Advertisement

ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲ, ಆದರೂ ಮೊಹರಂ ಹಬ್ಬ ಆಚರಿಸುತ್ತಾರೆ

10:09 AM Aug 08, 2022 | Team Udayavani |

ಸವದತ್ತಿ : ಸವದತ್ತಿಯಿಂದ 13 ಕಿ.ಮೀ ದೂರದ ಹರ್ಲಾಪೂರ ಗ್ರಾಮವು ಹತ್ತು ಹಲವು ವಿಶೇಷತೆಗಳಿಂದ ಕೂಡಿದೆ. ಉಗರಗೋಳ ಗ್ರಾ.ಪಂ ವ್ಯಾಪ್ತಿಯ ಈ ಗ್ರಾಮದಲ್ಲಿ 3000ಕ್ಕೂ ಅಧಿಕ ಜನರಿದ್ದರೂ ಸಹ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲ. ಆದರೂ ಸಹ ಇಲ್ಲಿ ವಿಜೃಂಭಣೆಯಿಂದ ಮೊಹರಮ್ ಹಬ್ಬದ ಆಚರಿಸಲಾಗುತ್ತಿದೆ.

Advertisement

ಸದ್ಯ ಇಲ್ಲಿನ ಫಕೀರಸ್ವಾಮಿ ದರ್ಗಾದಲ್ಲಿ ಹಿಂದೂ ಸಂಪ್ರದಾಯಗಳಂತೆ ಕುಂಕುಮ ಮತ್ತು ವಿಭೂತಿಗಳನ್ನು ಬಳಸದೇ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಮೋಹರಂ ಹಬ್ಬದ ನಿಮಯಾವಳಿಯಂತೆ ಪಂಜಾ ಪ್ರತಿಷ್ಠಾಪನೆ, ಡೋಲಿ ನಿರ್ಮಾಣ ಹಾಗೂ ಧಾರ್ಮಿಕ ಆಚರಣೆಗಳೆಲ್ಲವನ್ನು ಹಿಂದೂ ಹಿರಿಯರ ನೇತೃತ್ವದಲ್ಲಿಯೇ ಅದ್ದೂರಿಯಾಗಿ ನಡೆಸಲಾಗುತ್ತಿದೆ.

ಗ್ರಾಮದ ಪ್ರತಿಯೊಬ್ಬರು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಈ ದೇವಸ್ಥಾನ ಭಾವೈಕ್ಯತೆಗೆ ಮಾತ್ರವಲ್ಲದೇ ಅನೇಕ ವಿಸ್ಮಯಕಾರಿ ಘಟನೆಗಳಿಗೂ ಸಾಕ್ಷಿಯಾಗಿದೆ.

ಫಕೀರಸ್ವಾಮಿ ದರ್ಗಾದ ಹಿನ್ನಲೆ: ಇತಿಹಾಸದಲ್ಲಿ ಬರುವ ಸವಣೂರು ನವಾಬರ ಕಾಲದ ಈ ಮಶೀದಿಯಲ್ಲಿ ಒಟ್ಟು 10ಕ್ಕೂ ಅಧಿಕ ಪಂಜಾ ದೇವರು(ಹಲಗ)ಗಳು ಇವೆ. ಸದ್ಯ ಗ್ರಾಮಸ್ಥರೇ ಸೇರಿ ಮಶೀದಿಯನ್ನು 2012ರಲ್ಲಿ ಹೊಸ ಕಟ್ಟಡ ನಿರ್ಮಿಸಿ ಫಕೀರಸ್ವಾಮಿ ದೇವಸ್ಥಾನ ಎಂದು ಕರೆದಿದ್ದಾರೆ. ಮಶೀದಿಯಲ್ಲಿ ನಾಗಪ್ಪ ಮತ್ತು ಗಣಪತಿಯ ಕಲ್ಲಿನ ವಿಗೃಹಗಳು ಹಾಗೂ ಎಲ್ಲ ಧರ್ಮದ ವಿವಿಧ ಮಹಾತ್ಮರ ಪೋಟೊಗಳನ್ನು ಇರಿಸಿದ್ದಾರೆ.

