Advertisement

ಮೈಂಡ್‌ಸೆಟ್‌ ಬದಲಾಗಬೇಕು

06:00 AM Aug 27, 2018 | |

ಹೂಡಿಕೆಯ ವಿಷಯದಲ್ಲಿ ಇನ್ನೂ ಬಹುತೇಕರು ಫಿಕ್ಸೆಡ್‌ ಮೈಂಡ್‌ ಸೆಟ್‌ ಹೊಂದಿರುವವರೇ. ನಮಗೆ ಇದೆಲ್ಲ ಅರ್ಥ ಆಗುವುದಿಲ್ಲ ಬಿಡಿ ಎನ್ನುತ್ತಾ, ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ. ಹೀಗಾಗಿಯೇ ಹಲವು ಅವಕಾಶಗಳಿಂದಲೂ ಇವರು ವಂಚಿತರಾಗುತ್ತಾರೆ. 

Advertisement

ಅದೇಕೋ ಕೆಲವರು, ಇನ್ನೂ ನಮ್ಮ ಮಾತು ಆರಂಭವೇ ಆಗಿರುವುದಿಲ್ಲ.ಆಗಲೇ ತಮ್ಮ ಅಭಿಪ್ರಾಯ ಹೇಳ ತೊಡಗುತ್ತಾರೆ. ತೀರಾ ಇತ್ತೀಚೆಗೆ ಒಬ್ಬರನ್ನು ಭೇಟಿ ಆದಾಗ ಲೋಕಾರೂಢಿ ಮಾತು ಬಂದಾಗ ಹೂಡಿಕೆಯ ಬಗೆಗೆ ಮಾತು ಎತ್ತಬೇಕು ಎನ್ನುವಷ್ಟರಲ್ಲಿ ಅವರು-” ನನಗೆ ಇದೆಲ್ಲ ಅರ್ಥ ಆಗುವುದೇ ಇಲ್ಲ. ಇದರಲ್ಲಿ ಆಸಕ್ತಿ ಇಲ್ಲ. ನಾನು ಎಂದೂ ಇದರ ಬಗೆಗೆ ಮಾತನಾಡಲೇ ಇಲ್ಲ’ ಎಂದೆಲ್ಲ ಹೇಳಿ ಬಿಟ್ಟರು. ನನಗೋ ಕುತೂಹಲ ಆಗಿ ಯಾಕೆ ನೀವು ಇದುವರೆಗೂ ಒಬ್ಬರ ಹತ್ತಿರವೂ ಇದರ ಬಗೆಗೆ ಮಾತನಾಡಲಿಲ್ಲವಾ? ಎಂದು ಕೇಳಿದೆ. ಅದಕ್ಕವರು  ನೀವು ಇಷ್ಟು ಕೇಳಿದ ಮೇಲೆ ಅನ್ನಿಸುತ್ತಿದೆ. ನನಗೆ ಅಂತಹ ಅವಕಾಶವೇ ಬರಲಿಲ್ಲ ಅಂದು ಮೌನವಾದರು. ಆಗ,  ಸ್ವಲ್ಪ ಹಾಸ್ಯ ಬೆರೆಸಿದ ಆಪ್ತತೆಯಲ್ಲಿ ಹೇಳಿದೆ -ನೀವು ಇದಕ್ಕೆ ಅವಕಾಶವನ್ನೇ ಮಾಡಿ ಕೊಡಲಿಲ್ಲ. ಯಾರಾದರೂ “ಹೂಡಿಕೆ’ ಎಂಬ ಮಾತು ಹೇಳಿದ ತಕ್ಷಣವೇ ಮಧ್ಯೆಯೇ ಬಾಯಿ ಹಾಕಿ ಅದರಿಂದ ಏನುಪ್ರಯೋಗ? ಅದರಲ್ಲಿ ನನಗಂತೂ, ಆಸಕ್ತಿಯಿಲ್ಲ. ಅದರಿಂದ ಲಾಭ ಮಾಡಿಕೊಂಡವರನ್ನು ನಾನಂತೂ ನೋಡಲಿಲ್ಲ’ ಎಂಬಂಥ ಮಾತುಗಳನ್ನು ಹೇಳುತ್ತಿದ್ದಾರೆ. ಹೀಗಾದರೆ, ಉಳಿತಾಯದ ಬಗ್ಗೆ, ಹೂಡಿಕೆಯ ಬಗ್ಗೆ ನಿಮ್ಮೊಂದಿಗೆ ಮಾತಾಡಲು ಯಾರಿಗೆ ತಾನೆ ಇಷ್ಟವಿರುತ್ತೆ ಹೇಳಿ, ಅಂದೆ.  ಅವರು ಮತ್ತೆ ಮಾತನಾಡಲಿಲ್ಲ. 

