Advertisement

Modi Government: ಜನಧನ ಯೋಜನೆ: ಆರ್ಥಿಕ ಶಕ್ತಿಗೆ ಹೊಸ ಚೈತನ್ಯ!

01:51 AM Aug 31, 2024 | Team Udayavani |

2014ರಲ್ಲಿ ಅಭೂತಪೂರ್ವ ಚುನಾವಣ ವಿಜಯದ ಬಳಿಕ, ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರಂದ್ರ ಮೋದಿ ಅವರು ಘೋಷಿಸಿದ ಪ್ರಧಾನಮಂತ್ರಿ ಜನಧನ ಯೋಜನೆ, ದೇಶದ ಆರ್ಥಿಕ ಪ್ರಗತಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತದೆ ಎಂಬುದು ಊಹೆಗೂ ಮೀರಿದ್ದು.

Advertisement

ಆಗಸ್ಟ್‌ 28, 2014ರಲ್ಲಿ ಜಾರಿಗೆ ಬಂದ ಈ ಬ್ಯಾಂಕಿಂಗ್‌ ಕ್ಷೇತ್ರದ ಯೋಜನೆಗೆ ಈಗ 10 ವರ್ಷಗಳ ಸಂಭ್ರಮ. 10 ವರ್ಷಗಳಲ್ಲಿ ಭಾರತ ದೇಶ ಜಾಗತಿಕ 5ನೇ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಈ ಕ್ರಾಂತಿಕಾರಿ ಬೆಳವಣಿಗೆಗೆ ಪ್ರಧಾನಿ ಮೋದಿ ಜಾರಿಗೆ ತಂದ ಹಲವಾರು ಅರ್ಥಪೂರ್ಣ ಯೋಜನೆಗಳಲ್ಲಿ ಬಹುಶಃ ಜನರನ್ನು ದೇಶವ್ಯಾಪಿ ಬೆಸೆಯುವ ಹಾಗೂ ಸರ್ವಸ್ಪರ್ಶಿ ಯೋಜನೆಗಳಲ್ಲಿ ಈ ಜನಧನ ಯೋಜನೆ ಎದ್ದು ಕಾಣುತ್ತದೆ.

ದೇಶದ ಬೃಹತ್‌ ಜನಸಂಖ್ಯೆಯನ್ನು ದೇಶದ ಸಾರ್ವಜನಿಕ ಸಾಂಸ್ಥಿಕ ಬ್ಯಾಂಕಿಂಗ್‌ ಜಾಲದ ತೆಕ್ಕೆಗೆ ತಂದು, ಒಳಗೊಳ್ಳುವ ಆರ್ಥಿಕ ಪ್ರಗತಿಯ ವಾರಸುದಾರರನ್ನಾಗಿಸುವುದೇ ಈ ಜನಧನ ಯೋಜನೆಯ ಮೋದಿ ಅವರ ಮೂಲಕಲ್ಪನೆ ಹಾಗೂ ಕನಸಾಗಿತ್ತು. ಅಂತೆಯೇ ಬ್ಯಾಂಕಿಂಗ್‌ ಸೇವೆಗೆ ಒಳಪಡದ ಬಡಜನರನ್ನೂ ಒಳಪಡಿಸಿ ಹಣಕಾಸಿನ ಅಭದ್ರತೆಯ­ಲ್ಲಿರುವವರಿಗೆ ಭದ್ರತೆ ಒದಗಿಸುವುದೇ ಉದ್ದೇಶವಾಗಿತ್ತು. ಮೋದಿ ಅವರು ಹೇಳುವಂತೆ ಸರಕಾರದಿಂದ ಆರ್ಥಿಕ ಪ್ರಗತಿಗೆ ನಾಂದಿಯಾಗಬಲ್ಲ ಯಾವುದೇ ಯೋಜನೆಯು ಸಂಪೂರ್ಣ ಯಶಸ್ವಿಯಾಗಿ ಅದರ ಲಾಭ ತಳಮಟ್ಟದ ಜನರಿಗೆ ತಲುಪಬೇಕೆಂ­ ದರೆ ಅದೊಂದು ಸಾರ್ವತ್ರಿಕ ಚಳವಳಿ ರೂಪ ಪಡೆದಾಗ ಮಾತ್ರ. ಜನಧನ ಅನುಷ್ಠಾನದಲ್ಲಿ ಅಕ್ಷರಶಃ ಈ ಮಾತು ನಿಜವಾಗಿದೆ.

