ಬೆಂಗಳೂರು: ಮಹದಾಯಿ ಕುರಿತು ಪ್ರಧಾನಿ ಮಾತುಗಳನ್ನು ಆಲಿಸಿದರೇ ಹೊರತು ಭರವಸೆ ಕೊಡಲಿಲ್ಲ: ಸಿಎಂ ಸಿದ್ದರಾಮಯ್ಯ
– ಹೀಗೆಂದು ವಾರ್ತಾ ಇಲಾಖೆ ನಿರ್ವಹಿಸುತ್ತಿರುವ ಕರ್ನಾಟಕ ವಾರ್ತೆ ಟ್ವೀಟರ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಹಾಕಿ ಟ್ವೀಟ್ ಮಾಡಲಾಗಿದೆ.
ಶುಕ್ರವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಮಹದಾಯಿ ವಿಚಾರ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮಹದಾಯಿ ನ್ಯಾಯಾಧಿಕರಣ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮಧ್ಯಸ್ಥಿಕೆ ಕೋರಲಾಯಿತು. ಆದರೆ, ಅವರು ಏನೂ ಭರವಸೆ ಕೊಟ್ಟಿಲ್ಲ. ನೋಡೋಣ ಎಂದರು ಎಂದು ಹೇಳಿದ್ದರು.
ಈ ಅಂಶವನ್ನು ಕರ್ನಾಟಕ ವಾರ್ತೆಯ ಟ್ವೀಟರ್ ಖಾತೆಯಲ್ಲಿ ಮಹದಾಯಿ ಕುರಿತು ಪ್ರಧಾನಿ ಮಾತುಗಳನ್ನು ಆಲಿಸಿದರೇ ಹೊರತು ಭರವಸೆ ಕೊಡಲಿಲ್ಲ: ಸಿಎಂ ಸಿದ್ದರಾಮಯ್ಯ ಎಂದು ಶನಿವಾರ ಸಂಜೆ 4.15ಕ್ಕೆ ಟ್ವೀಟ್ ಮಾಡಲಾಗಿದೆ.
ಇದಲ್ಲದೆ, ಮುಖ್ಯಮಂತ್ರಿಗಳ ಅಧಿಕೃತ ಟ್ವೀಟರ್ ಖಾತೆ ಸಿಎಂ ಆಫ್ ಕರ್ನಾಟಕದಲ್ಲಿ ಮಾಡಿರುವ ಟ್ವೀಟ್ಗಳನ್ನು ಮರುಟ್ವೀಟ್ ಮಾಡಲಾಗಿದೆ. ಜತೆಗೆ ಬರ ಪರಿಸ್ಥಿತಿ, ನರೇಗಾ ಉದ್ಯೋಗ ದಿನಗಳ ಏರಿಕೆ ಕುರಿತಂತೆ ಪ್ರಧಾನಿಯವರೊಂದಿಗಿನ ಮುಖ್ಯಮಂತ್ರಿಗಳ ಭೇಟಿ ಸಂದರ್ಭದಲ್ಲಿ ನಡೆದ ಮಾತುಕತೆ ವಿವರಗಳನ್ನೂ ಟ್ವೀಟ್ ಮಾಡಲಾಗಿದೆ.