Advertisement

ಸಚಿವ ಮುನೇನಕೊಪ್ಪ ಸ್ವಾಗತ ಪೋಸ್ಟರ್‌ ಹರಿದಿದ್ದು ಯಾರು?

01:14 PM Aug 08, 2021 | Team Udayavani |

ಧಾರವಾಡ: ಜಿಲ್ಲೆಗೆ ನೂತನ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಆಗಮಿಸುತ್ತಿದ್ದಂತೆಯೇ ಬಿಜೆಪಿಯಲ್ಲಿನ ಅಸಮಾಧಾನಗೊಂಡ ಗುಂಪು ಅವರ ಸ್ವಾಗತಕ್ಕೆ ಹಾಕಿದ್ದ ಪೋಸ್ಟರ್‌ಗಳನ್ನೇ ಹರಿದು ಅತೃಪ್ತಿ ಹೊರಹಾಕಿದ್ದಾರೆ.

Advertisement

ನಗರದ ವಿದ್ಯಾಗಿರಿಯಿಂದ ಹಿಡಿದು ಜ್ಯುಬಿಲಿ ವೃತ್ತದ ವರೆಗೂ ಹಾಕಿದ್ದ ಬ್ಯಾನರ್‌ ಮತ್ತು ಬಂಟಿಂಗ್ಸ್‌ಗಳಲ್ಲಿ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಶಾಸಕ ಅಮೃತ ದೇಸಾಯಿ ಅವರ ಫೋಟೊಗಳನ್ನು ಹರಿದು ಹಾಕಲಾಗಿದೆ. ಆದರೆ ಈ ಕೆಲಸ ಮಾಡಿದ್ದು ಯಾರು ಎಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ.

ಅರವಿಂದ ಬೆಲ್ಲದ ಅವರಿಗೆ ಸಿಎಂ ಸ್ಥಾನ ಕೈ ತಪ್ಪಿದ್ದರಿಂದ ಸಾಕಷ್ಟು ನೊಂದುಕೊಂಡಿದ್ದ ಅವರ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಕನಿಷ್ಟ ಪಕ್ಷ ಬೆಲ್ಲದ ಸಚಿವರಾಗಿಯಾದರೂ ಜಿಲ್ಲೆಗೆ ಬರುತ್ತಾರೆ ಎಂಬ ಆಸೆ ಇತ್ತು. ಆದರೆ ಇದೀಗ ಸಚಿವ ಸ್ಥಾನವೂ ಸಿಕ್ಕದೇ ತೀವ್ರ ಆಸಮಾಧಾನಗೊಂಡಿದ್ದಾರೆ. ಇನ್ನೊಂದೆಡೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸ್ವಾಗತಕ್ಕೆ ಹಾಕಿದ್ದ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳಲ್ಲಿಯೂ ಬೆಲ್ಲದ ಅವರ ಭಾವಚಿತ್ರ ಇರಲಿಲ್ಲ. ಅಷ್ಟೇಯಲ್ಲ, ಸ್ವತಃ ಬೆಲ್ಲದ ಕೂಡ ಪಾಟೀಲ ಸ್ವಾಗತಕ್ಕೆ ಬರಲೇ ಇಲ್ಲ.

ಸ್ವಾಗತ ವೈಯಕ್ತಿಕವಾದರೂ ಜಿಲ್ಲೆಯಲ್ಲಿ ಉಂಟಾಗಿರುವ ಅತಿವೃಷ್ಟಿ ಮತ್ತು ಕೋವಿಡ್‌ ಕುರಿತು ಸಚಿವ ಶಂಕರ ಪಾಟೀಲ ಅವರು ನಡೆಸಿದ ತುರ್ತು ಸಭೆಯಿಂದಲೂ ಬೆಲ್ಲದ ಅವರು ಅಂತರ ಕಾಯ್ದುಕೊಂಡು ಸಭೆಗೆ ಗೈರು ಹಾಜರಾಗಿದ್ದರು. ಸದ್ಯಕ್ಕೆ ಬೆಲ್ಲದ ಬೆಂಬಲಿಗರೇ ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾರೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next