Advertisement

ಸಾಫ್ಟ್‌ವೇರ್‌ ಎಂಜಿನಿಯರ್‌-ಎಂಬಿಎ ಪದವೀಧರೆ ದಂಪತಿಯ ಮಾದರಿ ಕೃಷಿ !

09:59 AM Dec 30, 2019 | mahesh |

ಹೆಸರು: ವಿಖ್ಯಾತ್‌ ಕುಮಾರ್‌ ಶೆಟ್ಟಿ, ನಂದನಿಶಾ
ಏನೇನು ಕೃಷಿ: ಅಡಿಕೆ, ತೆಂಗು, ಕಾಳುಮೆಣಸು
ಎಷ್ಟು ವರ್ಷ: 9
ಕೃಷಿ ಪ್ರದೇಶ: 10 ಎಕರೆ
ಸಂಪರ್ಕ ಸಂಖ್ಯೆ: 9964522009

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಬ್ರಹ್ಮಾವರ: ಪತಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಬೆಂಗಳೂರಿನ ಪ್ರಸಿದ್ಧ ಕಂಪೆನಿಯಲ್ಲಿ ಉದ್ಯೋಗಿ. ಪತ್ನಿ ಎಂಬಿಎ ಪದವೀಧರೆ ಹಾಗೂ ಉದ್ಯೋಗಸ್ಥೆ. ನಗರ ಜೀವನ ವ್ಯವಸ್ಥೆಯಲ್ಲಿರುವ ಇವರಿಗೆ ಹಳ್ಳಿಯಲ್ಲಿರುವ ತಂದೆ ತಾಯಂದಿರನ್ನು ನೋಡಿಕೊಳ್ಳುವ ಅನಿವಾರ್ಯತೆ ಬಂದಾಗ ಅವರನ್ನು ಬೆಂಗಳೂರಿಗೆ ಕರೆಯಿಸಿಕೊಳ್ಳದೆ, ನಾವೇ ಯಾಕೆ ಹಳ್ಳಿಗೆ ತೆರಳಿ ಹಿರಿಯರ ಭೂಮಿಯಲ್ಲಿ ಕೃಷಿ ಮಾಡಿ ಯಶಸ್ಸು ಹಾಗೂ ನೆಮ್ಮದಿ ಕಂಡುಕೊಳ್ಳಬಾರದು ಎನ್ನುವ ಯೋಚನೆ. ಅದರಂತೆ ಊರಿಗೆ ಬಂದು ಹೈನುಗಾರಿಕೆ ಮತ್ತು ಸಮಗ್ರ ಕೃಷಿ ಮೂಲಕ ಸರ್ವರಿಗೂ ಪ್ರೇರಣೆಯಾದವರು ಹೆಗ್ಗುಂಜೆಯ ವಿಖ್ಯಾತ್‌ ಕುಮಾರ್‌ ಶೆಟ್ಟಿ ಮತ್ತು ನಂದನಿಶಾ ದಂಪತಿ.

ಬಾಲ್ಯದಿಂದಲೇ ಹಸುಗಳ ಮೇಲಿನ ಪ್ರೀತಿಯಿಂದ ಮೊದಲು ಹೈನುಗಾರಿಕೆ ಪ್ರಾರಂಭಿಸಿದರು. ಅನುಭವಕ್ಕಾಗಿ ಹತ್ತಾರು ಡೈರಿ ಸುತ್ತಿ ಬಂದು ಕರಾವಳಿಯಲ್ಲೇ ಅತ್ಯಂತ ವ್ಯವಸ್ಥಿತವಾದ ವಿಮಲಾ ಡೈರಿ ಪ್ರಾರಂಭಿಸಿದರು. ಇದೇ ಸಂದರ್ಭ ನೀರಿನ ಆಶ್ರಯವನ್ನೂ ಬಲಪಡಿಸಿದರು.

