Advertisement

ಅವಕಾಶಗಳು ಕಡಿಮೆಯಾಗಿದ್ದಕ್ಕೆ #MeToo ಕಾರಣವೆಂದು ಹೇಳಲಾರೆ

11:21 AM Dec 26, 2018 | Team Udayavani |

ಮಿಟೂ ವಿವಾದ ತಾರಕ್ಕಕೇರಿದ ಬಳಿಕ ಪತ್ರಕರ್ತರು ಮತ್ತು ಮಾಧ್ಯಮಗಳ ಮೇಲೆ ಹರಿಹಾಯ್ದು, ಕೆಲಕಾಲ ಯಾರ ಕೈಗೂ ಸಿಗದೇ ದೂರವುಳಿದಿದ್ದ ನಟಿ ಶ್ರುತಿ ಹರಿಹರನ್‌ ನಿನ್ನೆ (ಡಿ. 25) ನಡೆದ “ನಾತಿಚರಾಮಿ’ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು. “ನಾತಿಚರಾಮಿ’ ಚಿತ್ರದ ಬಗ್ಗೆ, ತಮ್ಮ ಪಾತ್ರ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡ ಬಳಿಕ ಶೃತಿ ಹರಿಹರನ್‌ಗೆ, ಮತ್ತೆ ಮಿಟೂ ಪ್ರಶ್ನೆಗಳು ಎದುರಾದವು.

Advertisement

ಆದರೆ ಆರಂಭದಲ್ಲಿ ಮಿಟೂ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಶ್ರುತಿ, ಪತ್ರಕರ್ತರಿಂದ ತೂರಿಬಂದ ಪ್ರಶ್ನೆಗಳಿಂದ ಹೆಚ್ಚು ಹೊತ್ತು ತಪ್ಪಿಸಿಕೊಳ್ಳಲಾಗದೆ ಮತ್ತೆ ಒಂದಷ್ಟು ವಿಷಯಗಳನ್ನು ತೆರೆದಿಟ್ಟರು. “ಸದ್ಯ ನಮ್ಮ ಪ್ರಕರಣ ಕೋರ್ಟ್‌ನಲ್ಲಿದೆ. ಹಾಗಾಗಿ ಈ ಬಗ್ಗೆ ಹೆಚ್ಚೇನು ಹೇಳಲಾರೆ. ನಾನು ಹೇಳಿರುವುದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ನಾನು ಕೋರ್ಟ್‌ನಲ್ಲೇ ಸಾಬೀತುಪಡಿಸುತ್ತೇನೆ. ಮಿಟೂ ಆರೋಪದ ಬಳಿಕ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗಿವೆ.

ಹಾಗಂತ ಅದಕ್ಕೆಲ್ಲಾ ಮಿಟೂ ಬಗ್ಗೆ ಮಾತನಾಡಿದ್ದೇ ಕಾರಣ ಎಂದು ಹೇಳಲಾರೆ. ಅವಕಾಶ ಕಡಿಮೆಯಾಗಿದ್ದಕ್ಕಾಗಲಿ ಅಥವಾ ಮಿಟೂ ಬಗ್ಗೆ ಮಾತನಾಡಿದ್ದಕ್ಕೆ ಆಗಲಿ, ನನಗೆ ಬೇಸರವಿಲ್ಲ. ನಾನು ಮಾತನಾಡಿದ್ದು ತಪ್ಪು ಅಂತಾನೂ ಅನಿಸಿಲ್ಲ. ಎಲ್ಲವನ್ನೂ ಕಾಲ ನಿರ್ಣಯಿಸುತ್ತೆ. ನಾನು ಸಿನಿಮಾರಂಗದಲ್ಲಿ ಹೆಚ್ಚು ಕೆಲಸ ಮಾಡಬೇಕೋ ಬೇಡವೋ ಅನ್ನೋದನ್ನೂ ಕಾಲವೇ ನಿರ್ಧರಿಸಲಿದೆ’ ಎಂದು ನಟಿ ಶ್ರುತಿ  ಹರಿಹರನ್‌ ತಿಳಿಸಿದ್ದಾರೆ.

“ಸದ್ಯ ಚಿತ್ರದಲ್ಲಿ ನಟಿಸುವ ಅವಕಾಶಗಳು ಕಮ್ಮಿಯಾಗಿರಬಹು. ನಾವು ಎಲ್ಲವನ್ನೂ ಮಾಡೋದು ಜನರಿಗೋಸ್ಕರ. ಹೀಗಾಗಿ ಜನರೇ ಅದನ್ನು ನಿರ್ಧರಿಸಬೇಕು. ಆದ್ರೆ ಕಾಲ ಹೀಗೆ ಇರೋದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು. ಇನ್ನು ಮಿಟೂ ಪ್ರಕರಣದ ನಂತರ ಬೆಳವಣಿಗೆಗಳ ಬಗ್ಗೆ ಹಲವು ಗೊಂದಲಗಳಿವೆ  ಈ ಕುರಿತು ಮಾತನಾಡಲು ಶೀಘ್ರದಲ್ಲೇ ಮಾಧ್ಯಮಗಳ ಮುಂದೆ ಬರುವುದಾಗಿ ಶ್ರುತಿ  ತಿಳಿಸಿದರು. 

ಸದ್ಯ ಎಷ್ಟು ಸಿನಿಮಾದಲ್ಲಿ ನಟಿಸುತ್ತಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶ್ರುತಿ, ಇತ್ತೀಚೆಗೆ ಯಾವ ಹೊಸಚಿತ್ರಗಳನ್ನೂ ಒಪ್ಪಿಕೊಂಡಿಲ್ಲ. ಚೈತನ್ಯ ಅವರ ನಿರ್ದೇಶನದಲ್ಲಿ, ಚಿರಂಜೀವಿ ಸರ್ಜಾ ಹಾಗೂ ಸಂಗೀತಾ ಭಟ್‌ ಕೂಡ ಅಭಿನಯಿಸುತ್ತಿರುವ “ಆದ್ಯ’ ಅನ್ನೋ ಒಂದು ಚಿತ್ರದಲ್ಲಿ ಅಭಿನಯಿಸಿದ್ದೇನೆ. ಆ ಚಿತ್ರ ರಿಲೀಸ್‌ ಆಗಲು ರೆಡಿಯಾಗಿದೆ. ಇದರ ಜೊತೆಗೆ ಮಂಜು ಸ್ವರಾಜ್‌ ನಿರ್ದೇಶನದ ಹಾರರ್‌ ಚಿತ್ರವೊಂದರಲ್ಲೂ ಅಭಿನಯಿಸುತ್ತಿದ್ದೇನೆ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next