Advertisement

ಕಬ್ಬು ಬೆಳೆಗಾರರ ರೇಟ್ ಚಾರ್ಜ್ ಬಗ್ಗೆ ಸಚಿವ ಮುನೇನಕೊಪ್ಪ ಮಹತ್ವದ ಸಭೆ

06:16 PM Nov 10, 2022 | Team Udayavani |

ಬೆಂಗಳೂರು: ಕಬ್ಬು ಇಲಾಖೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಕ್ಕರೆ ನಿಯಂತ್ರಣ ಮಂಡಳಿ, ರೈತ ಹೋರಾಟಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರನ್ನು (ಸರ್ಕಾರಿ ಹಾಗೂ ಖಾಸಗಿ) ಒಟ್ಟುಗೂಡಿಸಿ ಸಕ್ಕರೆ ಸಚಿವರಾದ ಶಂಕರ್ ಪಾಟೀಲ್ ಬಿ. ಮುನೇನಕೊಪ್ಪ ಅವರು ಕಬ್ಬು ಬೆಳೆಗಾರರ ರೇಟ್ ಚಾರ್ಜ್ ಬಗ್ಗೆ ಇಂದು (ನ.10) ವಿಕಾಸಸೌಧದಲ್ಲಿ ಸಭೆ ನಡೆಸಿದರು.

Advertisement

ಕಬ್ಬು ಕಟಾವು ದರ ಹೆಚ್ಚಳ ಬಗ್ಗೆ, ಎಫ್ ಆರ್ ಪಿ ಹೆಚ್ಚಿಸಬೇಕು ಎನ್ನುವ ಬಗ್ಗೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಬಳಿಕ, ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಪ್ರಕಾರ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯು ಕೈಗೊಳ್ಳುವ ನಿರ್ಣಯಗಳಿಗೆ ಬದ್ಧರಾಗಿ ಇರುವುದಾಗಿ ವಿವಿಧ ಸಂಘ, ಕಬ್ಬು ಬೆಳೆಗಾರರು ಒಪ್ಪಿಕೊಂಡಿದ್ದಾರೆ.

ಸಮಿತಿಯು ಸಕ್ಕರೆ ಹಾಗೂ ಸಕ್ಕರೆ ಸಹ ಉತ್ಪನ್ನಗಳ ದರವನ್ನು ಹೆಚ್ಚಿಸಿ, ರೈತರು ಲಾಭವನ್ನು ಹಂಚಿಕೊಳ್ಳಬೇಕು ಎಂಬ ಸಂಬಂಧ ವೈಜ್ಞಾನಿಕ ಅಧ್ಯಯನ ನಡೆಸಿ ಇನ್ನು ಒಂದು ವಾರದೊಳಗೆ ವರದಿ ಸಲ್ಲಿಸಲಿದೆ. ಆ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, 10 ದಿನಗಳೊಳಗಾಗಿ ಒಂದು ನಿರ್ಣಯವನ್ನು ಘೋಷಣೆ ಮಾಡಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು.

ಸರ್ಕಾರ ರೈತರ ಪರವಾಗಿದೆ
ಸಕ್ಕರೆ ಸಚಿವರು ಮಾತನಾಡಿ, “ದೇಶದಲ್ಲಿಯೇ ಕಬ್ಬು ಬೆಳೆಗಾರರಿಗೆ 100% ಪಾವತಿಯನ್ನು ಮಾಡುತ್ತಿರುವ ರಾಜ್ಯ ಕರ್ನಾಟಕ. ರೈತರು ಪಾವತಿ ಸಂಬಂಧವಾಗಿ ರಸ್ತೆಗಿಳಿಯದಂತೆ ಸತತ ಎರಡು ವರ್ಷಗಳಿಂದಲೂ ಸರ್ಕಾರ ಕ್ರಮ ವಹಿಸಿದೆ. ಈಗ ರೈತರು ಕೇಳುತ್ತಿರುವಂತೆ ಎಫ್ ಆರ್ ಪಿ ದರಕ್ಕಿಂತಲೂ ಹೆಚ್ಚು ಮೊತ್ತವನ್ನು ಕೊಡಿಸಲು ಸರ್ಕಾರ ಶ್ರಮಿಸುತ್ತಿದೆ. ಕಾರ್ಖಾನೆ ಮಾಲೀಕರಿಗೂ ತೊಂದರೆಯಾಗದ ರೀತಿಯಲ್ಲಿ ರೈತರಿಗೂ ಹಿತ ಎನಿಸುವಂತೆ ಒಂದು ನಿರ್ಣಯವನ್ನು ಕೈಗೊಳ್ಳಲಾಗುವುದು. ರೈತರು ಸಹಕರಿಸಬೇಕು. ಸರ್ಕಾರ ರೈತರ ಪರವಾಗಿದೆ. ರೈತರ ಪರವಾಗಿಯೇ ನಿರ್ಣಯ ಕೈಗೊಳ್ಳಲಾಗುವುದು. ಕಾದು ನೋಡಿ” ಎಂದು ರೈತರ ಬಳಿ ಮನವಿ ಮಾಡಿದರು.

“20 ತಾರೀಕಿನೊಳಗೆ ರೈತರಿಗೆ ಸಿಹಿ ಸುದ್ದಿ ಬರಲಿದೆ. ಅಲ್ಲದೆ, ಕಬ್ಬು ಬೆಳೆಗಾರರಿಗೆ ಕಾಲ್ ಸೆಂಟರ್ ತೆರೆಯಲಾಗಿದೆ. ರೈತರಿಗೆ ಪಾರದರ್ಶಕ ರೀತಿಯಲ್ಲಿ ಪಾವತಿ ಆಗುತ್ತಿದೆ. ಎಲ್ಲಾ ಕಬ್ಬು ಬೆಳೆಗಾರರ ಪರವಾಗಿ ನಮ್ಮ ನಿರ್ಣಯ ಇರಲಿದೆ. ನಮ್ಮ ಸರ್ಕಾರ ಕಾರ್ಖಾನೆ ಮತ್ತು ರೈತರಿಗೆ ರಕ್ಷಣೆ ಮಾಡುತ್ತಿದೆ. ಸಕ್ಕರೆ ಇಲಾಖೆಯಲ್ಲಿ ಮುಂದಿನ ದಿನದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿವೆ” ಎಂದು ಸಚಿವರು ತಿಳಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next