ಚಿಕ್ಕಮಗಳೂರು: ರಾಜ್ಯ ರಾಜಕೀಯದಲ್ಲಿ ಆಣೆ ಪ್ರಮಾಣ ಪಾಲಿಟಿಕ್ಸ್ ಮತ್ತೆ ಶುರುವಾಗಿದೆ. ಶೃಂಗೇರಿ ಶಾಸಕ ರಾಜೇಗೌಡ ವಿರುದ್ಧದ ಆಸ್ತಿ ಖರೀದಿ ಅವ್ಯವಹಾರ ಆರೋಪ ಪ್ರಕರಣ ಇದೀಗ ಆಣೆ ಪ್ರಮಾಣದವರೆಗೆ ಸಾಗಿದ್ದು, ಡಿ.ಎನ್ ಜೀವರಾಜ್ ಗೆ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಸವಾಲು ಹಾಕಿದ್ದಾರೆ.
ಟಿ.ಡಿ ರಾಜೇಗೌಡ ಅವರು ದಿ. ಸಿದ್ದಾರ್ಥ್ ಕುಟುಂಬದ ಬಳಿ 211 ಎಕರೆ ಕಾಫಿ ತೋಟ ಖರೀದಿಸಿದ್ದಾರೆ. ಆದರೆ ಆಸ್ತಿ ಖರೀದಿ ವೇಳೆ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಮೋಸ ಮಾಡಿದ್ದಾರೆಂದು ಜೀವರಾಜ್ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ರಾಜೇಗೌಡ, ‘ನಾನು ಕಾನೂನು ಪ್ರಕಾರವೇ ಆಸ್ತಿ ಖರೀದಿ ಮಾಡಿದ್ದೇನೆ. ಆ ತೋಟ ಕೇವಲ 14 ರಿಂದ 15 ಕೋಟಿ ಬೆಲೆಬಾಳುತ್ತದೆ. ಆದರೆ 270 ಕೋಟಿ ಕೊಟ್ಟು ಆಸ್ತಿ ಖರೀದಿ ಮಾಡಿದ್ದರೆಂದು ಆರೋಪಿಸುತ್ತಿದ್ದಾರೆ. 15 ಕೋಟಿ 270 ಕೋಟಿಗೂ ವ್ಯತ್ಯಾಸ ಗೊತ್ತಿಲ್ವಾ, ಬುದ್ಧಿ ಇಲ್ಲವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಸೋಲಾಪುರ : ಒಬ್ಬನನ್ನೇ ಮದುವೆಯಾದ ಅವಳಿ ಸಹೋದರಿಯರು!
ಇದನ್ನು ನಾನು ಇಲ್ಲಿಗೆ ಸುಮ್ಮನೆ ಬಿಡುವುದಿಲ್ಲ. ನಾನು ನಂಬುವ ಧರ್ಮಸ್ಥಳಕ್ಕೆ ಹೋಗಿ ಕೈ ಮುಗಿಯುತ್ತೇನೆ. ನಾನು ಅನ್ಯಾಯ ಮಾಡಿದ್ದರೆ ನನಗೆ ತೊಂದರೆಯಾಗಲಿ. ಇಲ್ಲದಿದ್ದರೆ ನನ್ನ ಬಗ್ಗೆ ಅಪಪ್ರಚಾರ ಮಾಡಿದವರಿಗೆ ದೇವರೇ ನೋಡಿಕೊಳ್ಳಲಿ. ತಾಕತ್ತಿದ್ದರೆ ಶೃಂಗೇರಿ ಶಾರದಾಂಬೆ, ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಬನ್ನಿ. ನೀವೇ ನಿಗದಿ ಮಾಡಿದ ದಿನಾಂಕ, ಸಮಯದಂದು ನಾನು ಬರಲು ಸಿದ್ದನಿದ್ದೇನೆ. ನಾನು ಪ್ರಮಾಣ ಮಾಡುತ್ತೇನೆ ನೀವು ಕೂಡ ಪ್ರಮಾಣ ಮಾಡಿ ಎಂದು ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಸವಾಲೆಸೆದರು.