Advertisement

ಆರೋಗ್ಯ ಕ್ಷೇತ್ರದಲ್ಲಿ ಎಂಐಒ ಸಾಧನೆ: ಶಾಸಕ ಕಾಮತ್‌ ಶ್ಲಾಘನೆ

01:39 AM Oct 06, 2019 | Sriram |

ಮಂಗಳೂರು: ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಆಂಕಾಲಜಿ (ಎಂಐಒ) ಯ ಎಂಟು ವರ್ಷಗಳ ಸೇವೆಯನ್ನು ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಎಂಐಒ ಡೇಯನ್ನು ನಗರದ ಪಂಪ್‌ವೆಲ್‌ನಲ್ಲಿರುವ ಎಂಐಒ ಆವರಣದಲ್ಲಿ ಶನಿವಾರ ಆಯೋಜಿಸಲಾಗಿತ್ತು.

Advertisement

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ಕೇರಳಕ್ಕೆ ಮಂಗಳೂರು ಹತ್ತಿರದ ಸಂಪರ್ಕ ಕೊಂಡಿಯಾಗಿದೆ. ಇದೇ ಕಾರಣಕ್ಕೆ ಅನೇಕ ಕೇರಳಿಗರು ಮಂಗಳೂರಿನ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಇದೀಗ ಎಂಐಒ ಕೇರಳಿಗರಿಗೂ ವಿಶೇಷ ರಿಯಾಯಿತಿ ನೀಡುತ್ತಿದ್ದು, ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು.

ದೇಶ, ವಿದೇಶದ ಮಂದಿ ಚಿಕಿತ್ಸೆ
ಪಡೆಯಲು ಮಂಗಳೂರು ನಗರವನ್ನುಆಯ್ಕೆ ಮಾಡುತ್ತಿದ್ದಾರೆ. ಇಲ್ಲಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಂಗಳೂರನ್ನು ಹೆಲ್ತ್‌ ಟೂರಿಸಂ ಆಗಿ ಮಾರ್ಪಾಡು ಮಾಡಲಾಗುವುದು. ಈ ನಿಟ್ಟಿನಲ್ಲಿ ವೈದ್ಯರು ಮತ್ತು ಸರಕಾರದ ಅಧಿಕಾರಗಳ ಜತೆ ಚರ್ಚಿಸುತ್ತೇನೆ ಎಂದರು.

ಹಿರಿಯ ಕ್ಯಾನ್ಸರ್‌ ತಜ್ಞ, ಆಸ್ಪತ್ರೆಯನಿರ್ದೇಶಕ ಡಾ| ಸುರೇಶ್‌ ರಾವ್‌ಮಾತನಾಡಿ, ಈ ಹಿಂದೆ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ನಾನು ಕ್ಯಾನ್ಸರ್‌ತಜ್ಞನಾಗಿ ಕೆಲಸ ನಿರ್ವಹಿಸುತ್ತಿರುವಾಗ ವರ್ಷಕ್ಕೆ 700 ಮಂದಿ ಕ್ಯಾನ್ಸರ್‌ ರೋಗಿ
ಗಳಿಗೆ ಚಿಕಿತ್ಸೆ ನೀಡುತ್ತಿದ್ದೆ. ಎಂಐಒಗೆ ಬಂದ ಬಳಿಕ ವರ್ಷಕ್ಕೆ ಸುಮಾರು 1,000 ಮಂದಿಗೆ ಚಿಕಿತ್ಸೆ ನೀಡುತ್ತಿದ್ದೇನೆ ಎಂದರು.

ಯೇನಪೊಯ ವಿ.ವಿ. ಉಪಕುಲಪತಿ, ಹಿರಿಯ ಕ್ಯಾನ್ಸರ್‌ ಚಿಕಿತ್ಸಾ ತಜ್ಞ ಡಾ| ವಿಜಯ ಕುಮಾರ್‌ ಮಾತನಾಡಿ, ಕ್ಯಾನ್ಸರ್‌ ಮಾರಕ ರೋಗವಲ್ಲ. ಪ್ರಾರಂಭದ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು ಎಂದು ಹೇಳಿದರು.

