Advertisement

Dakshina Kannada ಕುಡಿಯುವ ನೀರು ಸಮಸ್ಯೆಯಾಗದಂತೆ ಕ್ರಮ: ಜಿಲ್ಲಾಧಿಕಾರಿ ಸೂಚನೆ

01:30 AM May 04, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮವಹಿಸಿ ನೀರು ಪೂರೈಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸೂಚನೆ ನೀಡಿದರು.

Advertisement

ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ನೀರಿನ ಅನಗತ್ಯ ಬಳಕೆಗೆ ಕಡಿವಾಣ ಹಾಕುವುದು ಅನಿವಾರ್ಯ. ಈ ಕಾರಣ ನೀರನ್ನು ಅನಗತ್ಯವಾಗಿ ಪೊಲು ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ದಂಡ ವಿ ಧಿಸಲಾಗುವುದು ಎಂದರು.

ಅವಶ್ಯವಾದರೆ ಬಿಳಿಯೂರು, ಎಎಂಆರ್‌, ಹರೇಕಳ ಡ್ಯಾಂನಿಂದ ಹೆಚ್ಚುವರಿ ನೀರನ್ನು ತುಂಬೆ ಡ್ಯಾಂಗೆ ಬಿಡುವಂತೆ ಸೂಚಿಸಲಾಗಿದೆ. ಕೈಗಾರಿಕಾ ಪ್ರದೇಶಗಳಲ್ಲಿರುವ ಕುಟುಂಬಗಳಿಗೆ ಕುಡಿಯಲು ಮೂರು ದಿನಕ್ಕೊಮ್ಮೆ ನೀರು ಪೂರೈಸುವಂತೆ ಸೂಚಿಸಲಾಗಿದೆ. ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ವಿಟ್ಲ, ಕೋಟೆಕಾರು, ಉಳ್ಳಾಲ, ಸೋಮೇಶ್ವರಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಒಟ್ಟು 18 ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗುತ್ತಿದೆ ಎಂದರು.

ಮಳೆಗಾಲ ಎದುರಿಸಲು ಮುಂಜಾಗ್ರತಾ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸಲಾಗಿದೆ. ಪ್ರತಿ ಗ್ರಾ.ಪಂ. ಹಾಗೂ ನಗರ ಪ್ರದೇಶ ಗಳಲ್ಲಿ ವಾರ್ಡ್‌ಗಳು ಪ್ರಾಕೃತಿಕ ವಿಕೋಪ ತಂಡಗಳನ್ನು ಹೊಂದುವಂತೆ ಸೂಚಿಸಲಾಗಿದೆ. ಮೆಸ್ಕಾಂ, ರಾಷ್ಟ್ರೀಯ ಹೆದ್ದಾರಿ, ಮೀನುಗಾರಿಕೆ, ಕೋಸ್ಟ್‌ ಗಾರ್ಡ್‌, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳಿಗೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಎಲ್ಲ ವ್ಯವಸ್ಥೆಗಳನ್ನು ಆ್ಯಪ್‌ ಮೂಲಕ ನಿರ್ವಹಿಸಲಾಗುವುದು. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ನೆರೆ ಪೀಡಿತ ಪ್ರದೇಶಗಳ ಮ್ಯಾಪ್‌ ಸಿದ್ಧಪಡಿಸುವಂತೆ ಸೂಚಿಸಲಾಗಿದ್ದು, ರಾಜಾ ಕಾಲುವೆ ಹೂಳೆತ್ತಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮಳೆಗಾಲ ಸಮೀಪಿಸುತ್ತಿದ್ದು, ನೆರೆ ಹಾವಳಿ, ಭೂ ಕುಸಿತ ಮತ್ತಿತರ ಆಕಸ್ಮಿಕ ಘಟನೆಗಳನ್ನು ತಡೆಗಟ್ಟಲು ಮುಂಜಾಗ್ರತೆಯಾಗಿ ತಾಲೂಕುವಾರು ಈ ಹಿಂದೆ ಸಂಭವಿಸಿರುವಂತಹ ಘಟನೆಗಳನ್ನು ಅವಲೋಕನ ಮಾಡಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿ ಕಾರಿಗಳಿಗೆ ಸೂಚಿಸಿದರು. ಪ್ರವಾಹ ಸಂಭವಿಸುವಂತಹ ಪ್ರದೇಶದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಬೋಟ್‌ ವ್ಯವಸ್ಥೆ ಹಾಗೂ ನಿರಾಶ್ರಿತರ ಶಿಬಿರಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Advertisement