ದಾಖಲೆಯ ಬ್ಯಾಂಕ್‌ ಖಾತೆಗಳು:
2024ರ ಆಗಸ್ಟ್‌ವರೆಗೆ ಒಟ್ಟು 53 ಕೋಟಿ ಜನಧನ ಬ್ಯಾಂಕ್‌ ಖಾತೆಗಳ ನೋಂದಣಿಯಾಗಿವೆ. ಇದು ಒಟ್ಟಾರೆ ಯುರೋಪಿಯನ್‌ ಯೂನಿಯನ್‌ದ ಒಟ್ಟು ಜನಸಂಖ್ಯೆಗಿಂತಲೂ ಮಿಗಿಲು. ಈ ಖಾತೆಗಳ ಒಟ್ಟಾರೆ ಠೇವಣಿ 2.31 ಲಕ್ಷ ಕೋಟಿ ರೂ.ಗೂ ಮೀರಿದೆ. ಈ ಯೋಜನೆಯ ಒಟ್ಟು ಫಲಾನುಭವಿಗಳಲ್ಲಿ ಶೇ.57 ರಷ್ಟು ಮಹಿಳೆಯರು, ಅಂದರೆ 30 ಕೋಟಿ ಮಹಿಳೆಯರು ಈ ಖಾತೆಗಳನ್ನು ಹೊಂದಿದ್ದಾರೆ. ಅಲ್ಲದೆ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚಿನ ಫಲಾನುಭವಿಗಳು ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳಲ್ಲಿ ನೆಲೆಸಿದವರಾಗಿದ್ದಾರೆ.

ಈ ಯೋಜನೆ ಜಾರಿಗೆ ಬಂದ ಮೊದಲ 1 ವರ್ಷದಲ್ಲಿ 17.9 ಕೋಟಿ ಹೊಸ ಖಾತೆಗಳನ್ನು ತೆರೆಯಲಾಗಿದ್ದು, ಇಲ್ಲಿಯವರೆಗೂ ಒಟ್ಟು 53.31 ಕೋಟಿ ಹೊಸ ಜನಧನ ಖಾತೆಗಳು ಹೇಗೆ ದೇಶದ ಸ್ಥಳಸ್ಪರ್ಶಿ ಹಣಕಾಸು ಚಲಾವಣೆಗೆ ಕಾರಣವಾಗಿ ದೇಶದ ಆರ್ಥಿಕ ಪ್ರಗತಿಗೆ ಮಾರ್ಗವಾಯಿತೆಂಬುದನ್ನು ನೋಡೋಣ.

