Advertisement

ಚಿಕ್ಕಬಳ್ಳಾಪುರಕ್ಕೆ ಮೊಯ್ಲಿಯೇ ಅಭ್ಯರ್ಥಿಯಾಗಲಿ

07:29 AM Feb 25, 2019 | Team Udayavani |

ಚಿಕ್ಕಬಳ್ಳಾಪುರ: ಮುಂಬರುವ ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹಾಲಿ ಸಂಸದ ಡಾ.ಎಂ.ವೀರಪ್ಪಮೊಯ್ಲಿ ಅವರೇ ಅಭ್ಯರ್ಥಿಯಾಗಬೇಕು ಎಂಬ ಒಮ್ಮತದ ನಿರ್ಧಾರವನ್ನು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಶಾಸಕ ಡಾ.ಕೆ.ಸುಧಾಕರ್‌ ನೇತೃತ್ವದಲ್ಲಿ ಕೈಗೊಳ್ಳುವ ಮೂಲಕ ಮೈತ್ರಿ ಪಕ್ಷಗಳ ನಡುವೆ ಸೀಟು ಹಂಚಿಕೆ ವೇಳೆ ಯಾವುದೇ ಕಾರಣಕ್ಕೂ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬಾರದೆಂಬ ಸ್ಪಷ್ಟ ಸಂದೇಶವನ್ನು ಪಕ್ಷದ ರಾಜ್ಯ ನಾಯಕರಿಗೆ ಸ್ಥಳೀಯ ಮುಖಂಡರು ರವಾನಿಸಿದ್ದಾರೆ.

Advertisement

ತಾಲೂಕಿನ ನಂದಿ ಗಿರಿಧಾಮದಲ್ಲಿ ಭಾನುವಾರ ನಡೆದ ಚಿಕ್ಕಬಳ್ಳಾಪುರ ಕ್ಷೇತ್ರದ ಪ್ರಮುಖ ಮುಖಂಡರ ಸಭೆಯಲ್ಲಿ ಸಂಸದರಾದ ಡಾ.ಎಂ.ವೀರಪ್ಪಮೊಯ್ಲಿ, ಶಾಸಕರಾದ ಡಾ.ಕೆ.ಸುಧಾಕರ್‌ ಒಳಗೊಂಡಂತೆ ಕ್ಷೇತ್ರದ ಎಲ್ಲಾ ಮುಖಂಡರು ಭಾಗವಹಿಸಿ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಹಿರಿಯರಾದ ಮೊಯ್ಲಿಯವರೇ ಸ್ಪರ್ಧಿಸಬೇಕೆಂದು ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಯಿತು.

ಬಿಜೆಪಿಯನ್ನು ಮಣಿಸಬಹುದು: ಶಾಸಕ ಡಾ.ಸುಧಾಕರ್‌ ಮಾತನಾಡಿ, ಸಂಸದರಾದ ಡಾ.ಎಂ.ವೀರಪ್ಪಮೊಯ್ಲಿ ರಾಷ್ಟ್ರ ಮಟ್ಟದ ಹಿರಿಯ ರಾಜಕಾರಣಿಯಾಗಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದಂತವರು, ಈ ಭಾಗಕ್ಕೆ ಎತ್ತಿನಹೊಳೆಯಂತಹ ಬೃಹತ್‌ ನೀರಾವರಿ ಯೋಜನೆಯನ್ನು ತಂದು ಅನುಷ್ಠಾನಗೊಳಿಸುತ್ತಿದ್ದಾರೆ. ಇವರೇ ಅಭ್ಯರ್ಥಿಯಾದಲ್ಲಿ ಈ ಬಾರಿಯೂ ಬಿಜೆಪಿಯನ್ನು ಈ ಕ್ಷೇತ್ರದಲ್ಲಿ ಮಣಿಸಬಹುದು ಎಂದರು. 

ಕಾಂಗ್ರೆಸ್‌ ಹೀನಾಯ ಸ್ಥಿತಿಗೆ: ಸಭೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ಗೆ ಸ್ವಂತ ಶಕ್ತಿ, ಸಾಮರ್ಥ್ಯ ಇದೆ. ಜೆಡಿಎಸ್‌ಗೆ ಅವಕಾಶ ಕೊಟ್ಟರೆ ಕಾಂಗ್ರೆಸ್‌ ಹೀನಾಯ ಸ್ಥಿತಿಗೆ ತಲುಪಬೇಕಾಗುತ್ತದೆ. ಆದ್ದರಿಂದ ಮೊಯ್ಲಿ ಅವರಿಗೆ ಈ ಬಾರಿಯು ಅವಕಾಶ ನೀಡಬೇಕೆಂದು ಪಕ್ಷದ ನಾಯಕರನ್ನು ಆಗ್ರಹಿಸಿದರು. 