Advertisement

ಎಂಐಒ ಆರೋಗ್ಯ ಯೋಜನೆಯಬಗ್ಗೆ ಹೊಸ ಯೋಜನೆಗಳು/ಪ್ರಕ್ರಿಯೆಗಳ ನಿರ್ದೇಶಕ ಡಾ| ಜಲಾಲುದ್ದೀನ್‌ ಅಕºರ್‌ ಕೆ.ಸಿ. ಮಾತನಾಡಿದರು. ಹಿರಿಯ ಕ್ಯಾನ್ಸರ್‌ ತಜ್ಞ ಡಾ| ಎಂ.ಎಸ್‌. ವಿದ್ಯಾಸಾಗರ್‌ ಆರೋಗ್ಯ ಯೋಜನೆಯ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಶಿಕ್ಷಣ ನಿರ್ದೇಶಕ ಡಾ| ಕೃಷ್ಣ ಪ್ರಸಾದ್‌ ಮಾತನಾಡಿ, ಎಂಐಒ ಕ್ಯಾನ್ಸರ್‌ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯು ರೋಗಿ ಕೇಂದ್ರಿತ ಆರೈಕೆ ವಿಧಾನ, ತ್ವರಿತ ಚಿಕಿತ್ಸೆ, ರೋಗಿಯ ರಕ್ಷಣೆ, ನೂತನ ಕ್ಯಾನ್ಸರ್‌ ಚಿಕಿತ್ಸಾ ವಿಧಾನಗಳ ನಿರಂತರ ಬಳಕೆಗೆ ಆದ್ಯತೆ ನೀಡುತ್ತದೆ ಎಂದು ತಿಳಿಸಿದರು.

ಎಂಐಒ ಆಸ್ಪತ್ರೆಯ ಹೊಸ ಲಾಂಛನ
ದೊಂದಿಗೆ ಕೈಪಿಡಿ ಬಿಡುಗಡೆಯನ್ನು ಅಧ್ಯಕ್ಷ ಅನಂತಕೃಷ್ಣ ಬಿಡುಗಡೆಗೊಳಿಸಿದರು. ಎಪಿಎಲ್‌ ಪಡಿತರ ಚೀಟಿದಾರರಿಗೆ ಎಂಐಒ ಆರೋಗ್ಯ ಯೋಜನೆಯನ್ನು ಡಾ| ಕೃಷ್ಣಪ್ರಸಾದ್‌ ಮತ್ತು ಡಾ| ವೈ. ಸನತ್‌ ಹೆಗ್ಡೆ, ಎಂಐಒ ಕೇರಳ ಆರೋಗ್ಯ ಯೋಜನೆಯನ್ನು ಡಾ| ಜಲಾಲುದ್ದೀನ್‌ ಅಕºರ್‌ ಕೆ.ಸಿ. ಮತ್ತು ಡಾ| ವಿಜಯ ಕುಮಾರ್‌ ಬಿಡುಗಡೆ ಮಾಡಿದರು.

25 ಸಾವಿರ ರೋಗಿಗಳಿಗೆ ಕ್ಯಾನ್ಸರ್‌ ವಿಕಿರಣ ಚಿಕಿತ್ಸೆ ಪೂರ್ಣಗೊಳಿಸಿದ ಸಾಧನೆಗಾಗಿ ಡಾ| ಡಿ. ಸುರೇಶ್‌ ರಾವ್‌ ಅವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು.ಡಾ| ಸನತ್‌ ಹೆಗ್ಡೆ ಸ್ವಾಗತಿಸಿ, ಡಾ| ಎಂ.ಎಸ್‌. ಬಾಳಿಗ ವಂದಿಸಿ, ರಿಹಾ ಡಿ’ಸೋಜಾ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next