Advertisement

ಮನೆ ಮದ್ದು; ಶೀತ, ಜ್ವರಕ್ಕೆ ಈ ಹಿತ್ತಲ ಗಿಡ ಸಂಜೀವಿನಿ ಇದ್ದಂತೆ…

09:40 AM Dec 14, 2020 | |

ಅದೊಂದು ದಿನ ಇದ್ದಕ್ಕಿದ್ದ ಹಾಗೆ ಅಣ್ಣನ ಮಗನಿಗೆ ಶೀತ, ಕೆಮ್ಮು ಪ್ರಾರಂಭವಾಗಿತ್ತು. ಆದು ಮಳೆಗಾಲದ ಸಮಯವಾದ್ದರಿಂದ ಸ್ವಲ್ಪ ಮಟ್ಟಿನ ಗಡಿಬಿಡಿ ಅತ್ತಿಗೆ ಮುಖದಲ್ಲಿ ಕಾಣಿಸುತ್ತಿತ್ತು. ಶಾಲೆಗೆ ಹೋಗುವ ಮಗು ಮಳೆಗಾಲ ಬೇರೆ ಇಂಥ ಸಣ್ಣ ಸಣ್ಣ ರೋಗಗಳು ಹರಡುವುದು ಸಾಮಾನ್ಯವಾಗಿರುತ್ತದೆ. ತನ್ನ ಮಗನಿಗೆ ಇದ್ದಕ್ಕಿದ್ದ ಹಾಗೇ ಶೀತ, ಕೆಮ್ಮು ಕಾಣಿಸಿಕೊಂಡಿರುವುದು  ಅತ್ತಿಗೆಯ ಭಯಕ್ಕೆ ಕಾರಣವಾಗಿರಬಹುದು. ಸಂಜೆ ಹೊತ್ತು ಆಸ್ಪತ್ರೆಗೆ ಹೋಗಿ ಮದ್ದು ತರುವ ಎಂದರೆ ಮಳೆ ಧಾರಾಕಾರವಾಗಿ ಸುರಿಯುತಿದೆ ಏನು ಮಾಡುವುದು ಎಂದು ಯೋಚಿಸುತ್ತಿರುವಾಗ ಅಮ್ಮ ಬಂದು ಹಿತ್ತಳಲಲ್ಲಿ ಹೂಗಿಡಗಳ ಮಧ್ಯೆ ಬೆಳೆದ ಒಂದು ಎಲೆಯನ್ನು ತಂದು ಚೆನ್ನಾಗಿ ಜಜ್ಜಿ ಅದರ ರಸವನ್ನು ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿಸಿದರು. ಇವತ್ತಿಗೆ ಸಾಕು ಎಂದು ಹೇಳಿದರು. ಈ ರಸವನ್ನು ಕುಡಿದ ಮಗು ರಾತ್ರಿ ಹೊತ್ತಲ್ಲಿ ಸ್ವಲ್ಪ ಆರಾಮಾಗಿದಂತೆ ಕಂಡು ಬಂದಿತ್ತು. ಈಗ ನಿಮಗೆಲ್ಲಾ ಒಂದು ಪ್ರಶ್ನೆ ಕಾಡುತ್ತಿರಬಹುದು, ಯಾವುದು ಈ ಮನೆ ಮದ್ದು..?

Advertisement

ನಮ್ಮ ನಿಮ್ಮ ಮನೆಯ ಹಿತ್ತಲಲ್ಲೇ ಇರುವ ಈ ಆರ್ಯುವೇದ ಸಂಜೀವಿನಿ ಯಾವುದೆಂದರೆ “ದೊಡ್ಡಪತ್ರೆ” ಅಥವಾ ಆಡು ಭಾಷೆಯಲ್ಲಿ ಕರೆಯಾಲಾಗುವ “ಸಾಂಬ್ರಾಣಿ ಸೊಪ್ಪು”.  ಹಿಂದೆ ಜ್ವರ, ಶೀತ ಸೇರಿದಂತೆ ಹಲವು ಕಾಯಿಲೆಗಳಿಗೆ ತಮ್ಮ ಹಿತ್ತಲಿನಲ್ಲಿದ್ದ ಗಿಡವನ್ನೇ ಮದ್ದಾಗಿ ಬಳಸಿಕೊಳ್ಳುತ್ತಿದ್ದರು. ತಮ್ಮ ಹಿತ್ತಲಿನಲ್ಲಿ ಹೂವಿನ ಗಿಡಗಳೊಂದಿಗೆ ಔಷಧೀಯ ಸಸ್ಯಗಳನ್ನು ಬೆಳೆಸಿಕೊಳ್ಳುತ್ತಿದ್ದರು. ಅವು ಅಲಂಕಾರ ಸಸ್ಯವಾಗಿ ಕಂಗೊಳಿಸುತ್ತಾ ಔಷಧಿಗೆ ಬಳಕೆಯಾಗುತ್ತಿತ್ತು. ಇಂತಹ ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆಗೆಮಹತ್ವದ ಸ್ಥಾನವಿದೆ.

