Advertisement

ಮೈಸೂರು ಭಾಗದಲ್ಲಿ ವಲಸೆ ಪಕ್ಷಿಗಳ ಸಂಖ್ಯೆ ಕ್ಷೀಣ

04:15 PM Feb 08, 2023 | Team Udayavani |

ಮೈಸೂರು: ಪ್ರತಿವರ್ಷ ವಿದೇಶಗಳಿಂದ ಹಳೇ ಮೈಸೂರು ಭಾಗಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ವಲಸೇ ಹಕ್ಕಿಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಈ ಬಾರಿ ಎರಡು ವಿಧದ ಪಕ್ಷಿಗಳು ಬಂದಿಲ್ಲ ಎಂಬುದು ಸರ್ವೆಯಲ್ಲಿ ತಿಳಿದುಬಂದಿದೆ.

Advertisement

ಮೈಸೂರು ನೇಚರ್‌ ತಂಡದಿಂದ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ವಿವಿಧ ಕೆರೆ ಪರಿಸರದಲ್ಲಿ 2023ರ ಜ.22ರಂದು ವಿಂಟರ್‌ ಬರ್ಡ್‌ ಮಾನಿಟರಿಂಗ್‌ ಪ್ರೋಗ್ರಾಮ್‌ ನಡಿ ನಡೆಸಿದ ಸರ್ವೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಜಾಗತೀಕ ಮಟ್ಟದಲ್ಲಾದ ಬದಲಾವಣೆ, ಮಳೆ, ಕೆರೆಯ ಪರಿಸರದಲ್ಲಿ ಆದ ಬೆಳವಣಿಗೆಯಿಂದಾಗಿ ಹಕ್ಕಿಗಳ ವಲಸೆ ಕ್ಷೀಣಿಸಲು ಕಾರಣ ಎನ್ನಲಾಗಿದೆ.

ಎರಡು ವರ್ಷಗಳಿಂದ ಬಾರದ ಆತಿಥಿ: ಹಳೇ ಮೈಸೂರು ಭಾಗದ ವಿವಿಧ ಕೆರೆಗಳಲ್ಲಿ ಚಳಿಗಾಲದಸಮಯಲ್ಲಿ ನೂರಾರು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಉತ್ತರ ಅಮೇರಿಕಾದ ಗ್ರೀನ್‌ ವಿಂಗ್ಡ್ ಟೀಲ್‌ ಮತ್ತು ಗ್ರೀಕ್‌ ದೇಶದ ಕಾಮನ್‌ ಪೋಚಾರ್ಡ್‌ ಹಕ್ಕಿಗಳು ಕಳೆದೆರೆಡು ವರ್ಷಗಳಿಂದ ಕಾಣಸಿಗುತ್ತಿಲ್ಲ. ಸಾವಿರಾರು ಮೈಲುಗಳಿಂದ ಚಳಿಗಾಲದ ಸಮಯಕ್ಕೆ ಬರುತ್ತಿದ್ದ ಈ ಎರಡು ಪ್ರಬೇಧದ ಪಕ್ಷಿಗಳು ಬರದೇ ಇರುವುದು ಪಕ್ಷಿ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ. 2021ರಲ್ಲಿ ಗ್ರೀನ್‌ ವಿಂಗ್ಡ್ ಟೀಲ್‌ ಕಾಣಿಸಿಕೊಂಡಿದ್ದರೆ 2019ರಲ್ಲಿ 107 ಸಂಖ್ಯೆಯಲ್ಲಿ ಕಾಣಿಸಿಕೊಂಡಿತ್ತು. ಹಾಗೆಯೇ 2019ರಲ್ಲಿ 4 ಸಂಖ್ಯೆಯಲ್ಲಿಕಾಣಿಸಿಕೊಂಡಿದ್ದ ಕಾಮನ್‌ ಪೋಚಾರ್ಡ್‌ ಪಕ್ಷಿ 2021ರಿಂದ ಕಾಣಿಸಿಕೊಂಡಿಲ್ಲ.

