Advertisement

ಗಣಿಗಾರಿಕೆಯಿಂದ ನಂದಿಗಿರಿಧಾಮಕ್ಕೆ ಧಕ್ಕೆ: ಪರಿಸರ ಪ್ರೇಮಿಗಳ ಆತಂಕ

04:20 PM Sep 02, 2021 | Team Udayavani |

ಚಿಕ್ಕಬಳ್ಳಾಪುರ: ವಿಶ್ವ ವಿಖ್ಯಾತ ಜಿಲ್ಲೆಯ ನಂದಿಬೆಟ್ಟದಲ್ಲಿ ಮಣ್ಣಿನ ಗುಡ್ಡೆ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡು ಪ್ರವಾಸಿಗರು ಪರದಾಡಿದ
ಬೆನ್ನಲ್ಲೇ, ಈಗ, ಗಣಿಗಾರಿಕೆ ವಿರುದ್ಧ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನಂದಿಗಿರಿಧಾಮದಲ್ಲಿ ಮಣ್ಣಿನ ಗುಡ್ಡೆಕುಸಿದಿರುವುದು ಮಳೆಯ ಪ್ರಭಾವದಿಂದ ಅಲ್ಲ. ಅವ್ಯಾಹಿತವಾಗಿ ನಡೆಯುತ್ತಿರುವ ಗಣಿಗಾರಿಕೆಯಿಂದ ಎಂದು ಪರಿಸರ ಪ್ರೇಮಿಗಳಿಂದ ಅಪಸ್ವರ ಎದ್ದಿದೆ.

ಇದೇ ಮೊದಲು ಮಣ್ಣಿನ ಗುಡ್ಡೆ ಕುಸಿತ: ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ವ್ಯಾಪಕವಾಗಿ ಮಳೆ ಸುರಿದ ಪರಿಣಾಮಕೆರೆಕುಂಟೆಗಳು ಮತ್ತುಜಲಾಶಯ ಗಳು ಭರ್ತಿಯಾಗಿದ್ದವು. ಇದೇ ಸಂದರ್ಭದಲ್ಲಿ ವಿಶ್ವವಿಖ್ಯಾತ ಜಿಲ್ಲೆಯ ನಂದಿಗಿರಿಧಾಮದಲ್ಲಿ ಮಣ್ಣಿನ ಗುಡ್ಡೆಕುಸಿದು ಸಂಚಾರ ಸ್ಥಗಿತಗೊಂಡಿತ್ತು. ಜಿಲ್ಲಾಧಿಕಾರಿ ಆರ್‌.ಲತಾ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ತಾತ್ಕಾಲಿಕವಾಗಿ ರಸ್ತೆ ನಿರ್ಮಿಸಿ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಕೆಲಸ ಶುರು ಮಾಡಿದ್ದರು. ಆದರೆ, ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆಯೂ ಕುಸಿದಿದ್ದರಿಂದ ನಂದಿಗಿರಿಧಾಮಕ್ಕೆ ಶಾಶ್ವತವಾಗಿ ರಸ್ತೆ ನಿರ್ಮಾಣ ಆಗುವವರೆಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ.

ನಂದಿಗಿರಿಧಾಮದ ತಪ್ಪಲಿನ ಕಣಿವೆಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ವಿಶ್ವ ವಿಖ್ಯಾತ ಜಿಲ್ಲೆಯ ನಂದಿಗಿರಿಧಾಮದಲ್ಲಿ ಮಣ್ಣಿನ ಗುಡ್ಡೆ ಕುಸಿದಿದೆ. ಸುಮಾರು ವರ್ಷಗಳಿಂದ ಮಳೆ ಬೀಳುತ್ತಿದೆ. ಆದರೆ, ಅಷ್ಟೊಂದು ಪ್ರಮಾಣದಲ್ಲಿ ಮಣ್ಣಿನ ಗುಡ್ಡೆಕುಸಿದಿಲ್ಲ. ಏಕಾಏಕಿಯಾಗಿ ಮಣ್ಣಿನ ಗುಡ್ಡೆಕುಸಿಯಲು ಮಳೆಕಾರಣವಲ್ಲ.ನಂದಿಗಿರಿಧಾಮ ತಪ್ಪಲಿನ ನಾರಾಯಣಪುರದಲ್ಲಿ ನಡೆಯುತ್ತಿರುವ ಕಲ್ಲಿನ ಗಣಿಗಾರಿಕೆಯಿಂದ ಬೆಟ್ಟ ಒಡಲು ಸಡಿಲಗೊಂಡಿದೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ಅನ್ಸಾರಿ ನಡಿಗೆ ಜನರ ಕಡೆಗೆ’ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ತಡೆ

