ಚಿಕ್ಕಮಗಳೂರು: ರಾಷ್ಟ್ರೀಯ ನಾಯಕರು ತಮ್ಮ ರಾಜ್ಯ ಪ್ರವಾಸದ ವೇಳೆ ಕೇವಲ ಅವರಿವರ ವಿರುದ್ಧ ಆರೋಪ ಮಾಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು, ರಾಜ್ಯದ ಅಭಿವೃದ್ಧಿ ಬಗ್ಗೆ ಇಬ್ಬರೂ ಚಕಾರ ವೆತ್ತುತ್ತಿಲ್ಲ. ಇದು ರಾಷ್ಟ್ರೀಯ ಪಕ್ಷಗಳ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ನಾಯಕರಾದ ನರೇಂದ್ರ ಮೋದಿ, ಅಮಿತ್ಶಾ, ಮತ್ತು ರಾಹುಲ್ ಗಾಂಧಿಯವರು ರಾಜ್ಯದ ಎಲ್ಲೆಡೆ ಪ್ರವಾಸ ಮಾಡಿದರೂ ಯಾವ ಪ್ರಯೋಜನವೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಭಾಷಣ ಮಾಡಿದರೆ ಕನ್ನಡಿಗರು ಮರುಳಾಗುತ್ತಾರೆಂದು ತಿಳಿದಿದ್ದಾರೆ. ಕರ್ನಾಟಕದ ಜನ ಇವರೆಲ್ಲರ ಆಡಳಿತವನ್ನು ನೋಡಿ
ಬೇಸತ್ತಿರುವುದರಿಂದ ಇವರ ಯಾವ ತಂತ್ರಗಾರಿಕೆಯೂ ಪರಿಣಾಮ ಬೀರದು ಎಂದರು.
ಕಾಂಗ್ರೆಸ್ 5 ವರ್ಷದ ಅವಧಿಯಲ್ಲಿ ನಾನಾ ಸಮಸ್ಯೆಗಳನ್ನು ಸೃಷ್ಟಿ ಮಾಡಿದೆ. ರಾಜ್ಯದಲ್ಲಿರೋದು ಕೇವಲ ಜಾಹೀರಾತಿನ ಸರ್ಕಾರವಾಗಿದ್ದು, ಅಗ್ಗದ ಜಾಹೀರಾತಿಗೆ ಹಣ ವ್ಯಯಿಸುತ್ತಿದ್ದಾರೆ. ರಾಜ್ಯದಲ್ಲಿ ಗೂಂಡಾಗಿರಿ ಸೃಷ್ಟಿಯಾಗಿದೆ. ಶಾಸಕರ ಪುತ್ರರು ಉತ್ಮತ್ತ ಸ್ಥತಿಗೆ ತಲುಪಿದ್ದಾರೆ ಎಂದರು.