ಶಾಸಕರಿಗೆ ನಿಗಮ ಮಂಡಳಿ ಕೊಡಿಸಿ: ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಡಾ.ಸುಧಾಕರ್‌ಗೆ ಘೋಷಿಸಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹು¨ªೆಯನ್ನು ಕೂಡಲೇ ಕೊಡಿಸುವಂತೆ ಸಂಸದ ಎಂ.ವಿರಪ್ಪ ಮೊಯ್ಲಿರನ್ನು ಆಗ್ರಹಿಸಿದರು. ಶಾಸಕರಿಗೆ ಇಷ್ಟವಿಲ್ಲದಿದ್ದರೂ ಪಕ್ಷದ ಹೈಕಮಾಂಡ್‌ ಘೋಷಿಸಿದರೂ ಅವರ ಹೆಸರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಲಿಲ್ಲ ಎಂದು ಬೇಸರ ವ್ಯಕ್ತಪಪಡಿಸಿದ ಶಾಸಕರ ಬೆಂಬಲಿಗರು, ಈ ಬಗ್ಗೆ ಪಕ್ಷದ ಕೇಂದ್ರ ಹಾಗೂ ರಾಜ್ಯ ನಾಯಕರ ಮೇಲೆ ಒತ್ತಡ ತರುವಂತೆ ಮೊಯ್ಲಿಗೆ ಆಗ್ರಹಿಸಿದರು.

Advertisement

ಸಭೆಯಲ್ಲಿ ಹರ್ಷಮೊಯ್ಲಿ ಸೇರಿದಂತೆ ಜಿಪಂ ಸದಸ್ಯ ಪಿ.ಎನ್‌.ಕೇಶವರೆಡ್ಡಿ, ಕೋಚಿಮುಲ್‌ ನಿರ್ದೇಶಕ ಕೆ.ವಿ.ನಾಗರಾಜ್‌, ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್‌.ರಮೇಶ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ, ಪಿಕಾರ್ಡ್‌ ಬ್ಯಾಂಕ್‌ ನಾಗೇಶ್‌, ನಗರಭಾ ಸದಸ್ಯ ರಫೀಕ್‌, ಅಲ್ಪಸಂಖ್ಯಾತರ ಹಿರಿಯ ಮುಖಂಡ ಅಬ್ದುಲ್‌ ರವೂಫ್, ಟಿಎಪಿಸಿಎಂಎಸ್‌ ಅಧ್ಯಕ್ಷ ಆವುಲರೆಡ್ಡಿ, ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಮೋಹನ್‌ ರೆಡ್ಡಿ, ಎಸ್‌.ಕೆ.ಎಲ್‌.ದ್ಯಾವಣ್ಣ, ಕೋಚಿಮುಲ್‌ ನಾಮ ನಿರ್ದೇಶಿತ ಸದಸ್ಯ ಮಂಚೇನಹಳ್ಳಿ ಸುಬ್ಟಾರೆಡ್ಡಿ, ಮಂಚೇನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ಹಲವರು ಇದ್ದರು.  

ಅಡ್ಡಗಲ್‌ ಶ್ರೀಧರ್‌ ಹುದ್ದೆಗೆ ಕುತ್ತು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಸುಧಾಕರ್‌ ವಿರುದ್ಧವಾಗಿ ಕೆಲಸ ಮಾಡಿದ ಅಡ್ಡಗಲ್‌ ಶ್ರೀಧರ್‌ಗೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿರುವುದಕ್ಕೆ ಶಾಸಕ ಸುಧಾಕರ್‌ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಅವರನ್ನು ಕೆಪಿಸಿಸಿಯಿಂದ ವಜಾಗೊಳಿಸುವಂತೆ ಶಾಸಕರ ಬೆಂಬಲಿಗರು ಸಂಸದ ಮೊಯ್ಲಿ ಅವರಿಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೊಯ್ಲಿ ಆತನ ಆಯ್ಕೆಯಲ್ಲಿ ನನ್ನದೇನು ಪಾತ್ರವಿಲ್ಲ.

ಈ ಹಿಂದೆ ಯುವ ಕಾಂಗ್ರೆಸ್‌ನಲ್ಲಿದ್ದು ಈಗ ಮಂತ್ರಿಯಾಗಿರುವ ಕೆಲವರು ದೆಹಲಿಯವರೆಗೂ ಸಂಪರ್ಕ ಇಟ್ಟುಕೊಂಡು ಆತನನ್ನು ನೇಮಿಸಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ಕೃಷ್ಣಬೈರೇಗೌಡ ವಿರುದ್ಧ ಟೀಕಿಸಿದರು. ನೀವು ಈಗಲೇ ಅರ್ಹ ವ್ಯಕ್ತಿಯನ್ನು ಸೂಚಿಸಿ ನೇಮಕಕ್ಕೆ ಈಗಲೇ ಶಿಫಾರಸ್ಸು ಪತ್ರ ನೀಡುತ್ತೇನೆ. ನಿಮ್ಮ ವಿರುದ್ಧ ಕೆಲಸ ಮಾಡಿದ ವ್ಯಕ್ತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಅಡ್ಡಗಲ್‌ ಶ್ರೀಧರ್‌ ವಿರುದ್ಧ ಮೊಯ್ಲಿ ಸಭೆಯಲ್ಲಿ ಕಿಡಿಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next