Advertisement

ವಲಸಿಗರ ಬದುಕಿಗೆ ಭದ್ರತೆ :”ಗ್ರಾಮ ವಾಪಸಿ’ಯಾದ ಕುಟುಂಬಗಳ ಸಮೀಕ್ಷೆ

02:03 AM Dec 28, 2020 | sudhir |

ಬೆಂಗಳೂರು: ಕೊರೊನಾ ಕಾರಣ ನಗರ ತೊರೆದು “ನಮ್ಮ ಹಳ್ಳಿಯೇ ನಮಗೆ ಲೇಸು’ ಎಂದುಕೊಂಡು ಗ್ರಾಮಗಳಿಗೆ ಮರಳಿದವರ ಬದುಕಿಗೆ ಭದ್ರತೆ ಕಲ್ಪಿಸಲು ಸರಕಾರ ಮುಂದಾಗಿದ್ದು, ವಲಸಿಗ ಕುಟುಂಬಗಳ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ.
ಗ್ರಾಮಗಳಿಗೆ ಮರಳಿದ ಕುಟುಂಬಗಳು ಮತ್ತವರ ಮಕ್ಕಳ ಆರೋಗ್ಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರ ಆರೋಗ್ಯ, ಜೀವನೋಪಾಯ ಮತ್ತು ಸಾಮಾಜಿಕ ಭದ್ರತೆಗೆ ಯೋಜನೆ ರೂಪಿಸುವುದು ಇದರ ಮುಖ್ಯ ಉದ್ದೇಶ.

Advertisement

ಜೀವನೋಪಾಯಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದವರು ಕೊರೊನಾ ಲಾಕ್‌ಡೌನ್‌ ಹೇರಿದ ಪರಿಣಾಮ 2020ರ ಎಪ್ರಿಲ್‌ನಿಂದ ಹಳ್ಳಿಗಳಿಗೆ ಮರು ವಲಸೆ ಆರಂಭಿಸಿದ್ದರು. ಈ ರೀತಿ “ಗ್ರಾಮ ವಾಪಸಿ’ ಆದವರ ಮಾಹಿತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಇಲಾಖೆ ಕಲೆ ಹಾಕಲು ಆರಂಭಿಸಿದೆ. ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚತಂತ್ರ ತಂತ್ರಾಂಶದ ಮೂಲಕ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ 3.84ರಿಂದ 4 ಲಕ್ಷ ಜನರು ಮರಳಿ ಬಂದಿ ದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಆ್ಯಪ್‌ ಸಮೀಕ್ಷೆ ಹೇಗೆ?
ಸಮೀಕ್ಷೆಗೆ ಕರ್ನಾಟಕ ವಲಸಿಗರ ಟ್ರ್ಯಾಕಿಂಗ್‌ ಮತ್ತು ಸಾಮಾಜಿಕ ಭದ್ರತೆ ಫ್ರೆಮ್‌ವರ್ಕ್‌ (ಕೆಎಂಟಿಎಸ್‌ಪಿಎಫ್) ಎಂಬ ಆ್ಯಪ್‌ ಅನ್ನು ಸಿದ್ಧಪಡಿಸಲಾಗಿದೆ. ಮರುವಲಸಿಗರ ಸಾಮಾನ್ಯ ಮಾಹಿತಿಗಳ ಜತೆಗೆ ಜತೆಗೆ ಇವರು ವಲಸೆ ಹೋದ ಸ್ಥಳದಲ್ಲಿ ಯಾವ ಕೆಲಸ ಮಾಡುತ್ತಿದ್ದರು, ಆದಾಯ ಎಷ್ಟಿತ್ತು, ಜೀವನಮಟ್ಟ ಹೇಗಿತ್ತು ಎಂಬ ಮಾಹಿತಿ ಪಡೆಯಲಾಗುತ್ತದೆ. ಈಗಿನ ಸ್ಥಿತಿಗತಿ, ಆರೋಗ್ಯ, ಕೌಶಲ ಮತ್ತು ಅವರ ನಿರೀಕ್ಷೆಗಳು, 18 ವರ್ಷ ಪೂರ್ಣಗೊಳ್ಳದ ಮಕ್ಕಳ ಶಿಕ್ಷಣದ ಬಗ್ಗೆ ಮಾಹಿತಿ ಸಂಗ್ರಹಿಸಲು ಸುಲಭವಾದ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ. ಸಮೀಕ್ಷೆಗೆ ಗ್ರಾ.ಪಂ. ಸಿಬಂದಿಯನ್ನು ನಿಯೋಜಿಸಲಾಗಿದೆ.