Advertisement

ಮಹಿಳಾ ಸಶಕ್ತೀಕರಣಕ್ಕೆ ಹೆಚ್ಚಿನ ಚಾಲನೆ:
ಜನಧನ ಬ್ಯಾಂಕ್‌ ಖಾತೆಗಳನ್ನು ಅರ್ಧಕ್ಕಿಂತಲೂ ಹೆಚ್ಚು ಮಹಿಳೆಯರೇ ಹೊಂದಿ­ರು­ವುದರಿಂದ ಅವರಲ್ಲಿ ಸಹಜವಾಗಿರುವ ಉಳಿತಾಯದ ಕಲ್ಪನೆಗೆ ಹೆಚ್ಚಿನ ಬಲ ಬಂದಿರುವುದು ನಿರ್ವಿವಾದ. ಇದರಿಂದ ದೇಶದ ಪ್ರತೀ ಮಹಿಳೆಯು ಹಣಕಾಸು ನಿರ್ವಹಣೆಯಲ್ಲಿ ಸ್ವತಂತ್ರವಾಗಿ ವ್ಯವಹರಿಸುವ ಬಲ ಹೊಂದಿದ್ದು, ದೇಶದ ಪ್ರಗತಿಯಲ್ಲಿ ತನ್ನದೂ ಪಾತ್ರವಿದೆ ಎಂಬ ಹೆಮ್ಮೆಯ ಭಾವನೆಗೆ ಕಾರಣವೂ ಆಗಿದೆ ಮತ್ತು ಮಹಿಳಾ ಪ್ರಣೀತ ಅಭಿವೃದ್ಧಿಯತ್ತ ಇರುವ ಮಹತ್ವದ ಮೆಟ್ಟಿಲಾಗಿದೆ. 2015ರ ಸ್ವಾತಂತ್ರೊéàತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿ, ದೇಶದ ಆರ್ಥಿಕ ಸಂಪನ್ಮೂಲಗಳ ಗರಿಷ್ಠ ಉಪಯೋಗ ಬಡವರಿಗಾಗಿ ಆದಾಗ ಮಾತ್ರ ಪ್ರಗತಿಗೆ ಹೆಚ್ಚಿನ ಅರ್ಥವೆಂದಿದ್ದು.

ಅಂತರ್ಜಾಲ ಆಧಾರಿತ ಹಣಕಾಸು ವ್ಯವಹಾರಗಳಲ್ಲಿಜನಧನ ಪಾತ್ರ:
2014ರಲ್ಲಿ 25.59 ಕೋಟಿ ಇದ್ದ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ 10 ವರ್ಷಗಳಲ್ಲಿ 95.40 ಕೋಟಿಗೆ ಏರಿಕೆಯಾಗಿದ್ದು, ಇದು ಒಟ್ಟು ವಾರ್ಷಿಕ ಬೆಳವಣಿಗೆಯ ಶೇ. 14.26 ದಾಖಲಾಗಿದೆ. 30 ಕೋಟಿ ಜನ ಧನ ಮಹಿಳಾ ಖಾತೆದಾರರು (ಇದು ರಷ್ಯಾ ಜನಸಂಖ್ಯೆ 2 ಪಟ್ಟು) ಇಂದು ಸ್ವತಃ ತಾವೇ ನಿರ್ವಹಿಸುವ ವ್ಯವಹಾರಗಳು 2018ರಲ್ಲಿ ಶೇ.53ರಿಂದ 2019-20ರಲ್ಲಿ ಇದು ಶೇ.79ಕ್ಕೆ ಏರಿಕೆಯಾಗಿದೆ. ಇದರಿಂದಾಗಿಯೂ ಕೋವಿಡ್‌ 19ರ ಸಮಯದಲ್ಲಿನ ಲಾಕ್‌ಡೌನ್‌ ಅವಧಿಯಲ್ಲಿ 20 ಕೋಟಿ ಮಹಿಳಾ ಖಾತೆದಾರರಿಗೆ ಪ್ರತೀ ತಿಂಗಳು 500 ರೂ. ಸಂದಾಯವಾಗಿದೆ.

