ಹುಬ್ಬಳ್ಳಿ: ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಚುನಾವಣಾ ರ್ಯಾಲಿ ಹಾಗೂ ಕುಂಭಮೇಳ ಆಚರಣೆ ಅಗತ್ಯವಿರಲಿಲ್ಲ. ಸೋಂಕು ಹತೋಟಿಗೆ ಸರ್ಕಾರಗಳು ಉತ್ತಮ ಕೆಲ ಮಾಡುತ್ತಿವೆ. ಉಂಟಾಗಿರುವ ಲೋಪದೋಷ ಸರಿಪಡಿಸಿಕೊಳ್ಳಬೇಕು. ಸರ್ಕಾರದ ಕಾರ್ಯಕ್ಕೆ ಜನರು ಜಾಗೃತಗೊಳ್ಳಬೇಕು ಎಂದು ವಿಆರ್ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ| ವಿಜಯ ಸಂಕೇಶ್ವರ ತಿಳಿಸಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 80 ಕೋಟಿ ಜನರಿಗೆ ಎರಡು ತಿಂಗಳ ಪಡಿತರ ಉಚಿತ ಹಂಚಿಕೆ ಮಾಡುವ ಪ್ರಧಾನಿ ಮೋದಿ ಅವರ ಘೋಷಣೆ ಸರಿಯಲ್ಲ. ಸರ್ಕಾರಗಳ ಇಂತಹ ಘೋಷಣೆಗಳಿಂದ ಕೈಗಾರಿಕೆಗಳಲ್ಲಿ ಕಾರ್ಮಿಕರ ಸಮಸ್ಯೆ ಉಂಟಾಗಿದೆ. ಅನಿವಾರ್ಯವಾಗಿ ಬಿಹಾರ, ಉತ್ತರ ಪ್ರದೇಶದಿಂದ ಕಾರ್ಮಿಕರನ್ನು ಕರೆಯಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ತೀವ್ರ ಕಡು ಬಡವರನ್ನು ಗುರುತಿಸಿ ಪಡಿತರ ಒದಗಿಸುವ ಕಾರ್ಯ ಆಗಬೇಕಿತ್ತು. ಉಚಿತ ಘೋಷಣೆಗಳು ದೇಶದ ಉತ್ಪಾದನಾ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮ ಉಂಟಾಗಲಿದೆ ಎಂದರು.
ಕೃತಕ ಅಭಾವ: ಕೈಗಾರಿಕೆ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಬಳಸುವ ಆಮ್ಲಜನಕ ಶೇ.99 ಕೈಗಾರಿಕೆಗಳಿಗೆ ಹಾಗೂ ಶೇ.1 ಮಾತ್ರ ವೈದ್ಯಕೀಯ ಬಳಕೆಗೆ ಪೂರೈಕೆಯಾಗುತ್ತದೆ. ಈ ಸಂದರ್ಭದಲ್ಲಿ ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಸಲು ಸರ್ಕಾರ ನಿರ್ಬಂಧ ಹೇರಿ ಒಳ್ಳೆಯ ಕೆಲಸ ಮಾಡಿದೆ. ಹೀಗಿರುವಾಗ ಆಸ್ಪತ್ರೆಗಳಲ್ಲಿ ಆಮ್ಲಜನಕ ದೊರೆಯುತ್ತಿಲ್ಲ ಎನ್ನುವುದು ಕೃತಕ ಅಭಾವ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಹ ಲೋಪದೋಷಗಳ ಬಗ್ಗೆ ಸರಕಾರ ಸೂಕ್ತ ಗಮನ ಹರಿಸಬೇಕಿದೆ ಎಂದರು.
ಜನರ ಸಹಕಾರ ಅಗತ್ಯ: ಕೋವಿಡ್ ವಿಚಾರದಲ್ಲಿ ಜನರ ಬೇಜವಾಬ್ದಾರಿತನ ಸರಿಯಲ್ಲ. ಹೆಚ್ಚು ಜನ ಸೇರಬಾರದು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಈ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದರೆ ಸೋಂಕು ತಡೆಗಟ್ಟಬಹುದಾಗಿದೆ. ದೇಶದ ಹವಾಮಾನ ಪ್ರಕಾರ ವರ್ಷದಲ್ಲಿ 2-3 ಬಾರಿ ಕೆಮ್ಮು, ನೆಗಡಿ, ಜ್ವರ ಬರುತ್ತದೆ. ಆದರೆ ಈ ಸೋಂಕು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಾ ಧಿಸುತ್ತದೆ. ಕೊರೊನಾ ಬಂದವರೆಲ್ಲಾ ಸಾಯುವುದಿಲ್ಲ. ಮನೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖ ರಾಗಬಹುದು. ಆದರೆ ಬೆಡ್, ಆಮ್ಲಜನಕದವರೆಗೆ ಹೋದರೆ ಇವುಗಳ ಅಭಾವದಿಂದ ಸಾವು ಆಗುತ್ತವೆ ಎಂದರು.