Advertisement

ಉದ್ಯಮಿಗಳ ತೆರಿಗೆ ಶೋಷಣೆಗೆ ಕೊನೆ, ನವೋದ್ಯಮಿಗಳಿಗೆ ಗರಿಷ್ಠ ವಿನಾಯಿತಿ : ಮುರುಗೇಶ್‌ ನಿರಾಣಿ

10:40 PM May 12, 2022 | Team Udayavani |

ಮಂಗಳೂರು: ಉದ್ಯಮಿಗಳು ಪ್ರಸ್ತುತ ಎದುರಿಸುತ್ತಿರುವ ತೆರಿಗೆ ಶೋಷಣೆ ಯನ್ನು ತಪ್ಪಿಸುತ್ತೇವೆ, ನವೋದ್ಯಮಿಗಳಿಗೆ ಗರಿಷ್ಠ ಸಬ್ಸಿಡಿ ನೀಡುವ ಮೂಲಕ ರಾಜ್ಯದಲ್ಲಿ ಉದ್ಯೋಗಾವಕಾಶ ವಿಸ್ತರಿಸುವುದಾಗಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಾರೆ.

Advertisement

ನಗರದಲ್ಲಿ ಗುರುವಾರ ಫಿಕ್ಕಿ ಮತ್ತು ಕರ್ನಾಟಕ ಮೆರಿಟೈಂ ಮಂಡಳಿಯ ವತಿಯಿಂದ ಹಮ್ಮಿಕೊಳ್ಳಲಾದ ಕರ್ನಾಟಕ ಕರಾವಳಿ ವಾಣಿಜ್ಯ ಮತ್ತು ಮೆರಿಟೈಂ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಕಡೆಗಳಲ್ಲಿ ಉದ್ಯಮಿಗಳಿಗೆ ಬೇಕಾದ ನಿರಾಕ್ಷೇಪಣ ಪತ್ರ ಪಡೆಯಲು ಸ್ಥಳೀಯ ಆಡಳಿತ ಸಂಸ್ಥೆಗಳಿಂದ ತೆರಿಗೆ ಶೋಷಣೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದರು.

ತೆರಿಗೆ ಮೊತ್ತ 1 ಕೋಟಿ ರೂ. ವರೆಗೆ, 1ರಿಂದ 10 ಕೋಟಿ, 10ರಿಂದ 100 ಕೋಟಿ ಮತ್ತು 100 ಕೋಟಿ ರೂ. ಮೇಲ್ಪಟ್ಟು ಹೀಗೆ ವಿವಿಧ ಸ್ಲ್ಯಾಬ್‌ಗಳಲ್ಲಿ ನೇರವಾಗಿ ಆರ್‌ಟಿಜಿಎಸ್‌ ಮೂಲಕ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಸಮಸ್ಯೆ ಬಗೆಹರಿಯಲಿದೆ. ಜತೆಗೆ ಡೀಮ್ಡ್ ಎನ್‌ಒಸಿ ಬೇಡಿಕೆಯನ್ನೂ ಈಡೇರಿಸಲಾಗುವುದು. ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಈ ಮೊದಲು ವಾಣಿಜ್ಯ ಮತು ಗೃಹ ಎಂದು ವಿಭಾಗವಿತ್ತು. ಕೈಗಾರಿಕೆಗಳಿಗೆ ಪ್ರತ್ಯೇಕ ತೆರಿಗೆ ವ್ಯವಸ್ಥೆ ಜಾರಿಗೆ ತರಲಾಗಿದ್ದು, ವಾಣಿಜ್ಯ ತೆರಿಗೆಗಿಂತ ಇದು ಶೇ. 30 ಕಡಿಮೆಯಿದೆ ಎಂದು ತಿಳಿಸಿದರು.

ಗರಿಷ್ಠ ಹೂಡಿಕೆ ಆಕರ್ಷಣೆ

ಎರಡು ಎಕ್ರೆ ವರೆಗಿನ ಜಮೀನಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಾತ್ರ ವಲ್ಲದೆ ಆರ್ಥಿಕವಾಗಿ ಹಿಂದುಳಿದ ನವೋದ್ಯಮಿಗಳಿಗೆ ಶೇ. 75ರಷ್ಟು ಸಬ್ಸಿಡಿ ನೀಡಲಾಗುವುದು ಎಂದರು. ರಾಜ್ಯವು ಶೇ. 42ರಷ್ಟು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಮೂಲಕ ದೇಶದಲ್ಲೇ ಮುಂಚೂಣಿ ಸ್ಥಾನ ಪಡೆದಿದೆ. ಐಟಿ, ಬಿಟಿ ಸಹಿತ ಹಲವು ಕ್ಷೇತ್ರಗಳಲ್ಲಿ ಮೊದಲ ಸ್ಥಾನಿಯಾಗಿದೆ ಎಂದರು.