ನಮ್ಮ ಜೀವನದಲ್ಲಿ ಎಷ್ಟೋ ವೇಳೆ ನಾವು ಬಹುತೇಕ ವಿಷಯಗಳ ಬಗೆಗೆ ನಮ್ಮದೇ ತೀರ್ಮಾನದ ಸಿಕ್ಕುಗಳಲ್ಲಿ ಸಿಲುಕಿರುತ್ತೇವೆ. ಗೊತ್ತಿಧ್ದೋ, ಗೊತ್ತಿಲ್ಲದೆಯೋ ಹೊಸ ವಿಷಯಗಳನ್ನು ಅರಿಯುವ, ಅಳವಡಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಪ್ರತಿಯೊಂದಕ್ಕೂ ನಾವು ಮೊದಲೇ ಫಿಕ್ಸ್‌ ಆಗಿರುತ್ತೇವೆ. ಉದಾಹರಣೆಗೆ ಷೇರಿನಲ್ಲಿ ಹಣ ಹಾಕಿದರೆ ನಷ್ಟ ಆಗುತ್ತದೆ ಎಂದು ನಮ್ಮ ಮನಸ್ಸು ನಂಬಿರುತ್ತದೆ. ಹಾಗಾಗಿ ಷೇರಿನ ಬದಲು ನಮಗೆ ಚೀಟಿಯಲ್ಲಿ ಹಣ ಹಾಕುವುದು ಸುಲಭ. ಮೊದಲಿನಿಂದಲೂ ಚಿನ್ನ ಕೊಳ್ಳುತ್ತಿದ್ದೇವೆ, ಈಗಲೂ ಖರೀದಿಸಿದರಾಯಿತು. ಹೀಗೆ ನಮ್ಮ ಮನಸ್ಸು ಹೊಸದನ್ನು ಸ್ವೀಕರಿಸುವುದಕ್ಕೆ ಸಿದ್ಧವಿರುವುದಿಲ್ಲ. ಹೊಸದನ್ನು ಆಲಿಸುವಷ್ಟೂ ನಮ್ಮಲ್ಲಿ ತಾಳ್ಮೆ ಇಲ್ಲವಾಗಿರುತ್ತದೆ. ಇಂತಹ ಮನಸ್ಥಿತಿಯೇ ಫಿಕ್ಸೆಡ್‌ ಮೈಂಡ್‌ ಸೆಟ್‌. 

ಇದಕ್ಕೆ ವಿರುದ್ಧವಾದದ್ದೇ ಗ್ರೋಥ್‌ ಮೈಂಡ್‌ ಸೆಟ್‌. ಈ ಮನೋಭಾವ ಹೊಂದಿದವರು  ಹೊಸ ವಿಷಯಗಳಿಗೆ ಕಿವಿಗೊಟ್ಟು  ಕೇಳುತ್ತಾರೆ. ಹೊಸದನ್ನು ಕಲಿಯುವ ಉತ್ಸಾಹ ಇರುತ್ತದೆ. ಮುಖ್ಯವಾಗಿ ಹೆಚ್ಚು ಹೆಚ್ಚು ಸಕಾರಾತ್ಮಕವಾಗಿ ಇರುತ್ತಾರೆ. 

ಯಾಕೋ ಗೊತ್ತಿಲ್ಲ ಹಣ ಹೂಡಿಕೆಯ ವಿಷಯದಲ್ಲಿ ಇನ್ನೂ ಬಹುತೇಕರು ಫಿಕ್ಸೆಡ್‌ ಮೈಂಡ್‌ ಸೆಟ್‌ ಹೊಂದಿರುವವರೇ. ನಮಗೆ ಇದೆಲ್ಲ ಅರ್ಥ ಆಗುವುದಿಲ್ಲ ಬಿಡಿ ಎನ್ನುತ್ತಾ, ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ. ಹೀಗಾಗಿಯೇ ಹಲವು ಅವಕಾಶಗಳಿಂದಲೂ ಇವರು ವಂಚಿತರಾಗುತ್ತಾರೆ. ಅದೇ ಗ್ರೋಥ್‌ ಮೈಂಡ್‌ ಸೆಟ್‌ ಇದ್ದಾಗ ಹೊಸ ವಿಷಯಗಳನ್ನು ಅರಿತು ಅಳವಡಿಸಿಕೊಳ್ಳುತ್ತಾರೆ. 

Advertisement

ಕೇವಲ ಹಣಕಾಸಿನ ವಿಷಯಕ್ಕೆ ಮಾತ್ರ ಅಲ್ಲ. ಯಶಸ್ವಿ ಜೀವನ ನಮ್ಮದಾಗಬೇಕೆಂದರೆ, ನಮ್ಮ ಮೈಂಡ್‌ ಸೆಟ್‌ ನಲ್ಲಿಯೇ ಬದಲಾವಣೆ ಆಗಲೇ ಬೇಕಿದೆ. ಇಂದಿನ ನಿರಂತರ ಬದಲಾವಣೆಯ ಕಾಲದಲ್ಲಿ ಹೊಸ ಹೊಸ ವಿಷಯಗಳು, ಅವಕಾಶಗಳಿಗೆ ತೆರೆದುಕೊಳ್ಳಲೇ ಬೇಕಿದೆ. ನಾವು ಗ್ರೋಥ್‌ ಮೈಂಡ್‌ ಸೆಟ್‌ ಹೊಂದಿದಾಗಲೇ ಗ್ರೋಥ್‌ ಆಗೋದು. ಸಕಾರಾತ್ಮಕತೆಯೇ ಇದಕ್ಕೆ ಅಡಿಗಲ್ಲು.

– ಸುಧಾಶರ್ಮ ಚವತ್ತಿ

Advertisement

Udayavani is now on Telegram. Click here to join our channel and stay updated with the latest news.

Next