ಒಟ್ಟು ನೀಡಲಾದ 44.4 ಕೋಟಿ ಮುದ್ರಾ ಸಾಲಗಳಲ್ಲಿ 30.6 ಕೋಟಿ ಸಾಲಗಳ ಭಾಗ ಮಹಿಳೆಯರದೇ ಆಗಿದ್ದು ಇದು ಒಟ್ಟು ಮಂಜೂರಾದ ಸಾಲಗಳ ಶೇ.69 ರಷ್ಟಾಗಿದೆ. ಒಂದು ಮಾಹಿತಿ ಪ್ರಕಾರ (ಎಸ್‌ಬಿಐ ವರದಿ) ಜನಧನ ಯೋಜನೆಯ ಮಹಿಳಾ ಸಶಕ್ತೀಕರಣದ ಸಾಮಾಜಿಕ ಹಾಗೂ ನೈತಿಕ ಪರಿಣಾಮವೆಂದರೆ ಅಪರಾಧಗಳ ಗಣನೀಯ ಇಳಿಕೆ ಹಾಗೂ ಆಲ್ಕೋಹಾಲ್‌, ತಂಬಾಕು ಸೇವನೆಯ ಸಂಖ್ಯೆಯಲ್ಲಿಯೂ ಇಳಿಕೆ ಎಂಬುದು. ಅಲ್ಲದೆ ಜನಧನ ಯೋಜನೆಯ ವಿತ್ತೀಯ ಒಳಗೊಳ್ಳುವಿಕೆಯ ಚಲನಶೀಲತೆ 25 ಕೋಟಿ ಬಡ ಹಾಗೂ ದುರ್ಬಲ ವರ್ಗದ ಜನರನ್ನು 2014ರಿಂದ 2023ರ ಅವಧಿಯಲ್ಲಿ ಬಹುಮುಖಗಳ ಬಡತನದಿಂದ ಮೇಲಕ್ಕೆತ್ತಿವೆ.

ನೇರ ಹಣ ವರ್ಗಾವಣೆಯ ಯಂತ್ರವಾಗಿ ಪರಿಣಮಿಸಿದ ಜನಧನ:
2014ರಲ್ಲಿ ಜನಧನ ಯೋಜನೆ ಘೋಷಿಸಿದಾಗ ಕೇವಲ ಬ್ಯಾಂಕ್‌ ಖಾತೆ ತೆರೆಯುವುದರಿಂದ ಏನು ಲಾಭ ಎಂದು ಮೂಗು ಮುರಿದವರೇ ಹೆಚ್ಚು. ಅಲ್ಲದೇ ಇಷ್ಟೊಂದು ಸಂಖ್ಯೆಯ ಶೂನ್ಯ ಬ್ಯಾಲನ್ಸ್‌ ಅಕೌಂಟ್‌ಗಳ ನಿರ್ವಹಣ ವೆಚ್ಚ ಕೊಡುವ ವರಾರು ಮುಂತಾಗಿ ವಿರೋಧಿಗಳು ಅಪಹಾಸ್ಯ ಮಾಡಿದ್ದರು. ಆದರೆ ಇಂದು ಈ ಬ್ಯಾಂಕ್‌ ಖಾತೆಗಳ ಒಟ್ಟು ಠೇವಣಿಯೇ ಸುಮಾರು 2.31 ಲಕ್ಷ ಕೋಟಿ ರೂ.ಗೆ ಮೀರಿದೆ.

ಆಗ ಈ ಜನಧನ ಯೋಜನೆಯನ್ನು ಅಪಹಾಸ್ಯ ಮಾಡಿದ ಕರ್ನಾಟಕ ಕಾಂಗ್ರೆಸ್‌ ಸರಕಾರ ಅಕ್ಕಿ ನೀಡುವ ಬದಲು ಅದರ ದರವನ್ನು ಡಿಬಿಟಿ ಮೂಲಕ ಜನರಿಗೆ ತಲುಪಿಸುತ್ತಿರುವುದು ಯಾವ ಖಾತೆಗಳ ಮೂಲಕ ಎಂಬುದನ್ನು ಮತ್ತೂಮ್ಮೆ ತಿಳಿಯುವುದು ಸೂಕ್ತ. ಆದರೆ ಈ ಜನಧನ ಯೋಜನೆ ಹೇಗೆ ಮುಂಬರುವ ದಿನಗಳಲ್ಲಿ ದೇಶದ ಸರ್ವತೋಮುಖ ಆರ್ಥಿಕ ಅಭಿವೃದ್ಧಿ, ಬಡತನ ನಿರ್ಮೂಲನೆ, ಮಹಿಳಾ ಸಶಕ್ತೀಕರಣ ಹಾಗೂ ವಿಶೇಷವಾಗಿ ನೇರ ಹಣ ವರ್ಗಾವಣೆ ಮತ್ತು ಅಂತರ್ಜಾಲ ಆಧಾರಿತ ಹಣಕಾಸು ವ್ಯವಹಾರಗಳ ಸಾಧನೆಗೆ ಯಂತ್ರವಾಗಿ ಪರಿಣಮಿಸಬಲ್ಲದೆಂ­ಬುದು ಮೋದಿಯವರು ಕನಸಿನ ಕೂಸಾಗಿ ಸುಪ್ತವಾಗಿತ್ತೆಂ­ಬುದು ಇಂದು ಕೇವಲ ಭಾರತಕ್ಕಷ್ಟೇ ಅಲ್ಲ ಇಡೀ ಜಗತ್ತೇ ಕೊಂಡಾಡುವಂತಾಗಿದೆ.