Advertisement

ಮಂಗಳೂರಿನಲ್ಲೂ ಸಮಾವೇಶ :

ಉದ್ಯೋಗಾವಕಾಶ ಹೆಚ್ಚಿಸಲು ಮಂಗಳೂರಿನಲ್ಲಿಯೇ ಎಲ್ಲ ಅನಿವಾಸಿ ಮಂಗಳೂರು ಉದ್ಯಮಿಗಳ ಸಮಾವೇಶ ಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಉದ್ಯಮ ಶೀಲತೆ ವಿಸ್ತರಿಸಲು ಅದಕ್ಕಾಗಿ 2 ಸಾವಿರ ಎಕರೆ ಭೂಮಿಯನ್ನು ಮೂಡುಬಿದಿರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ತರಬೇತಿ ಸಂಸ್ಥೆ:

ಕೊಚ್ಚಿಯ ಇಂಡಿಯನ್‌ ಮೆರಿಟೈಮ್‌ ವಿ.ವಿ. ಸಹಯೋಗದಲ್ಲಿ ತರಬೇತಿ ಸಂಸ್ಥೆ ಯೊಂದನ್ನು ಕರಾವಳಿಯಲ್ಲಿ ಆರಂಭಿಸಲಿದೆ. ಮಂಗಳೂರು – ಲಕ್ಷದ್ವೀಪದ ನಡುವಿನ ಹಿಂದಿನ ಐತಿಹಾಸಿಕ ಸಂಬಂಧವನ್ನು ಮರುಸ್ಥಾಪಿಸಲು ಬರ್ತ್‌ ನಿರ್ಮಿಸಲಾಗುವುದು ಎಂದು ಕರ್ನಾಟಕ ಮೆರಿಟೈಂ ಮಂಡಳಿ ಸಿಇಒ ಕಪಿಲ್‌ ಮೋಹನ್‌ ತಿಳಿಸಿದರು.

ಎನ್‌ಎಂಪಿಎ ಅಧ್ಯಕ್ಷ ಎ.ವಿ. ರಮಣ, ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಗೌರವ್‌ ಗುಪ್ತಾ, ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್‌, ಕೆಸಿಸಿಐ ಅಧ್ಯಕ್ಷ ಶಶಿಧರ ಪೈ ಮಾರೂರು ಉಪಸ್ಥಿತರಿದ್ದರು.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ ಕರ್ನಾಟಕ ಅಧ್ಯಕ್ಷ ಉಲ್ಲಾಸ್‌ ಕಾಮತ್‌ ಸ್ವಾಗತಿಸಿದರು. ಸೌಜನ್ಯಾ ಹೆಗ್ಡೆ ನಿರೂಪಿಸಿದರು.

ಉದ್ಯಮಿಗಳಿಗೆ ಗೌರವ :

ಗಮನಾರ್ಹ ಸಾಧನೆ ತೋರಿದ ಐಡಿಯಲ್‌ ಐಸ್‌ಕ್ರೀಂನ ಮುಕುಂದ ಕಾಮತ್‌, ಪಾಂಚಜನ್ಯ ಕ್ರೂಸ್‌ನ ಸುಜಾತಾ ಕಾಮತ್‌, ಶ್ರೀದೇವಿ ಕ್ಯಾಶ್ಯೂಸ್‌ನ ಕೃಷ್ಣಾನಂದ ಕಾಮತ್‌, ಮೆಡಾರ್ಗಾನಿಕ್ಸ್‌ನ ಪ್ರಮೋದ್‌ ಹೆಗ್ಡೆ, ದೇವಗಿರಿ ಚಹಾ ಸಂಸ್ಥೆಯ ಉಷಾ ಶೆಣೈ ಅವರನ್ನು ಸಚಿವ ಮುರುಗೇಶ್‌ ನಿರಾಣಿ ಗೌರವಿಸಿದರು.