ಭೂಕುಸಿತ; ನಿಗಾ ವಹಿಸಿ
ರಸ್ತೆ ಕಡಿತಗೊಂಡು ಸಂಪರ್ಕಕ್ಕೆ ಸಿಗದ ಪ್ರದೇಶದಲ್ಲಿ ಗರ್ಭಿಣಿಯರು, ವಯಸ್ಸಾದವರ ಪಟ್ಟಿಯನ್ನು ಸಿದ್ಧಪಡಿಸಲು ಸೂಚಿಸಿದರಲ್ಲದೆ, ಅವರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ಆಗಬೇಕು. ನೆಟ್‌ವರ್ಕ್‌ ಸಿಗದ ಪ್ರದೇಶದಲ್ಲಿ ಜನರಿಂದ ಮಾಹಿತಿಯನ್ನು ಪಡೆಯಲು ಮತ್ತು ಅವರಿಗೆ ಮಾಹಿತಿಯನ್ನು ನೀಡಲು ಪರ್ಯಾಯ ವ್ಯವಸ್ಥೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಭೂಕುಸಿತ ಉಂಟಾಗುವಂತಹ ಪ್ರದೇಶ, ಅಪಾಯಕ್ಕೆ ಸಿಲುಕಿರುವಂತಹ ಮನೆಗಳನ್ನು ಗುರುತಿಸಿ ಅಲ್ಲಿನ ಜನರನ್ನು ಬೇರೆ ಪ್ರದೇಶಗಳಿಗೆ ಸ್ಥಳಾಂತರಿಸಲು ಹಾಗೂ ಇಂತಹಾ ಸಂದರ್ಭದಲ್ಲಿ ರಕ್ಷಣೆಗೆ ಜೆಸಿಬಿ ಹಾಗೂ ಹಿಟಾಚಿ ವಾಹನಗಳ ಬಳಕೆಗೆ ಸ್ಥಳೀಯವಾಗಿ ಲಭ್ಯವಿರುವವರ ಫೋನ್‌ ನಂಬರ್‌ ಹಾಗೂ ಮಾಹಿತಿ ಸಂಗ್ರಹಿಸಿ ಪಟ್ಟಿ ಮಾಡಿಟ್ಟುಕೊಂಡು ಭೂಕುಸಿತ ಉಂಟಾಗುವ ಪ್ರದೇಶದಲ್ಲಿ ತತ್‌ಕ್ಷಣ ಬಳಕೆಗೆ ಸಿದ್ಧವಿರುವಂತೆ ನಿಗಾವಹಿಸಬೇಕು. ಶಾಲಾ ಕಟ್ಟಡಗಳ ಹಂಚಿನ ಮೇಲೆ ಬಿದ್ದು ಹಾನಿ ಉಂಟು ಮಾಡುವಂತಹ ಮರಗಳ ರೆಂಬೆಕೊಂಬೆಗಳನ್ನು ಸಹ ಕತ್ತರಿಸಲು ಅರಣ್ಯ ಇಲಾಖೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಮನಪಾ ಆಯುಕ್ತ ಆನಂದ್‌, ಎಸ್‌ಪಿ ರಿಷ್ಯಂತ್‌ ಸಿಬಿ, ಪುತ್ತೂರು ಉಪ ವಿಭಾಗಾಧಿ ಕಾರಿ ಜುಬಿನ್‌ ಮೋಹಾಪಾತ್ರ ಉಪಸ್ಥಿತರಿದ್ದರು.

ತಾಲೂಕುಗಳಲ್ಲಿ ಕಂಟ್ರೋಲ್‌ ರೂಂ
“ಜಿಲ್ಲೆಯ ಪ್ರತೀ ತಾಲೂಕುಗಳ ತಹಶೀಲ್ದಾರ್‌ ಹಾಗೂ ಕಾರ್ಯನಿರ್ವಾಹಕ ಅಧಿ ಕಾರಿಗಳು ತಾಲೂಕು ಮಟ್ಟದಲ್ಲಿ ಕಂಟ್ರೋಲ್‌ ರೂಂ ರಚಿಸಿ ನೀರಿನ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಡ್ಯಾಂಗಳನ್ನು ಹೊರತುಪಡಿಸಿ ನೀರಿನ ಪರ್ಯಾಯ ಮೂಲಗಳನ್ನು ಖುದ್ದಾಗಿ ಭೇಟಿ ನೀಡಿ ಅದರ ಬಗ್ಗೆ ಪಟ್ಟಿ ತಯಾರಿಸಬೇಕು. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ದಿನಬಿಟ್ಟು ದಿನ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next