ಮಹಾನಗರ: ರಾಜ್ಯದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದು, ನಗರಕ್ಕೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿದರು.
ತುಂಬೆ ಅಣೆಕಟ್ಟಿನಲ್ಲಿ ಪ್ರಸ್ತುತ ನೀರಿನ ಒಳಹರಿವು ಇರುವುದಾಗಿ ಪಾಲಿಕೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಅಗತ್ಯವಿದ್ದರೆ ಮಂಗಳೂರಿಗೆ ಕುಡಿಯುವ ನೀರಿನ ರೇಷನಿಂಗ್ ಆರಂಭಿಸುವ ಬಗ್ಗೆಯೂ ಸಚಿವರು ಸೂಚಿಸಿದರು.
ತುಂಬೆ ವೆಂಟೆಡ್ ಡ್ಯಾಂನ ತಡೆಗೋಡೆ ಕುಸಿದು ಅಪಾಯ ಸಂಭವಿಸಿದ ಬಗ್ಗೆ ಹಾಗೂ ಅದರ ದುರಸ್ತಿಗೆ ಅನುದಾನ ನೀಡುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಬೆಂಗಳೂರಿನ ಅಧಿಕಾರಿಗಳಿಗೆ ಕರೆಮಾಡಿದ ಸಚಿವರು ಪ್ರಸ್ತಾವನೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಮಾಜಿ ಮೇಯರ್ ಭಾಸ್ಕರ ಕೆ., ಜಂಟಿ ಆಯುಕ್ತ ಡಾ| ಸಂತೋಷ್ ಕುಮಾರ್, ಹಿರಿಯ ಅಧಿಕಾರಿಗಳಾದ ಗಣೇಶ್, ನರೇಶ್ ಶೆಣೈ ಉಪಸ್ಥಿತರಿದ್ದರು.