Advertisement

ಇನ್ನೂ ಮರೀಚಿಕೆ ಆಯ್ತು.. ಸಹಕಾರಿ ಸಚಿವರ ಜಿಲ್ಲಾ ಭಾಗ್ಯ ಇಲ್ಲೇಕಿಲ್ಲ?

05:40 PM Apr 14, 2022 | Team Udayavani |

ಶಿರಸಿ: ಸ್ವಂತ ಪಶು ಆಹಾರದ ಉತ್ಪಾದನೆ ಕೊರತೆ ಇದೆ, ಗುಡ್ಡಗಾಡು ಜಿಲ್ಲೆಯಾಗಿದ್ದರಿಂದ ಹೈನುಗಾರಿಕೆ ನಡೆಸುವುದೂ ಕಷ್ಟವಿದೆ. ಆದರೂ ಉಮೇದಿನಲ್ಲಿ ಪ್ರತಿ ನಿತ್ಯ‌ ಸಹಕಾರಿ ವ್ಯವಸ್ಥೆಯ‌ ಮೂಲಕ ಅನೇಕ ಪ್ರಶ್ನೆಗಳಿಗೆ ಉತ್ತರ ಕಾಣದ ಉತ್ತರ ಕನ್ನಡ‌ ಜಿಲ್ಲೆ ಹೈನೋದ್ಯಮದಲ್ಲಿ‌ ಮಾತ್ರ ತಿರುಗಿ ನೋಡುತ್ತಿಲ್ಲ!

Advertisement

ಅಚ್ಚರಿ ತಂದರೂ ಜಿಲ್ಲೆಯ ಹೈನೋದ್ಯಮದ ರೇಖೆ ನೋಡಿದರೆ ಪ್ರಗತಿ ಕಡೆಗೇ ಇದೆ. ಗುಣಮಟ್ಟದ‌ ಕ್ಷೀರ, ಹಾಗೂ ಸಮಯ ಪಾಲನೆಯಲ್ಲಿ ಉದ್ಯಮವಾಗಿ ನಡೆಸುವ ಮನೋಸ್ಥಿತಿಗೆ ಬಂದು ನಿಂತಿದೆ.

ಇಲ್ಲಗಳ ಕಥೆ-ವ್ಯಥೆ: ‘ಇಲ್ಲ’ಗಳ ನಡುವೆ ಸಾಧನೆ: ಜಿಲ್ಲೆಯಲ್ಲಿ ಕ್ಷೀರದ ಉತ್ಪಾದನೆ 40 ಸಾವಿರ ದಾಟಿದೆ. ಹತ್ತು ವರ್ಷಗಳ ಹಿಂದೆ ಹತ್ತು ಸಾವಿರ‌ ಲೀ. ಇಲ್ಲದ ಹೈನು ಇಂದು ನಾಲ್ಕರ ಸಂಖ್ಯೆಯಲ್ಲಿ ‌ಜೊತೆಯಾಗಿದೆ.

ಧಾರವಾಡ ಹಾಲು ಒಕ್ಕೂಟ ರಾಜ್ಯದಲ್ಲೇ ಮೊದಲನೇಯದಾಗಿ ಪ್ರತ್ಯೇಕ ಪಿಪಿಪಿ ಮಾದರಿಯಲ್ಲಿ ಹನ್ಮಂತಿಯಲ್ಲಿ ಪ್ಯಾಕಿಂಗ್ ಘಟಕ ಹಾಕಿ ಕೆಲಸ ಆರಂಭಿಸಿದೆ. ಇದೂ ಜಿಲ್ಲೆಯ ಕ್ಷೀರ ಮಾರುಕಟ್ಟೆಗೆ ನೆರವಾಗಲಿದೆ. ಈತನ್ಮಧ್ಯೆ ರಾಜ್ಯ ಸರಕಾರ‌ ನೀಡುವ 5 ರೂ. ಪ್ರೋತ್ಸಾಹ ಧನ ಲಭಿಸಿದ್ದು ಕ್ಷೀರದ ಉತ್ಪಾದನೆ ಅಥವಾ ಉಳಿದ ಹಾಲನ್ನು ಡೈರಿಗೆ ಹಾಕುವ ಸಂಪ್ರದಾಯ ಬೆಳೆಯಲು ಕಾರಣ ಆಗಿರಬಹುದು.

ಸ್ವಂತ ಕಟ್ಟಡಗಳೇ ಇಲ್ಲ!