ಮೋದಿ ಪ್ರಣೀತ ಭಾರತದ ಡಿಜಿಟಲ್‌ ಪರಿವರ್ತನೆ ಕೇವಲ ಸಮಯಾನುಸಾರದ ಸ್ವೀಕೃತಿ ಲಭ್ಯತೆಗಷ್ಟೇ ಸೀಮಿತವಾಗಿರದೆ, ಈ ವ್ಯವಸ್ಥೆಯಿಂದ ಹೇಗೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಧ್ಯವರ್ತಿಗಳ ಶೋಷಣೆಗೂ ಅಂತ್ಯ ಹಾಡಿದೆ. ಜನಧನ ಆಧಾರಿತ ಈ ಅದ್ಭುತ ಪೂರ್ವ ಪರಿವರ್ತನೆ ಅಥವಾ ಸಾಧನೆ ಸಾಂಪ್ರದಾಯಿಕ ವಿಧಾನಗಳಿಂದ 47 ವರ್ಷಗಳಲ್ಲಿ ಆಗುವುದನ್ನು ಹೇಗೆ ಕೇವಲ 6 ವರ್ಷಗಳಲ್ಲಿ ಭಾರತ ಇದನ್ನ ಸಾಧಿಸಿದೆ.

ಈ ಕುರಿತು ವಿಶ್ವ ಬ್ಯಾಂಕಿನ 2023 ಜಿ-20 ವರದಿಯಲ್ಲಿ ಬಣ್ಣಿಸಿದ್ದು, ಮೋದಿ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಡಿಜಿಟಲ್‌ ಪರಿವರ್ತನೆ ಭಾರತದ 10 ವರ್ಷಗಳ ಅಭೂತಪೂರ್ವ ಆರ್ಥಿಕ ಬೆಳವಣಿಗೆಯ ಹೃದಯ­ವೇ ಆಗಿದೆ ಎಂದು ‘ಆಧಾರ’ ವ್ಯವಸ್ಥೆಯ ಪ್ರಥಮ ಅಧ್ಯಕ್ಷರಾಗಿದ್ದ ನಂದನ್‌ ನೀಲಕಣಿ ಹೇಳಿರುವುದು ಉತ್ಪ್ರೇಕ್ಷೆಯಲ್ಲ ಎನ್ನಬಹುದು.

ಯೋಜನೆಯ ಇನ್ನೊಂದು ವಿಶೇಷತೆ ಎಂದರೆ, ಜನರ ಹಾಗೂ ಸರಕಾರದ ನಡುವಿನ ಕಂದಕವನ್ನು ಕನಿಷ್ಠಗೊಳಿಸಿದ್ದು ಹಾಗೂ ಸಾಮಾನ್ಯ ಜನಕೇಂದ್ರಿತ ಆರ್ಥಿಕ ಮುನ್ನಡೆಗೆ ಆಧಾರ ಶಿಲೆಯಾಗಿ ಪರಿಣಮಿಸಿದೆ. ಸರಕಾರದ ಯಾವುದೇ ಯೋಜ ನೆಯ ಅನುಷ್ಠಾನವಿರಲಿ, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌, ನರೇಗಾದ ಏರಿಕೆಯಾದ ಸಂಭಾವನೆ, ಜೀವವಿಮೆ ಹಾಗೂ ಆರೋಗ್ಯ ವಿಮಾ ಹೀಗೆ ಹತ್ತು ಹಲವಾರು ಸಾಮಾಜಿಕ ಕಲ್ಯಾಣ, ಸಾಮಾಜಿಕ ಭದ್ರತಾ ಯೋಜನೆಗಳ ಲಭ್ಯತೆಯನ್ನು ತಳಸ್ಪರ್ಶಿ ಯಾಗಿ ಜನರಿಗೆ ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ತಲುಪಿಸುವಲ್ಲಿ ಜನಧನ ಪಾತ್ರ ಅಗಾಧವಾದುದು.