ಇದನ್ನೂ ಓದಿ : ರಾಜಸ್ಥಾನದ ಖತು ಶ್ಯಾಮ್ ದೇವಸ್ಥಾನದಲ್ಲಿ ಕಾಲ್ತುಳಿತ : ಮೂವರು ಭಕ್ತರ ಸಾವು, ಇಬ್ಬರಿಗೆ ಗಾಯ

Advertisement

ಗ್ರಾಮಸ್ಥರ ಪ್ರಕಾರ ಮಶೀದಿಯು ಸವಣೂರು ನವಾಬರ ಆಡಳಿತದಲ್ಲಿ ಅಸ್ಥಿತ್ವವಿರುವದಕ್ಕೆ ನಿದರ್ಶನವೆಂಬಂತೆ ಮಶೀದಿಯ ಹಿಂದುಗಡೆ ಕೋಟೆಯ ಕುರುಹು ಕಂಡು ಬರುತ್ತದೆ. ಈ ಜಾಗವನ್ನು ಅಶ್ವದಳದ ಕುದುರೆಗಳನ್ನು ಕಟ್ಟಲು ಬಳಸುತ್ತಿದ್ದರು ಎನ್ನಲಾಗಿದೆ. ಕೆಲ ದಶಕಗಳ ಹಿಂದೆ ಹರ್ಲಾಪೂರ ಮತ್ತು ಸುತ್ತಮುತ್ತಲಿನ ಗ್ರಾಮದ ಜಾನುವಾರುಗಳಿಗೆ ಕಾಲು ಬಾಯಿ ರೋಗ ಹಬ್ಬಿತಂತೆ. ಮೋಹರಂ ಹಬ್ಬದಂದು ಮಶೀದಿಯಲ್ಲಿನ ಡೋಲಿ ಹೊರುತ್ತಿದ್ದ ಗೋವಿಂದಪ್ಪ ಚುಳಕಿ ಎಂಬುವರು ತಮ್ಮ ಉಡಿಯಲ್ಲಿ ಬೆಂಕಿಯನ್ನು ತೆಗೆದುಕೊಂಡು ಗ್ರಾಮದ ಸುತ್ತ ಭಸ್ಮವನ್ನು ಹಾಕಿ ದಿಗ್ಬಂಧನ ಮಾಡಿದಾಗಿನಿಂದ ಇಲ್ಲಿಯವರೆಗೆ ಒಂದೂ ಪ್ರಾಣಿಗೂ ಈ ತರ ಕಾಯಿಲೆ ಕಾಣಿಸಿಕೊಂಡಿಲ್ಲ ಎಂಬುವುದು ಇಲ್ಲಿಯ ವಾಡಿಕೆ.

ವಿಸ್ಮಯದ ಬೇವಿನಮರ: ದೈವತ್ವದ ತಳಹದಿಯಲ್ಲಿ ಕ್ಷಣಾರ್ಧದಲ್ಲಿ ಜೀವಿಗಳ ದೇಹದಲ್ಲಿಯ ಹಾವಿನ ವಿಷವನ್ನು ಹೊರಹಾಕುವ ಶಕ್ತಿ ಇರುವ ಈ ಬೇವಿನಮರಕ್ಕೆ ಕಹಿ ಸಂಜೀವಿನಿ ಎನ್ನಬಹುದು. ಸರ್ಪದಿಂದ ಕಚ್ಚಿಸಿಕೊಂಡು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಬದುಕುಳಿವುದು ಸಾಧ್ಯತೆ ಕಡಿಮೆ ಆದರೆ ಈ ಬೇವಿನಮರದಿಂದ ಔಷಧಿ ಪಡೆದ ಹಾವು ಕಚ್ಚಿಸಿಕೊಂಡ ಪ್ರತಿಯೊಬ್ಬರು ಸಂಪೂರ್ಣ ಗುಣಮುಖರಾದ ನಿದರ್ಶನಗಳಿವೆ.