ಸಮೀಕ್ಷೆಯ ಉದ್ದೇಶ
– ಮರಳಿ ಬಂದ ಕುಟುಂಬಗಳ ಅಗತ್ಯಗಳನ್ನು ಗುರುತಿಸುವುದು.
– ಇಲಾಖೆಗಳು, ಸರಕಾರದ ಯೋಜನೆಗಳ ಮೂಲಕ ಅವುಗಳ ಈಡೇರಿಕೆಗೆ ಕ್ರಮ.
– ಸೌಲಭ್ಯ ವಂಚಿತರ ಮಾಹಿತಿ ದಾಖಲಿಸಿ, ತ್ವರಿತವಾಗಿ ಸೌಲಭ್ಯ ಒದಗಿಸುವ ವ್ಯವಸ್ಥೆ ರೂಪಿಸುವುದು.
– ಇದಕ್ಕಾಗಿ ಕೂಡಲೇ ಲಭ್ಯವಾಗುವಂತೆ (ಪುಶ್‌ ನೋಟಿಫಿಕೇಶನ್‌) ತಾಂತ್ರಿಕ ವ್ಯವಸ್ಥೆ ಅಳವಡಿಕೆ.
– ಶೈಕ್ಷಣಿಕ ಮಟ್ಟ, ತಾಂತ್ರಿಕ ಕೌಶಲ, ವೈಯಕ್ತಿಕ ಸಾಮರ್ಥ್ಯ, ಕೆಲಸದ ಅನುಭವ ಮತ್ತು ನಿರೀಕ್ಷಿಸುವ ಕೌಶಲ ತರಬೇತಿಗಳ ಮಾಹಿತಿ ಕ್ರೋಡೀಕರಣ.
– ಕಾರ್ಯಕ್ರಮ, ಯೋಜನೆಗಳು ಮತ್ತು ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳ ಸಂಪನ್ಮೂಲಗಳ ಸಮನ್ವಯಕ್ಕಾಗಿ ಕ್ರಿಯಾ ಯೋಜನೆ.
– ನರೇಗಾ, ಜಲ ಜೀವನ್‌ ಮಿಷನ್‌, ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ, ಸ್ವತ್ಛ ಭಾರತ್‌ ಮಿಷನ್‌ ಮತ್ತಿತರ ಅಭಿವೃದ್ಧಿ ಯೋಜನೆಗಳ ಮಾಹಿತಿ ಒದಗಣೆ; ಶಿಕ್ಷಣ, ಸಂವಹನ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವ್ಯವಸ್ಥೆ ರೂಪಿಸುವುದು.

ಕೊರೊನಾ ಹಿನ್ನೆಲೆಯಲ್ಲಿ ಹಳ್ಳಿಗಳಿಗೆ ಮರಳಿದ ಕುಟುಂಬಗಳ ಆರೋಗ್ಯ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ತಿಳಿದುಕೊಂಡು ಅವರಿಗೆ ಆರೋಗ್ಯ, ಜೀವನೋ ಪಾಯ ಮತ್ತು ಆರ್ಥಿಕ ಭದ್ರತೆ ಕಲ್ಪಿಸಲು ಕ್ರಿಯಾ ಯೋಜನೆ ಗಳನ್ನು ರೂಪಿಸಲು ಸಮೀಕ್ಷೆ ಕೈಗೊಳ್ಳಲಾಗುತ್ತಿದೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಪಂ. ರಾಜ್‌ ಆಯುಕ್ತಾಲಯದ ಆಯುಕ್ತರು

Advertisement
Advertisement

Udayavani is now on Telegram. Click here to join our channel and stay updated with the latest news.

Next