Advertisement

ಬಿಜೆಪಿಯಲ್ಲಿ ಮೂಲ, ವಲಸೆ ಎಂಬುದಿಲ್ಲ

03:55 PM Jun 18, 2021 | Team Udayavani |

ಕೋಲಾರ: ನಮ್ಮಲ್ಲಿ ಮೂಲ, ವಲಸೆ ಎಂಬುದಿಲ್ಲ, ಎಲ್ಲರೂ ಬಿಜೆಪಿಯವರು. ಪಕ್ಷದ ಪರವಾಗಿಯೇ ಇರುತ್ತೇವೆ ಹೊರತು, ವ್ಯಕ್ತಿಯ ಪರ ಅಲ್ಲ. ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ರಾಜ್ಯ ಮೀನುಗಾರಿಕಾ ಸಚಿವ ಎಸ್‌. ಅಂಗಾರ ತಿಳಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ರಾಜಕಾರಣ ಸಂಬಂಧ ನಾನು ಏನೂ ಹೇಳುವುದಿಲ್ಲ. ಏನೇ ಸಮಸ್ಯೆಯಿದ್ದರೂ ಪಕ್ಷದ ಹೈಕಮಾಂಡ್‌ ಅಗತ್ಯ ಕ್ರಮಕೈಗೊಳ್ಳಲಿದೆ. ಆ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ನಾನು ಪಕ್ಷದ ಪರವಾಗಿ ಇದ್ದೇನೆ. ವ್ಯಕ್ತಿ ಪರವಾಗಿ ಅಲ್ಲ. ಪಕ್ಷದ ತೀರ್ಮಾನದಂತೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳಿದರು. ನಾನು ಮೂಲ ಬಿಜೆಪಿಯವನು. ನಮ್ಮಲ್ಲಿ ವಲಸಿಗರು, ಮೂಲ ಎನ್ನುವ ಪ್ರಶ್ನೆ ಇಲ್ಲ. ಬಿಜೆಪಿಯಲ್ಲಿ ಇರುವವರೆಲ್ಲರೂ ಒಂದೇ ಎಂದ ಅವರು, ಯಡಿಯೂರಪ್ಪ ಬದಲಾವಣೆ ಸಂಬಂಧ ಎಚ್‌.ವಿಶ್ವನಾಥ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅದು ಅವರ ಅಭಿಪ್ರಾಯ ಎಂದು ಪ್ರತಿಕ್ರಿಯಿಸಿದರು.

ಮೀನುಮರಿ ಕೇಂದ್ರ ಅಭಿವೃದ್ಧಿಗೆ ಕ್ರಮ: ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಮೀನುಮರಿ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಲು ಜಿಲ್ಲೆಗೆ ಆಗಮಿಸಿದ್ದೇನೆ. ಅದು ಪ್ರವಾಸಿತಾಣವೂ ಆಗಿರುವುದರಿಂದ ಮುಂದೆ ಮೀನುಗಾರಿಕೆ, ಪ್ರವಾಸೋದ್ಯಮ ಇಲಾಖೆ ಒಟ್ಟುಗೂಡಿ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಾಗುವುದು. ಇಂತಹ ತಾಣಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆನ್ನುವ ಬಗ್ಗೆ ಬೆಂಗಳೂರಿನಲ್ಲಿ ಶುಕ್ರವಾರ ಸಭೆ ಕರೆದಿದ್ದು, ಆ ಸಲುವಾಗಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಕೋಲಾರ ಜಿಲ್ಲೆಯ ಹಲವು ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿದಿದೆ. ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆ ಇದೆ. ಪ್ರಾಧನ ಮಂತ್ರಿ ಮತ್ಸé ಸಂರಕ್ಷಣಾ ಯೋಜನೆಯಡಿ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಸಂಸದ ಎಸ್‌.ಮುನಿಸ್ವಾಮಿ, ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ, ಡೀಸಿ ಡಾ.ಆರ್‌.ಸೆಲ್ವಮಣಿ, ಎಸಿ ಸೋಮಶೇಖರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next