ಡಿಬಿಟಿ ಹಾಗೂ ಸರಕಾರದ ಯೋಜನೆಗಳ ಅನುಷ್ಠಾನ:
ಸರಕಾರದ ನೇರ ಹಣ ವರ್ಗಾವಣೆ (ಡಿಬಿಟಿ) ಹಾಗೂ ಇತರ ಆಡಳಿತಾತ್ಮಕ ಸುಧಾರಣೆಗಳು ಸಾರ್ವಜನಿಕ ವಿತರಣ ಸೇವಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಪರಿವರ್ತನೆ ತಂದಿದೆ. ಖೊಟ್ಟಿ ಹಾಗೂ ಡುಪ್ಲಿಕೇಟ್‌ ಫಲಾನುಭವಿಗಳ ನಿರ್ಮೂಲನೆಯಿಂದ ಸೋರಿಕೆಯನ್ನು ಗಣನೀಯವಾಗಿ ತಡೆಗಟ್ಟಲಾಗಿದೆ. ಈ ಮೂಲಕ ಡಿಬಿಟಿ ವ್ಯವಸ್ಥೆ ಅರ್ಹ ಹಾಗೂ ಯೋಗ್ಯ ಫಲಾನು­ಭವಿ­ಗಳಿಗೆ ಸರಕಾರದ 53 ಇಲಾಖೆಗಳ 316 ಯೋಜನೆಗಳ ಲಾಭ ತಲುಪುವಂತೆ ಆಧಾರವಾಗಿ ನಿಂತು ಜನಧನ ಯೋಜನೆಯ ಕ್ರಾಂತಿಕಾರಿ ವ್ಯವಸ್ಥೆಯ ಪಾತ್ರ ಅಷ್ಟಿಷ್ಟಲ್ಲ.

ಹೀಗೆ 2014ರಲ್ಲಿ ಆರಂಭಗೊಂಡು 10 ವರ್ಷದಲ್ಲಿ ತನ್ನ ಸಂಕಲ್ಪಿತ ಮಿಷನ್‌ ಪರಿಣಾಮಕಾರಿಯಾಗಿ ಪೂರ್ಣಗೊಳಿ ಸುವಲ್ಲಿ ಮುನ್ನಡೆದ ಜನಧನ ಯೋಜನೆಯ ಪ್ರಯಾಣದಲ್ಲಿ ದೇಶದ ಆರ್ಥಿಕ ಬೆಂಬಲ ನೀಡಿದೆ. ಇದು ಮೋದಿ ಅವರ ಕಲ್ಪನೆಯ ಆತ್ಮನಿರ್ಭರ ಭಾರತ, ಒಂದೇ ಭಾರತ ಶ್ರೇಷ್ಠ ಸಾಧನೆಗೆ ತನ್ನದೇ ಅಭೂತಪೂರ್ವ ಕೊಡುಗೆ ನೀಡಿದ ಅಪರೂಪದ ಯೋಜನೆಯಾಗಿ ಜಾಗತಿಕ ಮನ್ನಣೆಯನ್ನು ಗಳಿಸಿದೆ.

– ಪ್ರಹ್ಲಾದ್‌ ಜೋಶಿ, ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ, ಗ್ರಾಹಕ ಸಚಿವರು 

Advertisement

Udayavani is now on Telegram. Click here to join our channel and stay updated with the latest news.

Next