Advertisement

ಒಕ್ಕಲಿಗ ಸಮುದಾಯಕ್ಕೆ ನಿಗಮ ರಚನೆಗೆ ಸರಕಾರ ಬದ್ದ: ಸಚಿವ ಆರ್. ಅಶೋಕ್

09:58 PM Feb 22, 2021 | Team Udayavani |

ಬೆಂಗಳೂರು : ಒಕ್ಕಲಿಗ ಸಮುದಾಯಕ್ಕೆ ಪ್ರಾಧಿಕಾರ ರಚನೆ ಮಾಡಲು ಸರಕಾರ ಬದ್ಧವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ.

Advertisement

ಇಂದು (ಫೆ.22) ಬೆಂಗಳೂರಿನ ಆದಿಚುಂಚನಗಿರಿ ಮಠದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ  ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಪಟ್ಟ ನಾಯಕನ ಹಳ್ಳಿ ಸ್ಫಟಿಕ ಪುರಿ ಮಠಾಧೀಶ ಶ್ರೀ ನಂಜಾವಧೂತ ಸ್ವಾಮೀಜಿ ಮತ್ತು ಇತರ ಮುಖಂಡರಿಂದ ಮನವಿ ಸ್ವೀಕರಿಸಿದ ನಂತರ ಸಚಿವರು ಮಾತನಾಡಿದರು.

ಒಕ್ಕಲಿಗರ ಮೀಸಲಾತಿ ಹೆಚ್ಚಳ, ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಒಕ್ಕಲಿಗ ಸಮುದಾಯದ ಎಲ್ಲ 115 ಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಒಕ್ಕಲಿಗ ಸಮುದಾಯ ಸರಕಾರಕ್ಕೆ ಮನವಿ ಸಲ್ಲಿಸಿದೆ. ಈ ಎಲ್ಲ ಬೇಡಿಕೆಗಳನ್ನು ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಒಕ್ಕಲಿಗ ಅಭಿವೃದ್ಧಿ ನಿಗಮ ರಚಿಸಿ 1000 ಕೋಟಿ ರೂಪಾಯಿ ಅನುದಾನ ನೀಡಲು ಬೇಡಿಕೆ ಸಲ್ಲಿಸಲಾಗಿದೆ. ಈಗಾಗಲೇ ಒಕ್ಕಲಿಗ ಸಮುದಾಯಕ್ಕೆ ನಿಗಮ ರಚನೆ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗಿದೆ ಎಂದರು.

ಒಕ್ಕಲಿಗ ಸಮುದಾಯದಲ್ಲಿರುವ ಎಲ್ಲ 115 ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಮನವಿ ಸಲ್ಲಿಸಲಾಗಿದೆ. ಈ ಬೇಡಿಕೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

Advertisement

ಒಕ್ಕಲಿಗ ಸಮುದಾಯಕ್ಕೇ 3 ಎ ಅಡಿಯಲ್ಲಿ ಶೇಕಡಾ 7ರಷ್ಟು ಮೀಸಲಾತಿ ಸಿಗುತ್ತಿದೆ. ಈ ಪ್ರವರ್ಗಕ್ಕೆ  ಒಕ್ಕಲಿಗ ರೈತರ ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆ. ಅಲ್ಲದೆ ಒಕ್ಕಲಿಗ ಜನ ಸಂಖ್ಯೆ ಶೇಕಡಾ 17 ರಷ್ಠಿದ್ದು  ಮೀಸಲಾತಿಯನ್ನು ಶೇಕಡಾ ಹತ್ತರಷ್ಟು ಹೆಚ್ಚಳ ಮಾಡಲು ಬೇಡಿಕೆ ಸಲ್ಲಿಸಲಾಗಿದೆ. ಹಿಂದಿನ ಸರಕಾರ ನಡೆಸಿದ್ದ ಜಾತಿ ಸಮೀಕ್ಷೆಯನ್ನು ಒಪ್ಪಿಕೊಳ್ಳಬಾರದು ಎಂದೂ ಮನವಿ ಮಾಡಲಾಗಿದೆ. ಈ ಎಲ್ಲ ಮನವಿ ಕುರಿತು ಮುಖ್ಯಮಂತ್ರಿ ಮತ್ತು ಸರಕಾರದ ಜತೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಶೋಕ್ ಭರವಸೆ ನೀಡಿದರು.