ವಲಸೆಗೆ ಮಾರಕವಾದ ಮೀನು ಸಾಕಾಣಿಕೆ: ಹಳೇ ಮೈಸೂರು ಭಾಗದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದೀಚೆಗೆ ಅಧಿಕ ಪ್ರಮಾಣದಲ್ಲಿ ಮಳೆಯಾದ್ದರಿಂದ ಕೆರೆ ಕಟ್ಟೆಗಳು ಮತ್ತು ಕಬಿನಿ, ಹಾರಂಗಿ ಮತ್ತು ಕೆಆರ್‌ಎಸ್‌ ಹಿನ್ನೀರು ಹೆಚ್ಚಿನಪ್ರಮಾಣದಲ್ಲಿ ತುಂಬಿದೆ. ಇದರಿಂದಪಕ್ಷಿಗಳಿಗೆ ಬೇಕಾದ ಆಹಾರದ ಸಸ್ಯಗಳು ಬೆಳೆಯುತ್ತಿಲ್ಲ. ಜತೆಗೆ ಹೆಚ್ಚಿನ ಕೆರೆಗಳಲ್ಲಿ ಮೀನುಗಾರಿಕೆಗೆ ಅನುಮತಿ ನೀಡಿರುವುದರಿಂದ ಕೆರೆಗಳಲ್ಲಿ ಮಾನವನ ಚಟುವಟಿಕೆ ಗಳು ಹೆಚ್ಚಾಗಿರುವುದರಿಂದ ವಿದೇಶಿ ಪಕ್ಷಿಗಳ ವಲಸೆ ಕ್ಷೀಣಿಸಿದೆ. ಇತ್ತೀಚಿನ ವರ್ಷಗಳಲ್ಲಿ ಗ್ರಾಮ ಪಂಚಾಯಿತಿಗಳನ್ನುಮೀನು ಸಾಕಣಿಕೆಗಾಗಿ ಕೆಗೆಗಳನ್ನು ಇಂತಿಷ್ಟು ವರ್ಷಕ್ಕೆ ಗುತ್ತಿಗೆ ನೀಡುತ್ತಿರುವುದರಿಂದ ಕೆರೆಗಳ ಮೇಲೆಮಾನವ ಹಸ್ತಕ್ಷೇಪ ಹೆಚ್ಚಾಗಿದೆ. ಪರಿಣಾಮ ಕೆರೆಗಳಬಳಿ ಪಕ್ಷಿಗಳ ಸುಳಿದಾಟ ಕಡಿಮೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೆಬ್ಬಾತುಗಳ ಸಂಖ್ಯೆಯೂ ಕ್ಷೀಣ: ಹಿಮಾಲಯ ದಿಂದಾಚೆಗಿನ ಮಂಗೋಲಿಯಾ, ಸೈಬಿರೀಯಾ, ಚೀನಾ, ಟಿಬೆಟ್‌ ನಿಂದ ಬರುವ ಗೀರು ತಲೆ ಹೆಬ್ಬಾತುಗಳು ಕಳೆದೆರಡು ವರ್ಷಗಳಿಂದ ಗಣನೀಯಸಂಖ್ಯೆಯಲ್ಲಿ ಕಡಿಮೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 2019ರಲ್ಲಿ 2569 ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದ ಗೀರು ತಲೆ ಹೆಬ್ಟಾತುಗಳು 2021ರಲ್ಲಿ1925 ಮತ್ತು ಈ ಬಾರಿ ಬರೀ 106 ಮಾತ್ರ ಕಾಣಿಸಿಕೊಂಡಿವೆ. ಅಲ್ಲದೆ ನಾರ್ಧನ್‌ಶೋವೆಲರ್ಸ್‌ 2019ರಲ್ಲಿ 2972,2021ರಲ್ಲಿ 236 ಮತ್ತು2023ರಲ್ಲಿ 151 ಕಾಣಿಸಿವೆ. ಮೈಸೂರಿನ ತಿಪ್ಪಯನ ಕೆರೆಯಲ್ಲಿ ಕನಿಷ್ಠ 151 ಸಂಖ್ಯೆಯಲ್ಲಿ ಕಾಣಿಸಿ ಕೊಂಡಿವೆ.

Advertisement

ನಾರ್ಧನ್‌ ಪಿನ್‌ ಟೇಲ್‌ ಗಳು 2019ರಲ್ಲಿ 636, 2021ರಲ್ಲಿ 635 ಮತ್ತು 2023ರಲ್ಲಿ 241 ಸಂಖ್ಯೆಯಲ್ಲಿ ಮಾತ್ರ ಕಾಣಿಸಿ ಕೊಂಡಿವೆ. ಹಾಗೆಯೇ ಚಾಮರಾಜ ನಗರ ಜಿಲ್ಲೆಯಮಲ್ಲಿಗೆಹಳ್ಳಿಯಲ್ಲಿ 100 ಪಕ್ಷಿಗಳು ಕಾಣಿಸಿಕೊಂಡಿವೆ.ಗಾರ್ಗೆನಿ 2019ರಲ್ಲಿ 1079, 2021ರಲ್ಲಿ 869 ಮತ್ತು2023ರಲ್ಲಿ 229 ಮಾತ್ರ ಪತ್ತೆಯಾಗಿವೆ. ಮೈಸೂರುಜಿಲ್ಲೆಯ ಸಿಂಧುವಳ್ಳಿ ಕೆರೆಯಲ್ಲಿ ಕಾಣಿಸಿಕೊಂಡಿವೆ. ಯೂರೇಷಿಯನ್‌ ವಿಜನ್‌ 2019ರಲ್ಲಿ 509, 2021ರಲ್ಲಿ 633 ಮತ್ತು ಈ ವರ್ಷ 84 ಅದರಲ್ಲು ಮಂಡ್ಯ ಜಿಲ್ಲೆಯ ಮುದಿಗೆರೆ ಕೆರೆಯಲ್ಲಿ 62 ಹಕ್ಕಿಗಳು ಕಾಣಿಸಿಕೊಂಡಿವೆ.

