Advertisement

ಕ್ಷೀರೋತ್ಪಾದನೆ: ಸ್ವಾವಲಂಬನೆಯತ್ತ ಕಾಸರಗೋಡು ಜಿಲ್ಲೆ

06:20 AM May 11, 2018 | Team Udayavani |

ಕಾಸರಗೋಡು: ಕಾಸರಗೋಡು ಜಿಲ್ಲೆಯನ್ನು ಹಾಲು ಉತ್ಪಾದನಾ ವಲಯದಲ್ಲಿ ಸ್ವಾವಲಂಬಿ ಯನ್ನಾಗಿಸಲಿರುವ ಕಾರ್ಯ ಚಟುವಟಿಕೆ ಗಳಿಗೆ ಕ್ಷೀರ ಅಭಿವೃದ್ಧಿ ಇಲಾಖೆಯು ರೂಪುರೇಷೆ ತಯಾರಿಸುತ್ತಿದೆ. ಈ ನಿಟ್ಟಿನಲ್ಲಿ  ಹಲವಾರು ಯೋಜನೆಗಳನ್ನು  ರೂಪಿಸಲಾಗಿದೆ.

Advertisement

ಪ್ರಸ್ತುತ ಆರು ಬ್ಲಾಕ್‌ಗಳಲ್ಲಾಗಿ 135 ಕ್ಷೀರ ಸಹಕಾರಿ ಸಂಸ್ಥೆಗಳ 8,000 ಮಂದಿ ಕೃಷಿಕರಿಂದ ಪ್ರತಿದಿನ 62,000 ಲೀಟರ್‌ ಹಾಲು ಸಂಗ್ರಹಿಸಿ ವಿತರಿಸಲಾಗುತ್ತಿದೆ. 2017-18ನೇ ಆರ್ಥಿಕ ವರ್ಷದಲ್ಲಿ  ಜಿಲ್ಲೆಯಲ್ಲಿ  ಹೈನುಗಾರಿಕಾ ಕೃಷಿ ವಲಯದಲ್ಲಿ  ಸಾಧನೆ ಮಾಡಿರುವ ಕಾಂಞಂಗಾಡು, ಪರಪ್ಪ , ನೀಲೇಶ್ವರ ಬ್ಲಾಕ್‌ಗಳನ್ನು  ಡೈರಿ ವಲಯ ಬ್ಲಾಕ್‌ಗಳಾಗಿ ಘೋಷಿಸಿ ಯೋಜನೆಗಳನ್ನು  ಜಾರಿಗೊಳಿಸಲಾಗುತ್ತಿದೆ.

ದಿನಂಪ್ರತಿ ಹಾಲು ಸಂಗ್ರಹಿಸಿ ಮಾರಾಟ ಮಾಡುವ ಕ್ಷೀರ ಸಹಕಾರಿ ಸಂಘಗಳ ನವೀಕರಣಕ್ಕಾಗಿ 67,52,583ರೂ. ವೆಚ್ಚ  ಮಾಡಲಾಗಿದೆ. ಆಹಾರ ಭದ್ರತಾ ಕಾನೂನಿನಲ್ಲಿ  ತಿಳಿಸಿರುವಂತೆ ಕ್ಷೀರ ಸಂಘಕ್ಕೆ ಕಚೇರಿ, ಲ್ಯಾಬ್‌ ಸೌಕರ್ಯಗಳನ್ನು  ಸಿದ್ಧಪಡಿಸುವುದಕ್ಕೆ 33 ಸಂಘಗಳಿಗಾಗಿ ಹಾಗೂ ಅಗತ್ಯದ ಸಹಾಯಧನ ನೀಡುವ ಯೋಜನೆ ಪ್ರಕಾರ 68 ಸಂಘಗಳಿಗೆ ಮೊತ್ತ  ಮಂಜೂರು ಮಾಡಲಾಗಿದೆ.

