಡಿಸಿಕೊಡುವತ್ತಲೂ ನಿಗಾ ವಹಿಸಬೇಕಿದೆ.

ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್‌ ಖಾತೆ ಮಾಡಿಸಿಕೊಳ್ಳಲು ನೀಡಲಾಗಿದ್ದ ಕೊನೆಯ ಗಡುವು ಸಹ ಸೆ.15ಕ್ಕೆ ಮುಗಿದಿದೆ. ಹೀಗಾಗಿ ಫಲಾನುಭವಿಗಳಿಗೆ ಅಕ್ಟೋಬರ್‌ ತಿಂಗಳಲ್ಲಿ ಮಾಸಾಶನ ಸಿಗುವುದಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಮನಿ ಆರ್ಡರ್‌ ಮೂಲಕ ಮಾಸಾಶನ ಪಡೆಯುವವರು ಡಿಸೆಂಬರ್‌ ಒಳಗೆ ಬ್ಯಾಂಕ್‌ ಖಾತೆ ಮಾಡಿಸಿಕೊಂಡರೆ ಮಾಸಾಶನ ಮುಂದುವರಿಯುತ್ತದೆ. ಇಲ್ಲದಿದ್ದರೆ ಮಾಸಾಶನ ಖಾತೆಯೇ ರದ್ದಾಗುತ್ತದೆ. ●ಪುಷ್ಪಾ ಕೆ., ಸಹಾಯಕ ನಿರ್ದೇಶಕರು, ಸಾಮಾಜಿಕ ಭದ್ರತಾ ಯೋಜನೆ, ದಾವಣಗೆರೆ

●ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next