Advertisement

ಯುವ ಸಮೂಹ ಸೆಳೆಯಲು ಸದಸ್ಯತ್ವ ಅಭಿಯಾನ

01:25 PM Jul 08, 2019 | Suhan S |

ತುಮಕೂರು: ಯುವ ಸಮೂಹವನ್ನು ಸೆಳೆಯುವ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಿ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಸಂಸದ ಜಿ.ಎಸ್‌.ಹೇಳಿದರು.

Advertisement

ನಗರದ ಶ್ರೀದೇವಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನ ಕಾರ್ಯಾಗಾರದಲ್ಲಿ ಮಾತನಾಡಿ, ಜನರಲ್ಲಿ ಕೇಂದ್ರದ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಅವರ ಮೊಬೈಲ್ನಲ್ಲಿ ಮಿಸ್ಡ್ಕಾಲ್ ಕೊಟ್ಟು ಮತ್ತೆ ವಾಪಸ್‌ ಬರುವ ಮೆಸೇಜ್‌ಗೆ ಸಂಪೂರ್ಣ ವಿಳಾಸ, ಇಮೇಲ್ ಐಡಿ ಎಲ್ಲವನ್ನೂ ಪಡೆದು ಕಳುಹಿಸಿದರೆ ಮಾಹಿತಿ ಕೇಂದ್ರಕ್ಕೆ ತಲುಪುತ್ತದೆ. ಇದರಿಂದ ಮುಂದೆ ಸರ್ವೆ ಮಾಡಲು ಅನುಕೂಲವಾಗುತ್ತದೆ ಎಂದರು.

2013-14ರಲ್ಲಿ ನಡೆದ ಅಭಿಯಾನದಲ್ಲಿ 11 ಕೋಟಿ ಮಂದಿ ಸದಸ್ಯತ್ವ ನೋಂದಾಯಿಸಿಕೊಳ್ಳುವ ಮೂಲಕ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲು ಕಾರ್ಯಕರ್ತರ ಶ್ರಮವೇ ಕಾರಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್‌ ಹೇಳಿದರು.

85 ಸಾವಿರ ಸದಸ್ಯತ್ವದ ಗುರಿ: ಈ ಬಾರಿ ಸದಸ್ಯತ್ವದ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕು. ನಗರದಲ್ಲಿ 85 ಸಾವಿರ ಸದಸ್ಯತ್ವದ ಗುರಿ ಹೊಂದಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಹಲವಾರು ಜನಪರ ಯೋಜನೆ ಜಾರಿಗೆ ತಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳನ್ನು ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಗೆ ತಲುಪಿಸಿ ಸದಸ್ಯತ್ವ ನೋಂದಣಿ ಮಾಡಿಸಿ ಎಂದು ಕರೆ ನೀಡಿದರು.

ಶಕ್ತಿ ಬಲಪಡಿಸಿ: ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಎಂ.ಆರ್‌.ಹುಲಿನಾಯ್ಕರ್‌ ಮಾತನಾಡಿ, ಸಂಘಟನೆ ಪಕ್ಷದ ಮೂಲಶಕ್ತಿಯಾಗಿದೆ. ಬಿಜೆಪಿ ಸದಸ್ಯತ್ವ ಮಾಡುವ ಮೂಲಕ ಆ ಶಕ್ತಿ ಇನ್ನಷ್ಟು ಬಲಪಡಿಸಬೇಕಾಗಿದೆ. ಆಂತರಿಕ ಪ್ರಜಾಪ್ರಭುತ್ವಕ್ಕೆ ಬಲ ತುಂಬಲು ಈ ವ್ಯವಸ್ಥೆ ಅನುಕೂಲವಾಗಿದೆ ಎಂದರು. ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್‌.ಶಿವಪ್ರಸಾದ್‌ ಮಾತನಾಡಿ, ಬಿಜೆಪಿಗೆ ಸದಸ್ಯರನ್ನು ಹೆಚ್ಚಿಗೆ ಮಾಡು ವುದರಿಂದ ಜನಸಂಪರ್ಕ ಹೆಚ್ಚಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಜನಪರ ಯೋಜನೆ ಗಳನ್ನು ಜನರಿಗೆ ಹಾಗೂ ಸದಸ್ಯರಿಗೆ ಮುಟ್ಟಿಸುವಲ್ಲಿ ಅತ್ಯಂತ ಸಹಕಾರಿಯಾಗಲಿದೆ ಎಂದು ತಿಳಿಸಿದರು.

Advertisement

ಗುರಿ ತಲುಪುತ್ತೇವೆ: ಬಿಜೆಪಿ ನಗರಾಧ್ಯಕ್ಷ ಸಿ.ಎನ್‌.ರಮೇಶ್‌ ಮಾತನಾಡಿ, ನಗರದ 35 ವಾರ್ಡ್‌ಗಳಲ್ಲಿ ಒಂದು ಲಕ್ಷ ಸದಸ್ಯತ್ವ ನೋಂದಣಿ ಗುರಿ ಇಟ್ಟುಕೊಂಡಿದ್ದೇವೆ. ಪ್ರತಿ ವಾರ್ಡ್‌ನಲ್ಲಿ 50 ಸಕ್ರಿಯ ಕಾರ್ಯಕರ್ತರನ್ನು ಮಾಡಿದರೆ, ಆ ಕಾರ್ಯಕರ್ತರು ಒಬ್ಬೊಬ್ಬರೂ 50 ಮಂದಿಯನ್ನು ಸದಸ್ವತ್ವಕ್ಕೆ ನೋಂದಾಯಿಸಿದರೆ ನಮ್ಮ ಗುರಿ ತಲುಪುತ್ತೇವೆ. 20 ವಾರ್ಡ್‌ನಲ್ಲಿ ಇಷ್ಟು ಮಾಡಿದರೂ 1 ಲಕ್ಷದ ಗುರಿ ತಲುಪುತ್ತೇವೆ ಎಂದರು.

ನಗರ ಸಂಚಾಲಕರನ್ನಾಗಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವೀಶಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಸಹ ಸಂಚಾಲಕರನ್ನಾಗಿ ಶಿರಾಗೇಟ್ ಪ್ರಸನ್ನ, ರಾಕೇಶ್‌, ವಿನಯ್‌ ನೇಮಿಸಲಾಗಿದೆ ಎಂದು ತಿಳಿಸಿದರು. ಮಾಜಿ ಶಾಸಕ ಬಿ.ಸುರೇಶ್‌ಗೌಡ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್.ಎಂ. ರವೀಶಯ್ಯ, ಪಾಲಿಕೆ ಸದಸ್ಯ ಎಚ್.ಮಲ್ಲಿಕಾರ್ಜುನ್‌, ಸ್ನೇಕ್‌ ನಂದೀಶ್‌, ಸರೋಜಗೌಡ, ಪ್ರೇಮಾ ಹೆಗ್ಡೆ ಹಾಗೂ ಪಾಲಿಕೆ ಬಿಜೆಪಿ ಸದಸ್ಯರು, ಮುಖಂಡರು, ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next