ಇವತ್ತಿಗೂ ದೊಡ್ಡಪತ್ರೆ ಹೆಚ್ಚಿನ ಮನೆಗಳಲ್ಲಿ ಕಂಡು ಬರುತ್ತದೆ. ಇದನ್ನು ಸಾಂಬಾರ ಬಳ್ಳಿ, ಸಾವಿರ ಸಾಂಬಾರ(ಅಜವನದ ಎಲೆ), ಕರ್ಪೂರವಳ್ಳಿ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ತೇವವಿರುವ ಮತ್ತು ಜವಳು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮನೆಗಳಲ್ಲಿ ಹೂವಿನ ಕುಂಡದಲ್ಲಿಯೂ ಇದನ್ನು ಬೆಳೆಸಬಹಹುದು. ಎಲೆಗಳು ಹಸಿರಾಗಿ ದಪ್ಪವಾಗಿರುತ್ತದೆ. ಎಲೆಯಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಔಷಧೀಯ ಗುಣವಿದೆ.
ದೊಡ್ಡಪತ್ರೆಯನ್ನು ಮನೆಯ ಹಿತ್ತಲಿನಲ್ಲಿ ನೆಟ್ಟು ಬೆಳೆಸುವುದರಿಂದ ಏನು ಉಪಯೋಗ ಎಂಬುದನ್ನು ನೋಡುವುದಾದರೆ…

ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುವ ಕಫ, ಉಬ್ಬಸ ನಿವಾರಣೆಗೆ ಬಳಸಬಹುದಂತೆ, ಗಿಡದಿಂದ ಎಲೆಗಳನ್ನು ತೆಗೆದು ಚೆನ್ನಾಗಿ ತೊಳೆದು ಬೆಂಕಿಯಲ್ಲಿ ಬಾಡಿಸಿಕೊಂಡು ಮಕ್ಕಳ ಎದೆಗೆ ಶಾಖ ಕೊಡಬೇಕು. ಅಥವಾ ದೊಡ್ಡಪತ್ರೆ ಎಲೆಯೊಂದಿಗೆ ತುಳಸಿ ಎಲೆಯನ್ನು ಅರೆದು ಅದರ ರಸ ತೆಗೆದು ಜೇನು ತುಪ್ಪದೊಂದಿಗೆ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ದೂರವಾಗುತ್ತದೆ.

ಇದೇ ರೀತಿ 4ರಿಂದ 5 ಎಲೆಗಳನ್ನು ಕೆಂಡದ ಮೇಲೆ ಬಾಡಿಸಿ ರಸವನ್ನು ತೆಗೆದು ಕುಡಿದರೆ ಜ್ವರ ಕಡಿಮೆಯಾಗುತ್ತದೆ. ಅಥವಾ ಮಕ್ಕಳಿಗೆ ಜ್ವರ ಬಂದಾಗ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಡುತ್ತಾರೆ. ಶೀತದಿಂದಾಗಿ ಮಕ್ಕಳಿಗೆ ಮಲಬದ್ದತೆಯಾದರೆ ಎಲೆಗಳ ಸರವನ್ನು ಜೇನುತುಪ್ಪ ಬೆರೆಸಿ ಕುಡಿಸಿದರೆ ಮಲಬದ್ದತೆ ನಿವಾರಣೆಯಾಗುತ್ತದೆ. ಅರಸಿನ ಕಾಮಾಲೆ ರೋಗವುಳ್ಳವರು 10(ಹತ್ತು)  ದಿನಗಳ ಕಾಲ ದೊಡ್ಡಪತ್ರೆ ಎಲೆಗಳನ್ನು ಆಹಾರ ರೂಪದಲ್ಲಿ ಸೇವಿಸಿದರೆ ರೋಗ ಗುಣವಾಗುತ್ತದೆ. ಕಂಬಳಿ ಹುಳುವಿನಂತಹ ಕೀಟಗಳು ಕಚ್ಚಿದ ಜಾಗಕ್ಕೆ ಎಲೆಯನ್ನು ಜಜ್ಜಿ ಉಜ್ಜಿದರೆ ಉರಿ ಕಡಿಮೆಯಾಗುವುದು.

Advertisement

ಎಲೆಯನ್ನು ಉಪ್ಪಿನೊಂದಿಗೆ ನೆಂಚಿಕೊಂಡು ತಿಂದರೆ ಜೀರ್ಣಶಕ್ತಿ ಹೆಚ್ಚುತ್ತದೆ. ದೊಡ್ಡಪತ್ರೆ ಎಲೆಯನ್ನು ಜಜ್ಜಿ ಆದರ ವಾಸನೆ ಸೇವಿಸಿದರೆ ಕಟ್ಟಿದ ಮೂಗಿನಿಂದ ನಿವಾರಣೆಯನ್ನು ಹೊಂದಬಹುದು. ಗ್ಯಾಸ್ಟ್ರಿಕ್ ತಡೆಯುತ್ತದೆ. ದೇಹದಿಂದ ವಿಷವನ್ನು ಹೊರ ಹಾಕುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ.

ಇನ್ನು ಎಲೆಗಳ ಚಟ್ನಿ, ತಂಬುಳಿ ಮೊದಲಾದವುಗಳು ಸೇವಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಆರೋಗ್ಯದ ಗಣಿಯಾಗಿರುವ ದೊಡ್ಡಪತ್ರೆಯನ್ನು ಮನೆಯ ಹಿತ್ತಲಿನಲ್ಲಿ ಹಲವು ರೀತಿಯ ಉಪಯೋಗ ಪಡೆಯಬಹುದು ಎಂಬುದರಲ್ಲಿ ಎರಡು ಮಾತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next