Advertisement

ಅರ್ಧ ಕಿಲೋ‌ಮೀಟರ್ ದಿಂದ 5 ಕಿಲೋಮೀಟರ್ ಆಚೆಯಿಂದಲೂ ಹೈನುಗಾರ ಹಾಲು ಉತ್ಪಾದಕರ ಸಂಘದ ಕಚೇರಿಗೆ ತಂದು ಕೊಡುತ್ತಾನೆ. ಬೈಕಿನ ಪೆಟ್ರೋಲ್ ಲೆಕ್ಕ ಹಾಕಿದರೆ ನಷ್ಟ ಎನ್ನುವವರೂ ಇದ್ದಾರೆ.

ಹಾಲು ಉತ್ಪಾದಕರ ಸಹಕಾರಿ‌ ಸಂಘಗಳು ಜಿಲ್ಲೆಯಲ್ಲಿ 261 ಇದೆ. 45ಕ್ಕೂ ಹೆಚ್ಚು ಮಹಿಳಾ ಸಂಘಗಳೂ ಇದೆ. ಆದರೆ, ಈ ಪೈಕಿ‌ ಸ್ವಂತ ಕಟ್ಟಡ ಇಲ್ಲದವರ ಸಂಖ್ಯೆಯೇ ಹೆಚ್ಚು. ಇರುವ, ಬಾಡಿಗೆ ಕಟ್ಟಡದಲ್ಲಿ, ದೇವಸ್ಥಾನದ ಕಟ್ಟೆಯ ಮೇಲೆ ಹಾಲು ಸಂಗ್ರಹಣಾ ಕೇಂದ್ರಗಳು ಕೆಲಸ‌ಮಾಡುತ್ತಿವೆ.

ಹಲವು ದಶಕದ ಬೇಡಿಕೆ

ಕಳೆದ ಹಲವು ವರ್ಷಗಳಿಂದ ಹಾಲು ಸಂಘಗಳಿಗೆ ಸ್ವಂತ ಕಟ್ಟಡಗಳ ಬೇಡಿಕೆ ಇದ್ದರೂ ಈವರೆಗೆ ಈಡೇರಿಲ್ಲ. ಅದಕ್ಕೆ ಕಾರಣ ಎಂದರೆ ಇಚ್ಛಾಶಕ್ತಿಯ ಕೊರತೆ! ಎದುರಾಗಿದೆ.

ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ ಇರದೇ ಇದ್ದರೆ ಸಾಧನೆ ಮಾಡಬಹುದು ಎಂಬುದಕ್ಕೆ ಸಹಕಾರಿ ಸಚಿವರೇ ಉದಾಹರಣೆ. ಉತ್ತರ ಕನ್ನಡದಲ್ಲಿ ಸಾಧ್ಯ ಆಗದ್ದನ್ನು ಸಚಿವ ಎಸ್. ಟಿ.ಸೋಮಶೇಖರ್ ಅವರು ಹಾಲು ಸಂಘಗಳಿಗೆ 5 ರಿಂದ 15 ಲ.ರೂ. ತನಕ ಕಟ್ಟಡ ಅನುದಾನ ಕೊಟ್ಟಿದ್ದಾರೆ. ಅಲ್ಲಿ ಕಂಪ್ಯೂಟರ್, ಹಾಲು ಅಳತೆಯ ಇಲೆಕ್ಟ್ರಾನಿಕ್ ಮಾಪನ, ಪಶು ಆಹಾರ ಇಟ್ಟುಕೊಳ್ಳಲು ಅವಕಾಶ ಆಗಿದೆ. ಆದರೆ, ಇಲ್ಲಿ ಸೋರುವ ಕೊಠಡಿಯಲ್ಲಿ ನಗು ಮೊಗದ ಸೇವೆ ಕೊಡಬೇಕಿದೆ.