35 ಹಸುಗಳು
ವಿಖ್ಯಾತ್‌ ಶೆಟ್ಟಿ ಅವರ ಡೈರಿಯಲ್ಲಿ 35 ಹಸು, ಎರಡು ಎಮ್ಮೆ ಹಾಗೂ ಐದು ಕರುಗಳಿವೆ. ಪ್ರತಿನಿತ್ಯ ಸರಾಸರಿ 300 ಲೀ. ಹಾಲನ್ನು ಒಕ್ಕೂಟಕ್ಕೆ ನೀಡುತ್ತಿದ್ದಾರೆ. ಹಾಲೆಸ್ಟಿನ್‌, ಜೆರ್ಸಿ ಹಾಗೂ ಸಾಯಿವಾಲ್‌ ದೇಶೀ ತಳಿಯ ಹಸುಗಳಿವೆ. ಹೈನುಗಾರಿಕೆಗೆ ಹಸಿ ಮೇವು ಜೀವಾಳ ಎನ್ನುವುದನ್ನು ಅರಿತು ಸುಮಾರು 5 ಎಕ್ರೆ ಜಾಗದಲ್ಲಿ ಹಸಿ ಹುಲ್ಲು ಬೆಳೆಸಿದ್ದಾರೆ.  ಗೋಮೂತ್ರ, ಹಟ್ಟಿ ತೊಳೆದ ನೀರು ವ್ಯವಸ್ಥಿತವಾಗಿ ಸ್ಲರಿ ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಇದನ್ನು ಸ್ಪಿಂಕ್ಲರ್‌ ಮೂಲಕ ಹುಲ್ಲಿನ ಗದ್ದೆಗಳಿಗೆ ಹಾಯಿಸುತ್ತಾರೆ. ಉಪ ಉತ್ಪನ್ನವಾಗಿ ಸೆಗಣಿಯನ್ನು ಮಾರಾಟ ಮಾಡುತ್ತಿದ್ದಾರೆ. ಹಸುಗಳಿಗೆ ದಿನಕ್ಕೆ ಮೂರು ಬಾರಿ ಸ್ನಾನ ಸೇರಿದಂತೆ ನೀರು, ಆಹಾರ ಎಲ್ಲದರಲ್ಲೂ ಇವರು ಸ್ವತ್ಛತೆಯನ್ನು ಕಾಯ್ದುಕೊಂಡಿದ್ದಾರೆ.

Advertisement

ತೋಟಕ್ಕೆ ಪೂರಕ
ಹಸು ಸಾಕಾಣಿಕೆ ತೋಟಗಾರಿಕೆಗೆ ಪೂರಕವಾಗಬೇಕು ಎನ್ನುವ ದೃಷ್ಟಿಯಿಂದ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. 700ರಷ್ಟು ಫಲ ಬರುವ ಅಡಿಕೆ ಮರಗಳಿದ್ದು, ಈ ವರ್ಷ ಹೊಸದಾಗಿ 1,000 ಸಸಿ ನಾಟಿ ಮಾಡಿದ್ದಾರೆ. ಇದರ ಜತೆ ಕಾಳುಮೆಣಸು, ತೆಂಗು, ಗೇರು, ರಕ್ತಚಂದನ, ಕಸಿ ನುಗ್ಗೆ, ವೀಳ್ಯದೆಲೆ, ಸಿಹಿಕಂಚಿ, ದಿವಹಲಸು, ಚಿಕ್ಕು, ಮಾವು, ಬಾಳೆ ಬೆಳೆಸಿದ್ದಾರೆ. ಭತ್ತ ಬೆಳೆಯುತ್ತಿದ್ದಾರೆ. ಸೆಗಣಿ ಹಾಗೂ ಗೋಮೂತ್ರ ಬಳಕೆಯಿಂದ ಮಾಮೂಲಿಗಿಂತ ಎರಡು ಪಟ್ಟು ಹೆಚ್ಚು ಇಳುವರಿ ಕಂಡುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾರಾಟಕ್ಕಾಗಿ ಸುಮಾರು 200 ನಾಟಿ ಕೋಳಿ (ಫೈಟರ್‌) ಸಾಕುತ್ತಿದ್ದಾರೆ. ನೈಸರ್ಗಿಕವಾಗಿ ಮರಿ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಇವುಗಳಿಗೆ ಹೆಚ್ಚು ಬೇಡಿಕೆ ಇದೆ ಹಾಗೂ ಲಾಭದಾಯಕ.