Advertisement

ಅವೈಜ್ಞಾನಿಕ ಗಣಿಕಾರಿಕೆ: ನಂದಿಗಿರಿಧಾಮದ ಸುತ್ತಮುತ್ತ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆಯಾದರೂ ಅಲ್ಲಿ ಅವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸುತ್ತಿರುವುದರಿಂದ ಜೀವ ವೈವಿಧ್ಯ ತಾಣ ಹಲವು ನದಿಗಳ ಉಗಮಸ್ಥಾನ, ಆಧ್ಯಾತ್ಮಿಕ ಮತ್ತು ಪಾರಂಪರಿಕ ಕ್ಷೇತ್ರ ನಂದಿ ಗಿರಿಧಾಮಕ್ಕೆ ಭವಿಷ್ಯದಲ್ಲಿ ಧಕ್ಕೆಯಾಗಲಿದೆ ಎಂದು ಪರಿಸರ ಪ್ರೇಮಿಗಳು ಅಸಮಾಧಾನ ಹೊರಹಾಕಿದ್ದಾರೆ. ಭವಿಷ್ಯದ ಹಿತದೃಷ್ಟಿಯಿಂದ ಕೂಡಲೇ ಗಣಿಗಾರಿಕೆ ನಿಷೇಧಿಸಿ ನಂದಿಗಿರಿಧಾಮ ಉಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕರ್ನಾಟಕದ ಊಟಿಯೆಂದು ಖ್ಯಾತಿ ಹೊಂದಿರುವ ನಂದಿಗಿರಿಧಾಮದಲ್ಲಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಸರ್ಕಾರ ರೋಪ್‌ ವೇ ನಿರ್ಮಿಸಲು ಮುಂದಾಗಿದೆ. ಈಗಾಗಲೇ ದೇಶಾದ್ಯಂತ ರೋಪ್‌ವೇ ನಿರ್ಮಿಸಿರುವ ಸಂಸ್ಥೆಗೆ ಟೆಂಡರ್‌ ನೀಡಲು ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭ ದಲ್ಲಿ ನಂದಿಗಿರಿಧಾಮದಲ್ಲಿ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಮಣ್ಣಿನ ಗುಡ್ಡೆಕುಸಿದು ಪ್ರವಾಸಿಗರ ಮನದಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲದೇ, ನಂದಿಗಿರಿಧಾಮದ ಸುತ್ತಮುತ್ತ ಗಣಿಗಾರಿಕೆಯಿಂದ ಗಿರಿಧಾಮಕ್ಕೆ ತೊಂದರೆಯಾಗುತ್ತಿದ್ದು ಕೂಡಲೇ ಗಣಿಗಾರಿಕೆ ನಿಷೇಧಿಸಬೇಕೆಂದು ಪರಿಸರ ಪ್ರೇಮಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ತಜ್ಞರ ಸಮಿತಿ ರಚನೆಯಾಗಲಿ:6 ನದಿಗಳ ಉಗಮ ಸ್ಥಾನವಾಗಿರುವ ನಂದಿಗಿರಿಧಾಮವನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ
ಪರಿಗಣಿಸಬೇಕು. ಮಣ್ಣಿನ ಗುಡ್ಡ ಕುಸಿದಿರುವ ಕಾರಣ ಪತ್ತೆ ಹಚ್ಚುವ ಸಲುವಾಗಿ ಪರಿಸರ ತಜ್ಞರನ್ನು ಒಳಗೊಂಡಂತೆ ವಿಶೇಷ ಸಮಿತಿ ರಚಿಸಿ
ಮಾಹಿತಿ ಕಲೆ ಹಾಕಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ಮಣ್ಣು ಗುಡ್ಡ ಕುಸಿಯಲು ಗಣಿಗಾರಿಕೆ ಕಾರಣವಲ್ಲ
ನಾರಾಯಣಪುರದ ಸುತ್ತಮುತ್ತ 17 ಕ್ವಾರಿ,07 ಕ್ರಷರ್‌ ನಡೆಯುತ್ತಿವೆ. ಎಲ್ಲದಕ್ಕೂ ಪರವಾನಿಗೆ ನೀಡಲಾಗಿದೆ. ಯಾವುದೇ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ.ಕಲ್ಲಿನ ಗಣಿಗಾರಿಕೆಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಹಾನಿಯಾಗಿಲ್ಲ. ಮಳೆ ಆರ್ಭಟದಿಂದ ನಂದಿಗಿರಿಧಾಮದಲ್ಲಿ ಮಣ್ಣಿನ ಗುಡ್ಡಕುಸಿದಿದೆ. ಆದರೆ, ಗಣಿಗಾರಿಕೆಯಿಂದ ಮಣ್ಣಿನ ಗುಡ್ಡೆ ಕುಸಿದಿಲ್ಲ ಎಂದು ಚಿಕ್ಕಬಳ್ಳಾಪುರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಎನ್‌.ಲೋಕೇಶ್‌ ತಿಳಿಸಿದರು.

ಅಧ್ಯಯನದ ಶಿಫಾರಸು ಪಾಲನೆ ಅವಶ್ಯ
ನಂದಿಬೆಟ್ಟ ಜೀವವೈವಿದ್ಯ ತಾಣ. ಹಲವು ನದಿಗಳ ಉಗಮಸ್ಥಾನ, ಆಧ್ಯಾತ್ಮಿಕ ಮತ್ತು ಪಾರಂಪರಿಕ ಕ್ಷೇತ್ರ. ಸುತ್ತಮುತ್ತ ಗಣಿಗಾರಿಕೆಗೆ ಅಧಿಕೃತ ವಾಗಿ ಪರವಾನಿಗೆ ಕೊಟ್ಟದ್ದರೂ ಗಣಿಗಾರಿಕೆ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಸ್ಫೋಟಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಈಗಾಗಲೇಆಗಿರುವ ಆಗಬಹುದಾದ ಅನಾಹುತದ ಕುರಿತು ಅಧ್ಯಯನ ನಡೆಸಿ ಸಂಸ್ಥೆಗಳು ನೀಡುವ ಶಿಫಾರಸು ಅನುಷ್ಠಾನಗೊಳಿಸಿದರೆ ಮಾತ್ರ ನಂದಿ ಬೆಟ್ಟಕ್ಕೆ ಉಳಿಗಾಲವಿದೆ ಎಂದು ಪರಿಸರ ಪ್ರೇಮಿ ಆಂಜಿನೇಯರೆಡ್ಡಿ ತಿಳಿಸಿದರು.

-ಎಂ.ಎ.ತಮೀಮ್‌ ಪಾಷಾ

Advertisement

Udayavani is now on Telegram. Click here to join our channel and stay updated with the latest news.

Next