ಮನವಿ ಸಲ್ಲಿಸಿ ಮಾತನಾಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಒಕ್ಕಲಿಗ ಸಮುದಾಯಕ್ಕೆ ತ್ವರಿತವಾಗಿ ಪ್ರಾಧಿಕಾರ ರಚನೆ ಮಾಡಲೇಬೇಕು, ಸಮುದಾಯದ ಎಲ್ಲ 115 ಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಸರಕಾರ, ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು. ಸದ್ಯ ಕೆಲವೇ ಪಂಗಡಗಳನ್ನು ಸೇರ್ಪಡೆ ಮಾಡಲಾಗಿದೆ. ಇದರಿಂದ ಎಲ್ಲ 115 ಉಪ ಜಾತಿಗಳಿಗೆ ನ್ಯಾಯ ಸಿಗುತ್ತಿಲ್ಲ ಎಂದರು.

ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಗ್ರಾಮೀಣ ಒಕ್ಕಲಿಗ ಸಮುದಾಯಗಳನ್ನು ಮಾತ್ರ ಸೇರ್ಪಡೆ ಮಾಡಲಾಗಿದೆ. ನಗರ ಪ್ರದೇಶಗಳ ಲ್ಲಿಯೂ ಬಡವರು ಇದ್ದಾರೆ. ಉದಾಹರಣೆಗೆ ಬೆಂಗಳೂರಿನಲ್ಲಿ ಆರ್ಥಿಕ ಚಟುವಟಿಕೆಗಳಿಗಾಗಿ ಭೂಮಿ ಕಳೆದು ಕೊಂಡ ಲಕ್ಷಾಂತರ ಒಕ್ಕಲಿಗರು ಇಂದು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೂ ನ್ಯಾಯ ಒದಗಿಸಬೇಕು. ಆದ್ದರಿಂದ ನಗರ ಪ್ರದೇಶದ ಒಕ್ಕಲಿಗರನ್ನು ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು. ಹಿಂದಿನ ಸರಕಾರ ನಡೆಸಿರುವ ಜಾತಿ ಸಮೀಕ್ಷೆ ಯಾವುದೇ ಕಾರಣಕ್ಕೂ ಸರಕಾರ ಒಪ್ಪಿಕೊಳ್ಳಬಾರದು. ಈ ವರದಿ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದರು.

ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿ ಶೀಘ್ರವೇ ಪ್ರಾಧಿಕಾರ ರಚಿಸಿ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು. ಒಕ್ಕಲಿಗರ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಸರಕಾರ ಪೂರಕವಾಗಿ ಸ್ಪಂದಿಸಬೇಕು. ಕೃಷಿಯನ್ನೇ ನಂಬಿಕೊಂಡ ಒಕ್ಕಲಿಗ ಇಂದು ಅತಂತ್ರನಾಗಿದ್ದಾನೆ. ಆದ್ದರಿಂದ ಜನಸಂಖ್ಯೆ ಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಮತ್ತು ನಿಗಮ ರಚನೆ ಆಗಲೇ ಬೇಕು ಎಂದು ಒತ್ತಾಯಿಸಿದರು.

ಸರಕಾರದ ಪರವಾಗಿ ಉಪ ಮುಖ್ಯಮಂತ್ರಿ ಡಾಕ್ಟರ್ ಸಿ.ಎನ್. ಅಶ್ವತ್ಥ ನಾರಾಯಣ, ಸಚಿವರಾದ ಅಶೋಕ್ ಮತ್ತು ನಾರಾಯಣ ಗೌಡ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎಸ್.ಆರ್. ವಿಶ್ವನಾಥ್, ಸತೀಶ್ ರೆಡ್ಡಿ, ಅ.ದೇವೇಗೌಡ, ಪುಟ್ಟಣ್ಣ ಮಸಾಲೆ ಜಯರಾಂ, ರಾಜೇಶ್ ಗೌಡ, ಚಿದಾನಂದ,  ವೈ. ಎ. ನಾರಾಯಣ  ಸ್ವಾಮಿ ವೈಕೆ ಪುಟ್ಟಸ್ವಾಮಿಗೌಡ ನ್ಯಾಯಮೂರ್ತಿಗಳಾದ ಜೆವೈಕೆ ಪುಟ್ಟಸ್ವಾಮಿಗೌಡ ನ್ಯಾಯಮೂರ್ತಿಗಳಾದ ಎ ಜೆ ಸದಾಶಿವ ಚಂದ್ರಶೇಖರಯ್ಯ ,ಟಿ ವೆಂಕಟೇಶ್, ಶಂಕರಲಿಂಗೇಗೌಡ, ಅಮರನಾರಾಯಣ್, ತಿಮ್ಮೇಗೌಡ, ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶ್ರೀಗಳು ಸಮಾಜ ಹಿರಿಯ ಮುಖಂಡರು ಮತ್ತು ನಿವೃತ್ತ ಅಧಿಕಾರಿ ಗಳೊಂದಿಗೆ ಸಮಾಜದ ಬೇಡಿಕೆಗಳನ್ನು ಕುರಿತು ಸಮಾಲೋಚನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next