ತರಬೇತಿ:
ಸಿಂಡಿಕೇಟ್‌ ಬ್ಯಾಂಕ್‌ನ ರೂರಲ್‌ ಡೆವಲಪ್‌ಮೆಂಟ್‌ ಮೆನೇಜರ್, ರುಡ್‌ಸೆಟ್‌ ಶಿಬಿರಾರ್ಥಿಗಳು, ಬ್ರಹ್ಮಾವರ ಕೆವಿಕೆ ಕೃಷಿ ಮೇಳಗಳು ಸೇರಿದಂತೆ ಸಾವಿರಾರು ಮಂದಿಗೆ ಹೈನುಗಾರಿಕೆ ತರಬೇತಿ ನೀಡಿದ್ದಾರೆ.

ಪ್ರಶಸ್ತಿ
ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಪತ್ನಿ ನಂದನಿಶಾ ವಿ. ಶೆಟ್ಟಿ ಅವರ ಸಂಪೂರ್ಣ ಸಹಕಾರ, ತಂದೆ ಸುಧಾಕರ ಶೆಟ್ಟಿ ಅವರ ಸಲಹೆಯೊಂದಿಗೆ ಮುನ್ನಡೆಯುತ್ತಿದ್ದಾರೆ. ಡೈರಿ ನಿರ್ವಹಣೆಗಾಗಿ ನಾಲ್ಕು ಮಂದಿ ಸಹಾಯಕರಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿ
ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೃಷಿ, ಹೈನುಗಾರಿಕೆ ಮಾಡುವವರಿಗೆ ಪ್ರೋತ್ಸಾಹ ನೀಡಿದರೆ ಮಾತ್ರ ಪರಿಸ್ಥಿತಿ ನಿಭಾಯಿಸಬಹುದು. ಹೈನುಗಾರಿಕೆ ಪ್ರಾರಂಭಿಸುವಾಗ ಚಿಕ್ಕ ಮೊತ್ತದ ಸಾಲಕ್ಕೆ ಮಾತ್ರ ಕಡಿಮೆ ಬಡ್ಡಿ. ಆಧುನಿಕ ಡೈರಿ ಆರಂಭಿಸಲು ಅನಿವಾರ್ಯವಾಗಿ ದೊಡ್ಡ ಮೊತ್ತದ ಸಾಲಕ್ಕೆ ಕಮರ್ಷಿಯಲ್‌ ಬಡ್ಡಿ. ಕೈಗಾರಿಕೆ ಪ್ರಾರಂಭಿಸುವವರಿಗೆ ಹತ್ತಾರು ಸೌಲಭ್ಯ. ಕೃಷಿಗೆ ಪ್ರೋತ್ಸಾಹ ಸಾಲದು. ಹಲವು ವಿಚಾರಗಳಲ್ಲಿ ಸರಕಾರದ ಧೋರಣೆ ಬದಲಾಗಬೇಕು. ಕೃಷಿ ನಿಜವಾಗಿಯೂ ಲಾಭದಾಯಕ, ನೆಮ್ಮದಿಯೂ ಹೌದು. ಆದರೆ ಸುಲಭದಲ್ಲಿ ಎಲ್ಲವೂ ಸಾಧ್ಯ ಎನ್ನುವ ಭ್ರಮೆ ಯಿಂದ ಹೊರಬರಬೇಕು. ಕಠಿನ ಪರಿಶ್ರಮ, ಬದ್ಧತೆ, ಇಚ್ಛಾಶಕ್ತಿ, ಏಕಾಗ್ರತೆ ಬೆಳೆಸಿಕೊಳ್ಳಬೇಕು. ಆಗ ಕಷ್ಟ ಇದ್ದರೂ ಅತ್ಯಮೂಲ್ಯವಾದ ಮಾನಸಿಕ ನೆಮ್ಮದಿ ದೊರೆಯತ್ತದೆ.
ವಿಖ್ಯಾತ್‌ ಕುಮಾರ್‌ಶೆಟ್ಟಿ, ನಂದನಿಶಾ ವಿ. ಶೆಟ್ಟಿ, ಕೃಷಿಕರು

ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next