ಸುತ್ತೋಲೆ ಸಂಕಷ್ಟ

ರಾಜ್ಯ ಸರಕಾರದ ಸುತ್ತೋಲೆಯಲ್ಲೇ ಲಾಭ ಗಳಿಸುವ ಸೊಸೈಟಿಗಳಿಗೆ ಶಾಸಕ, ಸಂಸದರ ಅನುದಾನ ಕೊಡಲಾಗದು ಎಂದಿದೆ. ಅವರು ಅನುದಾನ ಕೊಡದಿದ್ದರೆ ಇವರಿಗೆ ಕಟ್ಟಡವಿಲ್ಲ. ಇದೇ ಕಾರಣದಿಂದ ಜಿಲ್ಲೆಯಲ್ಲಿ 200 ಹಾಲು ಸೊಸೈಟಿಗಳಿಗೆ ಸ್ವಂತ ಕಟ್ಟಡವೇ ಇಲ್ಲವಾಗಿದೆ. ಇದರಿಂದ ಕಂಪ್ಯೂಟರ್ ನಿಂದ ಆಧುನಿಕ ಉಪಕರಣ ಇಟ್ಟುಕೊಳ್ಳಲು ಸಮಸ್ಯೆ ಆಗಿದೆ.

ಇದೇನು ಸರಕಾರಕ್ಕೆ ದೊಡ್ಡ‌ ಸಮಸ್ಯೆಯೇ ಅಲ್ಲ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಬ್ಬರೇ ಮನಸ್ಸು ಮಾಡಿದರೂ ಇದು ಕ್ಷಣದಲ್ಲಿ ಸಾಧ್ಯವಿದೆ. ಅವರೂ ಮೊನ್ನೆ ಮೊನ್ನೆ ಹಾಲು ಪ್ಯಾಕಿಂಗ್ ಉದ್ಘಾಟನೆ ಸಮಾರಂಭದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು ವೇದಿಕೆಯ ಮಾತಲ್ಲ ಎಂದು ಹೈನುಗಾರರಿಗೂ ಎನ್ನಿಸತೊಡಗಿದೆ.

ಶಾಸಕರ, ಸಂಸದರ ಅನುದಾನವನ್ನು ಸಹಕಾರಿ ಸಂಘಗಳಿಗೂ ಕೊಡಬಹುದು ಎಂದೂ ಜಿಲ್ಲಾಡಳಿತಕ್ಕೆ ಸರಕಾರ ಸ್ಪಷ್ಟವಾಗಿ ಸೂಚಿಸಬೇಕಿದೆ. ಜೊತೆಗೆ ಗುಡ್ಡಗಾಡು ಜಿಲ್ಲೆ ಉತ್ತರ ಕನ್ನಡದಲ್ಲಿ ಬೆಟ್ಟ, ಗಾಂಚಠಾಣದಲ್ಲಿ ಕನಿಷ್ಠ 2 ಗುಂಟೆಗೆ ಹೆಚ್ಚು ಸ್ಥಳೀಯ ಪಂಚಾಯತಿ ಹಾಗೂ ಸಂಬಂಧಪಟ್ಟವರ ಅನುಮತಿ ಜೊತೆ ಅನುದಾನದ ನೆರವಿನ ಕಟ್ಟಡ ಕಟ್ಟಲು ಅನುಮತಿ ಒದಗಿಸಬೇಕಾಗಿದೆ. ಇಷ್ಟಾದರೆ ಸಮಸ್ಯೆ ಒಂದು ಹಂತಕ್ಕೆ ಬರಲಿವೆ.

ಹಾಲು ಸಂಘಗಳಿಗೆ ಸ್ವಂತ ಸೂರು ಅನಿವಾರ್ಯ. ಜಿಲ್ಲೆಯ 200 ಸಂಘಗಳಿಗೆ ಕಟ್ಟಡ ಬೇಕು. ಸರಕಾರ ಒಂದು ಸೂಚನೆ ನೀಡಿದರೆ ಕ್ಷಣದಲ್ಲಿ ಅವಕಾಶ ಆಗಲಿದೆ.  –ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷ

ಹಾಲು ಅಳೆಯುವ ಮಾಪನದಿಂದ ಎಲ್ಲವೂ ಆಧುನಿಕವಾಗಿವೆ. ಹಾಲು ಸಂಘಗಳು ಸೇವಾ ಮನೋಭಾವನೆಯಲ್ಲೇ ಇವೆ. ಸ್ವಂತ ಕಟ್ಟಡ ಭಾಗ್ಯ ಸಿಗದೇ ಹೋದರೆ ಅಂಥ ಉಪಕರಣ ಇಟ್ಟುಕೊಳ್ಳುವದೂ ಕಷ್ಟವಾಗುತ್ತದೆ.     – ರಾಜು ಹೆಗಡೆ, ಹಾಲು ಸೊಸೈಟಿ ಸದಸ್ಯ

-ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next