ಪಂಜಾ ದೇವರುಗಳಲ್ಲಿನ ಒಂದು ದೇವರನ್ನು ಹೊರುವ ಭೀಮಪ್ಪ ಬಡಿಗೇರ ಅವರು, ಈ ಬೇವಿನ ಮರಕ್ಕೆ ವಿಶೇಷ ಶಕ್ತಿ ಇದ್ದು, ವಿಷಕಾರಿ ಜಂತುಗಳಿಂದ ಕಚ್ಚಿಸಿಕೊಂಡವರು ಈ ಮರದ ಎಲೆಗಳನ್ನು ಅರೆದು ಕುಡಿದ ಕ್ಷಣ ಮಾತ್ರದಲ್ಲಿ ವಿಷವನ್ನು ದೇಹದಿಂದ ಹೊರಹಾಕುತ್ತದೆ ಎಂದು ದೈವವಾಣಿ ನುಡಿದಾಗಿನಿಂದ ಗ್ರಾಮಸ್ಥರು ಆಸ್ಪತ್ರೆಯ ಮೊರೆ ಹೋಗದೆ ಹಾವು ಕಚ್ಚಿಸಿಕೊಂಡು ವ್ಯಕ್ತಿಯನ್ನು ಇಲ್ಲಿಗೆ ಕರೆದುಕೊಂಡು ಬಂದು ಗುಣ ಪಡಿಸಿಕೊಂಡು ಹೋಗುತ್ತಿದ್ದಾರೆ.

ಕಳೆದ 2-3 ವರ್ಷದ ಹಿಂದೆ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನಕ್ಕೆಂದು ಬಂದ ಕುಟುಂಬದ 8-9 ತಿಂಗಳ ಮಗುವಿಗೆ ಹಾವು ಕಚ್ಚಿದಾಗ ಈ ಫಕೀರಸ್ವಾಮಿ ದೇವಸ್ಥಾನಕ್ಕೆ ತಂದು ಬೇವಿನ ಮರದ ಎಲೆಗಳನ್ನು ಅರೆದು ಕುಡಿಸಿದಾಗ ಮಗುವಿನ ತಾಯಿಗೆ ವಾಂತಿ ಆಗಿ ಮಗು ವಿಷ ಮುಕ್ತವಾಗಿ ಗುಣಮುಖವಾಯಿತೆಂದು ವಿಸ್ಮಯ ಕಂಡ ಪ್ರತ್ಯಕ್ಷದರ್ಶಿ ಶಿವಪ್ಪ ವಕ್ಕುಂದ ಅವರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ

ಮಾರಣಾಂತಿಕ ವಿಷವನ್ನು ಹೊರ ಹಾಕುವ ಮರಕ್ಕೆ ಪ್ರಚಾರದ ಕೊರತೆ ಇದ್ದು, ಸಂಬಂಧ ಪಟ್ಟವರು ಅದರ ವಿಶೇಷತೆ ತಿಳಿಸಿ ಉಳಿಸಿ ಬೆಳಿಸುವ ಕಾರ್ಯ ಮಾಡಬೇಕಾಗಿದೆ. ಹಾಗೆಯೇ ಈ ಗ್ರಾಮಕ್ಕೆ ಬಸ್ಸಿನ ಸೌಲಭ್ಯ ಕಲ್ಪಿಸಿ ಶೈಕ್ಷಣಿಕ ಹಾಗೂ ಸಾಮಾಜಿಕ ಸುಧಾರಣೆಯಾಗಬೇಕಿದೆ.

ಗ್ರಾಮಸ್ಥರು ತಮ್ಮ ಮನೆಗಳಿಗೆ ಸುಣ್ಣ-ಬಣ್ಣ ಬಳಿದು, ಹೊಸ ಉಡುಗೆ ತೊಡಗೆ ಖರೀದಿಸಿ ಹಬ್ಬದ ಆಚರಣೆಗೆ ಪ್ರತಿವರ್ಷ ಸಿದ್ದತೆ ನಡೆಸುತ್ತಾರೆ. ಮೊಹರಮ್ ನಿಮಯಾವಳಿಯಂತೆ ಹಿಂದೂ ಹಿರಿಯರ ಮಾರ್ಗದರ್ಶನದಲ್ಲಿ ಪಂಜಾ ಪ್ರತಿಷ್ಠಾಪನೆ, ಡೋಲಿ ನಿರ್ಮಾಣ ಹಾಗೂ ಧಾರ್ಮಿಕ ಆಚರಣೆಗಳೆಲ್ಲವೂ ನಡೆಯುತ್ತಿವೆ.
– ಮಹಾದೇವಪ್ಪ ಪವಾಡಿ, ಮುಖಂಡರು.

– ಡಿ ಎಸ್ ಕೊಪ್ಪದ ಸವದತ್ತಿ

Advertisement

Udayavani is now on Telegram. Click here to join our channel and stay updated with the latest news.

Next