Advertisement

ಮೆಂತೆ ಕಾಳು ಕೇವಲ ಅಡುಗೆಗೆ ಮಾತ್ರವಲ್ಲ…ಇದರಲ್ಲಿದೆ ಹಲವಾರು ಔಷಧೀಯ ಗುಣ

05:51 PM Aug 13, 2022 | Team Udayavani |

ಭಾರತೀಯ ಆಯುರ್ವೇದ ಔಷಧಿಯಲ್ಲಿ ಹಿಂದಿನಿಂದಲೂ ತನ್ನದೇ ಆದ ಸ್ಥಾನ ಪಡೆದುಕೊಂಡು ಬಂದಿರುವಂತಹ ಮೆಂತೆ ಕಾಳಿನಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಇದು ಕಾಯಿಲೆಗಳನ್ನು ನಿವಾರಿಸುವುದು ಮಾತ್ರವಲ್ಲದೆ ಕೆಲವೊಂದು ರೋಗಗಳು ಬಾರದಂತೆ ತಡೆಯುವುದು. ಮೆಂತೆ ಕಾಳುಗಳನ್ನು ತಿಂದರೆ ಅದು ತುಂಬಾ ಕಹಿ ಎನ್ನುವ ಕಾರಣಕ್ಕಾಗಿ ಹೆಚ್ಚಿನವರು ಇದನ್ನು ಕಡೆಗಣಿಸುವರು. ಆದರೆ ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ.

Advertisement

ಮೊಡವೆ ನಿವಾರಣೆ
ಮೆಂತೆ ಕಾಳುಗಳು ಮೊಡವೆಯಿಂದ ಆಗುವ ಬ್ಲ್ಯಾಕ್ ಹೆಡ್(ಕಪ್ಪು ಕಲೆ)ಅನ್ನು ಬಾರದಂತೆ ಪರಿಣಾಮಕಾರಿಯಾಗಿ ತಡೆಯುವುದು ಮತ್ತು ನಿವಾರಣೆ ಮಾಡುವುದು. ಚರ್ಮದ ಕೆಳಭಾಗದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಮತ್ತು ಚರ್ಮದ ಅಸಾಮಾನ್ಯತೆ ನಿವಾರಿಸುವುದು. ಮೆಂತೆ ಕಾಳಿನ ಪೇಸ್ಟ್ ಬಳಸಿಕೊಂಡು ಸುಟ್ಟ ಗಾಯ ನಿವಾರಣೆ ಮಾಡಬಹುದು. ಮೆಂತೆ ಪೇಸ್ಟ್ ಮಾಡಿ ಮತ್ತು ಅದಕ್ಕೆ ಜೇನುತುಪ್ಪ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ರಾತ್ರಿ ವೇಳೆ ಮೊಡವೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು ಬೆಳಗ್ಗೆ ಎದ್ದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಕೆಲವೇ ದಿನಗಳಲ್ಲಿ ನಿಮಗೆ ಫಲಿತಾಂಶ ಕಂಡುಬರುವುದು

ಜ್ವರ ನಿವಾರಣೆ
ಒಂದು ಚಮಚ ಜೇನುತುಪ್ಪ ಮತ್ತು ಲಿಂಬೆಯೊಂದಿಗೆ ಮೆಂತೆ ಕಾಳಿನ ಸೇವನೆ ಮಾಡಿದರೆ ಆಗ ಖಂಡಿತವಾಗಿಯೂ ಜ್ವರ ನಿವಾರಣೆ ಮಾಡಬಹುದು. ಇದು ಗಂಟಲಿನ ಕಿರಿಕಿರಿ ನಿವಾರಣೆ ಮಾಡುವುದು. ಜ್ವರವಿದ್ದರೆ ದಿನದಲ್ಲಿ 2 3 ಸಲ ಸೇವಿಸಿ.

ದೇಹದ ಉಷ್ಣತೆ ತಗ್ಗಿಸುವುದು
ಮೆಂತೆ ಕಾಳು ದೇಹದಲ್ಲಿನ ಉಷ್ಣತೆ ಕಡಿಮೆ ಮಾಡುವುದು. ಒಂದು ಚಮಚ ಮೆಂತೆ ಕಾಳು ತೆಗೆದುಕೊಂಡು ಅದನ್ನು ರಾತ್ರಿ ವೇಳೆ ನೀರಿನಲ್ಲಿ ನೆನೆಯಲು ಹಾಕಿ. ಬೆಳಗ್ಗೆ ಇದರ ನೀರನ್ನು ಕುಡಿಯಿರಿ. ಇದರ ಪೇಸ್ಟ್ ಮಾಡಿ ತಲೆಗೆ ಹಚ್ಚಿಕೊಳ್ಬಹುದು.