ಮಂಗಳೂರಿಗೆ ರಸಗೊಬ್ಬರ ಕಾರ್ಖಾನೆ :

ಮಂಗಳೂರಿನಲ್ಲಿ ರಸಗೊಬ್ಬರ ಕಾರ್ಖಾನೆಯೊಂದು ಸ್ಥಾಪನೆ ಯಾಗಲಿದ್ದು, ಇದರಿಂದ 10 ಸಾವಿರ ಮಂದಿಗೆ ಉದ್ಯೋಗಾವಕಾಶ ಸಿಗಲಿದೆ. ಇದಕ್ಕೆ 7,500 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು ಮಂಗಳೂರಿನಲ್ಲಿ ಲಭ್ಯವಿರುವ ಸಿಎನ್‌ಜಿ, ನೀರು ಪೂರಕವೆನಿಸಿದೆ. ನವೆಂಬರ್‌ 2ರಿಂದ 4ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮೊದಲೇ ಇದು ಸ್ಥಾಪನೆಯಾಗಲಿದೆ. ಇದೊಂದು ರೆಡಿಮೇಡ್‌ ಸ್ಥಾವರವಾಗಿದ್ದು, ಬೇರೆ ಕಡೆಯಿಂದ ಇಲ್ಲಿಗೆ ಸ್ಥಳಾಂತರಗೊಳ್ಳಲಿದೆ ಎಂದು ವಿವರಿಸಿದರು.

ಪ್ರವಾಸಿ ಬಂದರು ನಿರ್ಮಾಣ: ಸಿಎಂಬೊಮ್ಮಾಯಿ :

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀಡಿಯೋ ಸಂದೇಶ ನೀಡಿ, 8 ಸಾವಿರ ಕೋಟಿ ರೂ. ಮೊತ್ತದ ಸಾಗರಮಾಲಾ ಯೋಜನೆಯಡಿ ರಾಜ್ಯದ ಆವಶ್ಯಕತೆಗಳಲ್ಲಿ ಒಂದಾದ ಬಂದರು ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಆ ಮೂಲಕ ಗುಜರಾತ್‌,

ಮಹಾರಾಷ್ಟ್ರ, ಕೇರಳ, ಆಂಧ್ರ, ತಮಿಳುನಾಡು ರಾಜ್ಯಗಳ ಪ್ರವಾಸಿಗರಿಗೆ ಆಕರ್ಷಿಸ ಲಾಗುವುದು. ಪಿಪಿಪಿ ಮಾದರಿಯಲ್ಲಿ ಇದನ್ನು ಜಾರಿಗೊಳಿಸಲಾಗುವುದು ಎಂದರು.

ಬಳಕೆಯಾಗದ ನಿವೇಶನ ಹಿಂದಕ್ಕೆ : ಸಚಿವ ನಿರಾಣಿ :

ಮಂಗಳೂರು: ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳ ಮಂಜೂರಾಗಿದ್ದರೂ ಉದ್ಯಮ ಘಟಕ ಸ್ಥಾಪನೆಯಾಗದಿರುವ ನಿವೇಶನಗಳ ಸಮೀಕ್ಷೆ ನಡೆಯುತ್ತಿದೆ. ಬಳಕೆಯಾಗದಿರುವ ನಿವೇಶನಗಳನ್ನು ಹಿಂದಕ್ಕೆ ಪಡೆಯುವುದಾಗಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ| ಮುರುಗೇಶ್‌ ನಿರಾಣಿ ಹೇಳಿದರು.

ರಾಜ್ಯದಲ್ಲಿ 188 ಕೈಗಾರಿಕಾ ಪ್ರದೇಶಗಳಲ್ಲಿ ಎರಡು ತಿಂಗಳಿನಿಂದ ಖಾಲಿ ಇರುವ ನಿವೇಶನಗಳ ಸಮೀಕ್ಷೆ ನಡೆಯುತ್ತಿದ್ದು ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಖಾಲಿ ನಿವೇಶನಗಳನ್ನು ಹಿಂಪಡೆದು ಇತರರಿಗೆ ಹಂಚಲಾಗುವುದು ಎಂದರು.

50,000 ಎಕ್ರೆ ಭೂಮಿ ಸಂಗ್ರಹ:

ರೈತರ ಜತೆ ಚರ್ಚಿಸಿ ಕೃಷಿಗೆ ಯೋಗ್ಯವಲ್ಲದ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ಸುಮಾರು 50 ಸಾವಿರ ಎಕರೆ ಭೂಮಿಯನ್ನು ಸಂಗ್ರಹಿಸಿಡಲು ನಿರ್ಧರಿಸಲಾಗಿದೆ. ಇದರಲ್ಲಿ ಬೆಂಗಳೂರಿನಲ್ಲಿ 20,000 ಎಕ್ರೆ ಹಾಗೂ ಇತರ ಜಿಲ್ಲೆಗಳಲ್ಲಿ 1ರಿಂದ 2 ಸಾವಿರ ಎಕ್ರೆ ಭೂಮಿಯನ್ನು ಸಂಗ್ರಹಿಸಲಾಗುವುದು. ರಾಜ್ಯದಲ್ಲಿ ಪ್ರಸ್ತುತ ಕೈಗಾರಿಕೆಗಳಿಗೆ ಭೂಮಿಯನ್ನು 99 ವರ್ಷಗಳಿಗೆ ಲೀಸ್‌ಗೆ ಕೊಡಲಾ ಗುತ್ತದೆ. ಇದರಿಂದ ಕೈಗಾರಿಕೆಗಳಿಗೆ ಸಾಲ ಸೌಲಭ್ಯ, ವಿಸ್ತರಣೆ ಸೇರಿ ದಂತೆ ಕೆಲವು ಬೆಳವಣಿಗೆಗಳಿಗೆ ತೊಡಕಾಗುತ್ತಿರುವ ಕಾರಣ ಇದನ್ನು ಬದಲಾಯಿಸಿ ಕೈಗಾರಿಕೆಗಳ ಪ್ರಗತಿ, ಕಾರ್ಯವೈಖರಿಯನ್ನು ಪರಿಶೀಲಿಸಿ ನಿರ್ದಿಷ್ಟ ವರ್ಷಗಳ ಮಿತಿ ನಿಗದಿಪಡಿಸಿ ಭೂಮಿಯನ್ನು ಕೈಗಾರಿಕೆಗಳ ಹೆಸರಿಗೆ ವರ್ಗಾಯಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಆನೇಕ ಬೃಹತ್‌ ಉದ್ದಿಮೆಗಳು ವಿಸ್ತರಣೆ ಹಾಗೂ ಹೊಸದಾಗಿ ಹೂಡಿಕೆಗೆ ಮುಂದಾಗಿವೆ. ಬಿಡದಿ, ಬೆಳಗಾವಿ, ಧಾರವಾಡ, ಕಲಬುರ್ಗಿ, ದೇವನಹಳ್ಳಿ, ಮೈಸೂ ರು ಸೇರಿದಂತೆ ರಾಜ್ಯದ ವಿವಿಧೆಡೆ ಉದ್ದಿಮೆಗಳಿಂದ ಸಾವಿರಾರು ಕೋ.ರೂ. ಹೂಡಿಕೆ ಸಂಬಂಧಿಸಿ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿ ತ್ವದಲ್ಲಿ ವಿಮಾನ ನಿಲ್ದಾಣಗಳ ಸ್ಥಾಪನೆ, ವಾಣಿಜ್ಯ ಬಂದರುಗಳ ಅಭಿವೃದ್ಧಿಗೆ, ರಸ್ತೆ ಸೌಲಭ್ಯಗಳ ಉನ್ನತೀಕರಣಕ್ಕೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆ ಹಾಗೂ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಇಲಾಖೆ ಈಗಾಗಲೇ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗೆ ಹಿಂದೆ ಮುಖ್ಯಮಂತ್ರಿಯವರ ನೇತೃತ್ವ ದಲ್ಲಿ 65 ದೇಶಗಳ ರಾಯಭಾರಿಗಳ ಸಭೆಯನ್ನು ಆಯೋಜಿಸಿ ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮನದಟ್ಟು ಮಾಡಲಾಗಿದೆ. ದೇಶದಲ್ಲಿ ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು ಶೇ. 42 ಪ್ರಮಾಣವಿದೆ. ಕೇಂದ್ರ ಸರಕಾರದ ಸೆಮಿಕಂಡಕ್ಟರ್‌ ನೀತಿಯನ್ವಯ ಮೈಸೂರಿನಲ್ಲಿ 22,500 ಕೋ.ರೂ. ವೆಚ್ಚದಲ್ಲಿ ಸೆಮಿಕಂಡಕ್ಟರ್‌ ಉದ್ದಿಮೆ ಸ್ಥಾಪನೆಯಾಗಲಿದೆ. ಎಥೆನಾಲ್‌ ಉತ್ಪಾದನೆಯಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ ಎಂದರು.

ಕೈಗಾರಿಕೆಗಳ ಮಾಲಿನ್ಯ ತಡೆ ಗಟ್ಟಲು ಪರಿಸರ ಮಾಲಿನ್ಯ ನಿಯಂ ತ್ರಣ ಮಂಡಳಿ ಕ್ರಮ ಕೈಗೊಂಡಿದೆ ಪ್ರಶ್ನೆಗೆ ಉತ್ತರಿಸಿದರು. ವಿಧಾನಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next