ಒಟ್ಟಾರೆ ವಾತಾವರಣ ಬದಲಾವಣೆ ಹಾಗೂ ಕೆರೆಗಳ ಮೇಲೆ ಮಾನವ ಹಸ್ತಕ್ಷೇಪ ಹೆಚ್ಚಳದಿಂದ ವಲಸೆ ಹಕ್ಕಿಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ.

ಸರ್ವೆಯಲ್ಲಿ ಕಂಡುಬಂದ ಪಕ್ಷಿಗಳು :  ಹಳೇ ಮೈಸೂರು ಭಾಗದ ಮೂರು ಜಿಲ್ಲೆಗಳ 118 ಸ್ಥಳಗಳಲ್ಲಿ 20 ತಂಡಗಳಲ್ಲಿ 55 ಪಕ್ಷಿ ವೀಕ್ಷಕರು ಜಲಮೂಲಗಳು ಮತ್ತು ವಿವಿಧೆಡೆ ನಡೆಸಿ ಸಮೀಕ್ಷೆಯಲ್ಲಿ 2014 ವಿವಿಧ ಪ್ರಬೇಧದ 25138 ಪಕ್ಷಿಗಳು ಗೋಚರಿಸಿವೆ. ಅದರಲ್ಲಿ 48 ವಿದೇಶಿ ವಲಸೆ ಪಕ್ಷಿ ಪ್ರಬೇಧಗಳು ಕಾಣಿಸಿಕೊಂಡಿರುವುದು ವಿಶೇಷ. ಏಷ್ಯನ್‌ಓಪನ್‌ ಬಿಲ್ಡ್ 1441, ಸ್ಪಾಟೆಡ್‌ ಬಿಲ್ಡ್ ಪೆಲಿಕಾನ್‌ 1210, ದನಬಕ-1140, ಬಾರ್ನ್ ಸಾಲ್ವೊ 1097 ಮತ್ತು ಯೂರಿಷೇಯನ್‌ ಕೂಟ್‌ 1080 ಪಕ್ಷಿಗಳು ಒಟ್ಟಾರೆಯಾಗಿ ಹೇರಳವಾಗಿ ಕಾಣಿಸಿಕೊಂಡಿವೆ. ಹಾಗೆಯೇರಂಗನತಿಟ್ಟುವಿನಲ್ಲಿ ಸ್ಪಾಟೆಡ್‌ ಬಿಲ್ಡ್ ಪೆಲಿಕಾನ್‌ 1010, ಏಷ್ಯನ್‌ ಓಪನ್‌ ಬಿಲ್ಡ್-700, ಇಂಡಿಯನ್‌ ಕಾರ್ಮರೆಂಟ್‌ 520, ಮೈಸೂರಿನ ದಟ್ಟಗಳ್ಳಿಯಲ್ಲಿ ಟ್ರೈಕಲರ್ಡ್‌ ಮುನಿಯಾ 300, ಪಡುವಕೋಟೆಯಲ್ಲಿ ಸ್ಮಾಲ್‌ ಪ್ರಾಂಟಿಕೋಲ್‌ 210 ಕಾಣಿಸಿಕೊಂಡಿದೆ ಎಂದು ತಜ್ಞರು ತಿಳಿಸಿದ್ದಾರೆ.

ಕೆರೆಗಳಲ್ಲಿ ನೀರಿನ ಸಂಗ್ರಹ ಹೆಚ್ಚಿರುವುದರಿಂದ ಮತ್ತು ಮೀನುಗಾರಿಕೆ ನಡೆಯುತ್ತಿರುವುದ ರಿಂದ ವಲಸೆ ಬಾತುಕೋ ಳಿಗಳು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೆ ಮಧ್ಯಭಾರತಕ್ಕೆ ಬಂದಿವೆ. ಅಕ್ಟೋಬರ್‌ನಿಂದಮಾರ್ಚ್‌ ವರೆಗೆ ಕೆರೆಗಳಲ್ಲಿ ಮೀನುಗಾರಿಕೆನಡೆಸದಂತೆ ಕ್ರಮವಹಿಸಿದರೆ ವಲಸೆ ಪಕ್ಷಿಗಳು ಒಂದಷ್ಟು ಕಾಲ ತಂಗಲುಪೂರಕ ವಾತಾವರಣ ನಿರ್ಮಾಣವಾಗುತ್ತದೆ. -ಶೈಲಜೇಶ್‌, ಪಕ್ಷಿ ವೀಕ್ಷಕರು

– ಸತೀಶ್‌ ದೇಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next