ಜೀರ್ಣಕ್ರಿಯೆಗೆ ಸಹಕಾರಿ
ಮೆಂತೆ ಸೇವನೆ ಮಾಡಿದರೆ ಕರುಳಿನ ಕ್ರಿಯೆ ಸುಧಾರಣೆ ಆಗುವುದು ಮತ್ತು ಇದು ಜೀರ್ಣಕ್ರಿಯೆ ಮತ್ತು ಎದೆ ಉರಿ ಸಮಸ್ಯೆಗಳಿಗೆ ಒಳ್ಳೆಯ ಪರಿಹಾರವಾಗಿದೆ. ಜೀರ್ಣಕ್ರಿಯೆ ಸಮಸ್ಯೆಗೆ ಮೆಂತೆ ಕಾಳಿನ ಪೇಸ್ಟ್ ಗೆ ತುರಿದ ಶುಂಠಿ ಹಾಕಿಕೊಳ್ಳಿ ಮತ್ತು ಊಟಕ್ಕೆ ಮೊದಲು ಇದರ ಒಂದು ಚಮಚ ಸೇವಿಸಿ.

Advertisement

ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದು
ಮೆಂತೆಯು ಹೆಚ್ಚಿರುವ ಕೊಲೆಸ್ಟ್ರಾಲ್ ಅಂಶವನ್ನು ತೆಗೆದುಹಾಕುವುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಇದರೊಂದಿಗೆ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಇದು ಕಾಪಾಡುವುದು.

ಸಂಧಿವಾತ
ಆ್ಯಂಟಿ ಆಕ್ಸಿಡೆಂಟ್ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಮೆಂತೆಯು ಸಂಧಿವಾತದ ನೋವನ್ನು ನಿವಾರಿಸುವುದು.

ಕಿಡ್ನಿಯ ಕಲ್ಲು
ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳ ಕಾಲ ಮೆಂತೆ ನೆನೆಸಿದ ನೀರನ್ನು ಕುಡಿಯಿರಿ. ಇದು ಕಿಡ್ನಿಯಲ್ಲಿ ಕಲ್ಲನ್ನು ಹೊರಹಾಕಲು ನೆರವಾಗುವುದು.

ಸುಂದರ ಚರ್ಮಕ್ಕಾಗಿ
ಸುಂದರ ಚರ್ಮವು ಪ್ರತಿಯೊಬ್ಬರಿಗೂ ಬೇಕು. ಇದಕ್ಕಾಗಿ ಸ್ವಲ್ಪ ಕಹಿಯಾಗಿರುವಂತಹ ಮೆಂತೆ ನೀರನ್ನು ಕುಡಿಯಿರಿ. ಇದು ಜೀರ್ಣಕ್ರಿಯೆಗೆ ಸಹಕರಿಸುವುದು ಮತ್ತು ವಿಷಕಾರಿ ಅಂಶವನ್ನು ಹೊರಹಾಕುವ ಮೂಲಕ ಕಾಂತಿಯುತ, ಆರೋಗ್ಯಕಾರಿ ಮತ್ತು ಕಲೆಯಿಲ್ಲದೆ ಇರುವ ಚರ್ಮವನ್ನು ನೀಡುವುದು.

ತೂಕ ಇಳಿಸಿಕೊಳ್ಳಿ
ದೇಹದಲ್ಲಿ ನೀರು ನಿಲ್ಲುವಂತಹ ಸಮಸ್ಯೆಯನ್ನು ನಿವಾರಣೆ ಮಾಡಲು ಎರಡು ಲೋಟ ಮೆಂತೆ ಕಾಳಿನ ಬಿಸಿ ನೀರನ್ನು ಕುಡಿಯಬೇಕು. ಇದರಿಂದ ಹೊಟ್ಟೆ ಉಬ್ಬರ ಉಂಟಾಗದು,

ಹೃದಯದ ಆರೋಗ್ಯ ಕಾಪಾಡುವುದು
ಮೆಂತೆ ನೀರನ್ನು ಕುಡಿಯುವ ಜತೆಗೆ ಅದನ್ನು ಬಾಯಿಗೆ ಹಾಕಿಕೊಂಡು ಜಗಿದು ತಿನ್ನಬೇಕು. ಇದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯದ ಕಾಯಿಲೆಗಳು ದೂರವಿರುವಂತೆ ಮಾಡುವುದು.

Advertisement

Udayavani is now on Telegram. Click here to join our channel and stay updated with the latest news.

Next