ಎರಡು ಸಂಘಗಳಿಗೆ ಫಾರ್ಮರ್ಸ್‌ ಫೆಸಿಲಿಟೇಶನ್‌ ಕೇಂದ್ರ ನಿರ್ಮಿಸುವುದಕ್ಕೆ ಮತ್ತು  ಮೂರು ಸಂಘಗಳಿಗೆ ಸಂಗ್ರಹ ಕೊಠಡಿ ನಿರ್ಮಿಸಲು ಸಹಾಯಧನ ನೀಡಲಾಗಿದೆ. ಹಾಲು ಕರೆಯುವ ದನಗಳ ಸಂಖ್ಯೆ ಹೆಚ್ಚಿಸುವುದಕ್ಕಾಗಿರುವ ಯೋಜನೆಗಳಿಗೆ ಆದ್ಯತೆ ಕೊಡಲಾಗಿದೆ. ಎಂಎಫ್‌ಡಿಪಿ ಸೆಗಣಿ ಮಾರಾಟ, ವರ್ಮಿ ಕಂಪೋಸ್ಟ್‌, ಸೈಲೇಜ್‌ ಯೂನಿಟ್‌, ಧಾತು ಲವಣ ಮಿಶ್ರಿತ ವಿತರಣೆ ಎಂಬೀ ಯೋಜನೆಗಳಿಗಾಗಿ ಒಟ್ಟು  2,03,70,940ರೂ. ಗಳ ಸಹಾಯಧನ ಬಿಡುಗಡೆ ಮಾಡಲಾಗಿದೆ.

5 ಮತ್ತು 10 ದನಗಳ ಯೂನಿಟ್‌ ಪ್ರಕಾರ 302 ದನಗಳನ್ನು, 140 ಎತ್ತುಗಳನ್ನು  ಇತರ ರಾಜ್ಯಗಳಿಂದ ಖರೀದಿಸಲಾಗಿದೆ. 99 ಮಂದಿ ಕ್ಷೀರ ಕೃಷಿಕರಿಗೆ ಅಗತ್ಯದ ಸಹಾಯಧನ ಯೋಜನೆ ಪ್ರಕಾರ ಮತ್ತು  50 ಮಂದಿ ಕೃಷಿಕರಿಗೆ ಮಿಲ್ಕಿಂಗ್‌ ಮೆಶೀನ್‌ ಖರೀದಿಗೆ ಸಹಾಯ ಹಾಗೂ 42 ಮಂದಿ ಕೃಷಿಕರಿಗೆ ಹಟ್ಟಿ  ನಿರ್ಮಿಸಲಿರುವ ಸಹಾಯಧನ ನೀಡಲಾಗಿದೆ. ಪ್ರಕೃತಿ ವಿಕೋಪ, ಅಸೌಖ್ಯ, ಅಪಘಾತಗಳಿಂದ ಜಾನುವಾರುಗಳು ನಷ್ಟಗೊಂಡ ಕೃಷಿಕರಿಗೆ ಒಟ್ಟು  4,32,000ರೂ. ಆರ್ಥಿಕ ಸಹಾಯ ಒದಗಿಸಲಾಗಿದೆ.

Advertisement

ರಾಜ್ಯ ಯೋಜನಾ ವಿಭಾಗದಲ್ಲಿ  3.75 ಕೋಟಿ ರೂ., ಜನಪರ ಯೋಜನೆ ಪ್ರಕಾರ 4.25 ಕೋಟಿ ರೂ. ಗಳನ್ನು ಜಿಲ್ಲೆಯಲ್ಲಿ  ಕಳೆದ ಆರ್ಥಿಕ ವರ್ಷ ವೆಚ್ಚ  ಮಾಡಲಾಗಿದೆ. ಹಾಲುತ್ಪಾದನಾ ವಲಯದ ನೂತನ ತಿಳಿವಳಿಕೆಗಳನ್ನು ಇಲಾಖೆಯ ನೇತೃತ್ವದಲ್ಲಿ ಕೃಷಿಕರಿಗೆ ನೀಡಲಾಗುತ್ತಿದೆ. ಇದಕ್ಕಾಗಿ ಕ್ಷೀರ ಕೃಷಿಕರ ಸಂಪರ್ಕ ಕಾರ್ಯಕ್ರಮ, ಹಾಲಿನ ಗುಣಮಟ್ಟ  ನಿಯಂತ್ರಣ, ಗ್ರಾಹಕರ ಮುಖಾಮುಖೀ, ಬ್ಲಾಕ್‌ ಮತ್ತು  ಜಿಲ್ಲಾ  ಕ್ಷೀರ ಕೃಷಿಕ ಸಂಘಗಳಿಗೆ ತಿಳಿವಳಿಕಾ ಯಜ್ಞ  ಮೊದಲಾದ ಕಾರ್ಯಕ್ರಮಗಳನ್ನು  ಆಯೋಜಿಸಲಾಗುತ್ತಿದೆ. ಕಳೆದ ಆರ್ಥಿಕ ವರ್ಷ 10,60,000 ರೂ. ಇದಕ್ಕಾಗಿ ವಿನಿಯೋಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next